Tel: 7676775624 | Mail: info@yellowandred.in

Language: EN KAN

    Follow us :


ಹಲವು ಎಡವಟ್ಟುಗಳೊಂದಿಗೆ ರಾಜ್ಯೋತ್ಸವ ಆಚರಿಸಿದ ತಾಲ್ಲೂಕು ಆಡಳಿತ

Posted date: 01 Nov, 2023

Powered by:     Yellow and Red

ಹಲವು ಎಡವಟ್ಟುಗಳೊಂದಿಗೆ ರಾಜ್ಯೋತ್ಸವ ಆಚರಿಸಿದ ತಾಲ್ಲೂಕು ಆಡಳಿತ

ಚನ್ನಪಟ್ಟಣ: ಚನ್ನಪಟ್ಟಣ ನಗರ ಮತ್ತು ತಾಲ್ಲೂಕು ಕೇಂದ್ರವೂ ಪುರಾಣ, ಇತಿಹಾಸ, ಚಳವಳಿ ಸೇರಿದಂತೆ ಅನೇಕ ವಿಚಾರಗಳಲ್ಲಿ ಸ್ವಾತಂತ್ರ್ಯ ಪೂರ್ವ ಹಾಗೂ ನಂತರವೂ ಹೆಸರುವಾಸಿಯಾಗಿತ್ತು. ಬೆಂಗಳೂರು-ಮೈಸೂರು ನಡುವಿನಲ್ಲಿರು ಎಲ್ಲಾ ತಾಲ್ಲೂಕು ಕೇಂದ್ರ ಗಳಿಗಿಂತ ಚನ್ನಪಟ್ಟಣ ಎಲ್ಲದರಲ್ಲೂ ತುಸು ಮುಂದಿತ್ತು. ಇಂದು ಅಭಿವೃದ್ಧಿ ಸೇರಿದಂತೆ ಎಲ್ಲದರಲ್ಲೂ ಹಿಂದೆ ಸರಿಯುತ್ತಿದೆ. ಅದೇ ರೀತಿ ತಾಲ್ಲೂಕು ಆಡಳಿತ ಮತ್ತು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಆಚರಿಸುವ ರಾಷ್ಟ್ರೀಯ ಮತ್ತು ನಾಡಹಬ್ಬಗಳಲ್ಲಿ ಏನಾದರೊಂದು ಎಡವಟ್ಟು ಇರುತ್ತದೆ. ಅದೇ ರೀತಿ ೬೮ನೇ ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿಯೂ ಸಹ ಎಡವಟ್ಟುಗಳನ್ನು ಮಾಡುವ ಮೂಲಕ ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ.*


ನಾಡಿನಾದ್ಯಂತ ಹಲವು ಮಹನೀಯರ ತ್ಯಾಗ, ಹೋರಾಟದ ಫಲವಾಗಿ ಕರ್ನಾಟಕ ಏಕೀಕರಣಗೊಂಡಿದ್ದು, ಅವರೆಲ್ಲರನ್ನು ನೆನೆಯುವುದು ನಮ್ಮೆಲ್ಲರ ಕರ್ತವ್ಯವಾಗಿದೆ, ಕೇವಲ ನವೆಂಬರ್ ಒಂದನೇ ತಾರೀಖು ಅಥವಾ ಆ ತಿಂಗಳಿಗೆ ಸೀಮಿತವಾಗದೆ ಪ್ರತಿದಿನವೂ, ಪ್ರತಿ ಕ್ಷಣವೂ ನೆನೆಯಬೇಕು ಎಂದು ಕನ್ನಡ ಉಪನ್ಯಾಸಕಿ ಸಿ.ಬಿ. ಶೈಲಜಾ ಶಿವಾನಂದ್ ತಿಳಿಸಿದರು.


ಅವರು ನಗರದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ತಾಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಆಯೋಜಿಸಿದ್ದ ೬೮ನೇ ಕನ್ನಡ ರಾಜ್ಯೋತ್ಸ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ  ಮಾತನಾಡಿದರು.


ಕರ್ನಾಟಕ ಏಕೀಕರಣಕ್ಕೂ ಮೊದಲು ಹೈದರಾಬಾದ್ ಸಂಸ್ಥಾನ, ಮುಂಬೈ ಪ್ರಾಂತ್ಯ, ಮದ್ರಾಸ್ ಪ್ರಾಂತ್ಯ ಎಂದು ಹಂಚಿಹೋಗಿತ್ತು. ಉತ್ತರ ಕರ್ನಾಟಕ ಭಾಗದಲ್ಲಿ ೧೫ಕ್ಕೂ ಹೆಚ್ಚು ಪ್ರದೇಶಗಳು ಮುಂಬೈಗೆ ಸೇರಿ ಹೋಗಿತ್ತು. ಹಲವು ಮಹನೀಯರ ನಿರಂತರ ಹೋರಾಟದ ಹಾಗೂ ಪರಿಶ್ರಮದ ಫಲವಾಗಿ ಹಲವು ಪಾಂತ್ಯಗಳಲ್ಲಿ ಹಂಚಿಹೋಗಿದ್ದ ಕರ್ನಾಟಕವೂ ಏಕೀಕರಣಗೊಂಡಿತು. ಸ್ವಾತಂತ್ರ್ಯ ಪೂರ್ವದಲ್ಲೇ ಬೆನಗಲ್ ರಾಮರಾಯರು ಕರ್ನಾಟಕದ ಏಕೀಕರಣಕ್ಕಾಗಿ ಧ್ವನಿ ಎತ್ತಿದರು. ಆನಂತರ ಆಲೂರು ವೆಂಕಟರಾಯರು, ಹುಯಿಲಗೋಳ ನಾರಾಯಣರಾಯರು ಏಕೀಕರಣಕ್ಕೆ ಧ್ವನಿಗೂಡಿಸಿದರು.. ತದನಂತರ ಕುವೆಂಪು, ಬಿಎಂಶ್ರೀ, ಅನಕೃ ಮುಂತಾದ ಮಹನೀಯರು ಹಂಚಿಹೋಗಿದ್ದ ಕರುನಾಡನ್ನು ಏಕೀಕರಣಗೊಳಿಸಬೇಕು ಎಂದು ಹೋರಾಟ ನಡೆಸಿದರು, ಆ ಹೋರಾಟದ ಫಲವಾಗಿ ಕರ್ನಾಟಕ ರಾಜ್ಯವು ಏಕೀಕರಣವಾಯಿತು ಎಂದು ತಿಳಿಸಿದರು.


ನಮ್ಮ ಕರ್ನಾಟಕ ರಾಜ್ಯವು ಸಾಕಷ್ಟು ವಿಶಾಲವಾದ ಬೌಗೋಳಿಕ ಪ್ರದೇಶವನ್ನು ಹೊಂದಿದೆ, ಕಾವೇರಿಯಿಂದ ಗೋದಾವರಿವರೆಗೆ ವಿಶಾಲವಾಗಿ ಹಬ್ಬಿದೆ. ಬೇರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ರಾಜ್ಯ ಅನೇಕ ಪ್ರಾಕೃತಿಕ ಸಂಪತ್ತಿನಿಂದ ತುಂಬಿದೆ. ಪಶ್ಚಿಮ ಘಟ್ಟಗಳಿಂದ ಕಂಗೊಳಿಸುತ್ತಿದ್ದು, ಶ್ರೀಗಂಧದ ನಾಡು ನಮ್ಮದಾಗಿದೆ. ನಮ್ಮ ನಾಡಿನಂತೆಯೇ ನಮ್ಮ ಭಾಷೆ ಸಹ ಪದಸಂಪತ್ತನಿಂದ ಕೂಡಿದ್ದು, ಶ್ರೀಮಂತ ಭಾಷೆ ಎನಿಸಿಕೊಂಡಿದೆ. ಕರುನಾಡಿನಲ್ಲಿ ಜನ್ಮತಾಳಿದ ನಾವೆಲ್ಲರೂ ಭಾಗ್ಯವಂತರು ಎಂದರು.


ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ತಾಲೂಕು ಆಡಳಿತದಿಂದ ಸನ್ಮಾನಿಸಲಾಯಿತು. ಸರ್ಕಾರಿ ಮತ್ತು ಖಾಸಗಿ ಶಾಲಾ ವಿದ್ಯಾರ್ಥಿಗಳಿಂದ ಪಥಸಂಚಲನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು..


ಕಾರ್ಯಕ್ರಮದಲ್ಲಿ ನಗರಸಭೆ ಸದಸ್ಯರು, ಶಾಸಕ, ವಿಧಾನ ಪರಿಷತ್ ಸದಸ್ಯ ಸೇರಿದಂತೆ ಯಾವುದೇ ಜನಪ್ರತಿನಿಧಿಗಳು ಭಾಗವಹಿಸಲಿಲ್ಲಾ.  ತಹಸೀಲ್ದಾರ್ ಮಹೇಂದ್ರ, ತಾಪಂ ಕಾರ್ಯನಿರ್ವಾಹಕ ಶಿವಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಮರೀಗೌಡ, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಚಂದ್ರಶೇಖರ್ ಮುಂತಾದವರು ಉಪಸ್ಥಿತರಿದ್ದರು.


*ಎಡವಟ್ಟುಗಳ ರಾಜ ತಾಲ್ಲೂಕು ಆಡಳಿತ* ರಾಷ್ಟ್ರೀಯ ಹಬ್ಬಗಳ ವೇಳೆ ಏನಾದರೊಂದು ಎಡವಟ್ಟು ಮಾಡುವ ತನ್ನ ಚಾಳಿಯನ್ನು ತಾಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯು ೬೮ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲೂ ಮುಂದುವರಿಸಿತು, ಬಹುತೇಕ ಪ್ರತಿ ಬಾರಿಯಂತೆ ಇಂದೂ ಸಹ ಮೈಕ್ ಹಾಗೂ ಸೌಂಡ್ ಸಿಸ್ಟಂ ಕೈಕೊಟ್ಟಿತು. ಇದರ ಪರಿಣಾಮ ನಾಡಿನ ಹೆಸರಾಂತ ಕವಿಗಳ ಐದು ಕನ್ನಡ ಗೀತೆಗಳ ಗಾಯನದ ಮೂಲಕ ಕನ್ನಡಾಂಬೆಗೆ ನುಡಿನಮನ ಸಲ್ಲಿಸುವ ಕಾರ್ಯಕ್ರಮವನ್ನೇ ರದ್ದುಗೊಳಿಸುವಂತಾಗಿದ್ದು, ಸನ್ಮಾನಿತರು ಹಾಗೂ ಸಂಘ-ಸಂಸ್ಥೆಗಳ ಆಕ್ರೋಶಕ್ಕೆ ಕಾರಣವಾಯಿತು.


೬೮ನೇ ಕನ್ನಡ ರಾಜ್ಯೋತ್ಸವ ಹಾಗೂ ೫೦ವರ್ಷದ ಸುವರ್ಣ ಕರ್ನಾಟಕದ ಸಂಭ್ರಮದ ಹಿನ್ನೆಲೆಯಲ್ಲಿ ಆಯ್ದ ಹೆಸರಾಂತ ಐದು ಕವಿಗಳ ಐದು ಕನ್ನಡ ಗೀತಗಳ ಗಾಯನವನ್ನು ಕಾರ್ಯಕ್ರಮದಲ್ಲಿ ನಡೆಸುವಂತೆ ಸರ್ಕಾರ ಆದೇಶಿಸಿತ್ತು. ಮೈಕ್‍ನ ಕರ್ಕಶ ಶಬ್ಧ ಸೌಂಡ್ ಸಿಸ್ಟಂ ಪದೇ ಪದೇ ಕೈಕೊಡುತಿದ್ದ ಕಾರಣ ಮೊದಲ ಹಾಡಿನ ಮಧ್ಯದಲ್ಲೇ ಗೀತಗಾಯನವನ್ನು ನಿಲ್ಲಿಸುವಂತಾಯಿತು.


ಸೌಂಡ್ ಸಿಸ್ಟಂ ಅನ್ನು ಸರಿಪಡಿಸಲು ಆಯೋಜಕರು ಪ್ರಯತ್ನಿಸಿ ವಿಫಲರಾದರು. ಇದಕ್ಕೆ ಆಕ್ರೋಶಗೊಂಡ ಸಂಘ-ಸಂಸ್ಥೆಗಳ ಮುಖಂಡರುಗಳು ಹಾಗೂ ಸನ್ಮಾನಿತರು, ವೇದಿಕೆಯ ಮೇಲೇರಿ ತಾಲೂಕು ಆಡಳಿತವನ್ನು ತರಾಟೆಗೆ ತೆಗೆದುಕೊಂಡರು. ಪ್ರತಿ ರಾಷ್ಟ್ರೀಯ ಹಬ್ಬದ ವೇಳೆಯೂ ಒಂದಲ್ಲಾ ಒಂದು ಎಡವಟ್ಟು ಮಾಡಲಾಗುತ್ತದೆ. ನಿಮಗೆ ಆಯೋಜಿಸಲು ಆಸಕ್ತಿ ಇಲ್ಲದಿದ್ದರೆ ಸಂಘ-ಸಂಸ್ಥೆಗಳಿಗೆ ಕಾರ್ಯಕ್ರಮದ ಹೊಣೆ ನೀಡಿ. ನಾವೇ ನಿಂತು ಅಚ್ಚುಕಟ್ಟಾಗಿ ಕಾರ್ಯಕ್ರಮ ಆಯೋಜಿಸಿ ತೋರಿಸುತ್ತೇವೆ ಎಂದು ಸವಾಲು ಹಾಕಿದರು.


*ಸನ್ಮಾನಿತರಿಗೆ ಬೆಳಗ್ಗೆ ಆಹ್ವಾನ:*

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವ್ಯಕ್ತಿಗಳಿಗೆ ಪ್ರತಿ ವರ್ಷದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಗುತ್ತದೆ. ಸಮಿತಿಯು ಸನ್ಮಾನಿತರನ್ನು ಆಯ್ಕೆ ಮಾಡಿ ವರದಿ ಸಲ್ಲಿಸಿರುತ್ತಾರೆ. ಅದರೆ ಸನ್ಮಾನಿತರಿಗೆ ಆಹ್ವಾನ ಪತ್ರಿಕೆಯನ್ನೇ ತಲುಪಿಸಲಾಗಿಲ್ಲ. ಎಷ್ಟೋ ಮಂದಿ ಸನ್ಮಾನಿತರಿಗೆ ಹಿಂದಿನ ರಾತ್ರಿ ಹಾಗೂ ಕೆಲವರಿಗೆ ಬೆಳಿಗ್ಗೆ ಕರೆ ಮಾಡಿ ಸನ್ಮಾನಕ್ಕೆ ಬರುವಂತೆ ಆಹ್ವಾನಿಸಲಾಗಿದೆ ಎಂದು ಕಿಡಿಕಾರಿದರು.


*ನಗರಸಭೆ ಉಪಾಧ್ಯಕ್ಷೆಯೇ ಇಲ್ಲಾ, ಆದರೂ ಆಹ್ವಾನ*

ನಗರಸಭೆಯ ಉಪಾಧ್ಯಕ್ಷ ಸ್ಥಾನಕ್ಕೆ ಹಸೀನಾ ಪರ್ಹೀನ್ ರವರು ೨೬-೦೯-೨೦೨೩ರಂದು ಜಿಲ್ಲಾಧಿಕಾರಿಗಳಿಗೆ ರಾಜೀನಾಮೆ ಸಲ್ಲಿಸಿದ್ದು ಅಂಗೀಕಾರವಾಗಿದೆ. ಇದು ತಾಲ್ಲೂಕು ಆಡಳಿತಕ್ಕೆ ಗೊತ್ತಿಲ್ಲವೇ !?, ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಆಯೋಜಿಸುವ ಪೂರ್ವಭಾವಿ ಸಭೆಯಲ್ಲಿ ನಗರಸಭಾ ಅಧಿಕಾರಿಗಳು ಭಾಗವವಹಿಸಿರುತ್ತಾರೆ, ಅವರಿಗೂ ರಾಜೀನಾಮೆ ಅಥವಾ ಉಪಾಧ್ಯಕ್ಷರಿಲ್ಲಾ ಎನ್ನುವ ವಿಷಯ ಗೊತ್ತಿರಲಿಲ್ಲವೇ! ಆದರೂ ಸಹ ಆಹ್ವಾನ ಪತ್ರಿಕೆಯಲ್ಲಿ ನಗರಸಭಾ ಉಪಾಧ್ಯಕ್ಷರ ಹೆಸರನ್ನು ಮುದ್ರಿಸುವ ಮೂಲಕ ಎಡವಟ್ಟು ಮಾಡಿದ್ದಾರೆ.


ಇದೆಲ್ಲವನ್ನೂ ಗಮನಿಸಿದ ಕೆಲವು ಸ್ವಾಭಿಮಾನಿ ಕನ್ನಡಿಗರು ತಾಲೂಕು ಆಡಳಿತದ ವಿರುದ್ಧ ಧಿಕ್ಕಾರ ಕೂಗಲು ಮುಂದಾದರಾದರೂ ಕನ್ನಡದ ಕಾರ್ಯಕ್ರಮದಲ್ಲಿ ಘೋಷಣೆ ಕೂಗುವುದು ಬೇಡ ಎಂದು ಅವರನ್ನು ಸಮಾಧಾನಪಡಿಸಲಾಯಿತು. ಇನ್ನೂ ಕೆಲವರು ಇಂಥ ಕಾಟಾಚಾರದ ಸನ್ಮಾನ ಬೇಡ ಎಂದು ಕಾರ್ಯಕ್ರಮದಿಂದ ಹೊರಹೋಗಲು ಮುಂದಾದರು. ಅವರನ್ನು ಸ್ಥಳದಲ್ಲಿದ್ದ ಇನ್ನಿತರ ಮುಖಂಡರೇ ಸಮಾಧಾನಪಡಿಸಿದರು. ಕೊನೆಯಲ್ಲಿ ಗೀತಗಾಯನವನ್ನು ರದ್ದು ಮಾಡಿ ಸನ್ಮಾನ ಕಾರ್ಯಕ್ರಮ ನಡೆಸಲಾಯಿತು.


ಗೋ ರಾ ಶ್ತೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑