Tel: 7676775624 | Mail: info@yellowandred.in

Language: EN KAN

    Follow us :


ಗೋಮಾಳದಲ್ಲಿ ಶೆಡ್ ನಿರ್ಮಿಸಿದ ವಸತಿ ರಹಿತರನ್ನು ಒಕ್ಕಲೆಬ್ಬಿಸಿದ ಬಲಾಢ್ಯರು, ರೈತಸಂಘ ಆರೋಪ

Posted date: 03 Nov, 2023

Powered by:     Yellow and Red

ಗೋಮಾಳದಲ್ಲಿ ಶೆಡ್ ನಿರ್ಮಿಸಿದ ವಸತಿ ರಹಿತರನ್ನು ಒಕ್ಕಲೆಬ್ಬಿಸಿದ ಬಲಾಢ್ಯರು, ರೈತಸಂಘ ಆರೋಪ

ಚನ್ನಪಟ್ಟಣ: ತಾಲ್ಲೂಕಿನ ಭೈರಾಪಟ್ಟಣ ಗ್ರಾಮದಲ್ಲಿರುವ ಸರ್ಕಾರಿ ಗೋಮಾಳದಲ್ಲಿ ಮನೆ ಇಲ್ಲದ ನಾಲ್ಕು ಮಂದಿ ಖಾಲಿ ಜಾಗದಲ್ಲಿ ಶೆಡ್ ನಿರ್ಮಿಸಿಕೊಂಡಿದ್ದು, ಅವುಗಳನ್ನು ಸ್ಥಳೀಯ ಬಲಾಢ್ಯರು ರಾತ್ರೋರಾತ್ರಿ ಕಿತ್ತೆಸೆದಿದ್ದಾರೆ. ಇದಕ್ಕೆ ತಹಶಿಲ್ದಾರ್ ರವರ ಪರೋಕ್ಷ ಬೆಂಬಲವಿದೆ ಎಂಬ ಗುಮಾನಿ ಇದೆ ಎಂದು ನಗರದಲ್ಲಿ ರೈತ ಸಂಘದ ಮುಖಂಡರು ಆರೋಪಿಸಿದ್ದಾರೆ.


ಭೈರಾಪಟ್ಟಣ ಗ್ರಾಮದಲ್ಲಿ ಸರ್ವೇ ನಂಬರ್ ೬೩೪ರಲ್ಲಿ ೩೦,೩೭ ಎಕರೆ ಸರ್ಕಾರಿ ಗೋಮಾಳವಿದೆ. ಕೆಲವರು ವ್ಯವಸಾಯ ಮಾಡುತ್ತಿದ್ದಾರೆ. ಇದುವರೆಗೂ ಯಾರಿಗೂ ಸಾಗುವಳಿ ಚೀಟಿ ನೀಡಿಲ್ಲಾ. ಅದೇ ಸರ್ವೇ ನಂಬರಿನಲ್ಲಿರುವ ಖಾಲಿ ಜಾಗದಲ್ಲಿ ನಾಲ್ಕು ಮಂದಿ ವಸತಿ ಹೀನರು ಮನೆ ನಿರ್ಮಿಸಿಕೊಳ್ಳಲು ಅವಕಾಶ ಮಾಡಿಕೊಡಬೇಕೆಂದು ಇತ್ತೀಚೆಗೆ ನಡೆಸಿದ ಪ್ರತಿಭಟನಾ ಸಂದರ್ಭದಲ್ಲಿ ತಹಶಿಲ್ದಾರ್ ಮಹೇಂದ್ರ ರವರಿಗೆ ಮನವಿ ಮಾಡಲಾಗಿತ್ತು. ಸ್ಪಂದಿಸಿದ ಅವರು ಶೆಡ್ ನಿರ್ಮಿಸಿಕೊಳ್ಳಲಿ, ಸರ್ಕಾರ ಮುಂದಿನ ದಿನಗಳಲ್ಲಿ ಸಕ್ರಮ ಮಾಡಿದರೆ ಹಕ್ಕುಪತ್ರ ನೀಡಲಾಗುವುದು ಎಂದು ಮಾಹಿತಿ ನೀಡಿದ್ದರು ಎನ್ನಲಾಗಿದೆ.


ತದನಂತರ ನಾಲ್ಕು ಮಂದಿ ವಸತಿ ಹೀನರು ಶೆಡ್ ನಿರ್ಮಿಸಿದ್ದಾರೆ. ಆದರೆ ಸ್ಥಳೀಯರು ಶೆಡ್ ಗಳನ್ನು ಕಿತ್ತೆಸೆದಿದ್ದಾರೆ. ಈ ವಿಚಾರವಾಗಿ ಪೋಲಿಸರಿಗೂ ದೂರು ನೀಡಲಾಗಿದ್ದು, ಕಿತ್ತು ಹಾಕಿದವರನ್ನು ದಾಖಲೆ ಸಮೇತ ಕರೆಸಿದ್ದರಾದರೂ, ಅವರು ದಾಖಲೆ ಇಲ್ಲದೆ ವಿಚಾರಣೆ ಎದುರಿಸಿದ್ದಾರೆ. ತಹಶಿಲ್ದಾರ್ ರವರನ್ನು ಭೇಟಿ ಮಾಡಲು ಹಲವಾರು ಬಾರಿ ಪ್ರಯತ್ನಿಸಿದರಾದರೂ ಅವರು ಸಮಯ ನೀಡಿಲ್ಲಾ. ೦೨/೧೦ನೆಯ ಗುರುವಾರ ರಾತ್ರಿ ಖುದ್ದು ತಹಶಿಲ್ದಾರ್ ರವರೇ ಹೋಗಿ ಶೆಡ್ ತೆರವುಗೊಳಿಸುವಂತೆ ಸೂಚಿಸಿರುವುದು ಅವರ ಮೇಲೆ ಅನುಮಾನ ಮೂಡುವಂತಾಗಿದೆ ಎಂದು ರೈತ ಸಂಘದ ಹಿರಿಯ ಮುಖಂಡ ಬೋರಾಪುರ ಗ್ರಾಮದ ಶಂಕರೇಗೌಡ ತಿಳಿಸಿದರು.


ರಾಮನಗರ ಜಿಲ್ಲೆಯ ಮಹಿಳಾ ಘಟಕದ ಅಧ್ಯಕ್ಷೆ ಶೋಭಾ ಮಾತನಾಡಿ ಭೈರಾಪಟ್ಟಣ ಗ್ರಾಮದಲ್ಲಿ ಗೋಮಾಳವಿದ್ದು, ಇದು ಸರ್ಕಾರದ ಆಸ್ತಿಯಾಗಿದೆ. ಇದರಲ್ಲಿ ಶೆಡ್ ನಿರ್ಮಾಣ ಮಾಡಿದವರಿಗೆ ಧಮಕಿ ಹಾಕಿ ಶೆಡ್ ಕಿತ್ತು ಬಿಸಾಕಿದ್ದಾರೆ. ಇದಕ್ಕೆ ತಹಶಿಲ್ದಾರ್ ರವರೇ ಖುದ್ದು ಬಂದಿದ್ದು ನಮಗೆ ಬೇಸರ ತರಿಸಿದೆ. ಅದನ್ನು ಕೇಳಲೆಂದು ಬಂದರೆ ತಹಶಿಲ್ದಾರ್ ರವರು ಸಿಗಲಿಲ್ಲ. ಮೊಬೈಲ್ ಕರೆಯ ಮೂಲಕವೂ ಸರಿಯಾದ ಉತ್ತರ ನೀಡಲಿಲ್ಲ. ಗ್ರೇಡ್೨ ತಹಶಿಲ್ದಾರ್ ಆಗಲಿ ಮತ್ತಿತರ ಕಂದಾಯ ಇಲಾಖೆಯ ಅಧಿಕಾರಿಗಳಾಗಲಿ ಸ್ಪಂದಿಸದೇ ಉದಾಸೀನ ಮಾಡಿದ್ದು, ಹೀಗೆ ಮುಂದುವರೆದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುತ್ತದೆ ಎಂದರು.


ಈ ಸಂದರ್ಭದಲ್ಲಿ ಕೋಡಿಹಳ್ಳಿ ಚಂದ್ರು, ಸಿಂಗರಾಜಿಪುರ ಗ್ರಾಮದ ಚಾಮರಾಜು, ತಾಲ್ಲೂಕು ಅಧ್ಯಕ್ಷರಾದ ಶ್ವೇತಾ ಭೈರಾಪಟ್ಟಣ, ಸುಧಾ, ಪುಟ್ಟಮ್ಮ ಸೇರಿದಂತೆ ಹಲವಾರು ಮಂದಿ ಉಪಸ್ಥಿತರಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑