Tel: 7676775624 | Mail: info@yellowandred.in

Language: EN KAN

    Follow us :


ಸಂಸದರು ರಸ್ತೆ ಗುಂಡಿಗಳನ್ನು ಮುಚ್ಚಿಸಲಿ ಸಾಕು, ಹೆಚ್ ಡಿ ಕುಮಾರಸ್ವಾಮಿ ವ್ಯಂಗ್ಯ

Posted date: 07 Nov, 2023

Powered by:     Yellow and Red

ಸಂಸದರು ರಸ್ತೆ ಗುಂಡಿಗಳನ್ನು ಮುಚ್ಚಿಸಲಿ  ಸಾಕು, ಹೆಚ್ ಡಿ ಕುಮಾರಸ್ವಾಮಿ ವ್ಯಂಗ್ಯ

 ಚನ್ನಪಟ್ಟಣ, ನ.೦೬: ಜನಸಂಪರ್ಕ ಸಭೆ ಹೆಸರಲ್ಲಿ ಅಧಿಕಾರಿಗಳನ್ನು ಬೆದರಿಸುವ ಸಂಸದರಿಗೆ ಸಾತನೂರು ಸರ್ಕಲ್ ರಸ್ತೆಯ ಗುಂಡಿಗಳು ಕಾಣಲಿಲ್ಲವೇ ಎಂದು ಮಾಜಿ ಮುಖ್ಯಮಂತ್ರಿಗಳು ಹಾಗೂ ಕ್ಷೇತ್ರದ ಶಾಸಕರಾದ ಹೆಚ್.ಡಿ.ಕುಮಾರಸ್ವಾಮಿ ಅವರು ಸಂಸದರ ವಿರುದ್ಧ ಪರೋಕ್ಷವಾಗಿ, ವ್ಯಂಗ್ಯವಾಗಿ ವಾಗ್ದಾಳಿ ಮಾಡಿದರು.

ಪಟ್ಟಣದ ತಾಲೂಕು ಕಚೇರಿಯಲ್ಲಿ ಇ-ಆಡಳಿತ ತಂತ್ರಾಂಶದ ಸೇವೆಗೆ ಸೋಮವಾರ ಚಾಲನೆ ನೀಡಿದ ಬಳಿಕ ಅವರು ಸುದ್ದಿಗಾರರ ಜೊತೆ ಮಾತನಾಡಿದ ವೇಳೆ ಕ್ಷೇತ್ರಕ್ಕೆ ಕುಮಾರಸ್ವಾಮಿ ಅವರ ಕೊಡುಗೆ ಏನು ಎಂದು ಪ್ರಶ್ನೆ ಮಾಡುವ ಕಾಂಗ್ರೆಸ್ ನಾಯಕರು ಮತ್ತು ಸಂಸದರ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿ ನಾನು ಅಭಿವೃದ್ಧಿ ಮಾಡಿರುವ ಬಗ್ಗೆ ಕ್ಷೇತ್ರದಲ್ಲಿ ಕಣ್ಮುಂದೆ ಇದೆ. ಇಂದು ಜನ ಸಂಪರ್ಕ ಸಭೆ ಎಂದು ಹೋಗಿದ್ದಾರಲ್ಲ ಆ ರಸ್ತೆಗಳನ್ನು ನೋಡಿದರೆ ನನ್ನ ಅಭಿವೃದ್ಧಿ ಏನು ಎಂದು ಗೊತ್ತಾಗುತ್ತದೆ ಎಂದರು.


ಅಧಿಕಾರಿಗಳನ್ನು ಬೆದರಿಸಿ ಹಿಡಿತದಲ್ಲಿಟ್ಟುಕೊಳ್ಳಲು ಗ್ರಾಮ ಸಭೆ ಮಾಡುತ್ತಿದ್ದಾರಲ್ಲಾ ಅವರು ಗ್ರಾಮಸಭೆಗೆ ಹೋಗುವ ಸಾತನೂರು ಸರ್ಕಲ್ ರಸ್ತೆಯಲ್ಲಿನ ಗುಂಡಿಗಳನ್ನು ಮುಚ್ಚಿ ಎಂದು ಅಧಿಕಾರಿಗಳಿಗೆ ಏಕೆ ಹೇಳಿಲ್ಲ. ಅವರದೇ ಸರ್ಕಾರ ಇರುವಾಗ ರಸ್ತೆ ಅಭಿವೃದ್ಧಿ ಮಾಡದಿದ್ದರೂ ಗುಂಡಿಗಳನ್ನು ಮುಚ್ಚಬಹುದಲ್ಲವೇ ಎಂದು ಕಿಡಿಕಾರಿದರು.


ತಾಲೂಕಿನ ಗ್ರಾಮೀಣ ಭಾಗದಲ್ಲಿ ಕಾಡುಪ್ರಾಣಿಗಳ ಹಾವಳಿಯ ಬಗ್ಗೆ ಪ್ರತಿಕ್ರಿಯೆ ನೀಡಿದ ಹೆಚ್ಡಿಕೆ ಇಂದು ಬೆಟ್ಟಗುಡ್ಡಗಳನ್ನು ಕಡಿದು ಕಾಡು ಪ್ರಾಣಿಗಳು ಬೆಂಗಳೂರು ನಗರಕ್ಕೆ ಬಂದಿವೆ ಇಂದು ಗ್ರಾಮೀಣ ಪ್ರದೇಶದಲ್ಲಿ ಅರಣ್ಯ ಪ್ರದೇಶಗಳು, ಬೆಟ್ಟಗುಟ್ಟಗಳು ಮತ್ತು ಸರ್ಕಾರಿ ಗೋಮಾಳವನ್ನು ಒತ್ತುವರಿ ಮಾಡಿಕೊಂಡ ವೇಳೆ ಮೌನವಾಗಿದ್ದ ಫಲ ಇಂದು ಕಾಡಿನ ಪ್ರಾಣಿಗಳು ಗ್ರಾಮಕ್ಕೆ ಬಂದಿವೆ ಎಂದರು.


ತೌಟನಹಳ್ಳಿ ಗುಡ್ಡೆಯಲ್ಲಿ ಒತ್ತುವರಿ ಮಾಡಿರುವ ಬಗ್ಗೆ ಇಂದು ಹೇಳುತ್ತಾರೆ ಆದರೆ ಈ ಹಿಂದೆ ಮುಖಂಡರ ಬೆಂಬಲದಿಂದ ಒತ್ತುವರಿ ಮಾಡಿಕೊಂಡ ವೇಳೆ ಜನರು ಮೌನವಾಗಿದ್ದುದು ಏಕೆ ಎಂದು ತಾಲೂಕಿನ ಜನತೆಯ ವಿರುದ್ಧವೇ ಆಕ್ರೋಶ ವ್ಯಕ್ತಪಡಿಸಿದರು.


ಪಟ್ಟಣದಲ್ಲಿ ಕಸದ ಸಮಸ್ಯೆ ಹೆಚ್ಚಾಗಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಹೆಚ್ಡಿಕೆ ಈಗಾಗಲೆ ನಗರಸಭೆಯಿಂದ ತಾಲೂಕಿನ ಎರಡು ಗ್ರಾ.ಪಂ. ವ್ಯಾಪ್ತಿಯಲ್ಲಿ ೧೦ ಎಕರೆ ಜಮೀನು ಗುರುತಿಸಿದ್ದು ಎರಡು ದಿನಗಳಲ್ಲಿ ಹದ್ದುಬಸ್ತು ಮಾಡಿ ನಗರಸಭೆಗೆ ನೀಡುತ್ತಾರೆ. ಈ ಬಗ್ಗೆ ತಹಸೀಲ್ದಾರ್ ಬಳಿ ಚರ್ಚೆ ಮಾಡಿದ್ದೇನೆ ಎಂದು ತಿಳಿಸಿದರು.

ಸರ್ಕಾರವು ಮುಂದಿನ ಲೋಕಸಭಾ ಚುನಾವಣೆಗಾಗಿ ಅಧಿಕಾರ ಮಾಡುತ್ತಿದೆ. ಚುನಾವಣೆಯಲ್ಲಿ ೨೦ ಸ್ಥಾನ ಗೆಲ್ಲಬೇಕು, ವಿಪಕ್ಷದ ೫೦ ಮಂದಿಯನ್ನು ಕರೆತರುವ ಟಾಸ್ಕ್ ಈಡೇರಿಸಲು ಸಚಿವರು ಮುಂದಾಗಿದ್ದಾರೆ ಹೊರತು ಅವರಿಗೆ ರಾಜ್ಯದ ಜನತೆಯ ಹಿತ ಕಾಯುವ ಜವಾಬ್ದಾರಿಯನ್ನು ನೀಡಿಲ್ಲ. ರಾಜ್ಯದಲ್ಲಿ ಬರ ಇದ್ದರೂ ಸಹ ಸಚಿವರುಗಳನ್ನು ತೆಲಂಗಾಣ ಚುನಾವಣೆಗೆ ಚುನಾವಣಾ ವೀಕ್ಷಕರು, ಉಸ್ತುವಾರಿಗಳನ್ನಾಗಿ ಕಳುಹಿಸಿದ್ದಾರೆ. ಅವರಿಗೆ ರಾಜ್ಯದ ಜನರ ಹಿತಕ್ಕಿಂತ ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ತರುವುದೇ ಮುಖ್ಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಲೋಕಸಭಾ ಚುನಾವಣೆಯ ಬಳಿಕ ಇಡೀ ದೇಶದಲ್ಲಿ ಕಾಂಗ್ರೆಸ್‌ಗೆ ಅಸ್ಥಿತ್ವ ಇಲ್ಲ ಎಂದು ಬಿಜೆಪಿ ಪರ ಹೆಚ್ಡಿಕೆ ಬ್ಯಾಟಿಂಗ್ ಮಾಡಿದರು.


ರಾಜ್ಯ ಸರ್ಕಾರ ಬರ ಪರಿಹಾರ ನೀಡುವ ವಿಚಾರದಲ್ಲಿ ಕೇಂದ್ರದ ಮೇಲೆ ಬೊಟ್ಟು ಮಾಡುವುದನ್ನು ಬಿಟ್ಟು ರಾಜ್ಯದಿಂದ ನೀಡಬೇಕಾದ ಪರಿಹಾರವನ್ನು ನೀಡಿ ಬಳಿಕ ಕೇಂದ್ರದಿಂದ ಬರಬೇಕಾದ ಪರಿಹಾರದ ಬಗ್ಗೆ ಕೇಂದ್ರಕ್ಕೆ ಪ್ರಶ್ನೆ ಮಾಡಲಿ. ಹೆಚ್ಡಿಕೆ, ದೇವೇಗೌಡರು ಮೋದಿ ಅವರ ಜೊತೆ ಚನ್ನಾಗಿದ್ದಾರೆ ಅವರು ಈ ಬಗ್ಗೆ ಶಿಫಾರಸ್ಸು ಮಾಡಲಿ ಎಂದು ಸಿಎಂ ಟ್ವೀಟ್ ಮಾಡಿದ್ದಾರೆ. ನನಗೆ ನನ್ನ ರಾಜ್ಯದ ಜನತೆಯ ಹಿತ ಮುಖ್ಯವಾಗಿದ್ದು ಇದಕ್ಕಾಗಿ ಯಾರನ್ನಾದರೂ ಭೇಟಿ ಮಾಡಿ ಸಮಸ್ಯೆಗೆ ಪರಿಹಾರ ಹುಡುಕುವ ಪ್ರಯತ್ನ ಮಾಡುತ್ತೇನೆ ಎಂದು ಕೇಂದ್ರ ಸರ್ಕಾರದ ಪರ ಬ್ಯಾಟಿಂಗ್ ಮಾಡಿದರು.


ಸಂದರ್ಭದಲ್ಲಿ ತಹಸೀಲ್ದಾರ್ ಮಹೇಂದ್ರ, ಉಪತಹಸೀಲ್ದಾರ್ ಲಕ್ಷ್ಮಿದೇವಮ್ಮ, ತಾ.ಪಂ. ಇಓ ಶಿವಕುಮಾರ್, ನಗರಸಭೆ ಪೌರಾಯುಕ್ತ ಸಿ ಪುಟ್ಟಸ್ವಾಮಿ ಸೇರಿದಂತೆ ತಾಲೂಕು ಜೆಡಿಎಸ್ ಅಧ್ಯಕ್ಷ ಹೆಚ್.ಸಿ.ಜಯಮುತ್ತು, ಮುಖಂಡರಾದ ಗೋವಿಂದಹಳ್ಳಿ ನಾಗರಾಜು, ಬೋರ್‍ವೆಲ್ ರಾಮಚಂದ್ರು ಸೇರಿದಂತೆ ಹಲವರು ಇದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑