ನಗರಸಭೆ ನೂತನ ಉಪಾಧ್ಯಕ್ಷರಾಗಿ ಜೆಡಿಎಸ್ನ ನಿಗಾರ್ ಬೇಗಂ ಅವಿರೋಧವಾಗಿ ಆಯ್ಕೆಯಾದರು

ಚನ್ನಪಟ್ಟಣ: ಹಿಂದಿನ ಉಪಾಧ್ಯಕ್ಷೆ ಹಸೀನಾ ಫರ್ಹೀನ್ ರಾಜೀನಾಮೆಯಿಂದ ತೆರವಾಗಿದ್ದ ನಗರಸಭೆ ಉಪಾಧ್ಯಕ್ಷ ಸ್ಥಾನಕ್ಕೆ ಸೋಮವಾರ ಚುನಾವಣೆ ನಿಗದಿಯಾಗಿತ್ತು. ಚುನಾವಣೆಯಲ್ಲಿ 27ನೇ ವಾರ್ಡ್ನ ನಿಗಾರ್ ಬೇಗಂ ಹೊರತು ಮತ್ಯಾರು ನಾಮಪತ್ರ ಸಲ್ಲಿಸದ ಹಿನ್ನಲೆಯಲ್ಲಿ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ ಉಪವಿಭಾಗಾಧಿಕಾರಿ ಬಿನೋಯ್ ರವರು ನಿಗಾರ್ ಬೇಗಂ ಅವರ ಅವಿರೋಧ ಆಯ್ಕೆಯನ್ನು ಘೋಷಿಸಿದರು.
ಅವಿರೋಧ ಆಯ್ಕೆ: ಉಪಾಧ್ಯಕ್ಷ ಸ್ಥಾನಕ್ಕೆ 6ನೇ ವಾರ್ಡ್ನ ಬಿಜೆಪಿ ನಗರಸಭೆ ಸದಸ್ಯೆ ಕಮಲ ರಾಮು, 15ನೇ ವಾರ್ಡ್ನ ಬಿಜೆಪಿ ಸದಸ್ಯೆ ಸುಮಾ ರವೀಶ್ ಹಾಗೂ 23ನೇ ವಾರ್ಡ್ನ ಕಾಂಗ್ರೆಸ್ ಸದಸ್ಯ ಮತೀನ್ ಸ್ಪರ್ಧಿಸುವ ಕುರಿತು ಮಾತುಗಳು ಕೇಳಿಬಂದಿತ್ತಾದರೂ ಇವರ್ಯಾರು ನಾಮಪತ್ರ ಸಲ್ಲಿಸದ ಕಾರಣ ನಿಗಾರ್ ಬೇಗಂ ಅವರು ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು.
ಬಿಜೆಪಿ ಬೆಂಬಲ: ಬಿಜೆಪಿಯ ಇಬ್ಬರು ನಗರಸಭಾ ಸದಸ್ಯೆಯರು ಉಪಾಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದರು. ಆದರೆ, ಚುನಾವಣೆಯಲ್ಲಿ ಸ್ಪರ್ಧಿಸದಂತೆ ವಿಧಾನಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಸೂಚಿಸಿದ ಹಿನ್ನೆಲೆಯಲ್ಲಿ ಬಿಜೆಪಿ ಸದಸ್ಯರು ನಾಮಪತ್ರ ಸಲ್ಲಿಸದೇ ನಿಗಾರ್ ಬೇಗಂ ಗೆ ಬೆಂಬಲ ಸೂಚಿಸಿದರು. ಇನ್ನು ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ನಿಗಾರ್ ಬೇಗಂ ಅವರನ್ನು ಬಿಜೆಪಿ ಸದಸ್ಯರು ಹೂವಿನ ಹಾರ ಹಾಕಿ, ಸಿಹಿ ತಿನ್ನಿಸಿ ಅಭಿನಂದಿಸಿದ್ದದ್ದು ವಿಶೇಷವೆನಿಸಿತು.
ಚುನಾವಣಾಧಿಕಾರಿ ನಿಗಾರ್ ಬೇಗಂ ಅವರ ಅವಿರೋಧ ಆಯ್ಕೆಯನ್ನು ಘೋಷಿಸುತ್ತಿದ್ದಂತೆ ಅವರ ಬೆಂಬಲಿಗರ ಪಟಾಕಿ ಸಿಡಿಸಿ, ಸಿಹಿ ಹಂಚಿ ನೂತನ ಉಪಾಧ್ಯಕ್ಷರನ್ನು ಅಭಿನಂದಿಸಿದರು.
ಈ ವೇಳೆ ಮಾತನಾಡಿದ ನಗರಸಭೆ ನೂತನ ಉಪಾಧ್ಯಕ್ಷೆ ನಿಗಾರ್ ಬೇಗಂ, ಮಾಜಿ ಮುಖ್ಯಮಂತ್ರಿ ಹಾಲಿ ಶಾಸಕರದ ಹೆಚ್.ಡಿ.ಕುಮಾರಸ್ವಾಮಿ ಯವರು, ಜೆಡಿಎಸ್ ಮುಖಂಡರು ಹಾಗೂ ಎಲ್ಲ ನಗರಸಭೆ ಸದಸ್ಯರ ಬೆಂಬಲದಿಂದ ಉಪಾಧ್ಯಕ್ಷೆಯಾಗಿ ಅವಿರೋಧವಾಗಿ ಆಯ್ಕೆಯಾಗಿದ್ದೇನೆ. ಎಲ್ಲರ ಸಹಕಾರದೊಂದಿಗೆ ಉತ್ತಮ ಆಡಳಿತ ನಡೆಸುತ್ತೇನೆ, ನನಗೆ ಬೆಂಬಲ ನೀಡಿದ ಎಲ್ಲಾ ಪಕ್ಷಗಳ ಮುಖಂಡರು, ನಗರಸಭೆ ಸದಸ್ಯರಿಗೆ ಅಭಾರಿಯಾಗಿದ್ದೇನೆ ಎಂದು ತಿಳಿಸಿದರು.
ಜೆಡಿಎಸ್ ತಾಲೂಕು ಘಟಕದ ಮಾಜಿ ಅಧ್ಯಕ್ಷ ಹೆಚ್.ಸಿ.ಜಯಮುತ್ತು, ಮಾಜಿ ನಗರಾಧ್ಯಕ್ಷ ಅಜಯ್, ನಗರಸಭೆ ಸದಸ್ಯರಾದ ಮಂಜುನಾಥ್, ನಾಗೇಶ್, ಬಿಜೆಪಿ ಸದಸ್ಯರಾದ ಸುಮಾ ರವೀಶ್, ಜಯಮಾಲ ಮುಂತಾದವರು ಅಭಿನಂದಿಸಿದರು.
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು