Tel: 7676775624 | Mail: info@yellowandred.in

Language: EN KAN

    Follow us :


ಜಾನಪದಕ್ಕೆ ಆದಿ ಅಂತ್ಯವಿಲ್ಲ, ಪದ್ಮಶ್ರೀ ಪುರಸ್ಕೃತ ಸೋಮಣ್ಣ

Posted date: 10 Feb, 2024

Powered by:     Yellow and Red

ಜಾನಪದಕ್ಕೆ ಆದಿ ಅಂತ್ಯವಿಲ್ಲ, ಪದ್ಮಶ್ರೀ ಪುರಸ್ಕೃತ ಸೋಮಣ್ಣ

ರಾಮನಗರ : ಫೆ 10: ಜಾನಪದಕ್ಕೆ ಆದಿ ಅಂತ್ಯವಿಲ್ಲ, ಇಂತಹ ಸಂದರ್ಭದಲ್ಲೇ ಜಾನಪದ ಜನ್ಮತಾಳಿತು. ಮುಂದೆ ಇಂತಹ ಸಮಯದಲ್ಲಿ ಅಂತ್ಯವಾಗುತ್ತದೆ ಎಂದು ಯಾರು ಹೇಳಲು ಸಾಧ್ಯವಾಗುವುದಿಲ್ಲ. ಜನರಿಂದ ಜನರಿಗೆ ತಲುಪಿದ್ದೇ ಜಾನಪದ.  ಈ ಜಾನಪದವು ಇತ್ತಿಚೆಗೆ ನವೀಕರಣಗೊಳ್ಳುತ್ತಿದೆ. ನವೀಕರಣದಲ್ಲಿ ಮೂಲ ಜಾನಪದವನ್ನು ಆಧುನಿಕರು ಬಿಟ್ಟುಕೊಡಬಾರದು ಎಂದು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಸೋಮಣ್ಣ ಅಭಿಪ್ರಾಯಪಟ್ಟರು.

ಅವರು ಶನಿವಾರ ಕರ್ನಾಟಕ ಜಾನಪದ ಪರಿಷತ್ ರಾಮನಗರದ ಜಾನಪದ ಲೋಕದಲ್ಲಿ ಹಮ್ಮಿಕೊಂಡಿದ್ದ ಲೋಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.


ಜಾನಪದ ಎಂಬುದು ವಿಶ್ವದಾದ್ಯಂತ ಇದೆ. ಆದರೇ ಭಾರತೀಯ ಜಾನಪದ ಅದರಲ್ಲೂ ಕರ್ನಾಟಕ ಜಾನಪದಕ್ಕೆ ಅದರದೇ ಆದ ವಿಶೇಷಣಗಳಿವೆ. ಇಂದಿನ ಪೀಳಿಗೆ ಮೂಲ ಜಾನಪದವನ್ನು ಕಲಿಯಲು ಆಸಕ್ತಿ ತೋರಿಸುತ್ತಿಲ್ಲ. ಮೂಲ ಜಾನಪದದ ಸೊಗಡು ಇಂದಿನ ಆಧುನಿಕ ಜಾನಪದದಲ್ಲಿ ಕಳೆದುಹೋಗುತ್ತಿದೆ. ಇನ್ನೂ ಮುಂದಿನ ಪೀಳಿಗೆಗೆ ಜಾನಪದವನ್ನು ಉಳಿಸುವುದು ಕಷ್ಟವಾಗುತ್ತದೆ. ಕೇವಲ ಗ್ರಂಥಗಳಲ್ಲಿ ಹಾಗೂ ಜಾನಪದ ಲೋಕದಂತಹ ಕಾರ್ಯಗಾರಗಳಲ್ಲಿ ಹುಡುಕಬೇಕಾಗುತ್ತದೆ. ಹಾಗಾಗಿ ಜಾನಪದವನ್ನು ಜನರುಗಳೇ ಬಾಯಿಂದ  ಬಾಯಿಗೆ ಹರಡುವ ಹಾಗೂ ಕೆಲ ಪುರಾತನ ವಸ್ತುಗಳನ್ನು ಶೇಖರಿಸುವ ಜೊತೆಗೆ ಬಳಸುತ್ತಿದ್ದರೆ ಜಾನಪದವು ಅಂತ್ಯವಿಲ್ಲದಂತಾಗುತ್ತದೆ ಎಂದರು.




ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷರಾದ ಹಿ ಶಿ ರಾಮಚಂದ್ರೇಗೌಡ ಮಾತನಾಡಿ ಹೆಚ್. ಎಲ್. ನಾಗೇಗೌಡರು    ಐ.ಎ.ಎಸ್. ಅಧಿಕಾರಿಯಾಗಿದ್ದರೂ ಕೂಡ ಜಾನಪದವನ್ನು ಉಳಿಸುವ ಸಲುವಾಗಿ ಶ್ರಮವಹಿಸಿ ಜಾನಪದ ಲೋಕವನ್ನು ಕಟ್ಟಿದ್ದಾರೆ. ಈ ಜಾನಪದ ಲೋಕ ಇಲ್ಲವೆಂದಿದ್ದರೆ ಮುಂದಿನ ಪೀಳಿಗೆ ಇರಲಿ, ಇಂದಿನ ಪೀಳಿಗೆಗೆ ಉಳಿಯುವುದು ಕಷ್ಟವಾಗುತ್ತಿತ್ತು. ಆ ಹಿನ್ನೆಲೆಯಲ್ಲಿ ಪುರಾತನ, ಇತಿಹಾಸ ಬಹಳ ಮುಖ್ಯವಾಗಿ ಈ ದೇಶದ ಬೆನ್ನೆಲುಬಾದ ರೈತರು ಬಳಸುತ್ತಿದ್ದ ವಸ್ತುಗಳನ್ನು ಸಂಗ್ರಹಿಸುವ ಮೂಲಕ ಹಾಗೂ ಕಥೆಗಳು, ಪದಗಳು ಇನ್ನಿತರೆ ಕಲಾ ಪ್ರಕಾರಗಳನ್ನು ಹಿಡಿದಿಟ್ಟಿದ್ದಾರೆ. ಅದನ್ನು ನಾವು ಮುಂದುವರೆಸಿಕೊಂಡು ಹೋಗುತ್ತಿದ್ದು, ಮುಂದಿನವರು ಸಹ ಉಳಿಸಿಕೊಳ್ಳಬೇಕು ಎಂದರು.


ಇದೇ ಸಂದರ್ಭದಲ್ಲಿ ಸುವರ್ಣ ಕರ್ನಾಟಕ ಜಾನಪದ ಲೋಕೋತ್ಸವದಲ್ಲಿ ಕರಕುಶಲ ಮೇಳ, ಕುಂಬಾರಿಕೆ, ಬುಟ್ಟಿ ಹೆಣೆಯುವಿಕೆ, ಲಂಬಾಣಿ ಕಸೂತಿ, ಕೌದಿ ಕಲೆ, ಚರ್ಮ ವಾದ್ಯ ತಯಾರಿಕೆ, ತಂತಿ ವಾದ್ಯ ತಯಾರಿಕೆ ಹೀಗೆ 20 ಕ್ಕೂ ಹೆಚ್ಚಿನ ಮಳಿಗೆಗಳನ್ನು ತೆರೆಯಲಾಗಿತ್ತು, ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯವರು ಏರ್ಪಡಿಸಿದ್ದರು. ಲೋಕೋತ್ಸವದಲ್ಲಿ ನಿವೃತ್ತ ಐಎಎಸ್ ಅಧಿಕಾರಿಗಳಾದ ಐ.ಎಂ ವಿಠ್ಠಲಮೂರ್ತಿ ಯವರು, ಎಚ್.ಎಲ್ ನಾಗೇಗೌಡರ ಪರಿಶ್ರಮವನ್ನು, ಮತ್ತು ನಾಡಿಗೆ ಜಾನಪದ ಲೋಕದ ಕೊಡುಗೆಗಳನ್ನು ಮನಸಾರೆ ಕಂಡು ಮೆಚ್ಚುಗೆ ವ್ಯಕ್ತ ಪಡಿಸಿದರು.

 

ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ.ಅವಿನಾಶ್ ಮೆನನ್ ರಾಜೇಂದ್ರನ್, ಕಾರ್ಯಾಧ್ಯಕ್ಷರಾದ ಪ್ರೊ. ಹಿ. ಚಿ.ಬೋರಲಿಂಗಯ್ಯ, ದಿವ್ಯಸಾನಿದ್ಯವನ್ನು ಅನ್ನದಾನೇಶ್ವರನಾಥ ಸ್ವಾಮಿಗಳು ವಹಿಸಿ ಆಶೀರ್ವಚನ ನೀಡಿದರು. ಮ್ಯಾನೇಜಿಂಗ್ ಟ್ರಸ್ಟಿಗಳಾದ ಆದಿತ್ಯ ನಂಜರಾಜ್ ವಂದನೆಗಳನ್ನು ಸಲ್ಲಿಸಿದರು. 30 ಕ್ಕೂ ಹೆಚ್ಚಿನ ಕಲಾತಂಡಗಳು ವೈವಿಧ್ಯ ಕಲೆಯನ್ನು ಪ್ರಸ್ತುತ ಪಡಿಸಿದರು. ಪ್ರವಾಸಿಗರು ಈ ಎಲ್ಲಾ ಕಾರ್ಯಕ್ರಮಗಳನ್ನು ಕಣ್ತುಂಬಿಕೊಂಡರು. ಕರ್ನಾಟಕ ಜಾನಪದ ಪರಿಷತ್ತಿನ ಡಾ. ನಂದಕುಮಾರ್ ಹೆಗಡೆ,  ಡಾ. ರವಿಕುಮಾರ ಯು. ಎಂ. ಸರಸವಾಣಿ, ಪ್ರದೀಪ್ ಮತ್ತಿತ್ತರರು ಉಪಸ್ಥಿತರಿದ್ದರು.


ಗೊ. ರಾ. ಶ್ರೀನಿವಾಸ

ಮೊ. ನಂ - 9845856139

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑