Tel: 7676775624 | Mail: info@yellowandred.in

Language: EN KAN

    Follow us :


ಮುಖ್ಯಮಂತ್ರಿ ಕ್ಷೇತ್ರದಲ್ಲೇ ರೈತರಿಗೆ ಕೋರ್ಟ್ ನಿಂದ ನೋಟೀಸ್

Posted date: 05 Dec, 2018

Powered by:     Yellow and Red

ಮುಖ್ಯಮಂತ್ರಿ ಕ್ಷೇತ್ರದಲ್ಲೇ ರೈತರಿಗೆ ಕೋರ್ಟ್ ನಿಂದ ನೋಟೀಸ್

ಸಾಲ ಬಾಕಿ ಉಳಿಸಿಕೊಂಡ ಮಹಿಳೆಗೆ ಬ್ಯಾಂಕ್ ನವರು ನ್ಯಾಯಾಲಯದ ಮೂಲಕ ನೋಟೀಸ್‌ಜಾರಿ ಮಾಡಿದ್ದರಿಂದ ರೈತಸಂಘದ ಪದಾಧಿಕಾರಿಗಳು ಆಕ್ರೊಶ ವ್ಯಕ್ತಪಡಿಸಿದರು.

 ಅತ್ತ ಮುಖ್ಯಮಂತ್ರಿ ಕುಮಾರಸ್ವಾಮಿ ತಮ್ಮ ಮಹಾತ್ವಾಕಾಂಕ್ಷಿ ಸಾಲ ಮನ್ನಾ ಯೋಜನೆಯನ್ನು ಜಾರಿಗೆ ತಂದು ರೈತರಿಗೆ ಋಣಮುಕ್ತ ಪತ್ರ ನೀಡಲು ಸಿದ್ದತೆ ನಡೆಸುತ್ತಿದ್ದರೆ, ಇತ್ತ ಸಿಎಂ ಸ್ವಕ್ಷೇತ್ರದಲ್ಲಿ ಸಾಲ ಮರುಪಾವತಿ ಮಾಡದ ರೈತರಿಗೆ ನ್ಯಾಯಾಲಯದಿಂದ ನೋಟೀಸ್ ಜಾರಿ ಮಾಡಿರುವ ಸಂಗತಿಯನ್ನು ರಾಜ್ಯ ರೈತಸಂಘ ಬಹಿರಂಗ ಗೊಳಿಸಿದೆ.

ಇಲ್ಲಿನ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಟಿ ನಡೆಸಿದ ರಾಜ್ಯ ರೈತಸಂಘದ ಪದಾಧಿಕಾರಿಗಳು, ರೈತ ಮಹಿಳೆಗೆ ನೀಡಿರುವ ಕೋರ್ಟ್ ನೋಟೀಸ್ ಅನ್ನು ಪ್ರದರ್ಶಿಸಿ, ಮುಖ್ಯಮಂತ್ರಿಗಳ ಸ್ವಕ್ಷೇತ್ರದಲ್ಲೇ ಬ್ಯಾಂಕ್‌ಗಳು ರೈತರಿಗೆ ನೋಟೀಸ್ ಜಾರಿಗೊಳಿಸುತ್ತಿವೆ. ಸಾಲ ಮನ್ನಾ ಯೋಜನೆ ಬಗ್ಗೆ ಬ್ಯಾಂಕ್‌ಗಳಿಗೆ ನಂಬಿಕೆಯಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಹಿಳೆಗೆ ನೋಟೀಸ್

ತಾಲೂಕಿನ ಕುರಿದೊಡ್ಡಿ ಗ್ರಾಮದ ಶಾರದಮ್ಮ  ತಮ್ಮ ೫ ಎಕರೆ ಭೂಮಿಯಲ್ಲಿ ಬೆಳೆ ಬೆಳೆಯಲು ೨೦೧೧ರಲ್ಲಿ ಬೇವೂರು ಗ್ರಾಮದ ಕೆನರಾ ಬ್ಯಾಂಕ್‌ನಿಂದ ೫ ಲಕ್ಷ ರೂ. ಸಾಲ ಪಡೆದಿದ್ದರು. ಬರ ಹಾಗೂ ಬೆಲೆ ಕುಸಿತದ ಪರಿಣಾಮ ಇವರು ಸಾಲವನ್ನು ಮರುಪಾವತಿ ಮಾಡಲು ಸಾಧ್ಯವಾಗಿರಲಿಲ್ಲ. ಸಾಲ ಮನ್ನಾ ಮಾಡುವುದಾಗಿ ಮುಖ್ಯಮಂತ್ರಿಗಳು ಘೋಷಿಸಿದ್ದ ಹಿನ್ನೆಯಲ್ಲಿ ಇವರು ನಿಟ್ಟುಸಿರು ಬಿಟ್ಟಿದ್ದರು. ಆದರೆ ಬ್ಯಾಂಕ್ ಅಧಿಕಾರಿಗಳು ನ್ಯಾಯಾಲಯದಿಂದ ನೋಟೀಸ್ ಜಾರಿ ಮಾಡಿಸುವ ಮೂಲಕ ಇವರು ನ್ಯಾಯಾಲಯಕ್ಕೆ ಅಲೆದಾಡುವಂತಾಗಿದೆ.

ಮಕ್ಕಳಿಗೂ ನೋಟೀಸ್

ಸಾಲ ಪಡೆದಿರುವ ಶಾರದಮ್ಮ ಮಾತ್ರವಲ್ಲದೆ ಅವರ ಮಕ್ಕಳಾದ ಉಮಾಪತಿ, ಯೋಗಾನಂದ, ಪಂಕಜಗೆ ಬ್ಯಾಂಕ್ ಕಡೆಯಿಂದ ಕೋರ್ಟ್‌ಗೆ ಬರುವಂತೆ ನೋಟೀಸ್ ನೀಡಲಾಗಿದೆ ಎಂದು ರೈತಸಂಘದ ಮುಖಂಡರು ತಿಳಿಸಿದರು. ಮದುವೆಯಾಗಿ ಗಂಡನ ಮನೆಯಲ್ಲಿರುವ ಮಗಳಿಗೂ ನೋಟೀಸ್ ಜಾರಿ ಮಾಡಿ ಅವರ ಸಂಸಾರ ಹಾಳು ಮಾಡಲು ಬ್ಯಾಂಕ್ ಮುಂದಾಗಿದೆ ಎಂದು ರೈತ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.

ಸಿಎಂ ಸ್ಪಷ್ಟೀಕರಿಸಲಿ

:ಚುನಾವಣೆಗೆ ಮುನ್ನಾ, ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಕುಮಾರಸ್ವಾಮಿ ಸಾಲ ಮನ್ನಾ ಮಾಡುತ್ತೇನೆ, ರೈತರು ಯಾವುದೇ ಕಾರಣಕ್ಕೂ ಅಂಜಬೇಕಿಲ್ಲ ಎಂದು ಹೇಳುತ್ತಲೇ ಬಂದಿದ್ದಾರೆ. ಮುಖ್ಯಮಂತ್ರಿಗಳ ಮಾತು ನಂಬಿ ಸಾಲ ಕಟ್ಟದ ರೈತರು ಇದೀಗ ನ್ಯಾಯಾಲಯಕ್ಕೆ ಅಲೆದಾಡುವಂತಾಗಿದ್ದು, ಈ ಬಗ್ಗೆ ಸಿಎಂ ಸ್ಪಷ್ಟೀಕರಣ ನೀಡಬೇಕು ಎಂದು ರೈತಸಂಘದ ಪದಾಧಿಕಾರಿಗಳು ಇದೇ ವೇಳೆ ಒತ್ತಾಯಿಸಿದರು.

ಮುಖ್ಯಮಂತ್ರಿಗಳು ವೇದಿಕೆಗಳಲ್ಲಿ ಹೇಳುವ ಬದಲು ಸಾಲ ಮನ್ನಾಬಗ್ಗೆ ಬ್ಯಾಂಕ್‌ಗಳಿಗೆ ಸೂಚನೆ ನೀಡಲಿ. ಬ್ಯಾಂಕ್‌ಗಳು ಸುಳ್ಳು ಹೇಳುತ್ತಿವೆಯೋ, ಇಲ್ಲಾ ಮುಖ್ಯಮಂತ್ರಿಗಳೇ ಸುಳ್ಳು ಹೇಳುತ್ತಿದ್ದಾರೋ ಎಂಬ ಗೊಂದಲ ರೈತರಲ್ಲಿ ಮೂಡಿದ್ದು ಕೂಡಲೇ ಸಿಎಂ ಕುಮಾರಸ್ವಾಮಿ ಸ್ಪಷ್ಟೀಕರಣ ನೀಡಲಿ. ರೈತರ ಭಾವನೆಯ ಜತೆ ಆಡವಾಡುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟರು.

ಅಕ್ರಮ ಗಣಿಗಾರಿಕೆ

ತಾಲೂಕಿನ ಗೌಡಗೆರೆ ಗ್ರಾಮದಲ್ಲಿ ಅಕ್ರಮ ಕಲ್ಲುಗಣಿಗಾರಿಕೆಯನ್ನು ನಡೆಸಲಾಗುತ್ತಿದೆ. ರಾತ್ರಿವೇಳೆ ಸ್ಫೋಟಕಗಳನ್ನು ಬಳಸಿ ಕಲ್ಲುಗಣಿಗಾರಿಕೆ ನಡೆಸುತ್ತಿದ್ದು, ಇದರಿಂದಾಗಿ ಪರಿಸರದ ಮೇಲೆ ಹಾನಿಯಾಗುತ್ತಿದೆ. ಸ್ಫೋಟದ ವೇಳೆ ಕಲ್ಲಿನ ಚೂರುಗಳು ಹಾರಿ ಬಂದು ಎಲ್ಲೆಡೆ ಬೀಳುತ್ತಿವೆ. ಇದರಿಂದಾಗಿ ರಾತ್ರಿ ವೇಳೆ ಜನ ಮನೆಯಿಂದ ಹೊರಬರಲು ಅಂಜುತ್ತಿದ್ದಾರೆ. ಈ ಬಗ್ಗೆ ಅರ್ಜಿಸಲ್ಲಿಸಿದರೆ ತಹಸೀಲ್ದಾರ್ ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ಉದಾಸೀನ ಮಾಡುವ ಮೂಲಕ ಅಕ್ರಮ ಗಣಿಗಾರಿಕೆ ಕುಮ್ಮಕ್ಕು ನೀಡುತ್ತಿದ್ದಾರೆ. ಅಧಿಕಾರಿಗಳ ನಡೆ ಅನುಮಾನ ಮೂಡಿಸಿದೆ ಎಂದು ರೈತಸಂಘದ ಜಿಲ್ಲಾಧ್ಯಕ್ಷ ಕೆ.ಮಲ್ಲಯ್ಯ ಆರೋಪಿಸಿದರು.

ರೈತರ ಸಭೆ ನಡೆಸುತ್ತಿಲ್ಲ

ಈ ಹಿಂದೆ ಪ್ರತಿ ಮೂರು ತಿಂಗಳಿಗೊಮ್ಮೆ ರೈತರ ಕುಂದುಕೊರತೆ ಸಭೆಯನ್ನು ಕರೆಯಲಾಗುತಿತ್ತು. ಆದರೆ ಈ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಜಿಲ್ಲೆ ಮತ್ತು ತಾಲೂಕಿನಲ್ಲಿ ಒಂದೇ ಒಂದು ರೈತರ ಸಭೆ ಕರೆದಿಲ್ಲ. ಒಮ್ಮೆ ಸಭೆ ಕರೆದಿದ್ದರಾದರೂ ಅದು ಜೆಡಿಎಸ್ ಮುಖಂಡರ ಸಭೆಯಾಗಿತ್ತೇ ವಿನಾ ಅಲ್ಲಿಗೆ ಯಾವುದೇ ರೈತಸಂಘದ ಪದಾಧಿಕಾರಿಗಳನ್ನು ಆಹ್ವಾನಿಸಿರಲಿಲ್ಲ ಎಂದು ರೈತಸಂಘದ ತಾಲೂಕು ಅಧ್ಯಕ್ಷ ಕೃಷ್ಣಪ್ಪ ಆರೋಪಿಸಿದರು.

ಸುದ್ದಿಗೋಷ್ಟಿಯಲ್ಲಿ ರೈತಸಂಘದ ಕಾರ್ಯಾಧ್ಯಕ್ಷ ನಾಗೇಶ್, ಗೌರವಾಧ್ಯಕ್ಷ ತಿಮ್ಮೇಗೌಡ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

 

ಗೋ ರಾ ಶ್ರೀನಿವಾಸ...
ಮೊ:9845856139.



 

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑