ತಿದ್ದುಪಡಿಗಳನ್ನು ತಿಳಿದುಕೊಂಡು ದಕ್ಷತೆಯಿಂದ ಕಾರ್ಯನಿರ್ವಹಿಸಿ: ಬಿ. ರಮೇಶ್
ರಾಮನಗರ : ಮಕ್ಕಳ ರಕ್ಷಣೆಗಾಗಿ ರೂಪಿಸಲಾಗಿರುವ ಕಾನೂನುಗಳು ಕಾಲಕಾಲಕ್ಕೆ ತಿದ್ದುಪಡಿಗಳಾಗುತ್ತಿರುತ್ತವೆ. ಅವುಗಳನ್ನು ಅರಿತುಕೊಂಡು ದಕ್ಷತೆಯಿಂದ ಕಾರ್ಯನಿರ್ವಹಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ. ರಮೇಶ್ ಅವರು ಕರೆ ನೀಡಿದರು.
ಅವರು ನಗರದ ಪೊಲೀಸ್ ಭವನದಲ್ಲಿ ಫೆ. 2ರ ಶುಕ್ರವಾರ ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಪೊಲೀಸ್ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಮಕ್ಕಳ ಹಕ್ಕುಗಳು ಹಾಗೂ ರಕ್ಷಣಾ ಕಾನೂನುಗಳು ಹಾಗೂ ಪುನರ್ವಸತಿ ಯೋಜನೆಯ ಕುರಿತು ಪೊಲೀಸ್ ಇಲಾಖೆಯ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗಳಿಗೆ ಹಮ್ಮಿಕೊಳ್ಳಲಾಗಿದ್ದ ಒಂದು ದಿನದ ತರಬೇತಿ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಮಕ್ಕಳ ಹಿತ ರಕ್ಷಣೆಗಾಗಿ ಇರುವ ಪೊಕ್ಸೋ, ಮಕ್ಕಳ ಕಾರ್ಮಿಕ ಕಾಯ್ದೆ, ಮಕ್ಕಳ ಹಕ್ಕುಗಳ ಕಾಯ್ದೆಗಳಲ್ಲಿ ಆಯಾ ಕಾಲಘಟ್ಟಗಳಲ್ಲಿ ಕೆಲವೊಂದು ತಿದ್ದುಪಡಿಗಳನ್ನು ಮಾಡಲಾಗಿರುತ್ತದೆ. ಮಕ್ಕಳ ಹಕ್ಕುಗಳ ಉಲ್ಲಂಘನೆ ಅಥವಾ ಅವರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಸಂದರ್ಭದಲ್ಲಿ ಕೈಗೊಳ್ಳಲಾಗುವ ತನಿಖೆಯಲ್ಲಿ ಈ ಅಂಶಗಳು ಹೆಚ್ಚಿನ ಪರಿಣಾಮ ಬೀರುತ್ತವೆ ಎಂದು ಅವರು ಹೇಳಿದರು.
ಬೇರೆ ಮಕ್ಕಳನ್ನು ಸಹ ನಮ್ಮ ಮಕ್ಕಳಂತೆಯೇ ಕಾಣುವ ಮನಸ್ಥಿತಿ ಬೆಳೆಸಿಕೊಳ್ಳಬೇಕು, ಕೆಲವು ಮಕ್ಕಳು ಅಪಾಯಾಕಾರಿ ಕಾರ್ಖಾನೆಗಳಲ್ಲಿ ಕೆಲಸ ಮಾಡುತ್ತಿರುತ್ತಾರೆ, ಅವರುಗಳನ್ನು ರಕ್ಷಿಸುವುದು ನಮ್ಮ ಕರ್ತವ್ಯ, ಸಂಬಂಧಿಸಿದವರು ಈ ರೀತಿಯ ಕಾರ್ಯಗಾರದಲ್ಲಿ ಭಾಗವಹಿಸಿದರೆ ಉತ್ತಮವಾಗಿ ಕಾರ್ಯನಿರ್ವಹಿಸಬಹುದಾಗಿದೆ, ಈ ಕಾರ್ಯಾಗಾರದ ಸಂವೇದನೆಯನ್ನು ಅರಿತುಕೊಂಡು ಉತ್ತಮವಾಗಿ ಕಾರ್ಯನಿರ್ವಹಿಸುವಂತೆ ಅವರು ಕರೆ ನೀಡಿದರು.
ಕಾರ್ಯಕ್ರಮ ಉದ್ಘಾಟಿಸಿದ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಸದಸ್ಯ ಕಾರ್ಯದರ್ಶಿ ಬಿ. ಎಸ್. ಹೊನ್ನಸ್ವಾಮಿ ಅವರು ಮಾತನಾಡಿ, ದೌರ್ಜನ್ಯಕ್ಕೊಳಗಾದ ಮಗುವಿನ ತನಿಖೆ ನಡೆಸುವ ಮಹಿಳಾ ಸಿಬ್ಬಂದಿಗಳು ಸಮವಸ್ತ್ರ ಧರಿಸಬಾರದು, ಮಗು ಹೇಳಿದಲ್ಲಿ ಹೋಗಿ ತನಿಖೆ ನಡೆಸಬೇಕು, ಎಲ್ಲಕ್ಕಿಂತ ಮುಖ್ಯವಾಗಿ ಮಕ್ಕಳಿಗೆ ಅವರ ಸೂಕ್ಷ್ಮ ಭಾಷೆಯಲ್ಲಿಯೇ ಅವರ ಮೇಲಾದ ದೌರ್ಜನ್ಯವನ್ನು ಕೇಳಿ ತಿಳಿದುಕೊಳ್ಳಬೇಕು, ಅಚಿತಿಮವಾಗಿ ಸಿದ್ದಪಡಿಸಿದ ವರದಿಯನ್ನು ಎಲ್ಲಿಯೂ ಪ್ರಕಟಿಸಬಾರದು ಎಂದು ಹೇಳಿದರು.
ಸಾಮೂಹಿಕ ವಿವಾಹಗಳು ನಡೆಯುತ್ತಿರುವ ವೇಳೆಯಲ್ಲಿ ನಿಗಧಿಪಡಿಸಲಾದ ಅರ್ಹ ವಯಸ್ಸಿಗೆ ವಿವಾಹವಾಗುತ್ತಿದೆಯೇ ಎಂಬುದನ್ನು ಕಡ್ಡಾಯವಾಗಿ ತಿಳಿದುಕೊಳ್ಳಬೇಕು, ವಿವಾಹ ನೋಂದಣಿ ಪತ್ರವನ್ನು ಅವರು ನೀಡಬೇಕು, ಅದೇ ವೇಳೆ ಅಲ್ಲಿ ಬಾಲ್ಯವಿವಾಹ ನಡೆದಲ್ಲಿ ಸುಮ್ಮನಿರದೆ ಅಗತ್ಯ ಕಾನೂನಿನ ಕ್ರಮವನ್ನು ಕೈಗೊಳ್ಳುವಂತೆ ಕ್ರಮ ಕೈಗೊಳ್ಳಬೇಕು ಎಂದು ಅವರು ಸೂಚಿಸಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ರೇವಣೇಶ್ ಸ್ವಾಗತಿಸಿದರು.ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ತಾಜುದ್ದೀನ ನಿರೂಪಿಸಿದರು. ಸುಚಿತ್ರ ಪ್ರಾರ್ಥಿಸಿದರು.
ಪ್ರತಿಕ್ರಿಯೆಗಳು