ನಗರದ ಬಡಾವಣೆಯ ನಡುವೆ ಹಾದು ಹೋಗಿರುವ ೧೧ಕೆವಿಎ ವಿದ್ಯುತ್ ತಂತಿ, ಭಯದಲ್ಲಿ ನಿವಾಸಿಗಳು
ಚನ್ನಪಟ್ಟಣ: ನಗರದ ವಿವೇಕಾನಂದ ನಗರ ಮತ್ತು ಮಂಜುನಾಥ ನಗರದ ಬಡಾವಣೆಯ ನಡುವೆ ಕೂಡ್ಲೂರು ಫೀಡರ್ ಪ್ರೈಮರಿ ವಿದ್ಯುತ್ ತಂತಿಯನ್ನು ಅಳವಡಿಸಲಾಗಿದ್ದು ಅನೇಕ ಮನೆಗಳ ಮೇಲೆ ನಿಂತರೆ ಕೈಗೆಟಕುವಂತಿದ್ದು ಮಕ್ಕಳು ವೃದ್ದರಾದಿಯಾಗಿ ಎಲ್ಲರೂ ಜೀವ ಕೈಲಿಡಿದು ಬದುಕು ಸವೆಸುವಂತಾಗಿದೆ ಎಂದು ಎರಡೂ ಬಡಾವಣೆಗಳ ನಿವಾಸಿಗಳು ದೂರಿದ್ದಾರೆ.
ಸಂಬಂಧಿಸಿದ ಅಧಿಕಾರಿಗಳಿಗೆ ೨೬/೧೧/೨೦೧೭ ರಿಂದ ೩೧/೦೫/೨೦೧೯ ರ ವರೆಗೆ ಹಲವಾರು ಬಾರಿ ಲಿಖಿತ ದೂರು ನೀಡಿದ್ದು ಹೆಚ್ ಡಿ ಯು ಎಸ್ ಸ್ಕೀಮ್ ನಡಿಯಲ್ಲಿ ತೆರವುಗೊಳಿಸಿ ಜನಸಂದಣಿ ಇಲ್ಲದ ಕಡೆ ವರ್ಗಾಯಿಸಿ ಅಥವಾ ಭೂಗತ ಕೇಬಲ್ ಅಳವಡಿಸಬೇಕೆಂದು ಕೋರಿದ್ದರೂ ಸಹ ಅಧಿಕಾರಿಗಳು ನಿರ್ಲಕ್ಷ್ಯ ತೋರಿಸುತ್ತಿದ್ದಾರೆ.
ಹಲವಾರು ಬಾರಿ ಮಳೆಗಾಳಿಗೆ ತಂತಿಗಳು ತುಂಡಾಗಿ ಶಾಟ್೯ ಸಕ್ಯೂ೯ಟ್ ಆಗಿದ್ದು ಮನೆಗಳಲ್ಲಿನ ಪ್ರಿಡ್ಜ್, ಟಿವಿ ಮತ್ತಿತರ ಎಲೆಕ್ಟ್ರಾನಿಕ್ ಸಾಧನಗಳು ಸಂಪೂರ್ಣ ಕೆಟ್ಟು ಹೋಗಿವೆ, ಬಹುತೇಕ ಲೈನ್ ಗಳು ಬಡಾವಣೆಯ ಕಿರು ರಸ್ತೆಯಲ್ಲೇ ಹಾದು ಹೋಗಿರುವುದಲ್ಲದೆ ಖಾಲಿ ನಿವೇಶನಗಳ ಮಧ್ಯದಲ್ಲಿ ಹಾದುಹೋಗಿರುವುದರಿಂದ ಮನೆ ನಿರ್ಮಿಸಲು ಸಾಧ್ಯವಾಗುತ್ತಿಲ್ಲ, ಒಬ್ಬ ಕಾರ್ಮಿಕ ವಿದ್ಯುತ್ ತಂತಿ ತಗುಲಿ ಅಂಗವಿಕಲತೆಯಿಂದ ನರಳುತ್ತಿದ್ದರೂ ಸಹ ಇಲಾಖೆ ಕ್ರಮ ಕೈಗೊಳ್ಳುತ್ತಿಲ್ಲ.
ಕೊನೆಯ ಬಾರಿಗೆಂದು ಚನ್ನಪಟ್ಟಣದ ಎಇಇ, ಮುಖ್ಯ ಅಭಿಯಂತರರು ಕಾವೇರಿ ಭವನ ಬೆಂಗಳೂರು, ಸೂಪರಿಂಟೆಂಡೆಂಟ್ ಇಂಜಿನಿಯರ್, ಕೆಂಗೇರಿ, ಮುಖ್ಯ ಕಾರ್ಯದರ್ಶಿ ಮುಖ್ಯಮಂತ್ರಿಗಳ ಕಾರ್ಯಾಲಯ ವಿಧಾನಸೌಧ ಮತ್ತು ಲೋಕಸಭಾ ಸದಸ್ಯ ಡಿ ಕೆ ಸುರೇಶ್ ರವರಿಗೆ ಪತ್ರ ಬರೆದಿದ್ದು ಕ್ರಮ ಕೈಗೊಳ್ಳುತ್ತಾರೆಂಬ ಭರವಸೆಯಲ್ಲಿ ದಿನ ದೂಡುತ್ತಿದ್ದೇವೆ ಬಡಾವಣೆಯ ನಿವಾಸಿಗಳು ತಿಳಿಸಿದರು.
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು