Tel: 7676775624 | Mail: info@yellowandred.in

Language: EN KAN

    Follow us :


ಕೋಡಂಬಳ್ಳಿ ಜಿಲ್ಲಾ ಪಂಚಾಯತಿ ಬ್ಯಾಡರಹಳ್ಳಿ ಗ್ರಾಮದ ರಸ್ತೆ ನುಂಗಿದ ಶಂಕರ್

Posted date: 06 Jun, 2019

Powered by:     Yellow and Red

ಕೋಡಂಬಳ್ಳಿ ಜಿಲ್ಲಾ ಪಂಚಾಯತಿ ಬ್ಯಾಡರಹಳ್ಳಿ ಗ್ರಾಮದ ರಸ್ತೆ ನುಂಗಿದ ಶಂಕರ್

ಲಕ್ಕಿ ಕಟ್ಟೆ ಮತ್ತು ಹೋಗುವ ರಸ್ತೆ

ರಾಮನಗರ ಜಿಲ್ಲಾ ಪಂಚಾಯತಿ ಚನ್ನಪಟ್ಟಣ ವಲಯದಲ್ಲಿ ಈ ಹಿಂದೆ ಇಂಜಿನಿಯರ್ ಆಗಿದ್ದ *ಚಿಕ್ಕವೆಂಕಟೇಶ ಮತ್ತು ಕುಮಾರಸ್ವಾಮಿ* ಎಂಬ ಇಂಜಿನಿಯರ್ ಗಳ ಹೆಸರು ಬಹಳ *ದೊಡ್ಡದು* ಕಾಮಗಾರಿ ಮಾಡದಿದ್ದರೂ, ಅರ್ಧದಷ್ಟು ಕೆಲಸ ಮಾಡಿದರೂ ಅಥವಾ ಕಳಪೆ ಗುಣಮಟ್ಟದ ಕಾಮಗಾರಿ ಮಾಡಿದರೂ ಸಹ ಹಿಂದುಮುಂದು ನೋಡದೆ ಚೆಕ್ ಮತ್ತು ಬಿಲ್ ಗೆ ಸಹಿ ಹಾಕಿ ಗುತ್ತಿಗೆದಾರರಿಗೆ ಕೊಟ್ಟು ಕಮೀಷನ್ ಪಡೆದು ನಂತರ ಇಲಾಖೆಯ ತನಿಖೆಗೊಳಪಟ್ಟು ಅಮಾನತು ಆದವರು, ಅವರ ಸಾಲಿಗೆ ಮತ್ತೋರ್ವ ಇಂಜಿನಿಯರ್ ಸೇರ್ಪಡೆಗೊಂಡು ತಾಲ್ಲೂಕು ವ್ಯಾಪ್ತಿಯ ಜಿಲ್ಲಾ ಪಂಚಾಯತಿ ಅನುದಾನವನ್ನು ನುಂಗಿ ನೀರು ಕುಡಿಯುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ನಮ್ಮ ಸುದ್ದಿಯ ಹೀರೋ ಅದೇ ದೋಖಾ *ಶಂಕರ್*.


ಹೊಂಗನೂರು ಜಿಲ್ಲಾ ಪಂಚಾಯತಿ ವ್ಯಾಪ್ತಿಯಲ್ಲಿ ಹಲವಾರು ಕಳಪೆ ಕಾಮಗಾರಿಗಳಿಗೆ ಮತ್ತು ಕಾಮಗಾರಿ ಮಾಡದೇ ಬಿಲ್ ಮಾಡಿಕೊಟ್ಟಿರುವುದಕ್ಕೆ ಮಾಹಿತಿ ಹಕ್ಕು ಕಾರ್ಯಕರ್ತ ವಂದಾರಗುಪ್ಪೆ ಕೃಷ್ಣೇಗೌಡ ಮತ್ತು ನಮ್ಮ ಪತ್ರಿಕೆಯ ಸರಣಿ ವರದಿಯ ಮೇರೆಗೆ ತನಿಖೆಗೊಳಪಟ್ಟು ಕಳೆದ ತಿಂಗಳು ಅಮಾನತು ಆಗಿರುವ ಶಂಕರ್ ಕೋಡಂಬಳ್ಳಿ ಜಿಲ್ಲಾ ಪಂಚಾಯತಿ ವ್ಯಾಪ್ತಿಯಲ್ಲಿಯೂ ತನ್ನ ಕೈ ಚಳಕ ತೋರಿಸಿದ್ದು *ಜೆ ಬ್ಯಾಡರಹಳ್ಳಿ* ಪ್ರೌಢಶಾಲೆಗೆ *೪,೦೦,೦೦೦ ₹* ಹೆಚ್ಚು ದೋಖಾ ಎಸಗಿದರೆ ಅದೇ ಗ್ರಾಮದ *ಲಕ್ಕಿ ಕಟ್ಟೆ* ಗೆ ಹೋಗುವ ರಸ್ತೆ ಅಭಿವೃದ್ಧಿಗೆಂದು *೨,೦೦,೦೦೦*₹ ತುಂಡು ಗುತ್ತಿಗೆ ಕಾಮಗಾರಿಯನ್ನು ಮಾಡದೇ ಸರ್ಕಾರಕ್ಕೆ ದ್ರೋಹ ಎಸಗಿರುವುದು ದಾಖಲೆಗಳಿಂದ ತಿಳಿದುಬಂದಿದೆ.


೨೦೧೭/೧೮ ನೇ ಸಾಲಿನ ಮುಖ್ಯಮಂತ್ರಿ ಗ್ರಾಮೀಣ ರಸ್ತೆಗಳ ಅಭಿವೃದ್ಧಿ ಕಾಮಗಾರಿಗಳ ಕ್ರಿಯಾ ಯೋಜನೆಯಡಿ (೩೦೫೪-೦೦-೧೦೧-೦-೨೯-೧೭೨) *ಜೆ ಬ್ಯಾಡರಹಳ್ಳಿ ಮುಖ್ಯ ರಸ್ತೆಯಿಂದ ಲಕ್ಕಿ ಕಟ್ಟೆ ಗೆ* ಹೋಗುವ ರಸ್ತೆ ಅಭಿವೃದ್ಧಿ ಡಿ ಆರ್ ನಂಬರ್ ೬೯೩/೨೦೧೭-೧೮, ಕೆ.ಅ.ಸಂಖ್ಯೆ ೬೩೭/೨೦೧೭-೧೮ ರ ಬಿಲ್ ಸಂಖ್ಯೆಯಲ್ಲಿ *ಗುತ್ತಿಗೆದಾರ ಶ್ರೀನಿವಾಸ* ಎಂಬುವವರಿಗೆ ದಿನಾಂಕ ೦೬/೦೩/೨೦೧೮ ರಂದು ೧,೮೦,೮೫೨ ರೂಪಾಯಿಗಳ ಬಿಲ್ ನೀಡಲಾಗಿದೆ.


೨೦೧೮/೧೯ ನೇ ಸಾಲಿನಲ್ಲಿ ಮಹಾತ್ಮ ಗಾಂಧಿ ಗ್ರಾಮೀಣ ಅಭಿವೃದ್ಧಿ ನರೇಗಾ ಯೋಜನೆಯಡಿ ಇದೇ ಲಕ್ಕಿ ಕಟ್ಟೆ ರಸ್ತೆಗೆ *೯,೫೦,೦೦೦*₹ ಅನುದಾನದ ಅಡಿಯಲ್ಲಿ ಕೆಲಸ ಮಾಡಲು ಅನುಮೋದನೆ ದೊರೆತಿರುವುದಾಗಿ ಅದೇ ರಸ್ತೆ ಬದಿಯಲ್ಲಿ ಫಲಕ ಅಳವಡಿಸಿದ್ದು ಕಳೆದ ವರ್ಷ ಮಾಡಿದ ರಸ್ತೆ ಅಭಿವೃದ್ಧಿ ಏನಾಯಿತು ಎಂಬ ಪ್ರಶ್ನೆ ಎದುರಾಗುತ್ತದೆ.


ಕಳೆದ ವರ್ಷ ರಸ್ತೆ ಅಭಿವೃದ್ಧಿ ಮಾಡಿರುವುದಕ್ಕೆ ಸಣ್ಣ ಕುರುಹೂ ಸಹ ದೊರೆಯುವುದಿಲ್ಲ, ರಸ್ತೆಯ ಎರಡೂ ಬದಿಯಲ್ಲಿ ಚರಂಡಿಯನ್ನಾಗಲಿ ಕೊನೇಪಕ್ಷ ತಿಪ್ಪೆ ಗುಂಡಿಗಳನ್ನು ಎತ್ತಿಸದಿರುವುದು ಕಂಡುಬರುತ್ತದೆ, ಸ್ಥಳೀಯರನ್ನು ಈ ಬಗ್ಗೆ ಮಾತನಾಡಿಸಿದಾಗ ಖಡಾಖಂಡಿತವಾಗಿ ಕಳೆದ ಸಾಲಿನಲ್ಲಿ ಈ ರಸ್ತೆಗೆ ಒಂದು ಹಿಡಿ ಮಣ್ಣು ಸಹ ಹಾಕಿಲ್ಲವೆಂದು ದೂರುತ್ತಾರೆ.


ಸಂಬಂಧಿಸಿದ ಅಧಿಕಾರಿಗಳು ಸೂಕ್ತ ತನಿಖೆ ನಡೆಸಿ ಎಲ್ಲಾ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಂಡು ಬಿಲ್ ಪಾವತಿಸಿರುವ ಹಣವನ್ನು ಹಿಂಪಡೆದುಕೊಳ್ಳಲಿ.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑