Recent news »
-
ಸಮಾಜಸೇವೆ ಮಾಡುವವರನ್ನು ಪ್ರೋತ್ಸಾಹಿಸಬೇಕು:ಡಾ. ಮುನಿರಾಜಪ್ಪ
ರಾಮನಗರ : ಸಮಾಜಸೇವೆ ಮಾಡುವವರನ್ನು ಪ್ರೋತ್ಸಾಹಿಸಬೇಕು. ಇಂತಹ ಸೇವೆಗಳು ಇತರರಿಗೆ ಪ್ರೇರಣೆಯಾಗಿ ಹೆಚ್ಚು ಜನ ಸೇವಾಕಾರ್ಯಗಳಲ್ಲಿ ತೊಡಗುವಂತಾಗಬೇಕು ಎಂದು ಹಿರಿಯ ಸಂಶೋಧಕ ಡಾ. ಮುನಿರಾಜಪ್ಪ ತಿಳಿಸಿದರು.
ಸಂಶೋಧನಾ ವಿದ್ಯಾರ್ಥಿ ಎಸ್. ರುದ್ರೇಶ್ವರ ಅವರು ತಮ್ಮ ಅಜ್ಜಅಜ್ಜಿ ಕೂನಮುದ್ದನಹಳ್ಳಿಯ ಪಾರ್ವತಮ್ಮ ಸಿದ್ದವೀರಯ್ಯ, ಕೆಂಚನಕುಪ್ಪೆ ಗ್ರಾಮದ ಜಯಮ್ಮ ಶಾಂತಯ್ಯ ಅವರ ಸ್ಮರಣಾರ್ಥವಾಗಿ ನಗರದ ಸಂವರ್ಧನಾ ಶಾಲೆಗೆ ಗುರುವಾರ ಹಮ್ಮಿಕೊಂಡಿದ್ದ ಟಿವಿ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಾಮಾಜಿಕ ಸೇವೆ ಬದುಕನ್ನು ಸಾರ್ಥಕಗೊಳಿಸುತ್ತದೆ. ಮನುಷ್ಯನ ಹುಟ್ಟು ಮತ್ತು ಸಾವು ಸಹಜ. ಆದರೆ ಇವೆರೆಡರ ಮಧ್ಯೆ ಹೇಗೆ ಬದುಕುಬೇಕೆಂಬುದೇ ಜೀವನವಾಗಿದ್ದು, ಸ್ವಾರ್ಥಕ್ಕಾಗಿ ಬದುಕದೇ ಸಮಾಜ ಸೇವೆಗೆ ಮೀಸಲಾಗಿಡಬೇಕು. ಇದರಿಂದ ಬದುಕು ಸಾರ್ಥಕತೆಯ ಜೊತೆಗೆ ಸಮಾಧಾನವೂ ಇರುತ್ತದೆ ಎಂದು ತಿಳಿಸಿದರು.
ಎಸ್. ರುದ್ರೇಶ್ವರ ಅವರ ಸಮಾಜಮುಖಿ ಕಾರ್ಯಗಳು ಇತರರಿಗೆ ಪ್ರೇರಣೆಯಾಗಿವೆ. ಮಾಧ್ಯಮಗಳು ಕೂಡ ಇಂತಹ ಸಧಭಿರುಚಿ, ಸಮಾಜಸ್ಪರ್ಶಿ ಸೇವಾಕಾರ್ಯಗಳಿಗೆ ಹೆಚ್ಚು ಪ್ರಚಾರ ನೀಡಿ ಪ್ರೋತ್ಸಾಹಿಸಬೇಕು ಎಂದು ತಿಳಿಸಿದರು.
ವಿಶ್ರಾಂತ ಸಂಸ್ಕೃತ ಪ್ರಾಧ್ಯಾಪಕ ಡಾ.ಸಿ. ಶಿವಕುಮಾರಸ್ವಾಮಿ ಮಾತನಾಡಿ ಕೌಟುಂಬಿಕ, ಸಾಮಾಜಿಕ, ಸಾಂಸ್ಕöÈತಿಕ, ಪರಂಪರೆ ಮತ್ತು ಭಾವನಾತ್ಮಕ ವ್ಯವಸ್ಥೆಗೆ ಹೆಸರುವಾಸಿಯಾದ ನಮ್ಮ ದೇಶದಲ್ಲಿ ವಯೋವೃದ್ಧ ತಂದೆ-ತಾಯಿಯರನ್ನು ಮನೆಯಿಂದ ದೂರ ತಳ್ಳಿ ಅವರು ವೃದ್ಧಾಶ್ರಮ ಸೇರುವಂತಹ ದುಸ್ಥಿತಿ ಬರದಂತೆ ನಾವೆಲ್ಲರೂ ನೋಡಿಕೊಳ್ಳಬೇಕು ಎಂದರು.
ಹಿರಿಯರನ್ನು ನಮ್ಮ ಮಕ್ಕಳಂತೆ ಕಾಣುವ, ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ಮತ್ತು ಪ್ರೀತಿ-ವಾತ್ಸಲ್ಯ, ತಾಯಿ ಹೃದಯದಿಂದ ಉಪಚರಿಸುವಂತೆ ಮತ್ತು ಗೌರಯುತವಾಗಿ ಕಾಣುವಂತಹ ವಾತಾವರಣ ಪ್ರತಿ ಮನೆ, ಕುಟುಂಬ ಮತ್ತು ಕುಟುಂಬದ ಸದಸ್ಯರಲ್ಲಿ ಅರಿವು ಮೂಡಬೇಕು. ದೇವರು ಬೇರೆಲ್ಲೂ ಇಲ್ಲ, ಅವರು ನಮ್ಮ ಹಿರಿಯ ಜೀವಿಗಳ ರೂಪದಲ್ಲೇ ಇರುತ್ತಾನೆ ಎಂಬುದನ್ನು ತಿಳಿದುಕೊಳ್ಳಬೇಕು ಎಂದರು.
ಸಹಜವಾಗಿ ದೈಹಿಕ, ಮಾನಸಿಕ ಮತ್ತು ಭಾವನಾತ್ಮಕವಾಗಿ ಕುಂದು ಹೋಗುತ್ತಿರುವ ಹಿರಿಯರನ್ನು ಗೌರವದಿಂದ ಕಂಡು ಸಂತೋಷ-ಖುಷಿಯಾಗಿ ಇನ್ನಷ್ಟು ಕಾಲ ಮಕ್ಕಳು- ಮೊಮ್ಮಕ್ಕಳು ಮತ್ತು ಕುಟುಂಬದ ಇತರ ಸದಸ್ಯರಾಗಿ ನೂರು ಕಾಲ ಬಾಳಿ-ಬದುಕುವಂತೆ ನೋಡಿಕೊಂಡಾಗ ಮಾತ್ರ ನಾವು ಅವರ ವಂಶದ ಕುಡಿಗಳಾಗಿ ಅವರ ಋಣ ತೀರಿಸುವುದು ನಮ್ಮ ಕರ್ತವ್ಯವಾಗಿದೆ ಎಂದರು.
ಅಷ್ಟೇ ಅಲ್ಲದೇ ಮುಂದೆ ನಮ್ಮ ಮಕ್ಕಳು ವಯೋವೃದ್ಧರಾದ ಸಂದರ್ಭದಲ್ಲಿ ನಮ್ಮನ್ನು ವೃದ್ಧಾಶ್ರಮಗಳಿಗೆ ಕಳಿಸಬಾರದೆಂದು ಕನಿಷ್ಠ ವಿಷಯವನ್ನು ಅರ್ಥೈಸಿಕೊಂಡು ಹಿರಿಯ ಜೀವಿಗಳನ್ನು ಅತ್ಯಂತ ಕಾಳಜಿಯಿಂದ ನೋಡಿಕೊಳ್ಳಬೇಕು ಎಂದು ಅವರು ಹೇಳಿದರು.
ಸಂಶೋಧನಾ ವಿದ್ಯಾರ್ಥಿ ಎಸ್. ರುದ್ರೇಶ್ವರ ಮಾತನಾಡಿ ಸಮಾಜಮುಖಿ ಕೆಲಸಗಳನ್ನು ಎಲ್ಲರೂ ಮಾಡಬಹುದು, ಆದರೆ ಮನಸ್ಸು ಇರಬೇಕು ಅಷ್ಟೆ. ನಾವು ಕಳೆದುಕೊಂಡಿರುವ ಅಜ್ಜಅಜ್ಜಿಯನ್ನು ಒಳ್ಳೆಯ ಕೆಲಸ ಮಾಡುವ ಮೂಲಕ ನೆನಪಿಸಿಕೊಳ್ಳಬೇಕು. ಈಗ ಬಹುತೇಕ ಮನೆಗಳಲ್ಲಿ ಹಿರಿಯರನ್ನು ಕಡೆಗಣಿಸಲಾಗುತ್ತಿದೆ. ಹಿರಿಯರಿಗೆ ಶಕ್ತಿ ತುಂಬಲು ಸರ್ಕಾರದ ವತಿಯಿಂದ ಕಾನೂನುಗಳು ಜಾರಿಯಾದರೂ ಪ್ರಯೋಜನವಾಗುತ್ತಿಲ್ಲ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಸಂವರ್ಧನಾ ಶಾಲೆಯ ಶಿಕ್ಷಕಿ ವನಜಾಕ್ಷಿ ಹೆಗಡೆ ಅವರನ್ನು ಸನ್ಮಾನಿಸಲಾಯಿತು. ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಕೆ. ಸತೀಶ್, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಬಿ.ಟಿ. ನಾಗೇಶ್, ಸಂವರ್ಧನಾ ಹಿತೈಷಿಗಳ ಬಳಗದ ಅಧ್ಯಕ್ಷೆ ಕೆ. ವನಜಮ್ಮ, ಕಾರ್ಯದರ್ಶಿ ಎ.ಜಿ. ರಾಮಣ್ಣ, ಖಜಾಂಚಿ ಸಿ.ಕೆ. ನಾಗರಾಜ್, ಮನೋವೈದ್ಯಕೀಯ ಕಾರ್ಯಕರ್ತೆ ಎಸ್. ಪದ್ಮರೇಖಾ, ಹೋಲಿ ಕ್ರೆಸೆಂಟ್ ಆಂಗ್ಲ ಶಾಲೆಯ ಸಂಸ್ಥಾಪಕ ಕಾರ್ಯದರ್ಶಿ ಅಲ್ತಾಪ್ ಅಹಮದ್, ಇರುಳಿಗ ಅರಣ್ಯವಾಸಿ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ಕೃಷ್ಣಮೂತಿ ಇರುಳಿಗ, ಕಾರ್ಯದರ್ಶಿ ಜೆ.ಎಲ್. ಶಿವರಾಜ್, ಯಲ್ಲೊ ಅಂಡ್ ರೆಡ್ ಸರ್ವೀಸಸ್ ನ ವ್ಯವಸ್ಥಾಪಕ ನಿರ್ದೇಶಕ ಆನಂದಶಿವ, ಅಮೃತ ವಿಕಲಚೇತನ ಟ್ರಸ್ಟ್ ಅಧ್ಯಕ್ಷ ಆರ್. ನಿರಂಜನ್, ಶಿಕ್ಷಕಿ ಡಿ.ಆರ್. ನೀಲಾಂಬಿಕಾ, ಉದ್ಯಮಿ ಎಂ. ಕುಮಾರ್, ಕಾವ್ಯ, ಸಾಹಿತಿ ವಿಜಯ್ ರಾಂಪುರ ಇದ್ದರು.
-
ವಿವಾಹ ವಾರ್ಷಿಕೋತ್ಸವದ ಅಂಗವಾಗಿ ರೈತರಿಗೆ ಕರಪತ್ರ, ಮಾಸ್ಕ್ ಹಾಗೂ ಸೋಪ್ ವಿತರಣೆ
ರಾಮನಗರ : ಸಂಶೋಧಕ ಎಸ್. ರುದ್ರೇಶ್ವರ ಹಾಗೂ ಶಿಕ್ಷಕಿ ಡಿ.ಆರ್. ನೀಲಾಂಬಿಕಾ ದಂಪತಿ ತಮ್ಮ ವಿವಾಹ ವಾರ್ಷಿಕೋತ್ಸವದ ಅಂಗವಾಗಿ ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ ಭಾನುವಾರ ರೈತರಿಗೆ ಕರಪತ್ರ ಹಂಚುವ ಮೂಲಕ ಕೋವಿಡ್ ಜಾಗೃತಿ ಮತ್ತು ಮಾಸ್ಕ್, ಸೋಪ್ ಗಳನ್ನು ವಿತರಿಸಿದರು.
ದೇಶಾದ್ಯಂತ ಕೊರೊನಾ ಹಾವಳಿಯಿಂದ ಸಾವು-ನೋವುಗಳು ಸಂಭವಿಸುತ್ತಿವೆ. ಕೊರೊನಾ ಕುರಿತು ಭಯಪಡಬೇಕಾಗಿಲ್ಲ. ಆದರೆ ಜಾಗೃತರಾಗಿರಬೇಕು. ನಿಷ್ಕಾಳಜಿ ವಹಿಸಿದರೆ ಜೀವಕ್ಕೆ ಅಪಾಯ ಆಗಬಹುದು. ತಪ್ಪದೆ ಲಸಿಕೆ ಹಾಕಿಸಿಕೊಳ್ಳಬೇಕು. ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಸ್ಯಾನಿಟೈಸರ್ ಬಳಸಬೇಕು. ಅಂತರ ಕಾಯ್ದುಕೊಳ್ಳಬೇಕು ಎಂದು ಸಂಶೋಧಕ ಎಸ್. ರುದ್ರೇಶ್ವರ ರೈತರಿಗೆ ಸಲಹೆ ನೀಡಿದರು.
ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಎಸ್. ಗಂಗಾಧರ್ ಮಾತನಾಡಿ ಕೊರೋನಾದಿಂದ ನೀವೂ ಸುರಕ್ಷಿತರಾಗಿರಿ ಮತ್ತು ನಿಮ್ಮ ಆತ್ಮೀಯರನ್ನೂ ಸುರಕ್ಷಿತವಾಗಿರುವಂತೆ ನೋಡಿಕೊಳ್ಳಿ. ಅಗತ್ಯವಿದ್ದಾಗ ಮಾತ್ರ ಮನೆಯಿಂದ ಹೊರಗೆ ಬನ್ನಿ, ಕೋವಿಡ್-ಸೂಕ್ತ ನಡವಳಿಕೆಗಳನ್ನು ತಪ್ಪದೇ ಪಾಲಿಸಿ. ಲಸಿಕೆ, ಶುಚಿತ್ವ ಮತ್ತು ಸುರಕ್ಷತಾ ನಿಯಮಗಳನ್ನು ಪಾಲಿಸಬೇಕು. ನಾವೆಲ್ಲರೂ ಒಂದಾಗಿ ಕೊರೋನಾ ಮಣಿಸಬೇಕು ಎಂದರು.
ವಾರ್ಷಿಕೋತ್ಸವದ ಅಂಗವಾಗಿ ಮುದ್ರಿಸಿರುವ ಕರಪತ್ರವು ಸಂಗ್ರಹಯೋಗ್ಯವಾಗಿದೆ. ಕೊರೊನಾ ವೈರಸ್ ಹರಡುವ ರೀತಿ, ವೈರಸ್ ಸೋಂಕಿನ ಲಕ್ಷಣಗಳು, ತೆಗೆದುಕೊಳ್ಳಬೇಕಾದ ಮುಂಜಾಗ್ರತೆ ಕ್ರಮಗಳು, ಕೋವಿಡ್ ಪರೀಕ್ಷೆ ಮತ್ತು ಲಸಿಕೆಯ ಬಗ್ಗೆ ಹಾಗೂ ಕೋವಿಡ್ ನೆರವಿಗಾಗಿ ಇರುವ ಸಹಾಯವಾಣಿಗಳ ಸಂಖ್ಯೆಯನ್ನು ಕರಪತ್ರದಲ್ಲಿ ನೀಡಿರುವುದರಿಂದ ಎಲ್ಲರಿಗೂ ಅನುಕೂಲವಾಗಲಿದೆ ಎಂದರು.
ಸಾಹಿತಿ ವಿಜಯ್ ರಾಂಪುರ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಜಿ.ಬಿ. ಬಸವರಾಜಯ್ಯ, ಅಮೃತ ವಿಕಲಚೇತನ ಟ್ರಸ್ಟಿನ ಕಾರ್ಯದರ್ಶಿ ಟಿ. ರಮೇಶ್, ಶಿಕ್ಷಕ ಶ್ರೀಕಂಠಯ್ಯ, ಇರುಳಿಗ ಸಮುದಾಯದ ಮುಖಂಡ ಕೃಷ್ಣಮೂರ್ತಿ ಇದ್ದರು.
-
ಅಮೃತ ವಿಕಲಚೇತನ ಟ್ರಸ್ಟ್ ವತಿಯಿಂದ ವಿಕಲಚೇತನರಿಗೆ ದಿನಸಿ ಕಿಟ್ ವಿತರಣೆ
ರಾಮನಗರ : ತೀವ್ರತರ ಹರಡುತ್ತಿರುವ ಕೋವಿಡ್ ನಿಯಂತ್ರಣಕ್ಕಾಗಿ ಸರ್ಕಾರದೊಂದಿಗೆ ಸಂಘ-ಸಂಸ್ಥೆಗಳು ಕೈ ಜೋಡಿಸಿ ಕಾರ್ಯನಿರ್ವಹಿಸಿದರೆ ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಯೂತ್ ರೆಡ್ ಕ್ರಾಸ್ ಸಂಸ್ಥೆ ಜಿಲ್ಲಾಧ್ಯಕ್ಷ ಎಸ್. ರುದ್ರೇಶ್ವರ ತಿಳಿಸಿದರು.
ತಾಲ್ಲೂಕಿನ ಲಕ್ಷ್ಮೀಪುರ ಗ್ರಾಮದಲ್ಲಿನ ಅಮೃತ ವಿಕಲಚೇತನ ವೃದ್ಧಾಶ್ರಮದ ಆವರಣದಲ್ಲಿ ಅಮೃತ ವಿಕಲಚೇತನ ಟ್ರಸ್ಟ್ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ವಿಕಲಚೇತನರಿಗೆ ದಿನಸಿ ಕಿಟ್ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕೊರೊನಾವನ್ನು ನಿಯಂತ್ರಣ ಮಾಡಲು ಸರ್ಕಾರಿ ಅಧಿಕಾರಿಗಳ ಜೊತೆಗೆ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸೇವಾ ಮನೋಭಾವನೆಯಿಂದ ಕೆಲಸ ಮಾಡಬೇಕು ಎಂದು ತಿಳಿಸಿದರು.
ಸರ್ಕಾರ ಹಾಗೂ ಸಂಘಸಂಸ್ಥೆಗಳು ಕೋವಿಡ್ ನಿಯಂತ್ರಣಕ್ಕೆ ಕೈಜೋಡಿಸುವ ಜೊತೆಗೆ ಜನರು ಕೂಡ ಸ್ವಯಂ ಪ್ರೇರಿತರಾಗಿ ಮುನ್ನೆಚ್ಚರಿಕೆ ವಹಿಸಬೇಕು. ಸ್ವಚ್ಛತೆ, ಸಾಮಾಜಿಕ ಅಂತರ, ಕಡ್ಡಾಯವಾಗಿ ಮಾಸ್ಕ್ ಧರಿಸುವುದು ಕೂಡ ಆದ್ಯ ಕರ್ತವ್ಯವೆಂದು ತಿಳಿದು ಕೋವಿಡ್ ನಿಯಂತ್ರಣಕ್ಕೆ ಮುಂದಾಗಬೇಕು ಎಂದು ಮನವಿ ಮಾಡಿದರು.
ಬಿಳಗುಂಬ ಗ್ರಾಮ ಪಂಚಾಯಿತಿಯ ಗ್ರಾಮೀಣ ಪುನರ್ವಸತಿ ಕಾರ್ಯಕರ್ತ ಇಂತಿಯಾಜ್ ಪಾಷಾ ಮಾತನಾಡಿ ಕೋವಿಡ್ ಎರಡನೇ ಅಲೆ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಲಾಕ್ ಡೌನ್ ಘೋಷಿಸಿದೆ. ಇಂತಹ ಸಂದರ್ಭದಲ್ಲಿ ವಿಕಲಚೇತನರಿಗೆ ತೊಂದರೆಯಾಗಬಾರದು ಎನ್ನುವ ಉದ್ದೇಶದಿಂದ ವಿಕಲಚೇತನರಿಗೆ ದಿನಸಿ ಕಿಟ್ ಗಳನ್ನು ಅಮೃತ ವಿಕಲಚೇತನ ಟ್ರಸ್ಟ್ ವಿತರಿಸುತ್ತಿರುವುದು ಶ್ಲಾಘನೀಯ ಎಂದರು.
ಅಮೃತ ವಿಕಲಚೇತನ ಟ್ರಸ್ಟಿನ ಕಾರ್ಯದರ್ಶಿ ಟಿ. ರಮೇಶ್ ಮಾತನಾಡಿ ಅಮೃತ ವಿಕಲಚೇತನ ಟ್ರಸ್ಟ್ ಶೈಕ್ಷಣಿಕ, ಆರೋಗ್ಯ, ವಿಕಲಚೇತನರಿಗೆ ನೆರವು ಸೇರಿದಂತೆ ಸಾಮಾಜಿಕ ಮನೋಭಾವದಿಂದ ಕಾರ್ಯನಿರ್ವಹಿಸುತ್ತಿದೆ. ಈ ಹಿಂದೆಯೂ ಲಾಕ್ ಡೌನ್ ಸಂದರ್ಭದಲ್ಲಿ ನೆರವು ನೀಡಲಾಗಿತ್ತು. ಮುಂದಿನ ದಿನಗಳಲ್ಲಿ ತಾಲ್ಲೂಕಿನ ಎಲ್ಲಾ ವಿಕಲಚೇತನರಿಗೆ ದಿನಸಿ ಕಿಟ್ ಗಳನ್ನು ವಿತರಿಸಲಾಗುವುದು ಎಂದರು.
ಅಮೃತ ವಿಕಲಚೇತನ ಟ್ರಸ್ಟಿನ ಅಧ್ಯಕ್ಷ ಆರ್. ನಿರಂಜನ್, ಖಜಾಂಚಿ ಪಿ. ಸಪ್ನಾ, ಅಮೃತ ವಿಕಲಚೇತನ ವೃದ್ಧಾಶ್ರಮದ ಪಿ. ಭಾಸ್ಕರ್ ಇದ್ದರು. 40 ಕ್ಕೂ ಹೆಚ್ಚು ವಿಕಲಚೇತನರಿಗೆ ದಿನಸಿ ಕಿಟ್ ಗಳನ್ನು ವಿತರಿಸಲಾಯಿತು.