ವಿವಾಹ ವಾರ್ಷಿಕೋತ್ಸವದ ಅಂಗವಾಗಿ ರೈತರಿಗೆ ಕರಪತ್ರ, ಮಾಸ್ಕ್ ಹಾಗೂ ಸೋಪ್ ವಿತರಣೆ
ರಾಮನಗರ : ಸಂಶೋಧಕ ಎಸ್. ರುದ್ರೇಶ್ವರ ಹಾಗೂ ಶಿಕ್ಷಕಿ ಡಿ.ಆರ್. ನೀಲಾಂಬಿಕಾ ದಂಪತಿ ತಮ್ಮ ವಿವಾಹ ವಾರ್ಷಿಕೋತ್ಸವದ ಅಂಗವಾಗಿ ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ ಭಾನುವಾರ ರೈತರಿಗೆ ಕರಪತ್ರ ಹಂಚುವ ಮೂಲಕ ಕೋವಿಡ್ ಜಾಗೃತಿ ಮತ್ತು ಮಾಸ್ಕ್, ಸೋಪ್ ಗಳನ್ನು ವಿತರಿಸಿದರು.
ದೇಶಾದ್ಯಂತ ಕೊರೊನಾ ಹಾವಳಿಯಿಂದ ಸಾವು-ನೋವುಗಳು ಸಂಭವಿಸುತ್ತಿವೆ. ಕೊರೊನಾ ಕುರಿತು ಭಯಪಡಬೇಕಾಗಿಲ್ಲ. ಆದರೆ ಜಾಗೃತರಾಗಿರಬೇಕು. ನಿಷ್ಕಾಳಜಿ ವಹಿಸಿದರೆ ಜೀವಕ್ಕೆ ಅಪಾಯ ಆಗಬಹುದು. ತಪ್ಪದೆ ಲಸಿಕೆ ಹಾಕಿಸಿಕೊಳ್ಳಬೇಕು. ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಸ್ಯಾನಿಟೈಸರ್ ಬಳಸಬೇಕು. ಅಂತರ ಕಾಯ್ದುಕೊಳ್ಳಬೇಕು ಎಂದು ಸಂಶೋಧಕ ಎಸ್. ರುದ್ರೇಶ್ವರ ರೈತರಿಗೆ ಸಲಹೆ ನೀಡಿದರು.
ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಎಸ್. ಗಂಗಾಧರ್ ಮಾತನಾಡಿ ಕೊರೋನಾದಿಂದ ನೀವೂ ಸುರಕ್ಷಿತರಾಗಿರಿ ಮತ್ತು ನಿಮ್ಮ ಆತ್ಮೀಯರನ್ನೂ ಸುರಕ್ಷಿತವಾಗಿರುವಂತೆ ನೋಡಿಕೊಳ್ಳಿ. ಅಗತ್ಯವಿದ್ದಾಗ ಮಾತ್ರ ಮನೆಯಿಂದ ಹೊರಗೆ ಬನ್ನಿ, ಕೋವಿಡ್-ಸೂಕ್ತ ನಡವಳಿಕೆಗಳನ್ನು ತಪ್ಪದೇ ಪಾಲಿಸಿ. ಲಸಿಕೆ, ಶುಚಿತ್ವ ಮತ್ತು ಸುರಕ್ಷತಾ ನಿಯಮಗಳನ್ನು ಪಾಲಿಸಬೇಕು. ನಾವೆಲ್ಲರೂ ಒಂದಾಗಿ ಕೊರೋನಾ ಮಣಿಸಬೇಕು ಎಂದರು.
ವಾರ್ಷಿಕೋತ್ಸವದ ಅಂಗವಾಗಿ ಮುದ್ರಿಸಿರುವ ಕರಪತ್ರವು ಸಂಗ್ರಹಯೋಗ್ಯವಾಗಿದೆ. ಕೊರೊನಾ ವೈರಸ್ ಹರಡುವ ರೀತಿ, ವೈರಸ್ ಸೋಂಕಿನ ಲಕ್ಷಣಗಳು, ತೆಗೆದುಕೊಳ್ಳಬೇಕಾದ ಮುಂಜಾಗ್ರತೆ ಕ್ರಮಗಳು, ಕೋವಿಡ್ ಪರೀಕ್ಷೆ ಮತ್ತು ಲಸಿಕೆಯ ಬಗ್ಗೆ ಹಾಗೂ ಕೋವಿಡ್ ನೆರವಿಗಾಗಿ ಇರುವ ಸಹಾಯವಾಣಿಗಳ ಸಂಖ್ಯೆಯನ್ನು ಕರಪತ್ರದಲ್ಲಿ ನೀಡಿರುವುದರಿಂದ ಎಲ್ಲರಿಗೂ ಅನುಕೂಲವಾಗಲಿದೆ ಎಂದರು.
ಸಾಹಿತಿ ವಿಜಯ್ ರಾಂಪುರ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಜಿ.ಬಿ. ಬಸವರಾಜಯ್ಯ, ಅಮೃತ ವಿಕಲಚೇತನ ಟ್ರಸ್ಟಿನ ಕಾರ್ಯದರ್ಶಿ ಟಿ. ರಮೇಶ್, ಶಿಕ್ಷಕ ಶ್ರೀಕಂಠಯ್ಯ, ಇರುಳಿಗ ಸಮುದಾಯದ ಮುಖಂಡ ಕೃಷ್ಣಮೂರ್ತಿ ಇದ್ದರು.
ಪ್ರತಿಕ್ರಿಯೆಗಳು