Tel: 7676775624 | Mail: info@yellowandred.in

Language: EN KAN

    Follow us :


ಪೌರಾಣಿಕ ನಾಟಕದಲ್ಲಿ ಜನಮನ ಸೂರೆಗೊಂಡು ಇತಿಹಾಸ ನಿರ್ಮಿಸಿದ ಮಹಿಳಾ ಕಲಾವಿದರು.

Posted date: 11 Mar, 2024

Powered by:     Yellow and Red

ಪೌರಾಣಿಕ ನಾಟಕದಲ್ಲಿ ಜನಮನ ಸೂರೆಗೊಂಡು ಇತಿಹಾಸ ನಿರ್ಮಿಸಿದ ಮಹಿಳಾ ಕಲಾವಿದರು.

ಚನ್ನಪಟ್ಟಣ :  ಚನ್ನಪಟ್ಟಣದಲ್ಲಿ ಮಹಿಳೆಯರೇ ಪೌರಾಣಿಕ ನಾಟಕವನ್ನು ಅಭ್ಯಾಸ ಮಾಡಿ ಬಯಲು ಮಂದಿರದಲ್ಲಿ ಪ್ರಸ್ತುತ ಪಡಿಸುತ್ತಿರುವುದು ವಿಶೇಷವಾಗಿದೆ. ಪೌರಾಣಿಕ ನಾಟಕವೆಂದರೆ ಅದು ಪುರುಷರಿಗೆ ಮೀಸಲು. ಕೆಲ ಹೆಣ್ಣು ಪಾತ್ರಧಾರಿಗಳನ್ನು ಮಾತ್ರ ಹೊರಗಿನಿಂದ ಕರೆಸಿ ಪುರುಷರ ಜೊತೆಯಲ್ಲಿ ಅಭಿನಯಿಸಲು ಮಾತ್ರ ಅವಕಾಶ ನೀಡಲಾಗುತ್ತಿತ್ತು. ಆದರೆ ಇಂದು ಇಪ್ಪತ್ತನಾಲ್ಕು ಮಹಿಳೆಯರು ಭಾರತ್ ವಿಕಾಸ ಪರಿಷದ್ ನೇತೃತ್ವದಲ್ಲಿ ಪೌರಾಣಿಕ ನಾಟಕವನ್ನು ಪ್ರಸ್ತುತ ಪಡಿಸುತ್ತಿರುವುದು, ಈ ನಾಟಕವನ್ನು ನೋಡಲು ಸಹಸ್ರಾರು ಮಂದಿ ಕಾದು ನಿಂತಿರುವುದನ್ನು ನೋಡಿದರೆ, ಈ ನಾಟಕವು ಇತಿಹಾಸ ಸೃಷ್ಟಿಸುವುದರಲ್ಲಿ ಅನುಮಾನವೇ ಇಲ್ಲ ಎಂದು ವೈದೇಹಿ ವೈದ್ಯಕೀಯ ಮಹಾ ವಿದ್ಯಾಲಯದ ನಿರ್ದೇಶಕಿ ಡಾ. ತೇಜಸ್ವಿನಿ ತಿಳಿಸಿದರು.


ಅವರು ಭಾನುವಾರ ನಗರದ ಕೊಲ್ಲಾಪುರದಮ್ಮ ದೇವಾಲಯದ ಆವರಣದಲ್ಲಿನ ಡಾ. ರಾಜ್‍ಕುಮಾರ ಬಯಲು ರಂಗ ಮಂದಿರದಲ್ಲಿ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಹಮ್ಮಿ ಕೊಂಡಿದ್ದ ದ್ರೌಪದಿ ವಿಜಯ ಅಥವಾ ಶ್ರೀ ಕೃಷ್ಣ ಸಂಧಾನ ಎಂಬ ಪೌರಾಣಿಕ ನಾಟಕವನ್ನು ಉದ್ಘಾಟಿಸಿ ಮಾತನಾಡಿದರು.


ನಾನು ಹಲವಾರು ಐತಿಹಾಸಿಕ ಮತ್ತು ಪೌರಾಣಿಕ ನಾಟಕಗಳನ್ನು ನೋಡಿದ್ದೇನೆ. ಸಂಗೀತ, ನೃತ್ಯ ಜೊತೆಗೆ ವೈದ್ಯಕೀಯ ನನಗೆ ಇಷ್ಟವಾದ ವಿದ್ಯೆಗಳು. ಇವುಗಳಲ್ಲಿ ಇಂದು ಮಹಿಳೆಯರೇ ನಿರ್ವಹಿಸುತ್ತಿರುವ ಪೌರಾಣಿಕ ನಾಟಕವನ್ನು ಕಣ್ತುಂಬಿಕೊಳ್ಳಲು ಬಂದಿದ್ದೇನೆ. ಬಹುತೇಕ ಎಲ್ಲಾ ಪಾತ್ರಗಳ ತುಣುಕುಗಳನ್ನು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ನೋಡಿದ್ದೇನೆ. ತುಣುಕುಗಳೇ ಅಷ್ಟೊಂದು ಅದ್ಭುತವಾಗಿರಬೇಕಾದರೆ ನಾಟಕವು, ಜನಮನ ಸೂರೆಗೊಳ್ಳುವುದರಲ್ಲಿ ಅನುಮಾನವೇ ಇಲ್ಲ. ಇಲ್ಲಿ ನೆರೆದಿರುವ ಸಾರ್ವಜನಿಕರನ್ನು ನೋಡಿದರೇ ಇದು ಅರ್ಥವಾಗುತ್ತದೆ. ಈ ನಾಟಕಕ್ಕೆ ಸಹಕಾರ ನೀಡಿರುವ ಹಾಗೂ ಪಾತ್ರಧಾರಿಗಳಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದರು.


ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಭಾರತ ವಿಕಾಸ ಪರಿಷದ್‍ನ ದಕ್ಷಿಣ ಪ್ರಾಂತ್ಯದ ರಾಜ್ಯಾಧ್ಯಕ್ಷರಾದ ಅರುಣ್ ಜಿ. ಘಾಟಕೆ ರವರು ಮಾತನಾಡಿ ಮಹಿಳೆಯರು ಅಡುಗೆ ಮನೆಗೆ ಅಷ್ಟೆ ಸೀಮಿತವಲ್ಲ ನಾವು ಏನು ಬೇಕಾದರು ಸಾಧಿಸುತ್ತೇವೆ ಎಂಬ ಛಲ ಈ ಹಿಂದಿನಿಂದಲೂ ನಡೆದು ಬಂದಿದೆ. ವಿಶೇಷವಾಗಿ ಚನ್ನಪಟ್ಟಣ ನೆಲದಲ್ಲಿ ಅಂತಹ ಸತ್ವ ಗುಣವಿದೆ. ಕೇವಲ ಸಾಮಾಜಿಕ ಜಾಲತಾಣಗಳಲ್ಲೆ ಪಾತ್ರದಾರಿಗಳ ವಿಡಿಯೋ ತುಣುಕುಗಳನ್ನು ನೋಡಿ ಇಷ್ಟೊಂದು ಮಂದಿ ಆಗಮಿಸಿರುವುದು ಪಾತ್ರಧಾರಿಗಳ ಛಲವನ್ನು ತೋರಿಸುತ್ತದೆ ಎಂದರು.


ಈ ನಾಟಕದಲ್ಲಿ ಇಪ್ಪತ್ತೈದು ಪಾತ್ರಗಳಿದ್ದು, ಇಪ್ಪತ್ತನಾಲ್ಕು ಸ್ಥಳೀಯ ಮಹಿಳೆಯರು ಪಾತ್ರಗಳನ್ನು ನಿರ್ವಹಿಸಿದರು. ಎಲ್ಲಾ ಪಾತ್ರಧಾರಿಗಳು ಇದೇ ಮೊದಲ ಬಾರಿಗೆ ಪೌರಾಣಿಕ ನಾಟಕಕ್ಕೆ ಬಣ್ಣ ಹಚ್ಚಿದ್ದು, ಮೊದಲ ಪ್ರಯತ್ನದಲ್ಲೆ ತಮ್ಮ ತಮ್ಮ ಪಾತ್ರಗಳನ್ನು ಯಶಸ್ವಿಯಾಗಿ ನಿಭಾಯಿಸಿದ್ದಾರೆ. ಕೊಲ್ಲಾಪುರದಮ್ಮ ಆವರಣದಲ್ಲಿ ಎರಡೂವರೆ ಸಾವಿರ ಕುರ್ಚಿಗಳನ್ನು ಹಾಕಿಸಲಾಗಿದ್ದು, ಅಷ್ಟೇ ಪ್ರಮಾಣದಲ್ಲಿ ಪ್ರೇಕ್ಷಕರು ನಿಂತು ನಾಟಕವನ್ನು  ವೀಕ್ಷಿಸಿದರು.  ಪ್ರತಿಯೊಬ್ಬ  ಪ್ರೇಕ್ಷಕರಿಗೂ  ನೀರು ಮತ್ತು ಊಟದ ವ್ಯವಸ್ಥೆ ಮಾಡಲಾಗಿತ್ತು.


*ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ:9742424949*

 

ಮಧ್ಯಾಹ್ನ 03.00 ಗಂಟೆಗೆ ಆರಂಭವಾದ ಈ ನಾಟಕವು ಮುಂಜಾನೆ 02.00 ಗಂಟೆವರೆಗೂ ಜರುಗಿತು. ದರ್ಬಾರ್ ಸೀನ್ ಮುಗಿಯುವ ವರೆಗೂ ಪ್ರೇಕ್ಷಕರು ಒಂದಿನಿತು ಕರಗದೆ ನಾಟಕ ವೀಕ್ಷಿಸಿದರು. 

ಶಕುನಿ, ದುರ್ಯೋಧನ, ಭೀಮ, ಅರ್ಜುನ, ಕೃಷ್ಣ, ದ್ರೌಪದಿ ಸೇರಿದಂತೆ ಎಲ್ಲಾ ಪಾತ್ರದಾರಿಗಳು ತಮ್ಮ ತಮ್ಮ ಪಾತ್ರಕ್ಕೆ ಅತ್ಯಂತ ಶ್ರದ್ಧೆಯಿಂದ ನ್ಯಾಯ ಒದಗಿಸಿದರು. ಪ್ರತಿ ಪಾತ್ರಗಳು ಬಂದ ಸಂದರ್ಭದಲ್ಲಿ ಸಂಭಾಷಣೆ ಮತ್ತು ಹಾಡುಗಳು ಬಂದ ಸಂದರ್ಭದಲ್ಲಿ ಪ್ರೇಕ್ಷಕರ ಕರತಾಡನ, ಶಿಳ್ಳೆ ಮತ್ತು ಒನ್ಸ್ ಮೋರ್ ಎಂಬ ಉದ್ಘೋಷಗಳು ಬರುತ್ತಿದ್ದವು.


ಪ್ರತಿ ಪಾತ್ರಧಾರಿಗಳು ಸಂಭಾಷಣೆ ಮುಗಿಸಿ ಬಂದಾಗ ಹಲವಾರು ಪ್ರೇಕ್ಷಕರು ಮತ್ತು ಸ್ನೇಹಿತರು ವೇದಿಕೆಯ ಬಳಿ ಬಂದು ಫೋಟೊ ತೆಗೆಸಿಕೊಂಡು ಅಭಿನಂದನೆ ಸಲ್ಲಿಸುತ್ತಿದ್ದುದು ವಿಶೇಷವಾಗಿತ್ತು.


ನಗರದ ಕೊಲ್ಲಾಪುರದಮ್ಮ ದೇವಾಲಯದ ಆವರಣದಲ್ಲಿರುವ ಡಾ. ರಾಜ್‍ಕುಮಾರ ಬಯಲು ರಂಗ ಮಂದಿರದಲ್ಲಿ ಭಾರತ ವಿಕಾಸ ಪರಿಷದ್, ಹಲವಾರು ಕಲಾವಿದ ಬಳಗ ಮತ್ತು ದಾನಿಗಳ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ, ದ್ರೌಪದಿ ವಿಜಯ ಅಥವಾ ಶ್ರೀಕೃಷ್ಣ ಸಂಧಾನ ಎಂಬ ಪೌರಾಣಿಕ ನಾಟಕದಲ್ಲಿ ಇಪ್ಪತ್ತನಾಲ್ಕು ಮಹಿಳೆಯರು ಪಾತ್ರಧಾರಿಗಳಾಗಿ ಅಭಿನಯಿಸಿದ ಈ ನಾಟಕವು ಹಿಂದೆಂದು ಕಂಡರಿಯದ ಪ್ರೇಕ್ಷಕರನ್ನು ಹಿಡಿದಿಡುವ ಮೂಲಕ ಇತಿಹಾಸ ನಿರ್ಮಿಸಿತು.


ಉದ್ಘಾಟನಾ ಸಂದರ್ಭದಲ್ಲಿ ತಾಲ್ಲೂಕು ಮತ್ತು ಜಿಲ್ಲೆಯ ಹಲವಾರು ಹೆಸರಾಂತ ಮಹಿಳೆಯರು ಹಾಗೂ ಭಾರತ ವಿಕಾಸ ಪರಿಷದ್‍ನ ತಾಲ್ಲೂಕು ಅಧ್ಯಕ್ಷರಾದ ಗುರುಮಾದಯ್ಯ, ರಾಜ್ಯ ಉಪಾಧ್ಯಕ್ಷರಾದ ವಸಂತ ಕುಮಾರ, ಕೆಂಗಲ್ ಆಂಜನೇಯ ಸ್ವಾಮಿ ಕಲಾ ಟ್ರಸ್ಟ್‌ನ ಪದಾಧಿಕಾರಿಗಳು ಸೇರಿದಂತೆ ಹಲವಾರು ಕಲಾವಿದರು ಭಾಗವಹಿಸಿದರು. ವಿಶೇಷವಾಗಿ ಹಿರಿಯ ಕಲಾವಿದರು, ಹಾಲಿ ವಿಧಾನ ಪರಿಷದ್ ಸದಸ್ಯರಾದ ಸಿ. ಎಂ. ಲಿಂಗಪ್ಪರವರು ದೀರ್ಘ ಸಮಯ ಕುಳಿತು ನಾಟಕ ವೀಕ್ಷಿಸಿದ್ದು ವಿಶೇಷವಾಗಿತ್ತು.


ಗೋ. ರಾ. ಶ್ರೀನಿವಾಸ...

ಮೊ:9845856139

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑