Tel: 7676775624 | Mail: info@yellowandred.in

Language: EN KAN

    Follow us :


ವರ್ಣ ನೀತಿ ಮತ್ತು ಜಾತಿಯತೆಯನ್ನು ಮೀರಿದವರು ಮಾತ್ರ ಮನುಷ್ಯ ಜಾತಿಯಾಗಲು ಸಾಧ್ಯ –ಪ್ರೊ. ಕೆ.ಎಸ್.ಭಗವಾನ್

Posted date: 20 Feb, 2024

Powered by:     Yellow and Red

ವರ್ಣ ನೀತಿ ಮತ್ತು ಜಾತಿಯತೆಯನ್ನು ಮೀರಿದವರು ಮಾತ್ರ ಮನುಷ್ಯ ಜಾತಿಯಾಗಲು ಸಾಧ್ಯ –ಪ್ರೊ. ಕೆ.ಎಸ್.ಭಗವಾನ್

ರಾಮನಗರ: ಶೂದ್ರರನ್ನು ವರ್ಣ ನೀತಿಯಿಂದಲೆ ವೈದಿಕರು ಆಳಿದರು. ಇಂದಿಗೂ ಸಹ ವೈದಿಕರು ರಾಮನನ್ನು ನಮ್ಮ ಮೇಲೆ ಹೇರುವ ಮೂಲಕ ಮತ್ತೆ ಪೂರ್ವಕಾಲಕ್ಕೆ ಕರೆದುಕೊಂಡು ಹೋಗುತ್ತಿದ್ದಾರೆ. ನಾವುಗಳು ಕುವೆಂಪುರವರ ಪ್ರಭಾವಕ್ಕೆ ಒಳಗಾಗದೇ ಇದ್ದರೇ ನಾವು ಯಾರೂ ಸಹ ಈ ವೇದಿಕೆಯಲ್ಲಿ ಕುಳಿತು ಮಾತನಾಡಲು ಸಾಧ್ಯವಾಗುತ್ತಿರಲಿಲ್ಲ. ರಾಮಾಯಣವನ್ನು ಸಂಪೂರ್ಣವಾಗಿ ಓದಿಕೊಳ್ಳದೇ ವೈದಿಕರ ಪ್ರಭಾವಕ್ಕೊಳಗಾಗಿ, ಕೆಲ ಶೂದ್ರರು ತಪ್ಪು ಕಲ್ಪನೆ ಹೊಂದಿದ್ದಾರೆ ಎಂದು ವಿಚಾರವಾದಿ  ಪ್ರೊ. ಕೆ.ಎಸ್.ಭಗವಾನ್ ತಿಳಿಸಿದರು.


ತಾಲ್ಲೂಕಿನ ಬಿಳಗುಂಬ ಗ್ರಾಮದ ಬಳಿ ಇರುವ ಖಾಸಗಿ ಹೋಂಸ್ಟೇ ಒಂದರಲ್ಲಿ ಸಾಹಿತಿ ಪ್ರೊ.ಎಂ. ಶಿವನಂಜಯ್ಯ ಅಭಿಮಾನಿಗಳ ಬಳಗ ಭಾನುವಾರ ಹಮ್ಮಿಕೊಂಡಿದ್ದ ‘ಆನು ಒಲಿದಂತೆ ಬಾಳುವೆ’ ಆತ್ಮಕಥೆ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು.


ಅಂಬೇಡ್ಕರವರು ಮಹಾನ್ ವಿಶ್ವಜ್ಞಾನಿ. ಪ್ರಪಂಚದ ಬಹುತೇಕ ದೇಶಗಳ ವಿದ್ವಾಂಸರುಗಳು ಒಗ್ಗೂಡಿ ಜಗತ್ತಿನ ವಿದ್ವಾಂಸರನ್ನು ಗುರುತಿಸಬೇಕು ಎಂದು ಸಭೆ ನಡೆಸಿದ ಸಂದರ್ಭದಲ್ಲಿ ಮೊದಲ ಹೆಸರೇ ಡಾ. ಬಿ.ಆರ್. ಅಂಬೇಡ್ಕರ್. ಮತ್ತೇ ಬೇರೆ ಹೆಸರುಗಳೇ ಯಾರಿಗೂ ಹೊಳೆಯಲಿಲ್ಲ. ‘ಸಂವಿಧಾನದ ಆಶಯದಂತೆ ಎಲ್ಲರಲ್ಲೂ ವೈಚಾರಿಕ ಮತ್ತು ವೈಜ್ಞಾನಿಕ ಮನೋಭಾವ ಬೆಳೆಯಬೇಕು. ಹಕ್ಕುಗಳ ಹೋರಾಟದ ಭರದಲ್ಲಿ ನಾವು ಕರ್ತವ್ಯಗಳನ್ನು ಮರೆಯುತ್ತಿದ್ದೇವೆ. ದೇಶವಿನ್ನೂ ಅಜ್ಞಾನದಲ್ಲಿದೆ. ಅಂಬೇಡ್ಕರ್ ಅವರಂತಹ ದೊಡ್ಡ ಜ್ಞಾನಿ ಮತ್ತೊಬ್ಬರಿಲ್ಲ ಎಂದು ಪ್ರಪಂಚ ಒಪ್ಪಿಕೊಂಡರೂ, ಭಾರತದಲ್ಲಿ ಅವರಿಗೆ ಸರಿಯಾದ ಗೌರವ ಸಿಗುತ್ತಿಲ್ಲ ಎಂದು ಬೇಸರ ವ್ಯಕ್ತ ಪಡಿಸಿದರು.


ಪ್ರಪಂಚದ ಯಾವುದೇ ದೇಶದಲ್ಲಿ ಇರದಂತಹ ಸಂವಿಧಾನವನ್ನು ಅವರು ರಚಿಸಿದ್ದಾರೆ. ಈ ನಮ್ಮ ಸಂವಿಧಾನದಲ್ಲಿ ಸರ್ವರೂ ಸಮಾನರು ಎಂದು ಸಾರಿದ್ದಾರೆ. ಇಲ್ಲಿ ಜಾತಿ, ಧರ್ಮ, ಯಾವುದೂ ಇಲ್ಲ. ಇಲ್ಲಿರುವುದು ಕೇವಲ ಎರಡೇ ಜಾತಿ. ಒಂದು ಗಂಡು ಮತ್ತೊಂದು ಹೆಣ್ಣು. ನಮ್ಮಲ್ಲಿ ಜಾತಿ ವ್ಯವಸ್ಥೆಯನ್ನು ಮೊದಲು ತೊಲಗಿಸಬೇಕು. ಇಲ್ಲವಾದರೇ, ಮತ್ತೇ ವೈದಿಕರ ಕಪಿಮುಷ್ಟಿಗೆ ಸಿಲುಕಿ, ಮನುವಿನ ಕಾಲಕ್ಕೆ ಎಳೆದುಕೊಂಡು ಹೋಗಿ ಗುಲಾಮರನ್ನಾಗಿ ಮಾಡಿಕೊಳ್ಳುತ್ತಾರೆ. ಅಂಬೇಡ್ಕರ್, ಪೆರಿಯಾರ್, ಕುವೆಂಪು ರವರನ್ನು ಓದಿಕೊಂಡು ವೈಚಾರಿಕತೆಯನ್ನು  ಬೆಳೆಸಿಕೊಂಡಾಗ ಮಾತ್ರ ನಾವು ಸಮಾನರಾಗಿ ಇರಲು ಸಾಧ್ಯವಾಗುತ್ತದೆ ಎಂದು ಕರೆ ನೀಡಿದರು.


ಆನು ಒಲಿದಂತೆ ಬಾಳುವೆ – ಆತ್ಮಕಥನದ ಕತೃ ಪ್ರೊ: ಶಿವನಂಜಯ್ಯ ಮಾತನಾಡಿ ಸುಗ್ರೀವ, ವಿಭೀಷಣ ಕೂಡ ಒಡೆದಾಳುವ ನೀತಿಯ ಸಾಲಿನವರೇ. ರಾವಣ, ಹಿರಣ್ಯಾಕ್ಷ, ಹಿರಣ್ಯಕಶಿಪು, ಬಲಿ ನಮ್ಮವರು. ಅದರಲ್ಲೂ ರಾವಣ ಅತ್ಯಂತ ದೊಡ್ಡ ವ್ಯಕ್ತಿತ್ವದವನಾಗಿದ್ದ. ಆತ ಮೂಲತ ರೈತನಾಗಿದ್ದ ಎಂದು ಅಭಿಪ್ರಾಯಪಟ್ಟರು. ‘ಆಂಜನೇಯ ಎಡಬಿಡಂಗಿ. ಆತನನ್ನು ನಾನು ಒಪ್ಪುವುದಿಲ್ಲ. ನಮ್ಮನ್ನು ತುಳಿದ ಬಿಳಿಯರಿಗೆ ದಾರಿ ಮಾಡಿಕೊಟ್ಟವನೇ ಆಂಜನೆಯ, ಒಡೆದಾಳುವ ನೀತಿಗೆ ಅವನೇ ಅವಕಾಶ ಕೊಟ್ಟ. ಚೂಪು ಮೂಗಿನ, ಕೋಲು ಮುಖದ ಬಿಳಿಯರಾದ ಆರ್ಯರೇ, ಎಣ್ಣೆಗೆಂಪು ಬಣ್ಣದ ದ್ರಾವಿಡರನ್ನು ಕಟ್ಟುಕತೆಗಳ ಮೂಲಕ ಸಾವಿರಾರು ವರ್ಷಗಳಿಂದ ತುಳಿಯುತ್ತಾ ಬಂದಿದ್ದಾರೆ. ರಾವಣ ನನಗೆ ರಕ್ಷಣೆ ಕೊಟ್ಟ ಅವನೆಂದು ಬಲಾತ್ಕಾರ ಮಾಡಲಿಲ್ಲ. ಆದರೆ, ರಾಮ ಏನೂ ಕೊಡಲಿಲ್ಲ ಎಂದು ಚಿತ್ರಪಟ ರಾಮಾಯಣದಲ್ಲಿ ರಾವಣನ ವ್ಯಕ್ತಿತ್ವ ಕುರಿತು ಸೀತೆ ಹೇಳುತ್ತಾಳೆ.


ಚರಿತ್ರೆಯಲ್ಲಿ ಹುದುಗಿರುವ ಇಂತಹ ಬೌದ್ಧಿಕ ವಿಚಾರಗಳನ್ನು ತಿಳಿದುಕೊಳ್ಳಬೇಕು. ಅದಕ್ಕಾಗಿ ನಾವು ಚರಿತ್ರೆ, ಮಾನವಶಾಸ್ತ್ರವನ್ನು ಆಳವಾಗಿ ಓದಬೇಕು. ಸತ್ಯ ವಿಚಾರವನ್ನು ಹೇಳುವ ಭಗವಾನ್ ಅವರನ್ನು ಇಂತಹ ಸಮಾರಂಭಕ್ಕೆ ಕರೆಸಲು ಧೈರ್ಯ ಬೇಕು’ ಎಂದರು.‘ನಮ್ಮೆಲ್ಲಾ ಸ್ವಾಮೀಜಿಗಳು ಮನುವಾದಕ್ಕೆ ಗಂಟು ಹಾಕಿಕೊಂಡಿದ್ದಾರೆ. ಆದರೆ, ನಾದಾನಂದನಾಥ ಸ್ವಾಮೀಜಿ ಸೇರಿದಂತೆ ಕೆಲವರಷ್ಟೇ ಅದಕ್ಕೆ ವ್ಯತಿರಿಕ್ತವಾಗಿದ್ದಾರೆ. ಪುರೋಹಿತರನ್ನು ಕರೆಸದೆ, ಶಾಸ್ತ್ರ–ಪುರಾಣ ನೋಡದೆ ಆಷಾಢದ ರಾಹುಕಾಲದಲ್ಲಿ ತಾಳಿ‌ ಕಟ್ಟಿದ ನನಗೆ ಮಕ್ಕಳಾಗುವುದಿಲ್ಲ ಎಂದು ಹೇಳುತ್ತಿದ್ದರು. ಆದರೆ, ಇಬ್ಬರು ಮಕ್ಕಳಾದರು. ನಾವು ಪುರೋಹಿತಶಾಹಿ ಮನಸ್ಥಿತಿಯಿಂದ ಹೊರಬರಬೇಕು’ ಎಂದು ತಿಳಿಸಿದರು.


ಸಾಹಿತಿ ಎಲ್‌.ಎನ್. ಮುಕುಂದರಾಜ್  ಮಾತನಾಡಿ ಬಸವಣ್ಣ ಬದುಕಿದ್ದೆ ಮೂವತೈದು ವರ್ಷ. ಕಲ್ಯಾಣ ಕ್ರಾಂತಿಯನ್ನು ಮಾಡಿದರು. ಎಲ್ಲರೂ ಸರಿಸಮಾನರು ಎಂದು ಸಾರಿದ ಅವರನ್ನೂ ಸೇರಿದಂತೆ 12ನೇ ಶತಮಾನದಲ್ಲಿ ಸುಮಾರು 1.96 ಲಕ್ಷ ಶರಣರನ್ನು ಕಲ್ಯಾಣದ ಬೀದಿಗಳಲ್ಲಿ ಕಡಿದು ಹಾಕಿದರು. ಇದು ಬಸವಣ್ಣನವರ ಅಕ್ಷರ ಮತ್ತು ಅನ್ನ ದಾಸೋಹದ ವಿರುದ್ಧ ವೈದಿಕರು ನಡೆಸಿದ ಹತ್ಯಾಕಾಂಡವಾಗಿತ್ತು. ಈಗಲೂ ಸಹ ನಮ್ಮತನವನ್ನು ನಾವು ಉಳಿಸಿಕೊಳ್ಳಬೇಕಾದರೆ, ವೈಚಾರಿಕತೆಯನ್ನು ಅಳವಡಿಸಕೊಳ್ಳಬೇಕು. ಇಲ್ಲವಾದರೇ ನಮ್ಮನ್ನು ಮತ್ತೊಮ್ಮೆ ಮೌಢ್ಯದಂಚಿಗೆ ಕರೆದೊಯ್ಯುತ್ತಾರೆ. ಶಿಕ್ಷಕರಾದವರು ವೈಚಾರಿಕತೆಯನ್ನು ಮನದಟ್ಟು ಮಾಡಿಕೊಳ್ಳಬೇಕು ಎಂದರು.


ಯಾವಾಗ ಸೆಂಗೋಲ್ ಸಂಸತ್ತನ್ನು ಪ್ರವೇಶಿಸಿತೊ ಅಂದೇ ಸಂಸತ್ ವೈದಿಕವಾಯಿತು. ಆಗ ನಾವು ಎಚ್ಚೆತ್ತುಕೊಳ್ಳಬೇಕಾಗಿತ್ತು. ಇದರ ವಿರುದ್ಧ ಯಾರು ಪ್ರತಿಭಟಿಸಿಲ್ಲ. ಸಂವಿಧಾನ ಇರಬೇಕಾದ ಜಾಗದಲ್ಲಿ ಸೆಂಗೋಲ್ ಪ್ರವೇಶಿಸಿರುವುದೇ ನಮ್ಮನ್ನು ದಾಸರನ್ನಾಗಿಸಲು ಇದಕ್ಕೆ ನಾವೆಲ್ಲರೂ ಅಂದರೆ, ‘ಉತ್ತರದವರು ದಕ್ಷಿಣದವರನ್ನು ಅದರಲ್ಲೂ ಕರ್ನಾಟಕದವರನ್ನು ಹುರಿದು ತಿನ್ನುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೆಹಲಿಯಲ್ಲಿ ನಮ್ಮ ತೆರಿಗೆ ನಮ್ಮ ಪಾಲು ಎಂದು ಹೋರಾಟ ನಡೆಸಿದ್ದು ಸರಿಯಾಗಿದೆ. ಇಲ್ಲದಿದ್ದರೆ, ಸಂಸದ ಸುರೇಶ್ ಹೇಳಿದಂತೆ ದೇಶ ವಿಭಜಿಸಬೇಕಾಗುತ್ತದೆ. ಉತ್ತರದವರ ವಿರುದ್ಧ ದಕ್ಷಿಣದವರು ಒಂದಾಗಿ ದ್ರಾವಿಡ ಚಳವಳಿಯನ್ನು ರೂಪಿಸಬೇಕಾಗಿದೆ. ಪುರೋಹಿತಶಾಹಿಯ ಸಂಕೇತವಾದ ಸೆಂಗೋಲ್ ಸಂಸತ್ತು ಪ್ರವೇಶಿಸಿರುವುದು ಪ್ರಜಾಪ್ರಭುತ್ವದ ಅವನತಿಯ ಸಂಕೇತವಾಗಿದೆ. ಈ ನಿಟ್ಟಿನಲ್ಲಿ, ಸಂವಿಧಾನ ಬದಲಾವಣೆ ಮಾಡುವುದಕ್ಕಾಗಿಯೇ ನಾವು ಬಂದಿದ್ದೇವೆ ಎಂದು ಬಹಿರಂಗವಾಗಿ ಹೇಳುತ್ತಾ ಬಂದಿದ್ದಾರೆ. ಇದರ ವಿರುದ್ಧ ರಾಜಕೀಯವಾಗಿ ಸಂಘಟಿತರಾಗುವ ಅಗತ್ಯವಿದೆ’ಎಂದು ಹೇಳಿದರು.‘ಪ್ರಖರ ವೈಚಾರಿಕ ಶಕ್ತಿಯಾದ ಕುವೆಂಪು, ಬುದ್ಧ, ಬಸವಣ್ಣ, ಅಂಬೇಡ್ಕರ್, ಪೆರಿಯಾರ್, ಫುಲೆ ರವರುಗಳನ್ನು ಪ್ರತಿ ಮನ-ಮನೆಗಳಿಗೆ ತಲುಪಿಸಬೇಕು. ಆ ಕೆಲಸವನ್ನು ಶಿವನಂಜಯ್ಯ ಮಾಡಿಕೊಂಡು ಬಂದಿದ್ದಾರೆ. ‌ನಮಗೆ ಅನ್ಯಾಯ ಮಾಡಿದ ಪುರೋಹಿತರನ್ನೇ ಕರೆದುಕೊಂಡು ಬಂದು ಶುಭ ಕಾರ್ಯಗಳನ್ನು ಮಾಡಿಸುವುದನ್ನು ಬಿಡಬೇಕಿದೆ. ಈ ವಿಷಯ ಹೇಳುತ್ತಾ, ನಾವು ಬ್ರಾಹ್ಮಣರನ್ನು ವಿರೋಧಿಸುವುದಿಲ್ಲ, ಬದಲಾಗಿ ನಮ್ಮವರನ್ನು ಎಚ್ಚರಿಸುವ ಕೆಲಸ ಮಾಡುತ್ತಿದ್ದೇವೆ. ಕುವೆಂಪು ಸಹ ಇದೇ ಕೆಲಸವನ್ನು ತಮ್ಮ‌ ಕೃತಿಗಳಲ್ಲಿ ಮಾಡಿದ್ದಾರೆ ಎಂದರು.


*ಸುದ್ದಿ ಮತ್ತು ಜಾಹಿರಾತಿಗಾಗಿ  ಸಂಪರ್ಕಿಸಿ; ಮೊ. ನಂ: 9742424949*


ಪುಸ್ತಕ ಬಿಡುಗಡೆ ಬಳಿಕ ನಡೆದ ವೈಚಾರಿಕ ಸಮಾವೇಶದಲ್ಲಿ ‘ದ್ರಾವಿಡ ಜನಾಂಗ, ಭಾಷೆ ಹಾಗೂ ಸಂಸ್ಕೃತಿ’ ಕುರಿತು ತಜ್ಞರು ವಿಷಯ ಮಂಡಿಸಿದರು.

ಹಿರಿಯ ಸಾಹಿತಿಗಳಾದ ಕಾಳೇಗೌಡ ನಾಗವಾರ ಮಾತನಾಡಿ ಬ್ರಿಟೀಷರು ಭಾರತಕ್ಕೆ ಬಾರದೇ ಹೊಗಿದ್ದರೆ ನಾನು ಯಾರದೊ ಮನೆಯಲ್ಲಿ ಸಗಣಿ ಬಾಚಬೇಕಾಗಿತ್ತು ಎಂದು ಕುವೆಂಪು ಹೇಳಿದ್ದಾರೆ ಅಂದರೆ, ವೈದಿಕರು ಶೂದ್ರರನ್ನು ಆ ಮಟ್ಟಿಗೆ ತುಳಿದು ಹಾಕಿದ್ದರು. ನಮ್ಮನ್ನು ದೇವರೆಂದರೆ ಭಯ ಬೀಳಿಸುವಂತೆ ಮಾಡಿದ್ದಾರೆ. ನಾವು ದೇವರಿಗೆ ಹೆದರುವಂತೆ ಮಾಡಿದ್ದಾರೆ. ನಾವು ವೈಜ್ಞಾನಿಕವಾಗಿ ಯೋಚಿಸಬೇಕಾಗಿದೆ. ವೈದಿಕರೆಲ್ಲರೂ ಹರನನ್ನು ಮುಚ್ಚಿಟ್ಟು ಅವರಿಗೆ ಅನುಕೂಲವಾಗುವ ಹರಿಯನ್ನು ನಮ್ಮ ಮೇಲೆ ಹೇರುತ್ತಿದ್ದಾರೆ. ನಾವು ಈಗಲಾದರೂ ಎಚ್ಚೆತ್ತುಕೊಳ್ಳಬೇಕಾಗಿದೆ ಎಂದರು.


ಡಾ. ವಡ್ಡಗೆರೆ ನಾಗರಾಜಯ್ಯ ಮಾತನಾಡಿ ರಾವಣ ನಮ್ಮವನು ರಾಮನಿಗಿಂತಲೂ ರಾವಣನೇ ಶ್ರೇಷ್ಟ, ಇಂದಿಗೂ ಮಂಡ್ಯ ಜಿಲ್ಲೆ ಸೇರಿದಂತೆ ಹಲವಾರು ಜಿಲ್ಲೆಗಳಲ್ಲಿ ರಾವಣನ ಒಕ್ಕಲುತನವಿದೆ. ರಾವಣನಿಗೆ ಸಂಬಂಧಿಸಿದ ದೇವಾಲಯಗಳಿವೆ. ಅವುಗಳನ್ನೆಲ್ಲಾ, ನಮಗೆ ತಿಳಿಸುತ್ತಿಲ್ಲ. ಚರಿತ್ರೆಯನ್ನು ಓದಿಕೊಂಡಾಗ, ಸಂಶೋಧನೆ ಮಾಡಿದಾಗ ಇವು ದೊರೆಯುತ್ತವೆ. ರಾಕ್ಷಸ ಕುಲ ಎಂಬುದಿಲ್ಲ, ರಾಮ ಮತ್ತು ಕೃಷ್ಣ ದೇವರಲ್ಲ, ದೇವರಾದವನಿಗೆ ಸಾವಿಲ್ಲ. ಇವರಿಬ್ಬರೂ ಅಂತ್ಯ ಕಾಣುತ್ತಾರೆ ಎಂದರೆ ಇವರು ಸಹ ನಮ್ಮಂತೆಯೇ ಮನುಷ್ಯರು. ಪುರಾಣ ಎಂಬುದೇ ವೈದಿಕರಿಗೆ ಅನುಕೂಲವಾಗುವಂತೆ, ಸೃಷ್ಟಿಸಿಕೊಂಡಿರುವ ಕಥೆಯೆ ಪುರಾಣ ಕಥೆ ಎಂದು ಅಭಿಪ್ರಾಯಿಸಿದರು.


ಯಾಚೇನಹಳ್ಳಿಯ ವೈಚಾರಿಕತೆಯ ಸ್ವಾಮಿಜಿಯಾದ ಶ್ರೀ. ನಾದಾನಂದ ನಾಥ ಸ್ವಾಮೀಜಿ ಮಾತನಾಡಿ, ನಮ್ಮ ಬಹುತೇಕ ಶೂದ್ರ ಸ್ವಾಮಿಜಿಗಳು ಮೌಢ್ಯವನ್ನು ಹೇರುವ ಮೂಲಕ ಶೂದ್ರ ಸಂಸ್ಕೃತಿಯನ್ನು ಹಾಳು ಗೆಡವುತಿದ್ದಾರೆ. ಅವರು ಸಹ ವೈದೀಕ ಪರಂಪರೆಯನ್ನು ಮೈಗೂಡಿಸಿಕೊಂಡಿದ್ದಾರೆ. ಪ್ರೊ. ನಂಜುಂಡ ಸ್ವಾಮಿ ಹಾಕಿಕೊಟ್ಟ ದಾರಿಯಲ್ಲಿ ಇಂದಿನ ರೈತ ಸಂಘ ನಡೆಯುತ್ತಿಲ್ಲ. ಅಲ್ಲೂ ಸಹ ರಾಜಕೀಯ ನುಸುಳಿದೆ. ವೈಚಾರಿಕತೆಯನ್ನು ಒಪ್ಪಿಕೊಳ್ಳಬೇಕಾದ ರೈತ ಅರ್ಥಾಥ್ ಒಕ್ಕಲುತನ ಮೂಢನಂಬಿಕೆಗೆ ಒಳಗಾಗಿ ದುಡಿಮೆಯನ್ನು ಕಳೆದುಕೊಳ್ಳುತ್ತಿದ್ದಾನೆ. ಕುವೆಂಪುರವರ ಮಂತ್ರ ಮಾಂಗಲ್ಯ ಸೇರಿದಂತೆ ಅವರ ವಿಚಾರಧಾರೆಗಳನ್ನು ಅಳವಡಿಸಿಕೊಂಡಾಗ ಮಾತ್ರ ರೈತ ನಿಜವಾಗಿಯೂ ದೇಶದ ಬೆನ್ನೆಲುಬಾಗಿಯೇ ಇರುತ್ತಾನೆ ಎಂದು ಉಚ್ಛರಿಸಿದರು. 

  

ಇದೇ ಸಂದರ್ಭದಲ್ಲಿ ಪ್ರೊ. ಶಿವನಂಜಯ್ಯರವರ ವಿದ್ಯಾ ಗುರುಗಳು ಹಾಗೂ ವಿದ್ವಾಂಸರಾದ ಪ್ರೊ.ಸಿ.ಪಿ. ಕೃಷ್ಣ ಕುಮಾರ್ ರವರಿಗೆ ಗುರುವಂದನೆ ಸಲ್ಲಿಸಲಾಯಿತು. ಪ್ರೊ. ಶಿವನಂಜಯ್ಯರವರ ವಿದ್ಯಾರ್ಥಿಗಳು, ಅಭಿಮಾನಿಗಳು ಅವರಿಗೆ ಅಭಿನಂದನೆ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ದ್ರಾವಿಡ ಚಳವಳಿಯ ಅಭಿಗೌಡ, ಗೌಡತಿ ಸಮಾಜದ ಅಧ್ಯಕ್ಷೆ ರೇಣುಕಾ, ಬೋರಯ್ಯ, ಸು.ತ. ರಾಮೇಗೌಡ, ಶಿವನಂಜಯ್ಯ ಅವರ ಪತ್ನಿ ಸರೋಜಾ‌ ಹಾಗೂ ‌ಇತರರು‌ ಇದ್ದರು. ಕೆಂಗಲ್ ವಿನಯ್ ಕುಮಾರ್ ತಂಡ ಕ್ರಾಂತಿಗೀತೆ ಗಳನ್ನು ಹಾಡಿತು.  ಭಾನುಪ್ರಕಾಶ್ ಅತಿಥಿಗಳನ್ನು ಸ್ವಾಗತಿಸಿದರು. ಪ್ರೊ.ಕೆ.ಎಂ. ಮಾಯಿಗೇಗೌಡ ಕಾರ್ಯಕ್ರಮ ನಿರೂಪಣೆ ಮಾಡಿದರು.ಪುಸ್ತಕ ಕುರಿತು ಸಾಹಿತಿ ಹೊಸದೊಡ್ಡಿ ರಮೇಶ್ ಮಾತನಾಡಿದರು.


ಗೋ. ರಾ. ಶ್ರೀನಿವಾಸ

ಮೊ. ನಂ.- 9845856139

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑