Recent news »
-
ಕನ್ನಡದ ಕಟ್ಟಾಳು, ಸಹಕಾರಿ ಧುರೀಣ ಸಿಂ ಲಿಂ ನಾಗರಾಜು ಸ್ಮರಣ ಕಾರ್ಯಕ್ರಮ
ಚನ್ನಪಟ್ಟಣ: ಹಲವಾರು ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ಸಿಂ.ಲಿಂ.ನಾಗರಾಜು ಅವರು ವಯಕ್ತಿಕವಾಗಿ ಹಾಗೂ
ಕೌಟುಂಬಿಕವಾಗಿ ತಮಗೆ ಏನನ್ನೂ ಮಾಡಿಕೊಳ್ಳಲಿಲ್ಲ, ಕೆರೆಯ ನೀರನ್ನು ಕೆರೆಗೆ ಚಲ್ಲಿ ಎಂಬಂತೆ ಎಲ್ಲವನ್ನೂ ಸಮಾಜಕ್ಕೆ ಮಾಡಿದ್ದಾರೆ ಎಂದು ಹಿರಿಯ ಸಹಕಾರಿ ಧುರೀಣ
ಕೆ.ಎಸ್.ಸುಧಾಕರ್ ಅಭಿಪ್ರಾಯಪಟ್ಟರು.
ಪಟ್ಟಣದ ಒಕ್ಕಲಿಗರ ಸಾರ್ವಜನಿಕ ವಿದ್ಯಾರ್ಥಿ ನಿಲಯದ ದೇವಮ್ಮ- ಚಿಕ್ಕಣ್ಣ ಸಭಾಂಗಣದಲ್ಲಿ ಸಿಂ.ಲಿಂ.ನಾಗರಾಜು ಪ್ರತಿಷ್ಠಾನ ಟ್ರಸ್ಟ್ ಹಾಗೂ ಹಲವಾರು ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ "ಸಿಂ.ಲಿಂ.ನಾಗರಾಜು ಪ್ರಥಮ ವರ್ಷದ ಪುಣ್ಯಸ್ಮರಣೆ" ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ತಮಗೆ ಸಿಂ.ಲಿಂ.ನಾಗರಾಜು ಅವರೊಡನೆ ನಾಲ್ಕು ದಶಕಗಳ ಒಡನಾಟವಿದ್ದು,
ನಮ್ಮ ತಂದೆ ದಿ.ಮಾಜಿ ಶಾಸಕ ಕಾಡಹಳ್ಳಿ ಶಿವಲಿಂಗೇಗೌಡರಿಗೂ ಉತ್ತಮ ಒಡನಾಟ ಇತ್ತು. ಜಿಲ್ಲಾ ಸಹಕಾರ ಒಕ್ಕೂಟ, ರಾಮನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ಇಬ್ಬರೂ ಒಡನಾಡಿಗಳಾಗಿ, ಸಹಪಾಠಿಗಳಾಗಿ ಕೆಲಸ ಮಾಡಿದ ಅನುಭವವನ್ನು ಸ್ಮರಿಸಿಕೊಂಡರು.
ಸಿಂ.ಲಿಂ.ನಾಗರಾಜು ಅವರು
ತಮ್ಮ ಐವತ್ತು ವರ್ಷಗಳ
ಸಾರ್ವಜನಿಕ ಜೀವನದಲ್ಲಿ ಸಾಕಷ್ಟು ಗಳಿಕೆ ಮಾಡುವ ಅವಕಾಶ ಇದ್ದಾಗ್ಯೂ ಸ್ವಾರ್ಥಕ್ಕಾಗಿ ಎಂದೂ ಹಪಾಹಪಿಸದೇ, ಹೋರಾಟ, ಸಹಕಾರ, ಸಮಾಜ ಸೇವೆಗಾಗಿಯೇ ತಮ್ಮ ಜೀವನವನ್ನು ಮುಡುಪಾಗಿಟ್ಟಿದ್ದರು ಎಂದು ಸ್ಮರಿಸಿದರು.
ಶಿಕ್ಷಕ ಬಂಧು, ಶಿಕ್ಷಣ ಪ್ರೇಮಿ ಜಾಲಮಂಗಲ ನಾಗರಾಜು ಮಾತನಾಡಿ, ಸಿಂ.ಲಿಂ. ನಾಗರಾಜು ಅವರೊಡನೆ ತಮಗಿದ್ದ ಒಡನಾಟದ ಜೊತೆಗೆ, ಶಿಕ್ಷಣ, ಸಾಹಿತ್ಯದ ಪ್ರೇಮಿಯಾಗಿ ಸಿಂ.ಲಿಂ.ಅವರು ಸಲ್ಲಿಸಿರುವ ಸೇವೆಯನ್ನು ಸ್ಮರಿಸಿದರು.
ಜಿಲ್ಲಾ ಲೇಖಕರ ವೇದಿಕೆ ಅಧ್ಯಕ್ಷ ಕೂ.ಗಿ.ಗಿರಿಯಪ್ಪ, ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಚ್.ಎಸ್.ಚಂದ್ರಶೇಖರ್,
ಪಿಎಲ್ ಡಿ ಬ್ಯಾಂಕ್ ನಿರ್ದೇಶಕ ಇಗ್ಗಲೂರು ಡಿಎಂಕೆ ಕುಮಾರ್, ನಿವೃತ್ತ ಶಿಕ್ಷಕರಾದ ವಸಂತ ಕುಮಾರ್, ಟಿ.ಆರ್.ರಂಗಸ್ವಾಮಿ, ಪಿ.ಗುರುಮಾದಯ್ಯ, ಯುವ ಮುಖಂಡ ಮುದಗೆರೆ ಜಯಕುಮಾರ್ ಮುಂತಾದವರು ಸಿಂ.ಲಿಂ.ನಾಗರಾಜು ಅವರ ಸೇವೆ ಹಾಗೂ ಒಡನಾಟವನ್ನು ಮೆಲುಕು ಹಾಕಿದರು.
ಸಿಂ.ಲಿಂ.ನಾಗರಾಜು ಪ್ರತಿಷ್ಠಾನ ಟ್ರಸ್ಟ್ ಅಧ್ಯಕ್ಷ ನಾಗವಾರ ಶಂಭೂಗೌಡ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಗಾಯಕರಾದ
ದೊಡ್ಡಮಳೂರು ಮಹದೇವಸ್ವಾಮಿ, ಚಕ್ಕೆರೆ ಸಿದ್ದರಾಜು, ವಿಜೇಂದ್ರ ಅನೇಕ ಗಾಯಕರು ಗೀತಾಗಾಯನ ನಡೆಸಿಕೊಟ್ಟರು.
ತಾಲ್ಲೂಕು ಸರ್ಕಾರಿ ಪ್ರೌಢಶಾಲೆ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ಎಸ್.ರಾಮಣ್ಣ, ಸಿಂ.ಲಿಂ.ನಾಗರಾಜು ಪ್ರತಿಷ್ಠಾನ ಟ್ರಸ್ಟ್ ನ ಎಲ್ಲಾ ಪದಾಧಿಕಾರಿಗಳು, ಬಿಸಿಯೂಟ ಕಾರ್ಯಕರ್ತೆಯರ ಸಂಘದ ಪದಾಧಿಕಾರಿಗಳು,
ಸಿಂ.ಲಿಂ.ಒಡನಾಡಿಗಳು, ಕನ್ನಡ ಹೋರಾಟಗಾರರು, ಸಾಹಿತ್ಯ ಪ್ರೇಮಿಗಳು, ಸಹಕಾರಿ ಧುರೀಣರು, ರಂಗಭೂಮಿ ಕಲಾವಿದರು, ಕನ್ನಡ ಪರ, ಮಹಿಳಾಪರ, ರೈತಪರ, ಪ್ರಗತಿಪರ, ದಲಿತ ಪರ ಹೀಗೆ ನಾನಾ ಸ್ತರದ ಸಂಘಟನೆಗಳ ಪದಾಧಿಕಾರಿಗಳು, ಸಾರ್ವಜನಿಕರು ಭಾಗವಹಿಸಿದ್ದರು.
ಗೋ ರಾ ಶ್ರೀನಿವಾಸ...
ಮೊ:9845856139.
-
ಸರ್ವಸಮ್ಮೇಳನಕ್ಕೂ ಮಾದರಿಯಾಗಿ ಯಶಸ್ವಿಯಾದ \'ಪರಿಸರಕ್ಕಾಗಿ ನಾವು\' ಸಮ್ಮೇಳನ
ಹಾಸನ: ಪ್ರಾಕೃತಿಕ ಸೌಂದರ್ಯವು ಇ-ತ್ಯಾಜ್ಯ, ಕೆಲ ತಂತ್ರಜ್ಞಾನ ಹಾಗೂ ಪ್ಲಾಸ್ಟಿಕ್ ನಿಂದ ಹಾಳಾಗುತ್ತಿದೆ. ಪರಿಸರ ನಾಶಕ್ಕೆ ಮುನ್ನುಡಿ ಬರೆದವನೇ ಮಾನವ, ಜಗತ್ತಿನ ಎಲ್ಲಾ ಪ್ರಾಣಿಪಕ್ಷಿಗಳು, ಜಲಚರಗಳಿಂದ ರಕ್ಷಿಸಲ್ಪಡುವ ಪರಿಸರಕ್ಕೆ ಮಾನವ ಮಾರಕವಾಗುತ್ತಿದ್ದಾನೆ. ಈಗಲೂ ಪರಿಸರ ಉಳಿಸುವ ನಿಟ್ಟಿನಲ್ಲಿ ನಾವು ಮುಂದಡಿ ಇಡಲಿಲ್ಲವಾದರೆ ನಮ್ಮ ನಡುವೆ ಅಥವಾ ಮುಂದಿನ ಪೀಳಿಗೆಯ ಮಂದಿ ಭೂಮಿಯ ಮೇಲೆಯೇ ನರಕ ಅನುಭವಿಸಬೇಕಾಗುತ್ತದೆ ಎಂಬ ನಿಟ್ಟಿನಲ್ಲಿ ಸಮಾನ ಮನಸ್ಕ ಸಂಘಟಕರ ಆಸಕ್ತಿಯಿಂದ ರಾಜ್ಯಾದ್ಯಂತ ಇರುವ ಪರಿಸರ ಪರಿಚಾರಕರನ್ನು ಒಗ್ಗೂಡಿಸಿ ಹಾಸನ ದಲ್ಲಿ ಭಾನುವಾರ ಪರಿಸರ ಕಾರ್ಯಕರ್ತರ ರಾಜ್ಯಮಟ್ಟದ ದುಂಡು ಮೇಜಿನ ಸಭೆ ನಡೆಯಿತು.
ಸಮ್ಮೇಳನದಲ್ಲಿ ಹಲವಾರು ತಜ್ಞರು ಮಾತನಾಡಿ, ಪರಿಸರದ ಬಗ್ಗೆ ಮಕ್ಕಳಿಗೆ ಬಾಲ್ಯದಿಂದಲೇ ಅರಿವು ಮೂಡಿಸಬೇಕು. ಅದಕ್ಕಾಗಿ ಪ್ರತಿ ರಾಜ್ಯ ಸರ್ಕಾರವು ಎಲ್ಲಾ ತರಗತಿಗಳಲ್ಲಿ ವಯಸ್ಸಿನನುಗುಣವಾಗಿ ಪಠ್ಯರಚನೆ ಮಾಡಬೇಕು, ಯಾವುದೇ ವಸ್ತುಗಳನ್ನು ಭೂಮಿಯ ಮೇಲೆ ಸುಡುವ ಕೆಲಸ ನಿಲ್ಲಿಸಬೇಕು. ವೈಜ್ಞಾನಿಕವಾಗಿ ತ್ಯಾಜ್ಯ ನಿರ್ವಹಣೆ ಮಾಡಬೇಕು, ಪ್ಲಾಸ್ಟಿಕ್ ನ್ನು ಸಂಪೂರ್ಣವಾಗಿ ನಿಷೇಧ ಮಾಡಬೇಕು, ಸದುಪಯೋಗಿಯಾದ ಯಾವುದೇ ವಸ್ತುವನ್ನು ಪರಿಸರದಲ್ಲಿ ವಿಲೀನವಾಗುವಂತೆ ಉತ್ಪಾದಿಸಬೇಕು. ಕಾರ್ಖಾನೆಗಳು ಹೊರಸೂಸುವ ಹೊಗೆ, ಕೆಮಿಕಲ್ ಮಿಶ್ರಿತ ನೀರಿಗೆ ವೈಜ್ಞಾನಿಕ ಪರಿಹಾರ ಕಂಡುಕೊಳ್ಳಬೇಕು. ಪ್ರಾಕೃತಿಕ ಸೌಂದರ್ಯ ಕ್ಕೆ ಯಾವುದೇ ಧಕ್ಕೆ ತರದಂತೆ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು. ಹೂತು ಹೋಗಿರುವ ಹಾಗೂ ಒತ್ತುವರಿಯಾಗಿರುವ ಕಲ್ಯಾಣಿಗಳು, ಕೆರೆಕಟ್ಟೆಗಳನ್ನು ಪುನಶ್ಚೇತನ ಮಾಡಬೇಕು. ಚರಂಡಿಗಳು, ಯುಜಿಡಿ ನಿರ್ವಹಣೆ ಇಲ್ಲದಿರುವುದರಿಂದ ನದಿಗೆ ನೇರವಾಗಿ ಕೊಳಚೆ ನೀರು ಬಿಡುವುದನ್ನು ನಿಲ್ಲಿಸಬೇಕು.
ಅಂತರ್ಜಲ ಉಪಯೋಗಕ್ಕೆ ಕಡಿವಾಣ ಹಾಕಬೇಕು, ರಾಸಾಯನಿಕ ಬಳಸದೇ ಸಾವಯವ ಗೊಬ್ಬರ ಬಳಕೆ ಮಾಡಬೇಕು, ಮರಗಿಡಗಳನ್ನು ಉಳಿಸುವ ಜೊತೆಗೆ ಕೆರೆ, ಕಟ್ಟೆ, ನದಿಗಳ ಸ್ವಚ್ಚತೆ ಮಾಡಬೇಕು, ಸಸ್ತನಿಗಳು, ಜಲಚರಗಳು, ಪ್ರಾಣಿ-ಪಕ್ಷಿಗಳನ್ನು ಉಳಿಸುವ ನಿಟ್ಟಿನಲ್ಲಿ ಹೋರಾಡಬೇಕು. ಈಗಾಗಲೇ ನಶಿಸಿ ಹೋಗುತ್ತಿರುವ ಜೀವ ಸಂಕುಲಗಳನ್ನು ಉಳಿಸಲು ಪಣ ತೊಡಬೇಕು. ಮೋಜು ಮಸ್ತಿಗಾಗಿ ಹೋಗುವವರು ಪ್ರಕೃತಿಗೆ ದ್ರೋಹ ಎಸಗುತ್ತಿದ್ದು, ಅವರಿಗೆ ಅರಿವು ಮೂಡಿಸಬೇಕು. ಶಿಕ್ಷಣ ಕೊಡುವ ಶಿಕ್ಷಕರು, ರಾಜಕಾರಣಿಗಳು ಮತ್ತು ಧರ್ಮಗುರುಗಳು ಅವರ ಕೆಲಸವನ್ನು ಮಾಡುತ್ತಲೇ ಇಲ್ಲ. ಅದಕ್ಕೆಲ್ಲಾ ನಾವೇ ಮುನ್ನುಗ್ಗುವ ಮೂಲಕ ಪರಿಸರ ರಕ್ಷಿಸುವ ಕೆಲಸ ಮಾಡಬೇಕು. ನಾವು ಮನುಷ್ಯತ್ವದ ಬಗ್ಗೆ ಮಾತನಾಡುವ ಬದಲು ಮಣ್ಣತ್ವದ ಬಗ್ಗೆ ಮಾತನಾಡುವುದನ್ನು ಕಲಿಯಬೇಕು. ಬರ ಪೀಡಿತದಿಂದ ರೈತರು ಆತ್ಮಹತ್ಯೆ ಮಾಡಿಕೊಳ್ಳುವುದನ್ನು ತಡೆಯಲು ವೈಜ್ಞಾನಿಕ ಕಾರಣಗಳನ್ನು ಹುಡುಕಬೇಕು. ವಯಕ್ತಿಕ ತೊಂದರೆಯಾದರೆ ಪೋಲಿಸ್ ಠಾಣೆಗೆ ಹೋಗುತ್ತೇವೆ. ಅದೇ ಪ್ರಕೃತಿಗೆ ತೊಂದರೆಯಾದರೆ ಯಾರೂ ದೂರುವುದಿಲ್ಲ. ನದಿಗಳಿಂದ ಮರಳನ್ನೆತ್ತಿ ಒಡಲು ಬರಿದು ಮಾಡಿ, ಗಣಿಗಾರಿಕೆ ಮೂಲಕ ಎಂಸ್ಯಾಂಡ್ ರೂಪದಲ್ಲಿ ನೀಡುವ ಮೂಲಕ ಪ್ರಕೃತಿ ಮೇಲೆ ಅತ್ಯಾಚಾರ ಎಸಗಲಾಗುತ್ತಿದೆ. ಸಂಬಂಧಿಸಿದ ಇಲಾಖೆಗಳು ಕಣ್ಮುಚ್ಚಿಕೊಳ್ಳುತ್ತಿವೆ.
ಗಣಿಗಾರಿಕೆಯಿಂದ ನದಿಗಳು ಬತ್ತಿ ಹೋಗುತ್ತಿವೆ, ಯಾವುದೇ ಅಭಿವೃದ್ಧಿ ಮಾಡಲು ಯೋಜನೆ ರೂಪಿಸುವ ಸರ್ಕಾರಗಳೇ ಪರಿಸರ ವಿರೋಧಿಯಾಗಿದೆ, ಆ ಯೋಜನೆಗಳೆಲ್ಲಾ ಕೇವಲ ಕಮಿಷನ್ ಅರ್ಥಾತ್ ರಿಯಲ್ ಎಸ್ಟೇಟ್ ಯೋಜನೆಗಳಾಗಿವೆ. ಮಳೆಯ ನೀರನ್ನು ಬಳಸುವ ಸುಧೀರ್ಘ ಯೋಜನೆ ಜಾರಿಗೆ ಬರಬೇಕು. ಕೃಷಿಯನ್ನೇ ಅವಲಂಬಿಸಿರುವ ಕುಟುಂಬಗಳಿಂದ ಅಭಿವೃದ್ಧಿ ಹೆಸರಿನಲ್ಲಿ ಸರ್ಕಾರ ಭೂಮಿ ಕಿತ್ತುಕೊಳ್ಳುವುದನ್ನು ಬಿಡಬೇಕು. ಬೆಟ್ಟದಲ್ಲಿರುವ ದೇವಾಲಯಗಳಿಗೆ ಹೋಗುವ ಭಕ್ತರು ಪೂಜಾ ಸಾಮಾಗ್ರಿಗಳನ್ನು ಪ್ಲಾಸ್ಟಿಕ್ ಕವರುಗಳಲ್ಲಿ ತೆಗೆದುಕೊಂಡು ಹೋಗುವುದನ್ನು ನಿಷಿದ್ಧ ಮಾಡಬೇಕು. ದೊಡ್ಡ ಯೋಜನೆಗಳನ್ನು ಕೈಬಿಟ್ಟು ಸಣ್ಣಸಣ್ಣ ಯೋಜನೆಗಳಿಗೆ ಒತ್ತು ನೀಡಬೇಕು. ಹವಾಮಾನ ತಾಪಮಾನ ವೈಪರೀತ್ಯಗಳ ಬಗ್ಗೆ ಎಚ್ಚರಿಕೆ ವಹಿಸಬೇಕು. ತೋರ್ಪಡಿಕೆ ಮಾಡದೆ, ಸರಳ ಜೀವನ ಮಾಡಬೇಕು, ಗುಡಿಕೈಗಾರಿಕೆಗಳಿಗೆ ಆದ್ಯತೆ ನೀಡಬೇಕು. ಸರ್ಕಾರದ ಅವೈಜ್ಞಾನಿಕ ಯೋಜನೆಗಳ ಬಗ್ಗೆ ಪ್ರಶ್ನಿಸುವಂತಾಗಬೇಕು. ಕಾವೇರಿ ಸೇರಿದಂತೆ ಹಲವಾರು ನದಿಗಳು ಕುಡಿಯಲಿರಲಿ ವ್ಯವಸಾಯಕ್ಕೂ ಸೂಕ್ತವಲ್ಲಾ ಎನ್ನುವ ವರದಿ ನಮ್ಮ ಮುಂದಿದೆ ಎಂಬಂತಹ ಹಲವಾರು ಅಭಿಪ್ರಾಯಗಳನ್ನು ಹಂಚಿಕೊಳ್ಳಲಾಯಿತು.
ಸಮ್ಮೇಳನ ಎಂದರೆ ಮೊದಲಿಗೆ ಬರುವುದೇ ಸಾಹಿತ್ಯ ಸಮ್ಮೇಳನ, ಅಂತೆಯೇ ಸರ್ಕಾರ ಹಾಗೂ ಖಾಸಗಿಯಾಗಿಯೂ ಹಲವಾರು ಸಮ್ಮೇಳನಗಳು ನಡೆಯುತ್ತವೆ. ಶೇಕಡಾವಾರು ಯಾವುದೇ ಸಮ್ಮೇಳನಗಳು ಸರಿಯಾದ ಸಮಯಕ್ಕಾಗಲಿ, ಅಚ್ಚುಕಟ್ಟಿನಿಂದಾಗಲಿ, ಮಿತಿಯಾದ ಭಾಷಣದಲ್ಲಾಗಲಿ, ಸ್ಪಷ್ಟ ವಿಷಯಾಧಾರಿತವಾಗಲಿ, ಬಹಳ ಮುಖ್ಯವಾಗಿ ಗದ್ದಲವಿಲ್ಲದೆ ನಡೆದ ಸಮ್ಮೇಳನಗಳೇ ಇಲ್ಲಾ ಎನ್ನಬಹುದು. ಆದರೆ ಭಾನುವಾರ ನಡೆದ ಈ ದುಂಡು ಮೇಜಿನ 'ಪರಿಸರಕ್ಕಾಗಿ ನಾವು' ಎಂಬ ಸಮ್ಮೇಳನವು ಎಲ್ಲಾ ಸಮ್ಮೇಳನಕ್ಕೂ ಸಡ್ಡು ಹೊಡೆಯಿತು ಎನ್ನಲಡ್ಡಿಯಿಲ್ಲ.
ದೂರದ ಜಿಲ್ಲೆಗಳಿಂದ ಹಿಂದಿನ ದಿನವೇ ಬಂದ ಪರಿಚಾರಕರಿಗೆ ಸ್ಥಳೀಯರೇ ತಂತಮ್ಮ ಮನೆಯಲ್ಲಿ ಹಾಗೂ ಹೋಟೆಲ್ ಗಳಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಿದ್ದು ವಿಶೇಷವಾಗಿತ್ತು. ಬೆಳಿಗ್ಗೆ ೦೯:೩೦ ಕ್ಕೆ ಸರಿಯಾಗಿ ನೋಂದಣಿ ಮತ್ತು ಕುಶಲೋಪರಿ ಆರಂಭವಾಯಿತು. ೧೦:೩೦ ಕ್ಕೆ ಸಭೆ ಕಾರ್ಯರಾಂಭ, ಪರಿಸರ ಕುರಿತ ಗೀತೆ, ಚುಟುಕು ಸ್ವಾಗತ, ಸಭೆಗೆ ಸೇರಿದ್ದ ಎರಡು ನೂರಕ್ಕೂ ಹೆಚ್ಚು ಮಂದಿ ಎರಡೇ ಮಾತಿನಲ್ಲಿ ಪರಿಚಯ, ಬಹುತೇಕ ಜಿಲ್ಲೆಗೊಬ್ಬರಂತೆ ಕೇವಲ ಎರಡರಿಂದ ಮೂರು ನಿಮಿಷಗಳಲ್ಲಿ ಅವರವರ ಜಿಲ್ಲೆಗೆ ಸಂಬಂಧಿಸಿದ ಪರಿಸರ ಕುರಿತು ಭಾಷಣ, ಪ್ರತಿಜ್ಞಾವಿಧಿ ಸ್ವೀಕಾರ, ವಂದನಾರ್ಪಣೆ, ಮಧ್ಯಾಹ್ನ ೦೧:೩೦ ಕ್ಕೆ ಸಭೆ ಮುಕ್ತಾಯ.
ಪರಿಸರ ಪರಿಚಾರಕರೇ ಸ್ವಯಂ ಸೇವಕರಾಗಿ ಮಾಡಿದ ತಿಂಡಿ ಹಾಗೂ ಮಧ್ಯಾಹ್ನ ದ ಊಟ ಸವಿದ ನಂತರ ಪರಿಸರ ಉಳಿಸುವ ಕುರಿತು ಚರ್ಚಾರಂಭ, ತಜ್ಞರಿಂದ ವಿಷಯ ಮಂಡನೆ. ಸರ್ವರಿಗೂ ಸಮನವಕಾಶ, ಯಾರೂ ಮೇಲಲ್ಲಾ ಕೀಳಲ್ಲಾ, ವಿಶೇಷವಾಗಿ ಪರಿಸರ ಉಳಿಸುವ ನಿಟ್ಟಿನಲ್ಲಿ ಎಲ್ಲರ ಪಾಲು ಅಗ್ರಗಣ್ಯ ಎಂಬ ಸಂದೇಶ ನೀಡುವುದು ದುಂಡು ಮೇಜಿನ ಸಭೆಯ ಉದ್ದೇಶವಾಗಿತ್ತು. ತಂತಮ್ಮ ಮನೆಯ ಆವರಣ, ಗ್ರಾಮ, ರಸ್ತೆ, ಪಂಚಾಯುತಿ, ಹೋಬಳಿ, ತಾಲ್ಲೂಕು, ಜಿಲ್ಲಾ ಹಾಗೂ ರಾಜ್ಯ ಮಟ್ಟದಲ್ಲಿ ಪರಿಸರ ಕುರಿತು ಜಾಗೃತಿ, ಸ್ವಯಂ ಸ್ವಚ್ಚತೆ, ಪ್ಲಾಸ್ಟಿಕ್ ಮತ್ತು ಇ-ತ್ಯಾಜ್ಯ ತಡೆಗಟ್ಟುವಿಕೆ ಬಗ್ಗೆ ವಿಸ್ತಾರವಾದ ಚರ್ಚೆ ನಡೆದವು. ಪ್ರತಿಯೊಬ್ಬರೂ ಪ್ಲಾಸ್ಟಿಕ್ ಬಳಕೆಯನ್ನು ಈ ಕ್ಷಣದಿಂದಲೇ ಬಳಸುವುದನ್ನು ಬಿಡಬೇಕು. ಪ್ರತಿಯೊಬ್ಬರೂ ವರ್ಷಕ್ಕೊಂದರಿಂದ ಹನ್ನೆರಡು ಗಿಡಗಳನ್ನು ನೆಟ್ಟು ಪೋಷಿಸುವ ಹೊಣೆ ಹೊರಬೇಕು ಎಂಬುದು ಧ್ಯೇಯ ವಾಕ್ಯವಾಯಿತು.
ಸಮ್ಮೇಳನದಲ್ಲಿ ರಾಜ್ಯದ ಹತ್ತಾರು ಜಿಲ್ಲೆಗಳಿಂದ ಆಗಮಿಸಿದ ಹಾಲಿ, ನಿವೃತ್ತ, ಪ್ರಾಧ್ಯಾಪಕರುಗಳು, ವೈದ್ಯರು, ಶಿಕ್ಷಕರು, ವಕೀಲರು, ಭೂಮಿ, ನೀರು ಸೇರಿದಂತೆ ಪಂಚಭೂತಗಳ ಬಗ್ಗೆ ಅರಿವು ಇರುವ ಜ್ಞಾನಿಗಳು, ಕೃಷಿಕರು, ಸಾವಯವ ಕೃಷಿಯಲ್ಲಿ ತೊಡಗಿಸಿಕೊಂಡಿರುವ ರೈತರು, ನಾಟಿ ವೈದ್ಯರು, ಆಯುರ್ವೇದ ತಜ್ಞರು ಸೇರಿದಂತೆ ವಿವಿಧ ಸ್ತರದ ಜ್ಞಾನಿಗಳು ಭಾಗವಹಿಸಿ ವಿಷಯ ಮಂಡಿಸಿದ್ದು ವಿಶೇಷವಾಗಿತ್ತು. ಕಾರ್ಯಕ್ರಮದ ಹೊಣೆಯನ್ನು ಹಾಸನ ದ ಹಸಿರು ಭೂಮಿ ಪ್ರತಿಷ್ಠಾನ ಹೊತ್ತುಕೊಂಡು ನಿರ್ವಹಿಸಿದರು.
ರಾಜ್ಯಮಟ್ಟದ ತಾತ್ಕಾಲಿಕ ಸಂಚಾಲನ ಸಮಿತಿಯನ್ನು ರಚಿಸಲು ಪ್ರತಿ ಜಿಲ್ಲೆಯಲ್ಲಿ ಓರ್ವ ಪುರುಷ ಮತ್ತು ಮಹಿಳೆಯ ಹೆಸರನ್ನು ಸೂಚಿಸುವಂತೆ ತಿಳಿಸಲಾಗಿತ್ತು. ಸಮಯ ಕಡಿಮೆ ಇದ್ದ ಕಾರಣ ಸೂಚಿಸಲು ಸಾಧ್ಯವಾಗಿರಲಿಲ್ಲ. ಹಾಗಾಗಿ ಆದಷ್ಟು ಶೀಘ್ರವಾಗಿ ಆಯಾಯ ಜಿಲ್ಲೆಯ ಸದಸ್ಯರು ಸಭೆ ನಡೆಸಿ ರಾಜ್ಯ ಮಟ್ಟದ ಸಮಿತಿಗೆ ಇಬ್ಬರ ಹೆಸರನ್ನು ಸೂಚಿಸುವಂತೆ ತಿಳಿಸಲಾಯಿತು.
ಇಂತಹ ಅಚ್ಚುಕಟ್ಟಾದ, ನಿಗದಿತ ಸಮಯ ಹಾಗೂ ವಿಷಯ ಕುರಿತ ಸಮ್ಮೇಳನ ರಾಜ್ಯವಷ್ಟೇ ಅಲ್ಲಾ, ದೇಶದಲ್ಲೇ ಮೊದಲು ಎಂಬುದರಲ್ಲಿ ಎರಡು ಮಾತಿಲ್ಲ. ಸರ್ವಸಮ್ಮೇಳನಕ್ಕೂ ಮಾದರಿಯಾದದ್ದು 'ಪರಿಸರಕ್ಕಾಗಿ ನಾವು' ಸಮ್ಮೇಳನ.
ಗೋ ರಾ ಶ್ರೀನಿವಾಸ...
ಮೊ:9845856139.
-
ಅಬಿದಾಬಾನು ಸದಸ್ಯತ್ವವನ್ನು ರದ್ದುಗೊಳಿಸಲು ಜಿಲ್ಲಾಧಿಕಾರಿಗಳಿಗೆ ಆಗ್ರಹಿಸುತ್ತೇನೆ, ವಾಸೀಲ್ ಅಲಿಖಾನ್
ಚನ್ನಪಟ್ಟಣ: ಸಭೆ ಮುಗಿಸಿ ಹೊರಬಂದಾಗ ನನ್ನ ಮೇಲೆ ನಗರಸಭೆ ಆವರಣದಲ್ಲೇ ಹಲ್ಲೆ ನಡೆಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ 28ನೇ ವಾರ್ಡ್ ನಗರಸಭೆ ಸದಸ್ಯೆ ಅಬಿದಾ ಬಾನು ಅವರ ಸದಸ್ಯತ್ವವನ್ನು ಜಿಲ್ಲಾಧಿಕಾರಿಗಳು ರದ್ದುಪಡಿಸಬೇಕು ಎಂದು ನಗರಸಭೆ ಕಾಂಗ್ರೆಸ್ ಸದಸ್ಯ ವಾಸೀಲ್ ಅಲಿಖಾನ್ ಆಗ್ರಹಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರಸಭೆ ಸಾಮಾನ್ಯ ಸಭೆಯ ಅಜೆಂಡಾದಲ್ಲಿ ಪ್ರಸ್ತಾಪವಾದ ವಿಚಾರಕ್ಕೆ ಸಂಬಂಧಿಸಿದಂತೆ 28ನೇ ವಾರ್ಡ್ ಸದಸ್ಯೆ ಅಬಿದಾ ಬಾನು ಮಗ ಸುಹೇಲ್ ನನ್ನ ಮೇಲೆ ಹಲ್ಲೆ ನಡೆಸಿದ್ದಾನೆ. ಈ ಪ್ರಕರಣದ ವಿಡಿಯೋ ಸೇರಿದಂತೆ ಎಲ್ಲ ದಾಖಲೆಗಳನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಿದ್ದು, ಜನಪ್ರತಿನಿಧಿಗೆ ಅಪಮಾನ ಮಾಡಿರುವ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ಅವರ ಸದಸ್ಯತ್ವವನ್ನು ರದ್ದುಪಡಿಸಬೇಕು ಎಂದು ಒತ್ತಾಯಿಸಿದರು.
ರಾಜೀನಾಮೆಗೆ ನಿರ್ಧರಿಸಿದ್ದೆ: ಮೊನ್ನೆ ನಗರಸಭೆ ಆವರಣದಲ್ಲಿ ನಡೆದ ಘಟನೆ ನನ್ನನ್ನು ತೀವ್ರವಾಗಿ ಘಾಸಿಗೊಳಿಸಿದ್ದು, ಇದರಿಂದ ಮನನೊಂದ ನನ್ನ ನಗರಸಭೆ ಸದಸ್ಯತ್ವಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದೆ. ಆದರೆ, ಇತರೆ ನಗರಸಭೆ ಸದಸ್ಯರು, ಹಿತೈಷಿಗಳ ಒತ್ತಾಯದ ಮೇರೆಗೆ ನನ್ನ ನಿರ್ಧಾರವನ್ನು ಹಿಂಪಡೆದೆ ಎಂದು ತಿಳಿಸಿದರು.
ನಗರಸಭೆಗೆ ಆಯ್ಕೆಯಾದ ಮಹಿಳಾ ಸದಸ್ಯರ ಕುಟಂಬದವರು ಹಸ್ತಕ್ಷೇಪ ನಡೆಸುತ್ತಾ, ಅಧಿಕಾರ ನಡೆಸುತ್ತಿರುವ ವಿಚಾರವನ್ನು ನಾನು ಸಾಮಾನ್ಯ ಸಭೆಯಲ್ಲಿ ಪ್ರಸ್ತಾಪಿಸಿದೆ. ಆಗ ಮಹಿಳಾ ಸದಸ್ಯರು ನಮ್ಮ ಅಧಿಕಾರ ನಾವು ಚಲಾಯಿಸುತ್ತಿದ್ದೇವೆ. ಯಾರು ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂಬುದನ್ನು ತಿಳಿಸಿ ಎಂದು ಒತ್ತಾಯಿಸಿದರು. ಆಗ ನಾನು ಅನಿವಾರ್ಯವಾಗಿ 28ನೇ ವಾರ್ಡ್ ಸದಸ್ಯೆ ಅಬಿದಾ ಬಾನು ಹೆಸರು ಹೇಳಬೇಕಾಯಿತು. ಇದನ್ನು ಅವರು ವಿರೋಧಿಸಿ ಅಲ್ಲೇ ಮಾತಿನ ಚಕಮುಕಿ ನಡೆಯಿತು.
ಆದರೆ ಸಭೆ ಮುಗಿಸಿ ಹೊರಬಂದ ಮೇಲೆ ಅವರ ಮಗ ಸುಹೇಲ್ ಕೆಲವು ರೌಡಿಗಳನ್ನು ಜತೆಗೆ ಕರೆದುಕೊಂಡು ಬಂದ ನಗರಸಭೆ ಆವರಣದಲ್ಲೇ ಅವಾಚ್ಯ ಪದಗಳನ್ನು ಬಳಸಿ ನಿಂದಿಸಿ, ನನ್ನ ಮೇಲೆ ಹಲ್ಲೆ ನಡೆಸಿದ್ದಾನೆ. ಈ ಸಂಬಂಧ ನಾನು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ ನಂತರ ಅವರ ತಾಯಿ ಸಹ ನನ್ನ ಮೇಲೆ ಸುಳ್ಳು ದೂರು ದಾಖಲಿಸಿದ್ದಾರೆ ಎಂದು ವಿವರಿಸಿದರು.
ಸುಹೇಲ್ ಬೆಳಗ್ಗೆಯಿಂದ ಸಂಜೆಯವರೆಗೆ ನಗರಸಭೆಯಲ್ಲೇ ಆವರಣದಲ್ಲೇ ಇದ್ದು, ಎಲ್ಲ ನಿಯಂತ್ರಣ ಮಾಡಲು ನೋಡುತ್ತಾನೆ. ಅಧಿಕಾರಿಗಳನ್ನು ಬ್ಲಾಕ್ ಮೇಲೆ ಮಾಡುತ್ತಾನೆ. ಅಧಿಕಾರಿಗಳ ಯಾವ ವೀಕ್ನೆಸ್ ಅವನ ಬಳಿ ಇದೆಯೋ ಗೊತ್ತಿಲ್ಲ ಅಧಿಕಾರಿಗಳು ಸಹ ಅವನಿಗೆ ಹೆದರುತ್ತಾರೆ ಎಂದರು.
ಕಳೆದ ಎರಡು ದಶಕಗಳಿಂದ ನಗರಸಭೆಗೆ ಮೂರು ಬಾರಿ ಆಯ್ಕೆಯಾಗಿ ಸೇವೆ ಸಲ್ಲಿಸಿದ್ದೇನೆ. ಎಂದೂ ಈ ರೀತಿಯ ಕಹಿ ಅನುಭವವಾಗಿರಲಿಲ್ಲ. ಮೊನ್ನೆ ನಡೆದ ಘಟನೆ ಸಾಕಷ್ಟು ಬೇಸರ ಮೂಡಿಸಿದ್ದು, ಇಂಥವರ ಜತೆ ರಾಜಕೀಯ ಮಾಡಬೇಕೆ ಎಂಬ ಜಿಜ್ಞಾಸೆ ಮೂಡಿಸಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಪಕ್ಷಕ್ಕಾಗಿ ಅಷ್ಟು ಸೇವೆ ಸಲ್ಲಿಸಿದರು ಪಕ್ಷ ಈ ವಿಚಾರದಲ್ಲಿ ಸರಿಯಾಗಿ ಸ್ಪಂದಿಸಲಿಲ್ಲ. ರಾಜ್ಯದಲ್ಲಿ ನಮ್ಮದೇ ಸರ್ಕಾರವಿದ್ದರೂ ಸಹ ನನಗೆ ಸರಿಯಾದ ಸಹಕಾರ ಸಿಗಲಿಲ್ಲ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಇಲ್ಲಸಲ್ಲದ ಪ್ರಕರಣ ದಾಖಲಿಸುವ ಕೆಲಸ ಮಾಡಿದರು. ಆದರೆ, ನಡೆದಿರುವ ಪ್ರಕರಣಕ್ಕೆ ನನ್ನ ಪರ ನನಗೆ ಬೆಂಬಲ ಸಿಗಲಿಲ್ಲ. ಮಹಿಳಾ ಸದಸ್ಯರ ಹಕ್ಕುಗಳನ್ನು ಪ್ರತಿಪಾದಿಸಿದ್ದೇ ತಪ್ಪಾಯಿತೆ ಎಂದು ಪ್ರಶ್ನಿಸಿದರು.
ಈ ಸಂದರ್ಭದಲ್ಲಿ ನಗರಸಭೆ ಸದಸ್ಯರಾದ ಮಥೀನ್, ಲಿಯಾಖತ್, ಮುಖಂಡರಾದ ಶಾಬಿರ್, ತೌಸಿಫ್, ಲೋಕೇಶ್ ಉಪಸ್ಥಿತರಿದ್ದರು.
ಗೋ ರಾ ಶ್ರೀನಿವಾಸ...
ಮೊ:9845856139.