Recent news »
-
ತಾಲ್ಲೂಕಿನ ಆಡಳಿತ ಸ್ತಂಭಗಳಾದ ನಾಲ್ಕು ಅಧಿಕಾರಿಗಳ ವರ್ಗಾವಣೆ
ನಗರದ ನಗರಸಭೆ ಕಛೇರಿಯಲ್ಲೇ ಎಸಿಬಿ ದಾಳಿಗೊಳಗಾಗಿದ್ದ ಕಳಂಕಿತ ಸಿ ಪುಟ್ಟಸ್ವಾಮಿ ಮತ್ತೆ ನಗರಸಭೆ ಪೌರಾಯುಕ್ತರಾಗಿ ನೇಮಕಗೊಂಡರೆ, ವರ್ಗಾವಣೆಗೊಂಡರೂ ಕುರ್ಚಿಗೆ ಅಂಟಿಕೊಂಡ ಡಿವೈಎಸ್ಪಿ ಕೆ ಎನ್ ರಮೇಶ್. ಶಾಸಕರು, ಮಂತ್ರಿಗಳು ಕೊನೆಗೆ ಕೆಎಟಿ ಯಲ್ಲಿ ಗೆದ್ದು ಅಧಿಕಾರ ಹಿಡಿದರೂ ಹೈಕೋರ್ಟ್ ತೀರ್ಪಿಗಾಗಿ ಕಾಯುತ್ತಿರುವ ತಹಶಿಲ್ದಾರ್ ಸುದರ್ಶನ್. ಯಾವುದೇ ತಕರಾರಿಲ್ಲದೆ ಬಂದ ಪುಟ್ಟ ಹೋದ ಪುಟ್ಟ ಎಂಬ ಇಓ ಚಂದ್ರ ಇದಿಷ್ಟು ತಾಲ್ಲೂಕಿನ ಆಯಕಟ್ಟಿನ ಆಡಳಿತಗಾರರ ವಿಶೇಷ*
ಚನ್ನಪಟ್ಟಣ: ಜುಲೈ 01 22.
ತಾಲ್ಲೂಕು ಆಡಳಿತಕ್ಕೆ ಆಧಾರ ಸ್ತಂಭಗಳೆನಿಸಿಕೊಂಡ ನಾಲ್ವರು ಮುಖ್ಯ ಅಧಿಕಾರಿಗಳಾದ ತಹಶಿಲ್ದಾರ್, ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ, ಪೋಲಿಸ್ ಉಪ ವಿಭಾಗಾಧಿಕಾರಿ ಮತ್ತು ನಗರಸಭೆಯ ಪೌರಾಯುಕ್ತರು ಒಬ್ಬರ ನಂತರ ಒಬ್ಬರು ಎಂಬಂತೆ ವರ್ಗಾವಣೆಗೊಂಡಿದ್ದಾರೆ.
ತಹಶಿಲ್ದಾರರ ಜಿದ್ದಾಜಿದ್ದಿನ ವರ್ಗಾವಣೆ
ಕೆಎಎಸ್ ಅಧಿಕಾರಿಯಾಗಿದ್ದ ತಹಶಿಲ್ದಾರ ಸುದರ್ಶನ್ ರವರು ತಾಲ್ಲೂಕಿನ ಸರ್ಕಾರಿ ಭೂಗಳ್ಳರಿಗೆ ಸಿಂಹಸ್ವಪ್ನವಾಗಿದ್ದರು. ಅದರಲ್ಲೂ ಒಂದು ಪಕ್ಷದ ಮುಖಂಡರಂತೂ ಇವರನ್ನು ವರ್ಗಾವಣೆ ಮಾಡಿಸಲೆಂದೇ ಶತಾಯಗತಾಯ ಹೋ(ಓ)ರಾಡಿದರು. ಇವರು *22/07/2019 ರಿಂದ 27/07/2020* ರವರೆಗೆ ಕಾರ್ಯನಿರ್ವಹಿಸಿದ್ದು ಸೆಕ್ರೇಟಿಯೇಟ್ ಆಗಿ ನಂತರ ಮಂಡ್ಯ ತಾಲ್ಲೂಕಿನಲ್ಲಿ ತಹಶಿಲ್ದಾರರಾಗಿದ್ದ ನಾಗೇಶ್ ರವರು ವರ್ಗಾವಣೆಯಾಗಿ ಬಂದು ಅಧಿಕಾರ ವಹಿಸಿಕೊಂಡಿದ್ದು ಸುದರ್ಶನ್ ರವರು ಕೆಎಟಿ ಮೊರೆ ಹೋದರಾದರೂ ಫಲಿಸದ ಕಾರಣ ವರ್ಗಾವಣೆಗೊಂಡಿದ್ದರು. *04/22* ರಲ್ಲಿ ಸುದರ್ಶನ್ ರವರನ್ನು ಚನ್ನಪಟ್ಟಣಕ್ಕೆ ವರ್ಗಾವಣೆ ಮಾಡಿ ಸರ್ಕಾರ ಬೆಳಿಗ್ಗೆ ಆದೇಶ ಹೊರಡಿಸಿ, ಸಂಜೆ ಹಿಂಪಡೆದು ನಾಗೇಶ್ ರವರೇ ಮುಂದುವರೆದಿದ್ದರು. ಪುನಃ *29/04/22* ರಂದು ಸರ್ಕಾರದ ಆದೇಶದ ಮೇರೆಗೆ ತಾಲ್ಲೂಕು ಕಛೇರಿಗೆ ಬಂದು ಅಧಿಕಾರ ವಹಿಸಿಕೊಂಡರಾದರು *30/04/22* ರಂದು ಸುದರ್ಶನ್ ರವರನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿತ್ತು. ಜೊತೆಗೆ ಇಬ್ಬರೂ ಬೇಡ ಎಂಬ ನಿರ್ಧಾರಕ್ಕೆ ಬಂದ ಸರ್ಕಾರವು ಮತ್ತೊಬ್ಬ ಕೆಎಎಸ್ ಅಧಿಕಾರಿಯಾದ ಹರ್ಷವರ್ಧನ್ (ಗ್ರೇಡ್ ೨) ರವರನ್ನು *30/04/22* ರಂದು ವರ್ಗಾಯಿಸಿತು. ನಂತರ *14/06/22* ರ ಕೆಎಟಿ ಆದೇಶದ ಮೇರೆಗೆ *29/06/22* ರಂದು ಸುದರ್ಶನ್ ರವರು ತಾಲ್ಲೂಕು ದಂಡಾಧಿಕಾರಿಯಾಗಿ ಅಧಿಕಾರವಹಿಸಿಕೊಳ್ಳುವ ಮೂಲಕ ಜಿದ್ದಾಜಿದ್ದಿನಿಂದ ಗದ್ದುಗೆ ಏರಿದಂತಾಗಿದೆ.
ಇಓ ಚಂದ್ರು ಬದಲು ಶಿವಕುಮಾರ್
ತಾಲ್ಲೂಕಿನ ಗ್ರಾಮ ಪಂಚಾಯತಿಗೆ ಸಂಬಂಧಿಸಿದಂತೆ ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಹುದ್ದೆಯಲ್ಲಿ *01/10/2019* ರಿಂದ ಠಿಕಾಣಿ ಹೂಡಿದ್ದ ಚಂದ್ರ ರವರು *20/06/22* ರ ತನಕ ಅಧಿಕಾರದಲ್ಲಿದ್ದರು. ರಾಮನಗರ ತಾಲ್ಲೂಕು ಪಂಚಾಯತಿಯಲ್ಲಿ ಕಾರ್ಯನಿರ್ವಾಹಕರಾಗಿದ್ದ ಶಿವಕುಮಾರ್ ರವರು *20/06/22* ರಂದು ಅಧಿಕಾರ ವಹಿಸಿಕೊಳ್ಳುವ ಮೂಲಕ ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ.
ಕಥೆ ಹೇಳುವ ಡಿವೈಎಸ್ಪಿ
ಪೋಲಿಸ್ ಇಲಾಖೆಗೆ ಸಂಬಂಧಿಸಿದ ಕೆಲಸಕ್ಕಿಂತ ಸಮಾಜಸೇವೆ ಹೆಸರಿನಲ್ಲಿ ದುಡಿಯುತ್ತೇನೆ ಎಂಬ ಸಬೂಬು ಹೇಳಿಕೊಂಡೇ ತಿರುಗಾಡುತ್ತಿದ್ದ ಡಿವೈಎಸ್ಪಿ ಕೆ ಎನ್ ರಮೇಶ್ ರವರು *11/02/21* ರಂದು ಚನ್ನಪಟ್ಟಣ ಉಪ ಪೋಲಿಸ್ ವಿಭಾಗಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ರಮೇಶ್ ರವರು ಮಾತಿಗೂ ಕೃತಿಗೂ ಸಂಬಂಧವಿಲ್ಲದೆ ನಡೆದಂತವರು. ನಾನು ಮಾತ್ರ ಸರಿ ಮಿಕ್ಕವರೆಲ್ಲಾ ಸುಳ್ಳು ಎಂಬಂತೆ ಯಾರಿಗೂ ಮಾತನಾಡಲೂ ಅವಕಾಶ ನೀಡದೆ ನನ್ನದೇ ಸರಿ ಎಂದು ವಾದಿಸುವ, ಮಾತುಮಾತಿಗೂ ಕಥೆ, ಉಪಕಥೆ, ಹಾಡು ಹೇಳಿಕೊಂಡೇ ಕಾಲಕಳೆದಂತವರು. ಇಂಟೆಲಿಜೆನ್ಸ್, ರೂಲ್ ನಂಬರ್ ೭ ಸೇರಿದಂತೆ ಕರ್ತವ್ಯಲೋಪಕ್ಕೆ ನೋಟೀಸ್ ಪಡೆದವರು. ಮೇಲಾಧಿಕಾರಿಗಳ ತನಕವೂ ಇವರ ಬಗ್ಗೆ ದೂರು ಹೋಗಿದ್ದು ವಿಪರ್ಯಾಸ ಎನ್ನಬಹುದು. ಇವರನ್ನು ಕೋಲಾರದ ಡಿ ಸಿ ಆರ್ ಇ ಗೆ ವರ್ಗಾಯಿಸಿ ಭ್ರಷ್ಟಾಚಾರ ನಿಗ್ರಹ ದಳ ದಲ್ಲಿದ್ದ ಕರುಣಾಕರಶೆಟ್ಟಿ ಜೆ ಎಂ ಎಂಬುವವರನ್ನು ಇಂದು ವರ್ಗಾವಣೆ ಮಾಡಿ ಸರ್ಕಾರವು ಆದೇಶ ಹೊರಡಿಸಿ ವಾರ ಕಳೆದರೂ ಸಂಘದ ಹೆಸರು ಹೇಳಿಕೊಂಡು ಆದೇಶಕ್ಕೆ ಪ್ರಭಾವಿಗಳಿಂದ ಹೇಳಿಸಿ ತಡೆಹಿಡಿದು ಕುರ್ಚಿಗೆ ಅಂಟಿಕೊಂಡಿದ್ದಾರೆ. ತಾಲ್ಲೂಕಿನ ಬಹುತೇಕ ಪೋಲಿಸ್ ಉಪವಿಭಾಗಾಧಿಕಾರಿಗಳು ಇಲ್ಲಿ ಕುರ್ಚಿಗೆ ಅಂಟು ಕುಳಿತವರಲ್ಲಾ ! ಕೆಲಸ ಎಲ್ಲಿಯಾದರೂ ಕೆಲಸವಲ್ಲವೇ ? ಇಲಾಖೆಗೆ ಸಂಬಂಧಿಸಿದಂತೆ ಇವರ ಸಾಧನೆ ಏನು ಎಂಬುದರ ಮೇಲೆ ಉಳಿಯುತ್ತಾರೆ ಎಂದರೆ ಅದೂ ಇಲ್ಲಾ ಆದರೂ ಕುರ್ಚಿಗೆ ಏಕೆ ಅಂಟಿಕೊಂಡಿದ್ದಾರೆ ? ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳು ಏಕೆ ಕ್ರಮ ಕೈಗೊಂಡಿಲ್ಲಾ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.
ಎಸಿಬಿ ದಾಳಿಗೊಳಪಟ್ಟಿದ್ದ ಪುಟ್ಟಸ್ವಾಮಿ ಮರು ಪೌರಾಯುಕ್ತ
*19/10/19* ರಿಂದ ಪೌರಾಯುಕ್ತರಾಗಿದ್ದ ಶಿವನಂಕಾರಿಗೌಡ ರವರು ಇಂದು ವರ್ಗಾವಣೆಗೊಂಡು ಸಿ ಪುಟ್ಟಸ್ವಾಮಿ ರವರು ಮರುನೇಮಕಗೊಂಡಿದ್ದಾರೆ.
ಕಳೆದ ಮೂರು ವರ್ಷಗಳ ಹಿಂದೆ ಅಂದರೆ *03/07/2019* ರಂದು ಇ-ಖಾತೆ ಗೆ ಸಂಬಂಧಿಸಿದಂತೆ ನಗರಸಭೆಯ ಪೌರಾಯುಕ್ತರಾಗಿದ್ದ ಸಿ ಪುಟ್ಟಸ್ವಾಮಿ ಕಛೇರಿ ಮತ್ತು ಮನೆಯ ಮೇಲೆ ಎಸಿಬಿ ದಾಳಿ ನಡೆದು ಸರಿಸುಮಾರು ಆರು ತಿಂಗಳ ಕಾಲ ವಜಾಗೊಂಡು ನಂತರ ಚಿತ್ರದುರ್ಗ ಆನಂತರ ಮೈಸೂರಿನಲ್ಲಿ ಕೆಲಸ ನಿರ್ವಹಿಸಿದ್ದ ಸಿ ಪುಟ್ಟಸ್ವಾಮಿ ಯವರೇ ಇಂದು ನಗರದ ನಗರಸಭೆಯ ಪೌರಾಯುಕ್ತರಾಗಿ ಮರುನೇಮಕಗೊಂಡಿರುವುದು ಸಖೇದಾಶ್ಚರ್ಯವಾಗಿದೆ. ಇವರ ಮರುನೇಮಕದ ಹಿಂದೆ ದೊಡ್ಡ ಲಾಬಿ ಜೊತೆಗೆ ಇದುವರೆಗೂ ಆಗದ ಅಕ್ರಮ ಖಾತೆಗಳಿಗೆ, ಲೇಔಟ್ ಗಳಿಗೆ, ಸರ್ಕಾರಿ ಭೂಮಿ ನುಂಗಿ ನೀರು ಕುಡಿದಿರುವವರೇನಕರು ಇವರನ್ನು ಕರೆತರಲು ಶ್ರಮಿಸಿದ್ದಾರೆ ಎಂಬ ಗುಲ್ಲು ಸಾರ್ವಜನಿಕರ ನಡುವೆ ಹರಿದಾಡುತ್ತಿದೆ.
ಇಂತಹ ಅಧಿಕಾರಿಯನ್ನು ತರಲು ಶ್ರಮಿಸಿದವರೇನಕರು ಎಸಿಬಿ ದಾಳಿ ಪ್ರಸ್ತಾಪಿಸದಂತೆಯೂ ಕೆಲವರಿಗೆ ಮನವಿ ಮಾಡಿದ್ದೂ ಗುಟ್ಟಾಗಿ ಉಳಿದಿಲ್ಲಾ!.
ಗೋ ರಾ ಶ್ರೀನಿವಾಸ...
ಮೊ:9845856139.
-
ನಗರದಲ್ಲಿ ಒಂದು ಕೋಟಿ ಮೌಲ್ಯದ ಅಫೀಮು ವಶಪಡಿಸಿಕೊಂಡ ಬೆಂಗಳೂರು ಅಬಕಾರಿ ಪೋಲೀಸರು
ಚನ್ನಪಟ್ಟಣ: ನಗರದ ಹೈವೇ ರಸ್ತೆಯ ಸಾತನೂರು ಸರ್ಕಲ್ ಬಳಿಯ ತಾಲ್ಲೂಕು ಪಂಚಾಯತಿ ಕಛೇರಿ ಮುಂಭಾಗ ಒಂದು ಕೋಟಿ ಮೌಲ್ಯದ 922 ಗ್ರಾಂ ಅಫೀಮು (ಓಪಿಯಂ) ಒಂದು ಬೈಕ್ ಮತ್ತು ಇಬ್ಬರು ಆರೋಪಿಗಳನ್ನು ಬೆಂಗಳೂರು ದಕ್ಷಿಣ ವಿಭಾಗದ ಅಬಕಾರಿ ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆ ಕೈಗೊಂಡಿದ್ದಾರೆ.
ನಗರದ ಎಂ ಜಿ ರಸ್ತೆಯ ನಿವಾಸಿಗಳು ಹಾಗೂ ಅದೇ ರಸ್ತೆಯಲ್ಲಿನ ಅವರದೇ ಎರಡು ಪನಸಾರಿ ಅಂಗಡಿಗಳಿ ಮಾಲೀಕರು ಆದ ಸಿ ಬಿ ಶರತ್ ಬಿನ್ ಲೇ ಬಸವರಾಜಪ್ಪ ಸಿ ಬಿ(52) ಮತ್ತು ಸಂತೋಷ್ ಸಿ ಬಿ ಬಿನ್ ಬಸವರಾಜಯ್ಯ ಸಿ ಎನ್(37) ಎಂಬ ವ್ಯಕ್ತಿಗಳು ಎಂ ಜಿ ರಸ್ತೆಯ ಅಂಗಡಿಯಲ್ಲಿ ಅಫೀಮನ್ನು ಮಾರಾಟ ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಅಬಕಾರಿ ಜಂಟಿ ಆಯುಕ್ತರು ಬೆಂಗಳೂರು ದಕ್ಷಿಣ ವಿಭಾಗದ ಆದೇಶದ ಮೇರೆಗೆ ಅಬಕಾರಿ ನಿರೀಕ್ಷಕರಾದ ದಿವ್ಯಶ್ರೀ ಬಿ ಆರ್ ಮತ್ತು ಸಿಬ್ಬಂದಿಗಳು ಅಫೀಮು, ದ್ವಿಚಕ್ರ ವಾಹನ ಮತ್ತು ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದು 58/2021-22/771E1/772804 ಮತ್ತು 154 ಸಿ ಆರ್ ಪಿ ಸಿ Narcotic Drugs and Psychotropic Substance Act, 1985 18(c), 25, B(c) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
*ಆರೋಪಿಗಳು ಸಿಕ್ಕಿದ್ದು ಹೀಗೆ!*
ಚನ್ನಪಟ್ಟಣ ನಗರದ ಪ್ರಮುಖ ವಾಣಿಜ್ಯ ಭಾಗದ ಎರಡು ಅಂಗಡಿಗಳಲ್ಲಿ ಅಫೀಮು ಮಾರಾಟ ಆಗುತ್ತಿದೆ ಎಂಬ ಖಚಿತ ಮಾಹಿತಿ ಆಧರಿಸಿ ಅಖಾಡಕ್ಕೆ ಇಳಿದ ಜಂಟಿ ಆಯುಕ್ತರ ಕಛೇರಿಯ ಅಧಿಕಾರಿಗಳು ಮಫ್ತಿಯಲ್ಲಿ ಮೂರ್ನಾಲ್ಕು ದಿನಗಳ ಕಾಲ ಇಬ್ಬರು ಆರೋಪಿಗಳನ್ನು ಸಂಪರ್ಕಿಸಿ ಅಫೀಮು ಇರುವ ಬಗ್ಗೆ ಖಚಿತ ಪಡಿಸಿಕೊಂಡಿದ್ದಾರೆ. ನಮಗೆ ಹೆಚ್ಚಿನ ಪ್ರಮಾಣದಲ್ಲಿ ಅಫೀಮು ಬೇಕಾಗಿದೆ. ಎಷ್ಟು ರೀತಿಯಲ್ಲಿದ್ದರೂ ಪರವಾಗಿಲ್ಲ. ನಮಗೆ ದೊಡ್ಡಮಟ್ಟದ ಗಿರಾಕಿಗಳಿದ್ದಾರೆ ಎಂದು ನಂಬಿಸಿ ಮಾತಿಗಿಳಿದಿದ್ದಾರೆ. ಆರೋಪಿಗಳು ಒಂದು ಕೋಟಿ ಬೆಲೆಯ ಅಫೀಮು ನಮ್ಮಲ್ಲಿದೆ ದುಡ್ಡು ತೋರಿಸಿದರೆ ನಾವು ಮಾಲು ತೋರಿಸುತ್ತೇವೆ ಎಂದು ತಿಳಿಸಿದ್ದಾರೆ. ಚೌಕಾಸಿಗೆ ಇಳಿದ ಅವರು ತೂಕ ಮತ್ತು ಕ್ವಾಲಿಟಿ ಮೇರೆಗೆ ಎಂಭತ್ತು ಲಕ್ಷ ರೂಪಾಯಿಗೆ ಮಾತುಕತೆ ಮಾಡಿಕೊಂಡು, ಒಂದು ದಿನ ಸಮಯ ತೆಗೆದುಕೊಂಡ ಮಫ್ತಿಯಲ್ಲಿದ್ದ ಅಧಿಕಾರಿಗಳು ಸರಿಸುಮಾರು ಎಂಭತ್ತು ಲಕ್ಷ ಹಣ ತಂದು ಅವರನ್ನು ಸಂಪರ್ಕಿಸಿದ್ದಾರೆ.
ನಗರದ ಹೈವೇ ರಸ್ತೆಯ ತಾಲ್ಲೂಕು ಪಂಚಾಯತಿ ಕಛೇರಿಯ ಮುಂಭಾಗ ಅವರನ್ನು ಕರೆಸಿ ಹಣ ತೋರಿಸಿದ ನಂತರ ಶರತ್ ಮತ್ತು ಸಂತೋಷ್ ಎಂಬ ಆರೋಪಿಗಳು ಹಣದ ಆಸೆಗೆ ಬಿದ್ದು, ತಮ್ಮ ಬಜಾಜ್ ಡಿಸ್ಕವರಿ ದ್ವಿಚಕ್ರ ವಾಹನ ಕೆಎ 42 L 5170 ನೋಂದಣಿ ಸಂಖ್ಯೆಯ ಬೈಕ್ ನಲ್ಲಿ 30/06/22 ರ ಮಧ್ಯಾಹ್ನ ಒಂದು ಕಪ್ಪು ಬಣ್ಣದ ಹಾಗೂ ಮತ್ತೊಂದು ಹಸಿರು ಬಣ್ಣದ ಪಾಲಿಥೀನ್ ಕವರ್ ನಲ್ಲಿ ಮುದ್ದೆಮಾಲಿನಿಂದ ಬೇರ್ಪಡಿಸಿದ ತಲಾ 30 ಗ್ರಾಂಗಳ ಸ್ಯಾಚೆಟ್ ಗಳಾದ ಒಟ್ಟು 922 ಗ್ರಾಂ ಅಫೀಮು, ದ್ವಿಚಕ್ರ ವಾಹನದ ಜೊತೆಗೆ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದು ನೇರವಾಗಿ ಬೆಂಗಳೂರಿಗೆ ಕರೆದೊಯ್ದು ವಿಚಾರಣೆ ನಡೆಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುವುದಾಗಿ ನಂಬಲರ್ಹ ಮೂಲಗಳು ತಿಳಿಸಿವೆ.
ಗೋ ರಾ ಶ್ರೀನಿವಾಸ...
ಮೊ:9846856139.
-
ಸಮಸ್ಯೆ ಪರಿಹಾರಕ್ಕೆ ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ : ಜಿಲ್ಲಾಧಿಕಾರಿ
ರಾಮನಗರ, ಜೂ. 18: ನೇರವಾಗಿ ಐವತ್ತಕ್ಕೂ ಅರ್ಜಿಗಳು ಬಂದಿವೆ. ವಿವಿಧ ಇಲಾಖೆಗಳಿಗೂ ಅರ್ಜಿಗಳು ಬಂದಿದ್ದು ಎಲ್ಲಾ ಅರ್ಜಿಗಳನ್ನು ಪರಿಶೀಲಿಸಿ ಕ್ರಮಕೈಗೊಳ್ಳುತ್ತೇವೆ. ಸರ್ಕಾರದ ವಿವಿಧ ಯೋಜನೆ ಮತ್ತು ಸವಲತ್ತುಗಳಲ್ಲಿನ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಜನಸ್ಪರ್ಶಿಯಾದ ‘ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆʼ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಗೆ ಅವಕಾಶವಿದೆ. ಜನರು ಇದರ ಸದುಪಯೋಗ ಪಡೆದುಕೊಳ್ಳಲು ಆಗಮಿಸಿದ್ದಾರೆ. ಅವರೆಲ್ಲರಿಗೂ ನ್ಯಾಯ ಒದಗಿಸುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಜಿಲ್ಲಾಧಿಕಾರಿ ಡಾ.ಅವಿನಾಶ್ ಮೆನನ್ ರಾಜೇಂದ್ರನ್ ಅವರು ತಿಳಿಸಿದರು.
ಅವರು ಇಂದು ಚನ್ನಪಟ್ಟಣ ತಾಲ್ಲೂಕಿನ ಬೇವೂರು ಗ್ರಾಮದಲ್ಲಿ ಆಯೋಜಿಸಿದ್ದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ ಕಾರ್ಯಕ್ರಮವನ್ನು ಸಸಿ ನೆಡುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಗ್ರಾಮೀಣ ಭಾಗದಲ್ಲಿನ ಪಿಂಚಣಿ, ಆಶ್ರಯ ಯೋಜನೆ, ಸ್ಮಶಾನ, ಪೌತಿ ಖಾತೆ, ಪಹಣಿ ತಿದ್ದುಪಡಿ, ಭೂ ಒತ್ತುವರಿ ತೆರವು, ಮತದಾರರ ಪಟ್ಟಿ ಪರಿಷ್ಕರಣೆ, ಅರ್ಹ ಕುಟುಂಬಗಳಿಗೆ ಬಿಪಿಎಲ್ ಕಾರ್ಡ್ ಹಂಚಿಕೆ, ಪೋಡಿ ಪ್ರಕರಣ ಇತ್ಯರ್ಥ, ಆರೋಗ್ಯ, ಪೋಲೀಸ್, ಪಂಚಾಯತಿ ಸೇರಿದಂತೆ ಹಲವು ರೀತಿಯ ಸಮಸ್ಯೆಗಳಿಗೆ ಪರಿಹಾರ ಒದಗಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ದಿಗ್ವಿಜಯ್ ಬೋಡ್ಕೆ ಅವರು ಮಾತನಾಡಿ, ಅಧಿಕಾರಿಗಳು ದಿನವಿಡಿ ಗ್ರಾಮವಾಸ್ತವ್ಯ ಮಾಡಿ ಸಾರ್ವಜನಿಕರ ಸಮಸ್ಯೆಗಳನ್ನು ಲಿಖಿತವಾಗಿ ಅಥವಾ ಅರ್ಜಿ ರೂಪದಲ್ಲಿ ಪಡೆದು ಪರಿಹಾರ ಕಲ್ಪಿಸಿಕೊಡುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ. ಸಾರ್ವಜನಿಕರು ಗ್ರಾಮದ ಕುಂದುಕೊರತೆಗಳಿಗೆ ಪರಿಹಾರ ಕಂಡುಕೊಳ್ಳುವ ಮೂಲಕ ಇಂದಿನ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದರು.
ಪೌಷ್ಟಿಕ ಕರ್ನಾಟಕ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಮಕ್ಕಳಲ್ಲಿ ಪೋಷಕಾಂಶ ಹೆಚ್ಚಿಸಲು ಸೇವಿಸುವ ಆಹಾರ ಪದಾರ್ಥಗಳನ್ನು ಅನಾವರಣಗೊಳಿಸಲಾಗಿತ್ತು. ಅಂಗನವಾಡಿ ಯಿಂದ ನೀಡಲಾಗುವ ಆಹಾರ ಧಾನ್ಯಗಳಿಂದ ಮಕ್ಕಳಿಗೆ ರುಚಿಕರ ತಿನಸು ಮಾಡಬಹುದು ಎಂದು ತಿಳಿಸುವ ವಸ್ತು ಪ್ರದರ್ಶನ ನೋಡುಗರ ಗಮನ ಸೆಳೆಯುತ್ತಿತ್ತು.
ಬೇವೂರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿನ ಸುಕನ್ಯಾ ಸಮೃದ್ಧಿ ಯೋಜನೆಯಡಿ ಸುಮಾರು 200 ಫಲಾನುಭವಿಗಳಿದ್ದು 10 ಫಲಾನುಭವಿಗಳಿಗೆ ಜಿಲ್ಲಾಧಿಕಾರಿ ಪಾಸ್ ಬುಕ್ ವಿತರಿಸಿದರು.
ಆರೋಗ್ಯ ಇಲಾಖೆ ವತಿಯಿಂದ ಆರೋಗ್ಯ ತಪಾಸಣೆ, ಮಧುಮೇಹ ಹಾಗೂ ರಕ್ತದೊತ್ತಡ ಪರೀಕ್ಷೆ, ಸೇರಿದಂತೆ ಫಲಾನುಭವಿಗಳಿಗೆ ಕೋವಿಡ್ ಲಸಿಕೆ ನೀಡಲಾಯಿತು
ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಕಾಂತರಾಜ್, ತಹಶೀಲ್ದಾರ್ ಹರ್ಷವರ್ಧನ್, ತಾಲ್ಲೂಕು ಕಾರ್ಯನಿರ್ವಾಹಕಾಧಿಕಾರಿ ಚಂದ್ರು, ಬೇವೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ರಮೇಶ್, ವಿವಿಧ ಇಲಾಖೆ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು, ಆಶಾ, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.
ಗೋ ರಾ ಶ್ರೀನಿವಾಸ...
ಮೊ:9845856139.