Recent news »
-
ಪ್ರಕೃತಿ ಉಳಿಸಿ ಪೋಷಿಸಿ, ಅದು ನಿಮ್ಮನ್ನು ಪೊಷಿಸುತ್ತದೆ
ಪ್ರತಿ ವರ್ಷ ಜೂನ್ 1 ರಂದು ವಿಶ್ವ ಪರಿಸರ ದಿನವೆಂದು ಫೇಸ್ ಬುಕ್, ವಾಟ್ಸಪ್ ನಲ್ಲಿ ಮಿಂಚಲು ಕೆಲವರು ಗಿಡ ನೆಡುವ ಚಾಳಿ ಬೆಳೆಸಿಕೊಂಡಿರುವುದು ವಿಷಾದನೀಯ.
ಪರಿಸರ ಪ್ರೇಮಿಗಳಾದ ನಾವು ನಿತ್ಯವು ಪ್ರಕೃತಿ ಯೊಂದಿಗೆ ಬೆರೆತು ನಡೆಯುತ್ತಿದ್ದೇವೆ. ಸಸ್ಯ ನೆಡುವುದು, ಗಿಡ ಮರ ಪೋಷಿಸುವುದು ನಮ್ಮೆಲ್ಲರ ಆರಾಧ್ಯ ದೈವವಾಗಬೇಕು, ನಾವು ಪ್ರಕೃತಿಯನ್ನು ಪೂಜಿಸಬೇಕು, ಬೆಳೆಸಬೇಕು. ಇದರಿಂದ ಲಾಭವೇ ಹೊರತು ನಷ್ಟವಿಲ್ಲ.
ಮಾನವ ನಿರ್ಮಿತ ವಾಹನಗಳಿಂದಬಿಡುವ ಇಂಗಾಲ ಡೈಆಕ್ಸೈಡ್ಡನ್ನ ಹೀರಿ ನಮಗೆ ನಮ್ಮ ದೇಹಕ್ಕೆ ಬೇಕಾದಷ್ಟು ಆಮ್ಲಜನಕವನ್ನು ಪೂರೈಸುತ್ತಲೆ ಇದ್ದು, ಉತ್ತಮವಾದ ಗಾಳಿ, ಮಳೆ, ಬೆಳೆ, ಮನರಂಜನೆಯನ್ನು ನೀಡುತ್ತಾ ನಮ್ಮ ಆರೋಗ್ಯವಂತ ಬದುಕು ನಡೆಸಲು ಪರಿಸರ ದೈವದತ್ತ ಕೊಡುಗೆಯಾಗಿದೆ. ಪ್ರತಿ ಮನೆಯಲ್ಲೂ ಚಿಕ್ಕಜಾಗದಲ್ಲೆ ವಿವಿಧ ರೀತಿಯ ಗಿಡಗಳನ್ನು ನೆಟ್ಟು ನೀರುಣಿಸಿ ಪೋಷಿಸಿದ್ದೇ ಆದರೆ ನಮ್ಮ ಆಯುಷ್ಯ ಆರೋಗ್ಯಕ್ಕೆ ಯಾವ ಅಪಾಯವೂ ಇರುವುದಿಲ್ಲ. ಕಾಲಕ್ಕನುಗುಣವಾದ ಹೂವು, ಹಣ್ಣು-ಕಾಯಿ ತರಕಾರಿ, ಸೊಪ್ಪು ಇತ್ಯಾದಿಗಳನ್ನು ನಮಗೆ ಹೇರಳವಾಗಿ ದೊರಕಿಸಿಕೊಳ್ಳಬಹುದು.
ಬುದ್ದಿಜೀವಿಗಳಾದ ನಾವೆಲ್ಲರು ಮನಸ್ಸಿಟ್ಟು ಪರಿಸರ ರಕ್ಷಿಸಿ ಬೆಳೆಸಬೇಕು, ಗಿಡ ಮರಗಳು ನಾವು ತಿನ್ನುವ, ಉಣ್ಣುವ, ಉಡುವ ವಸ್ತುಗಳನ್ನು ಕಿತ್ತುಕೊಳ್ಳುತ್ತಿಲ್ಲ ನೆನಪಿರಲಿ.. ಪ್ಲಾಸ್ಟಿಕ್ ಹೊರತು ಪಡಿಸಿ, ಅಡುಗೆ ಮನೆಯಲ್ಲಿನ ಅನುಪಯುಕ್ತ ತ್ಯಾಜ್ಯ, ಹೊರ ಚೆಲ್ಲುವ, ಬಿಸಾಡುವ, ಉಳಿದ, ಹಸಿಕಸ ಗಿಡದ ಬುಡಕ್ಕೆ ಸುರಿದು ನೀರುಣಿಸಿದ್ದೆ ಆದರೆ ನಮ್ಮ ಕಣ್ಣ ಮುಂದೆಯೆ ಬೆಳೆಯುತ್ತ ಹೆಮ್ಮರವಾಗಿ ನೆರಳು ನೀಡುತ್ತಾ ನಮ್ಮ ಸುತ್ತ ಮುತ್ತಲಿನ ವಾತಾವರಣವನ್ನು ಕಣ್ಮನ ಸೆಳೆಯುವಂತೆ ಮಾಡುತ್ತಾ ವಿವಿಧ ಜಾತಿಯ ಪಕ್ಷಿಗಳು, ಚಿಟ್ಟೆಗಳು ಆಹಾರವನ್ನು ಉತ್ಪತಿಮಾಡಿಕೊಂಡು ಗಿಡ ಮರಗಳನ್ನಾಶ್ರಯಿಸಿಕೊಳ್ಳುತ್ತವೆ.
ಗಿಡ ಮರಗಳು ಹೆಚ್ಚಾದಂತೆ ಮೋಡವನ್ನು ಆಕರ್ಷಿಸಿ, ಮಳೆ ಸುರಿದು, ಜಾನುವಾರುಗಳಿಗೆ ಮೇವು ನೀರು ಒದಗಿಸುವಲ್ಲಿ ಪ್ರಕೃತಿ ಮೇಲುಗೈಸಾಧಿಸುತ್ತದೆ. ನಮ್ಮ ಜೀವ ಜೀವನ ಪರಿಸರ ಇರುವಷ್ಟೆ ದಿನ. ನಾವು ಬದಲಾಗಿ ಪರಿಸರ ಉಳಿಸಬೇಕು, ಪ್ರಕೃತಿಯನ್ನು ಬದಲಿಸಲು ಹೊರಟ ನಮ್ಮ ನಿಮ್ಮೆಲ್ಲರ ಬದುಕು 2 ವರ್ಷದಿಂದ ಕರೋನಾದ ಕಪಿಮುಷ್ಟಿಗೆ ಸಿಲುಕಿ ವಿಲವಿಲ ಒದ್ದಾಡಿ ಸಾವು ನೋವನ್ನು, ಮನೆಯ ಉಳಿದ ಸದಸ್ಯರನ್ನಾ ಎಣಿಸುವ ಸ್ಥಿತಿ ತಂದುಕೊಂಡಿದ್ದೇವೆ, ಬುದ್ಧಿ ಜೀವಿಗಳಾದ ನಾವೆಲ್ಲರೂ ನಮ್ಮ ಬದುಕಿಗಾಗಿ, ನಮ್ಮ ಮಕ್ಕಳ ಆರೋಗ್ಯಕ್ಕಾಗಿಯಾದರು ಸುತ್ತಮುತ್ತಲಿನ ವಾತಾವರಣ ಹಚ್ಚ ಹಸಿರಿನಿಂದ ಕೂಡಿರಲಿ. ಒಬ್ಬೊಬ್ಬರು ಒಂದೊಂದು ಗಿಡ ನೆಡಿ, ನಿಮ್ಮ ದೇಹಕ್ಕೆ ಆಹಾರ ನೀರು ಪೂರೈಸಿಕೊಂಡಂತೆ ಗಿಡಮರಕ್ಕೆ ಗೊಬ್ಬರ ಹಾಕಿ ನೀರುಣಿಸಿ ಪ್ರಕೃತಿ ಯನ್ನು ಸ್ವಾಗತಿಸಿ, ಗೌರವಿಸಿ. ಅದು ನಿಮ್ಮನ್ನು ಬಿಗಿದಪ್ಪಿಕೊಳ್ಳುತ್ತದೆ.
ಲಕ್ಷ್ಮಿ ಗೋ ರಾ ಶ್ರೀನಿವಾಸ.
ಜಾನಪದ ಕಲಾವಿದರು. (ಹವ್ಯಾಸಿ ಬರಹಗಾರ್ತಿ)
-
ಸದ್ಯದಲ್ಲಿ ರಾಜ್ಯಾದ್ಯಂತ ಲಾಕ್ ಡೌನ್ ಅತ್ಯವಶ್ಯ. ಲಾಕ್ ಡೌನ್ ಕ್ರಮ ಹೀಗಿರಲಿ
ಕೊರೊನಾ (ಕೋವಿಡ್-೧೯) ರಾಜ್ಯಾದ್ಯಂತ ಗಣನೀಯವಾಗಿ ಏರಿಕೆಯಾಗುತ್ತಿರುವುದು ಹಾಗೂ ಮಕ್ಕಳು, ಯುವಕರು, ಮುದುಕರೆನ್ನದೆ ಬಲಿ ಪಡೆಯುತ್ತಿರುವುದು ದಿನ ನಿತ್ಯವೂ ವರದಿಯಾಗುತ್ತಲೇ ಇವೆ. ಮುದ್ರಣ ಮಾಧ್ಯಮ ಹೊರತುಪಡಿಸಿದರೆ ದೃಶ್ಯ ಮಾಧ್ಯಮಗಳಲ್ಲಂತೂ ರೋಗ ಮತ್ತು ಸಾವಿನ ದೃಶ್ಯಗಳನ್ನು ದೊಡ್ಡ ಗಂಟಲಿನಿಂದ ಕಿರುಚಿ, ಚಿತ್ರವಿಚಿತ್ರವಾಗಿ ತೋರಿಸುವುದರ ಮೂಲಕ ಮನೆಮಂದಿಯನ್ನು ಭಯದಿಂದಲೇ ಸಾಯುವಂತೆ ಮಾಡುತ್ತಿರುವುದು ಮತ್ತೊಂದು ದುರಂತವೇ ಸರಿ.
ಲಾಕ್ಡೌನ್ ಎಂದಾಕ್ಷಣ ಜೀವನವೇ ಮುಗಿದು ಹೋಯಿತೇನೋ ಎನ್ನುವುದು ಜನರ ಕಣ್ಮುಂದೆ ಬರುವಂತೆ ಈ ದೃಶ್ಯ ಮಾಧ್ಯಮಗಳು ಬಿಂಬಿಸುತ್ತಿರುವುದು ಅಬಾಲ ವೃದ್ಧರನ್ನು ಅರ್ಧ ಜೀವಕ್ಕೆ ಇಳಿಸುತ್ತಿವೆ. ಇನ್ನೂ ಸರ್ಕಾರ ಘೋಷಿಸುವ ಲಾಕ್ಡೌನ್ ಮಾತ್ರ ಹಾಸ್ಯಾಸ್ಪದ ಎನಿಸುತ್ತಿದೆ.
ಅಗತ್ಯ ವಸ್ತುಗಳು ಪ್ರತಿ ಮನೆಗೂ, ಪ್ರತಿ ವ್ಯಕ್ತಿಗೂ ಅವಶ್ಯವಾಗಿ ಬೇಕಾಗಿರುವುದೇನೋ ನಿಜ. ಅದರಲ್ಲೂ ದಿನಗೂಲಿ ಕಾರ್ಮಿಕರು, ಕೆಲ ವಲಸಿಗರು ಬಿಟ್ಟರೆ ಬೇರೆಯವರಿಗೆ ಜೀವನ ಅಂತಹ ಕಷ್ಟವೇನೂ ಆಗುವುದಿಲ್ಲ. ಮಧ್ಯಮ ವರ್ಗದವರು ಮಿಸುಕಾಡುತ್ತಾರೆ ಎನ್ನುವುದನ್ನು ಬಿಟ್ಟರೆ ಹೇಗೋ ಸಂಭಾಳಿಸಿ ಬಿಡುತ್ತಾರೆ. ಇನ್ನೂ ಶ್ರೀಮಂತ ವರ್ಗದವರಿಗೆ ಈ ಲಾಕ್ಡೌನ್ ಏನೇನೂ ಅಲ್ಲ. ಇಲ್ಲ ನಮಗೂ ಕಷ್ಟ ಆಗುತ್ತೇ ಎನ್ನುವುದಾದರೆ ಆಗಲಿ ಬಿಡಿ ಬಡವನ ಕಷ್ಟ ಅವನಿಗೂ ಗೊತ್ತಾಗಲಿ ಅಲ್ಲವೇ ! ಜೀವ ಇದ್ದರೆ ಜೀವನವಲ್ಲವೇ ? ದಿನಕ್ಕೊಪ್ಪತ್ತು ಉಪವಾಸವಿದ್ದರೆ ಆರೋಗ್ಯದ ಜೊತೆಗೆ ಆಡಳಿತಗರ ಸಂಪತ್ತು ವೃದ್ಧಿಯಾಗುತ್ತದೆ ಅಲ್ಲವೇ.
ಕಳೆದ ತಿಂಗಳ ಮೊದಲು ಎರಡು ತಿಂಗಳ ಕಾಲ ಲಾಕ್ಡೌನ್ ಆದಾಗ ಯಾರಿಗೂ ಅಂತಹ ಸಮಸ್ಯೆ ಆಗಲಿಲ್ಲ. ಉಳ್ಳವರ ಜೊತೆಗೆ ಅನೇಕ ಯುವ ಉತ್ಸಾಹಿಗಳು ಬಡವರ ನೆರವಿಗೆ ಧಾವಿಸಿ ಬಡವರ ಹಸಿವನ್ನು ನೀಗಿಸುವುದರ ಜೊತೆಗೆ ನಿಮ್ಮೊಡನೆ ನಾವಿದ್ದೇವೆ ಎಂದು ಭರವಸೆ ನೀಡುವ ಮೂಲಕ ಮಾನವೀಯತೆ ಮೆರೆದರು. ಇನ್ನೊಂದು ಬಾರಿ ಲಾಕ್ಡೌನ್ ಆದರೆ ಹಿಂದೆ ಸಹಾಯ ಮಾಡಿದವರು ಸ್ಪಂದಿಸಬಹುದು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನ್ಯಾಯ ಬೆಲೆ ಅಂಗಡಿಗಳ ಮೂಲಕ ಪಡಿತರ ವಿತರಿಸುವ ಮೂಲಕ ಸ್ಪಂದಿಸುವುದರಿಂದ ಜೀವನ ಕಷ್ಟವೇನು ಆಗುವುದಿಲ್ಲ.
*ಲಾಕ್ಡೌನ್ ಕ್ರಮ ಹೀಗಿರಲಿ;*
ನಮಗೂ ಸೋಂಕು ತಗುಲಬಹುದು ಎಂಬ ಮುನ್ನೆಚ್ಚರಿಕೆಯಿಂದ ಸಣ್ಣ ಪುಟ್ಟ ಕ್ಲಿನಿಕ್ ಗಳು ರೋಗಿಗಳಿಗೆ ಚಿಕಿತ್ಸೆ ನೀಡಲು ಮುಂದೆ ಬರುತ್ತಿಲ್ಲ. ಎಷ್ಟೋ ಕಡೆ ಖಾಸಗಿ ಮತ್ತು ಸಾರ್ವಜನಿಕ ಆಸ್ಪತ್ರೆಗಳು ಸಹ ಆಗಾಗ್ಗೆ ಸೀಲ್ಡೌನ್ ಆಗುತ್ತಲೇ ಇವೆ. ಇಂತಹ ಸಮಯದಲ್ಲಿ ಗಂಭೀರ ಖಾಯಿಲೆ ಹಾಗೂ ತುರ್ತು ಚಿಕಿತ್ಸೆ ಹೊರತುಪಡಿಸಿದರೆ ಬೇರೆ ಮದ್ದು ನೀಡುತ್ತಿಲ್ಲ.
ಹಾಗಾಗಿ ತಾಲ್ಲೂಕಿನ ಜನಗಣತಿಯ ಪ್ರಕಾರವಾಗಿ ದಿನನಿತ್ಯದ ಸಾಮಾನು ಸರಂಜಾಮುಗಳಿಗಾಗಿ ಕನಿಷ್ಠ ಒಂದರಿಂದ ಎರಡು ಗಂಟೆಗಳ ಕಾಲ ಕೊಂಡುಕೊಳ್ಳಲು ಸಮಯ ನಿಗದಿ ಮಾಡಬೇಕು. ಇದನ್ನು ಗ್ರಾಮ ಪಂಚಾಯತಿ ಹಾಗೂ ಪ್ರತಿ ಗ್ರಾಮಗಳಿಗೂ ಸಹ ಕಡ್ಡಾಯಗೊಳಿಸಬೇಕು. ಜೊತೆಗೆ ಇಲ್ಲೂ ಸಹ ಮಾಸ್ಕ್, ಅಂತರ ಮತ್ತು ಸ್ಯಾನಿಟೈಸರ್ ಬಳಕೆ ಕಡ್ಡಾಯಗೊಳಿಸುವ ಮೂಲಕ ಮುಂಜಾಗ್ರತಾ ಕ್ರಮಗಳನ್ನು ಸ್ಥಳೀಯ ಆಡಳಿತ, ಟಾಸ್ಕ್ ಫೋರ್ಸ್ ಸಮಿತಿ ಖುದ್ದು ಹಾಜರಿದ್ದು ನಿರ್ವಹಣೆ ಮಾಡಬೇಕೆಂಬ ಕಟ್ಟುನಿಟ್ಟಿನ ಆದೇಶ ಹೊರಡಿಸಬೇಕು.
ತುರ್ತು ಚಿಕಿತ್ಸೆಗಾಗಿ ಪ್ರತಿ ಗ್ರಾಮ ಪಂಚಾಯತಿಗೆ ಒಂದು ಹಾಗೂ ನಗರದ ಜನಗಣತಿಗನುಗುಣವಾಗಿ ಒಂದು ಅಥವಾ ಎರಡು ಆ್ಯಂಬುಲೆನ್ಸ್ ಗಳನ್ನು ನಿಯೋಜಿಸಬೇಕು. ಗ್ರಾಮ ಪಂಚಾಯತಿಗೊಂದರಂತೆ ಮೆಡಿಕಲ್ ಬಾಗಿಲು ತೆಗೆಯಬೇಕು. ಇನ್ನೂ ಪೆಟ್ರೋಲ್ ಬಂಕ್ ಗಳನ್ನು ನಗರದಲ್ಲಿ ಮಾತ್ರ ಪ್ರತಿ ದಿನ ಒಂದರಂತೆ ಮಾತ್ರ ತೆರೆಯಬೇಕು. ಸರ್ಕಾರದ ವಾಹನಗಳು, ಅಗತ್ಯ ವಸ್ತುಗಳ ಪೂರೈಕೆದಾರರು, ಆರೋಗ್ಯ ಮತ್ತು ಆಶಾ ಕಾರ್ಯಕರ್ತೆಯರು ಮತ್ತು ಮಾಧ್ಯಮದ ವರದಿಗಾರರಿಗೆ ಜಿಲ್ಲಾ ಅಥವಾ ತಾಲ್ಲೂಕು ಆಡಳಿತ ಪಾಸ್ ನೀಡುವ ಮೂಲಕ ನಿರ್ವಹಿಸಬೇಕು. ಈ ರೀತಿಯ ಲಾಕ್ಡೌನ್ ಮಾಡಿದಾಗ ಮಾತ್ರ ಕೊರೊನಾ ಸೋಂಕನ್ನು ತಡೆಗಟ್ಟಲು ಸಾಧ್ಯವಾಗುತ್ತದೆ.
ಅಗತ್ಯ ವಸ್ತುಗಳು ಮತ್ತು ವಾರಿಯರ್ಸ್ (Essential) ಎಂಬ ಹೆಸರಿನ ಅಡಿಯಲ್ಲಿ ಶೇಕಡಾ ೭೦ ಕ್ಕೂ ಹೆಚ್ಚು ಮಂದಿಗೆ ಓಡಾಡಲು ರಹದಾರಿ ಕೊಟ್ಟು, ಸೋಂಕಿತರನ್ನು ಹೆಚ್ಚು ಮಾಡಿ ಬೊಬ್ಬೆ ಹೊಡೆಯುವ ಆಡಳಿತವು ಕನಿಷ್ಠ ಎರಡು ವಾರ ಅಥವಾ ಒಂದು ತಿಂಗಳು ಕಟ್ಟುನಿಟ್ಟಿನ ಲಾಕ್ಡೌನ್ ಮಾಡಿದರೆ ಸೋಂಕಿತರು ಕಡಿಮೆಯಾಗುವರು. ಮುಂದಿನ ದಿನಗಳಲ್ಲಿ ಆಡಳಿತವು ಚುರುಕಾಗುವುದರಲ್ಲಿ ಅನುಮಾನವಿಲ್ಲ. ಈಗಲಾದರೂ ಸರ್ಕಾರ ಎಚ್ಚೆತ್ತುಕೊಳ್ಳಲಿ.
ಲಕ್ಷ್ಮಿ ಗೋ ರಾ ಶ್ರೀನಿವಾಸ...
ಜಿ ಜಿ ದೊಡ್ಡಿ. ಚನ್ನಪಟ್ಟಣ.
ಸಾಂಸ್ಕೃತಿಕ ಕಲಾವಿದರು ಹಾಗೂ ಹವ್ಯಾಸಿ ಬರಹಗಾರರು.
ಮೊ:9740001666.
-
ಅನ್ನದಾನೇಶ್ವರ ಶ್ರೀ ಗಳಿಗೆ ಅರವತ್ತೊಂದು
ರಾಮನಗರ: ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನದ ಮಠಾಧಿಪತಿಗಳಾಗಿದ್ದ ಭೈರವೈಕ್ಯ *ಪದ್ಮಭೂಷಣ ಡಾ ಬಾಲಗಂಗಾಧರ ನಾಥ ಸ್ವಾಮೀಜಿಗಳ* ಪರಮ ಶಿಷ್ಯರಾಗಿದ್ದ ಹಾಗೂ ಈಗಿನ ಪೀಠಾಧಿಪತಿಗಳಾದ ಡಾ ಶ್ರೀ ನಿರ್ಮಲಾನಂದ ನಾಥ ಸ್ವಾಮೀಜಿಗಳ ಆಪ್ತ ವಲಯದಲ್ಲಿ ಗುರುತಿಸಿಕೊಂಡು *ಅಂಧ ಮಕ್ಕಳ ಕಣ್ಮಣಿಯಾಗಿರುವ ಶ್ರೀ ಅನ್ನದಾನೇಶ್ವರ ನಾಥ ಸ್ವಾಮೀಜಿಗಳು* ಇಂದು ತಮ್ಮ ಅರವತ್ತೊಂದನೇ ಜನ್ಮ ದಿನವನ್ನು ತಮ್ಮ ಮೂಲ ಕ್ಷೇತ್ರವಾದ ಕನಕಪುರ ತಾಲೂಕಿನ ಶಿವಗಿರಿ (ಶಿವಾಲ್ದಪ್ಪನ ಬೆಟ್ಟ) ಯಲ್ಲಿ ಭಕ್ತರ ನಡುವೆ ಸರಳವಾಗಿ ಆಚರಿಸಿಕೊಂಡರು.
*ಶ್ರೀ ಶ್ರೀ ಗಳ ಬಗ್ಗೆ ಒಂದಿಷ್ಟು*
ಶ್ರೀ ಗಳು ಗಾಂಧಿ ವಾದಿ ಎಂದೇ ಪ್ರಸಿದ್ದರಾಗಿದ್ದ *ಪೂಜ್ಯ ಕರಿಯಪ್ಪನವರ* ರೂರಲ್ ಕಾಲೇಜಿನಲ್ಲಿ ವಿಜ್ಞಾನ ವಿದ್ಯಾರ್ಥಿಯಾಗಿದ್ದಾಗಲೇ ಆಧ್ಯಾತ್ಮ ಒಲವು ಬೆಳೆಸಿಕೊಂಡಿದ್ದರು, ಜಮೀನ್ದಾರಿ ಕುಟುಂಬದಲ್ಲಿ ಹುಟ್ಟಿ ಬೆಳೆದ ಶ್ರೀ ಗಳು ಶ್ರೀಮಂತಿಕೆಯನ್ನು ಬಿಟ್ಟು ದೊಡ್ಡ ಆಲಹಳ್ಳಿ ಬಳಿ ಇರುವ ಶಿವಾಲ್ದಪ್ಪ ಬೆಟ್ಟದಲ್ಲಿ ಸಣ್ಣ ಗುಡಿಸಲು ನಿರ್ಮಿಸಿಕೊಂಡು ಅಜ್ಞಾತ ಸ್ಥಳದಲ್ಲಿ ಧ್ಯಾನಸಕ್ತರಾಗಿ *ಸುಜ್ಞಾನ ಬೆಳೆಸಿಕೊಂಡು ಪರಿಪೂರ್ಣ ಸನ್ಯಾಸಿಯಾದರು.*
ಒಕ್ಕಲಿಗರ ಮಠ ಎಂದು ಬಿಂಬಿತವಾಗಿದ್ದರೂ ಸರ್ವಧರ್ಮ ಮತ್ತು ಸರ್ವ ಜನಾಂಗದ ಭಕ್ತರ ಆಲಯವಾಗಿದ್ದ ಆದಿಚುಂಚನಗಿರಿ ಯ ಪೀಠಾಧ್ಯಕ್ಷರಾದ *ಬಾಲಗಂಗಾಧರ ನಾಥ ಸ್ವಾಮೀಜಿಗಳು* ಶಿವಗಿರಿ ಕ್ಷೇತ್ರದ ಜೊತೆಗೆ ನಮ್ಮ ಶಾಖಾ ಮಠವನ್ನು ನೋಡಿಕೊಳ್ಳುವಂತೆ ಮನವೊಲಿಸಿ ಕರೆ ತಂದರು, ಹಿರಿಯ ಮತ್ತು ಈಗಿನ ಸ್ವಾಮೀಜಿಗಳಿಗೆ ಅತ್ಯಂತ ಪ್ರಿಯವಾದ ಶಾಖಾ ಮಠವೆಂದರೆ ಅದು ರಾಮನಗರ ದ ಶಾಖಾ ಮಠ, ಅದಕ್ಕೆ ಕಾರಣ ಇಲ್ಲಿನ *ಅಂಧರ ಶಾಲೆ* ಆದಿಚುಂಚನಗಿರಿ ಎಲ್ಲಾ ಸ್ವಾಮೀಜಿಗಳಿಗಿಂತಲೂ ಒಂದು ಕೈ ಮೇಲಾಗಿ ಅಂಧ ಮಕ್ಕಳನ್ನು ಪ್ರೀತಿಸುವ, ಅವರ ಆರೋಗ್ಯ ಮತ್ತು ಶಿಕ್ಷಣಕ್ಕೆ ಅತಿ ಹೆಚ್ಚು ಒತ್ತು ಕೊಡುವಲ್ಲಿ ಅನ್ನದಾನೇಶ್ವರ ನಾಥ ಸ್ವಾಮೀಜಿಗಳು ಮಹಾಸಂಸ್ಥಾನದ ಎಲ್ಲಾ ಮಠಗಳಿಗೂ ಒಂದು ಕೈ ಮೇಲೆನ್ನಲು ಅಡ್ಡಿಯಿಲ್ಲ.
ಮಹಾಸಂಸ್ಥಾನ, ಹಿರಿಯ ಸ್ವಾಮೀಜಿ ಹಾಗೂ ಅಂಧ ಮಕ್ಕಳ ಪ್ರೀತಿಯ ಸಂಕೇತವಾಗಿ ಇಂದಿಗೂ ಹಿರಿಯ ಸ್ವಾಮೀಜಿಗಳು ಉಪಯೋಗಿಸಿ ನೀಡಿದ ಹಳೆಯ ಕಾರನ್ನೇ ಬಳಸುತ್ತಿರುವುದು ಅವರ ಸರಳತೆಗೆ ಸಾಕ್ಷಿ. *ಅರ್ಚಕರಹಳ್ಳಿ ಶಾಖಾ ಮಠದಲ್ಲಿ ಅಂಧರ ಶಾಲೆ, ಬಿಜಿಎಸ್ ವಲ್ಡ್೯ ಸ್ಕೂಲ್ ಮತ್ತು ಪಿಯು ಕಾಲೇಜು, ಬಾನಂದೂರಿನ ಮಠ ಮತ್ತು ಶಾಲೆ, ಕನಕಪುರ ಮಠ ಮತ್ತು ಶಾಲೆ, ಜೆ ಬ್ಯಾಡರಹಳ್ಳಿ ಶಾಲೆ, ಇತ್ತೀಚಿಗೆ ಹೇಮಗಿರಿ ಯ ಬೆಟ್ಟ ಹಾಗೂ ಅವರ ಪ್ರಿಯವಾದ ಶಿವಗಿರಿ ಮಠದ ಉಸ್ತುವಾರಿಯನ್ನು ಅವರೇ ನೋಡಿಕೊಂಡು ಪ್ರೀತಿಯಿಂದ ಕರೆದ ಭಕ್ತರ ಕಾರ್ಯಕ್ರಮ, ಸಾರ್ವಜನಿಕ ಕಾರ್ಯಕ್ರಮ ದಲ್ಲಿ ಭಾಗವಹಿಸಿ, ವಿದ್ವತ್ಪೂರ್ಣ, ಆಚಾರ-ವಿಚಾರಗಳ ಸಮ್ಮಿಲನದ ಆಶೀರ್ವಚನ ನೀಡಿ ಭಕ್ತರ ಪಾಲಿಗೆ ನೈಜದೈವವಾಗಿ ರೂಪುಗೊಂಡಿದ್ದಾರೆ.*
ರಾಮನಗರ ಜಿಲ್ಲೆ ಹೇಳಿ ಕೇಳಿ ಘಟಾನುಗಟಿ ರಾಜಕಾರಣಿಗಳ ಆಡುಂಬೊಲದ ತವರೂರು, ಹಾವು ಮುಂಗುಸಿ ಗಳಂತಿರುವ ಎಲ್ಲಾ ರಾಜಕಾರಣಿಗಳನ್ನು ಒಂದೇ ತೆರನಡಿ ನೋಡುವ ಅವರ ಗುಣ ಎಲ್ಲಾ ರಾಜಕಾರಣಿಗಳು ಒಮ್ಮೆ ಹೋಗಿಬರಲು ಇಷ್ಟಪಡುತ್ತಾರೆ.
ಜಿಲ್ಲೆಗೆ ಯಾವುದೇ ಉನ್ನತಾಧಿಕಾರಿಗಳು ಬಂದರೂ ಅವರ ಸಲಹೆಯ ಜೊತೆಗೆ ಆಶೀರ್ವಾದ ಪಡೆಯದೆ ಕಾರ್ಯನಿರ್ವಹಿಸುವವರು ಬಹುತೇಕ ಕಡಿಮೆ.
*ನಾಡು-ನುಡಿ, ರೈತ-ಜಲ ದ ವಿಷಯವಾಗಿ ಅನ್ಯಾಯವಾದಾಗ ಬೀದಿಗಿಳಿದು ಹೋರಾಟ ಮಾಡುವ ಅವರ ದಿಟ್ಟತನ ಇಂದಿನ ಯುವಕರನ್ನು ನಾಚಿಸುವಂತಿದೆ.*
ಅರವತ್ತು ವರ್ಷ ಎಂದರೆ ಅರಳೋ ಮರಳೋ ಎನ್ನುವ ವಯಸ್ಸು ಎಂಬ ಗಾದೆಗೆ ವ್ಯತಿರಿಕ್ತವಾಗಿರುವ ಶ್ರೀ ಗಳು ಅರವತ್ತೊಂದಾದರು ಅರಳು ಹುರಿದಂತೆ ಮಾತನಾಡುವ, ನಡೆದುಕೊಳ್ಳುವ ಚಾತಿ ಹೊಂದಿರುವುದು ನಮ್ಮೆಲ್ಲರ ಸುದೈವ, ನಮ್ಮ ಶಾಲೆಯ ಎಲ್ಲಾ ಸಭೆ ಸಮಾರಂಭಗಳಲ್ಲಿ ಭಾಗವಹಿಸಿ ಆಶೀರ್ವಚನ ಮತ್ತು ಶಾಲೆಯ ಆಡಳಿತದ ಬಗ್ಗೆ ಸಲಹೆ ನೀಡುವುದನ್ನು ಕೇಳುವುದೇ ನಮ್ಮ ಸುದೈವ.
ಶ್ರೀ ಶ್ರೀ ಅನ್ನದಾನೇಶ್ವರ ನಾಥ ಸ್ವಾಮೀಜಿಗಳು ನೂರಕ್ಕೂ ಹೆಚ್ಚು ಜನ್ಮ ದಿನಗಳನ್ನು ಆಚರಿಸಿಕೊಳ್ಳಲಿ ಎಂದು ಭಕ್ತಾಧಿಗಳಾದ ನಾವು ಪ್ರಾರ್ಥಿಸೋಣ.
*ಲಕ್ಷ್ಮಿ ಗೋ ರಾ ಶ್ರೀನಿವಾಸ...*
*ಕರಾಟೆ ಮತ್ತು ಯೋಗ ಶಿಕ್ಷಕಿ*
*ಬಿಜಿಎಸ್ ವಲ್ಡ್೯ ಸ್ಕೂಲ್ ರಾಮನಗರ.*