ಪ್ರಕೃತಿ ಉಳಿಸಿ ಪೋಷಿಸಿ, ಅದು ನಿಮ್ಮನ್ನು ಪೊಷಿಸುತ್ತದೆ
ಪ್ರತಿ ವರ್ಷ ಜೂನ್ 1 ರಂದು ವಿಶ್ವ ಪರಿಸರ ದಿನವೆಂದು ಫೇಸ್ ಬುಕ್, ವಾಟ್ಸಪ್ ನಲ್ಲಿ ಮಿಂಚಲು ಕೆಲವರು ಗಿಡ ನೆಡುವ ಚಾಳಿ ಬೆಳೆಸಿಕೊಂಡಿರುವುದು ವಿಷಾದನೀಯ.
ಪರಿಸರ ಪ್ರೇಮಿಗಳಾದ ನಾವು ನಿತ್ಯವು ಪ್ರಕೃತಿ ಯೊಂದಿಗೆ ಬೆರೆತು ನಡೆಯುತ್ತಿದ್ದೇವೆ. ಸಸ್ಯ ನೆಡುವುದು, ಗಿಡ ಮರ ಪೋಷಿಸುವುದು ನಮ್ಮೆಲ್ಲರ ಆರಾಧ್ಯ ದೈವವಾಗಬೇಕು, ನಾವು ಪ್ರಕೃತಿಯನ್ನು ಪೂಜಿಸಬೇಕು, ಬೆಳೆಸಬೇಕು. ಇದರಿಂದ ಲಾಭವೇ ಹೊರತು ನಷ್ಟವಿಲ್ಲ.
ಮಾನವ ನಿರ್ಮಿತ ವಾಹನಗಳಿಂದಬಿಡುವ ಇಂಗಾಲ ಡೈಆಕ್ಸೈಡ್ಡನ್ನ ಹೀರಿ ನಮಗೆ ನಮ್ಮ ದೇಹಕ್ಕೆ ಬೇಕಾದಷ್ಟು ಆಮ್ಲಜನಕವನ್ನು ಪೂರೈಸುತ್ತಲೆ ಇದ್ದು, ಉತ್ತಮವಾದ ಗಾಳಿ, ಮಳೆ, ಬೆಳೆ, ಮನರಂಜನೆಯನ್ನು ನೀಡುತ್ತಾ ನಮ್ಮ ಆರೋಗ್ಯವಂತ ಬದುಕು ನಡೆಸಲು ಪರಿಸರ ದೈವದತ್ತ ಕೊಡುಗೆಯಾಗಿದೆ. ಪ್ರತಿ ಮನೆಯಲ್ಲೂ ಚಿಕ್ಕಜಾಗದಲ್ಲೆ ವಿವಿಧ ರೀತಿಯ ಗಿಡಗಳನ್ನು ನೆಟ್ಟು ನೀರುಣಿಸಿ ಪೋಷಿಸಿದ್ದೇ ಆದರೆ ನಮ್ಮ ಆಯುಷ್ಯ ಆರೋಗ್ಯಕ್ಕೆ ಯಾವ ಅಪಾಯವೂ ಇರುವುದಿಲ್ಲ. ಕಾಲಕ್ಕನುಗುಣವಾದ ಹೂವು, ಹಣ್ಣು-ಕಾಯಿ ತರಕಾರಿ, ಸೊಪ್ಪು ಇತ್ಯಾದಿಗಳನ್ನು ನಮಗೆ ಹೇರಳವಾಗಿ ದೊರಕಿಸಿಕೊಳ್ಳಬಹುದು.
ಬುದ್ದಿಜೀವಿಗಳಾದ ನಾವೆಲ್ಲರು ಮನಸ್ಸಿಟ್ಟು ಪರಿಸರ ರಕ್ಷಿಸಿ ಬೆಳೆಸಬೇಕು, ಗಿಡ ಮರಗಳು ನಾವು ತಿನ್ನುವ, ಉಣ್ಣುವ, ಉಡುವ ವಸ್ತುಗಳನ್ನು ಕಿತ್ತುಕೊಳ್ಳುತ್ತಿಲ್ಲ ನೆನಪಿರಲಿ.. ಪ್ಲಾಸ್ಟಿಕ್ ಹೊರತು ಪಡಿಸಿ, ಅಡುಗೆ ಮನೆಯಲ್ಲಿನ ಅನುಪಯುಕ್ತ ತ್ಯಾಜ್ಯ, ಹೊರ ಚೆಲ್ಲುವ, ಬಿಸಾಡುವ, ಉಳಿದ, ಹಸಿಕಸ ಗಿಡದ ಬುಡಕ್ಕೆ ಸುರಿದು ನೀರುಣಿಸಿದ್ದೆ ಆದರೆ ನಮ್ಮ ಕಣ್ಣ ಮುಂದೆಯೆ ಬೆಳೆಯುತ್ತ ಹೆಮ್ಮರವಾಗಿ ನೆರಳು ನೀಡುತ್ತಾ ನಮ್ಮ ಸುತ್ತ ಮುತ್ತಲಿನ ವಾತಾವರಣವನ್ನು ಕಣ್ಮನ ಸೆಳೆಯುವಂತೆ ಮಾಡುತ್ತಾ ವಿವಿಧ ಜಾತಿಯ ಪಕ್ಷಿಗಳು, ಚಿಟ್ಟೆಗಳು ಆಹಾರವನ್ನು ಉತ್ಪತಿಮಾಡಿಕೊಂಡು ಗಿಡ ಮರಗಳನ್ನಾಶ್ರಯಿಸಿಕೊಳ್ಳುತ್ತವೆ.
ಗಿಡ ಮರಗಳು ಹೆಚ್ಚಾದಂತೆ ಮೋಡವನ್ನು ಆಕರ್ಷಿಸಿ, ಮಳೆ ಸುರಿದು, ಜಾನುವಾರುಗಳಿಗೆ ಮೇವು ನೀರು ಒದಗಿಸುವಲ್ಲಿ ಪ್ರಕೃತಿ ಮೇಲುಗೈಸಾಧಿಸುತ್ತದೆ. ನಮ್ಮ ಜೀವ ಜೀವನ ಪರಿಸರ ಇರುವಷ್ಟೆ ದಿನ. ನಾವು ಬದಲಾಗಿ ಪರಿಸರ ಉಳಿಸಬೇಕು, ಪ್ರಕೃತಿಯನ್ನು ಬದಲಿಸಲು ಹೊರಟ ನಮ್ಮ ನಿಮ್ಮೆಲ್ಲರ ಬದುಕು 2 ವರ್ಷದಿಂದ ಕರೋನಾದ ಕಪಿಮುಷ್ಟಿಗೆ ಸಿಲುಕಿ ವಿಲವಿಲ ಒದ್ದಾಡಿ ಸಾವು ನೋವನ್ನು, ಮನೆಯ ಉಳಿದ ಸದಸ್ಯರನ್ನಾ ಎಣಿಸುವ ಸ್ಥಿತಿ ತಂದುಕೊಂಡಿದ್ದೇವೆ, ಬುದ್ಧಿ ಜೀವಿಗಳಾದ ನಾವೆಲ್ಲರೂ ನಮ್ಮ ಬದುಕಿಗಾಗಿ, ನಮ್ಮ ಮಕ್ಕಳ ಆರೋಗ್ಯಕ್ಕಾಗಿಯಾದರು ಸುತ್ತಮುತ್ತಲಿನ ವಾತಾವರಣ ಹಚ್ಚ ಹಸಿರಿನಿಂದ ಕೂಡಿರಲಿ. ಒಬ್ಬೊಬ್ಬರು ಒಂದೊಂದು ಗಿಡ ನೆಡಿ, ನಿಮ್ಮ ದೇಹಕ್ಕೆ ಆಹಾರ ನೀರು ಪೂರೈಸಿಕೊಂಡಂತೆ ಗಿಡಮರಕ್ಕೆ ಗೊಬ್ಬರ ಹಾಕಿ ನೀರುಣಿಸಿ ಪ್ರಕೃತಿ ಯನ್ನು ಸ್ವಾಗತಿಸಿ, ಗೌರವಿಸಿ. ಅದು ನಿಮ್ಮನ್ನು ಬಿಗಿದಪ್ಪಿಕೊಳ್ಳುತ್ತದೆ.
ಲಕ್ಷ್ಮಿ ಗೋ ರಾ ಶ್ರೀನಿವಾಸ.
ಜಾನಪದ ಕಲಾವಿದರು. (ಹವ್ಯಾಸಿ ಬರಹಗಾರ್ತಿ)
ಪ್ರತಿಕ್ರಿಯೆಗಳು