ಸೋಬಾನೆ ಪದಕ್ಕೆ ಜೀವ ತುಂಬುವ ಕೆಲಸ ಮಾಡಿದ ಮರಿದೇವರು
'ಸೋಬಾನೆ ಪದಗಳು' ಜನಪದ ಸಾಹಿತ್ಯ ಪರಂಪರೆಯ ಒಂದು ವಿಶಿಷ್ಟ ಗೀತ ಪ್ರಕಾರ. ಪ್ರಸ್ತುತ ಸಂದರ್ಭದಲ್ಲಿ ಬಳಕೆಯಲ್ಲಿಲ್ಲದ ಕಾರಣ ಈ ಪ್ರಕಾರ ಈಗ ಅಳಿವಿನ ಅಂಚಿನಲ್ಲಿದೆ. ಮದುವೆಯಂತಹ ಮಂಗಳ ಕಾರ್ಯಗಳಲ್ಲಿ ಹಾಡಲಾಗುತ್ತಿದ್ದ ಈ ಪದಗಳು ಜನಪದರ ಸೃಜನಶೀಲ ಶಕ್ತಿಯ ಪ್ರತೀಕಗಳಾಗಿವೆ.
ಜನಪದ ಸೊಗಡಿನ ಇಂಥ ವಿಶಿಷ್ಟ ಹಾಡುಗಬ್ಬಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಮರಿದೇವರು ಅವರು ಒಂದು ಶಾಶ್ವತವಾದ ಕಾರ್ಯಯೋಜನೆಯನ್ನು ರೂಪಿಸಿದ್ದರು. ತಮ್ಮ ತಂದೆ-ತಾಯಿಯರಾದ ಶ್ರೀಮತಿ ಕೆಂಪಮ್ಮ ಮತ್ತು ಶ್ರೀ ಸಿದ್ದೇಗೌಡ ಅವರ ಸ್ಮರಣಾರ್ಥವಾಗಿ ಇವರು ಪ್ರತಿವರ್ಷ 'ಸೋಬಾನೆ ಪದಗಳ ಗಾಯನ ಸ್ಪರ್ಧೆಯನ್ನು ಏರ್ಪಡಿಸುತ್ತಾ ಬಂದಿದ್ದಾರೆ. ಕಳೆದ ಒಂಬತ್ತು ವರ್ಷಗಳಿಂದ ಆಯೋಜಿಸುತ್ತಾ ಬಂದಿರುವ ಈ ಸ್ಪರ್ಧಾ ಕಾರ್ಯಕ್ರಮವು ಪ್ರಸಕ್ತ ವರ್ಷ (2014) 'ದಶಮಾನೋತ್ಸವ ಸಂಭ್ರಮ'ವನ್ನು ಕಾಣುತ್ತಿದೆ.
ಮರಿದೇವರು ಮೂಲತಃ ಗ್ರಾಮೀಣ ಪರಿಸರದಲ್ಲಿ ಹುಟ್ಟಿ ಬೆಳೆದವರು; ಅಲ್ಲಿನ ಜನರ ನೋವು-ನಲಿವು, ಸಂಕಟ- ಸಂಭ್ರಮಗಳನ್ನು ಅವರ ಜೊತೆಗಿದ್ದುಕೊಂಡೇ ಅನುಭವಿಸಿದವರು; ಅವರೆಲ್ಲರ ಬದುಕಿನ ವಿವಿಧ ಆಯಾಮಗಳನ್ನು ತೀರಾ ಹತ್ತಿರದಿಂದ ಕಂಡು ಅರಿತವರು. ಹೀಗಾಗಿ ಅವರಲ್ಲಿ ಸಹಜವಾಗಿಯೇ ಜನಪದ ಸೊಗಡಿನ ಸೆಳೆತವಿತ್ತು. ಗ್ರಾಮೀಣ ಪರಿಸರದಲ್ಲಿ ಒಂದಿಲ್ಲೊಂದು ಬಗೆಯಲ್ಲಿ ಪ್ರಕಟಗೊಳ್ಳುತ್ತಿದ್ದ ವಿವಿಧ ಬಗೆಯ ಜನಪದ ಕಲೆಗಳ ಸಮೃದ್ಧತೆ ಅವರನ್ನು ಆಕರ್ಷಿಸಿತ್ತು. ಇವರ ತಾಯಿಯವರೇ ಸ್ವತಃ ಸೋಬಾನೆ ಪದಗಳನ್ನು ಹಾಡುವ ಅಪ್ರತಿಮ ಹಾಡುಗಾರ್ತಿಯಾಗಿದ್ದುದ್ದು ಇವರಲ್ಲಿ ಜನಪದದ ಬಗೆಗೆ ಪ್ರೀತಿ, ಗೌರವ ಮತ್ತು ಆಸಕ್ತಿಗಳು ಅರಳಲು ಕಾರಣವಾಗಿತ್ತು.
ಇಂಥ ಜಾನಪದೀಯ ಹಿನ್ನೆಲೆ ಹೊಂದಿದ್ದ ಮರಿದೇವರು ತಮ್ಮ ತಂದೆ-ತಾಯಿಯರ ಗೌರವಾರ್ಥ ಪ್ರತಿವರ್ಷ 'ಸೋಬಾನೆ ಪದಗಳ ಗಾಯನ ಸ್ಪರ್ಧೆಯನ್ನು ನಡೆಸುತ್ತಾ ಬಂದಿದ್ದರು. ಆ ಮೂಲಕ ನಾಡಿನ ಮೂಲೆ ಮೂಲೆಗಳಿಂದ ಸೋಬಾನೆ ಪದಗಳ ಹಾಡುಗಾರರನ್ನು ಒಂದೆಡೆ ಕಲೆ ಹಾಕಿ ಅವರಲ್ಲಿನ ಪ್ರತಿಭೆಯ ಅನಾವರಣಕ್ಕೆ ಅವಕಾಶ ಮಾಡಿಕೊಟ್ಟಿದ್ದರು. ಭಾರೀ ಮೊತ್ತದ ನಗದು ಬಹುಮಾನಗಳನ್ನು ವಿಜೇತರಿಗೆ ನೀಡಿ ಅವರನ್ನು ಯಥೋಚಿತವಾಗಿ ಸತ್ಕರಿಸಿದ್ದಾರೆ. ಮರಿದೇವರು ಅವರು ತಮ್ಮ ಮಾತಾಪಿತೃಗಳ ಸ್ಮರಣೆಯನ್ನು ಅಳಿವಿನ ಅಂಚಿನಲ್ಲಿರುವ ನಮ್ಮ ಜನಪದ ಕಲೆಯಾದ ಸೋಬಾನೆ ಪದವನ್ನು ಹಾಡಿಸುವ ಮೂಲಕ ರಾಜ್ಯದಲ್ಲೇ ಮಾದರಿ ಕಾರ್ಯಕ್ರಮಕ್ಕೆ ನಾಂದಿ ಹಾಡಿದ್ದರು.
ಅಂದು 2005, ರಾಮನಗರ ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾಗಿದ್ದ ಮರಿದೇವರು ಅವರು ಅತ್ಯಂತ ಕ್ರಿಯಾಶೀಲರಾಗಿ ಸಮಾಜಸೇವಾ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದವರು. ರಾಮನಗರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಜೊತೆಯಲ್ಲಿ ಅನೇಕ ಕಾರ್ಯಕ್ರಮಗಳಿಗೆ ಸಹಕಾರ ನೀಡುತ್ತಿದ್ದ ಆ ಸಂದರ್ಭದಲ್ಲಿ ಒಂದು ಅರ್ಥಪೂರ್ಣ ಸಲಹೆಯನ್ನಿಟ್ಟರು, 'ನಮ್ಮ ಗ್ರಾಮೀಣ ಕಲೆಯಾದ ಸೋಬಾನೆ ಪದ ಕಣ್ಮರೆಯಾಗುತ್ತಿದೆ. ಅದನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ತಮ್ಮ ಮಾತಾಪಿತೃಗಳ ಹೆಸರಿನಲ್ಲಿ ಸೋಬಾನೆ ಪದಗಳ ಗಾಯನ ಸ್ಪರ್ಧೆಯನ್ನು ಆಯೋಜಿಸಿ ಅವರ ಎಲ್ಲಾ ವೆಚ್ಚವನ್ನು ನಾನು ಭರಿಸುತ್ತೇನೆ' ಎಂದರು. ಆಗ ರೂಪುಗೊಂಡಿದ್ದೆ ದಿವಂಗತ ಶ್ರೀಮತಿ ಕೆಂಪಮ್ಮ ಸಿದ್ದೇಗೌಡರ ಸ್ಮರಣಾರ್ಥ ಸೋಬಾನೆ ಪದಗಳ ಗಾಯನ ಸ್ಪರ್ಧೆ.
ಮೊದಲ ವರ್ಷ ರಾಮನಗರ ತಾಲ್ಲೂಕು ಸರ್ಕಾರಿ ನೌಕರರ ಸಂಘ ಹಾಗೂ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಡಿಯಲ್ಲಿ ಜಿಲ್ಲಾ ಮಟ್ಟದಲ್ಲಿ ಪ್ರಾರಂಭವಾದ ಈ ಸ್ಪರ್ಧೆಯು ಮೊದಲ ವರ್ಷವೆ 30 ತಂಡಗಳು ಭಾಗವಹಿಸಿದ್ದು ವಿಶೇಷವಾಗಿತ್ತು. ಸರ್ಕಾರಿ ನೌಕರರ ಸ್ಪೂರ್ತಿ ಭವನದ ಸಭಾಂಗಣದಲ್ಲಿ ನಿಲ್ಲಲು ಜಾಗವಿಲ್ಲದಷ್ಟು ಸೋಬಾನೆ ಹಾಡುಗಾರರಿಂದ ಕಿಕ್ಕಿರಿದು ತುಂಬಿತ್ತು. ಅಂದು ವೇದಿಕೆಯಲ್ಲಿ ಕಣ್ತುಂಬಿ ಮಾತನಾಡಿದ ಮರಿದೇವರು ಅವರು 'ನಮ್ಮ ತಂದೆತಾಯಿಯವರ ಸ್ಮರಣೆಯನ್ನು ಇಷ್ಟೊಂದು ಜನ ತಾಯಂದಿರು ಆಗಮಿಸಿ ಸೋಬಾನೆ ಪದ ಹಾಡುವ ಮೂಲಕ ಅರ್ಥಪೂರ್ಣವಾಗಿಸಿದ್ದೀರಿ, ಇನ್ನು ಮುಂದೆ ಪ್ರತಿವರ್ಷವೂ ಕೂಡ ಈ ಸ್ಪರ್ಧೆಯನ್ನು ಆಯೋಜಿಸುತ್ತೇನೆ' ಎಂದು ಅಂದೇ ಘೋಷಿಸಿದರು.
ಅಂದು ಜಿಲ್ಲಾ ಮಟ್ಟದಲ್ಲಿ 30 ತಂಡಗಳಿಂದ ಪ್ರಾರಂಭಗೊಂಡ ಈ ಸ್ಪರ್ಧೆಗೆ ಇಂದು ರಾಜ್ಯ ಮಟ್ಟದಲ್ಲಿ 150 ತಂಡಗಳು ಭಾಗವಹಿಸುತ್್ತಿದ್ದವು. ಸಾಗರ ತಾಲ್ಲೂಕಿನ ಹಿರೆಮನೆಯಿಂದ ಹಿಡಿದು ಮೈಸೂರು ಜಿಲ್ಲೆ, ಟಿ. ನರಸೀಪುರ, ಮಂಡ್ಯ, ಕೋಲಾರ, ತುಮಕೂರು, ಭದ್ರಾವತಿ, ಬೆಂಗಳೂರು ಗ್ರಾಮಾಂತರ ಹಾಗೂ ರಾಮನಗರ ಜಿಲ್ಲೆ ಸೇರಿದಂತೆ ರಾಜ್ಯದ ಮೂಲೆಮೂಲೆಯಿಂದ ಹಾಡುಗಾರರು ಪ್ರತಿ ವರ್ಷ ಆಗಮಿಸುತ್ತಿದ್ದರು. ವಿಶೇಷವೆಂದರೆ ಟಿ. ನರಸೀಪುರ ತಾಲ್ಲೂಕು ಒಂದರಲ್ಲೇ 15 ತಂಡಗಳು ಭಾಗವಹಿಸಿದ್ದು, ಹಳೆಯ ತಲೆಮಾರಿನ ಹಿರಿಯ ಹಾಡುಗಾರರ ಜೊತೆಯಲ್ಲಿ ಕನಕಪುರದ ಸಹಕಾರಿಗಳ ಕಲಾ ಕೂಟದ ಹೊಸತಲೆಮಾರಿನ ವಿದ್ಯಾರ್ಥಿಗಳು ಸೋಬಾನೆ ಪದ ಕಲಿತು ಹಾಡುತ್ತಿರುವುದು ಮತ್ತೊಂದು ವಿಶೇಷ. ಸ್ಪರ್ಧೆಯಲ್ಲಿ ವಿಜೇತರಾದವರಿಗೆ ನಗದು ಬಹುಮಾನ ನೀಡುವುದಲ್ಲದೆ ಭಾಗವಹಿಸಿದ ಎಲ್ಲರಿಗೂ ಪ್ರಶಸ್ತಿ ಪತ್ರ, ಉಡುಗೊರೆ, ಊಟ ತಿಂಡಿ ವ್ಯವಸ್ಥೆ, ಬಂದುಹೋಗವ ಪ್ರಯಾಣ ವೆಚ್ಚ ಎಲ್ಲವನ್ನು ನೀಡಿ ಒಂದು ಅಪರೂಪದ ಅಥಪೂರ್ಣ ಕಾರ್ಯಕ್ರಮವನ್ನು ಮಾಡುತ್ತಾ ಬಂದಿದ್ದರು ಮರಿದೇವರು.
ಹಲವು ಮಂದಿ ತಮ್ಮ ತಂದೆ-ತಾಯಿಯರ ಸ್ಮರಣಾರ್ಥವಾಗಿ ವಿಭಿನ್ನ ಬಗೆಯ ಕಾರ್ಯಕ್ರಮಗಳನ್ನು ಆಯೋಜಿಸತ್ತಾರೆ; ದಾನ-ದತ್ತಿಗಳನ್ನು ನೀಡಿ ಕೃತಕೃತ್ಯರಾಗುತ್ತಾರೆ. ಆದರೆ ಮರಿದೇವರು ಅವರ ಚಿಂತನೆಯ ವಿಧಾನವೇ ವಿಶಿಷ್ಟವಾದುದು. ಅವರು ತಮ್ಮ ತಂದೆ-ತಾಯಿಯವರ ನೆನಪನ್ನು ಉಳಿಸುವುದರ ಜೊತೆಗೆ ಅಳಿವಿನ ಅಂಚಿನಲ್ಲಿರುವ ಜನಪದ ಪ್ರಕಾರವೊಂದನ್ನು ಉಳಿಸಿ ಬೆಳೆಸುವ ಸಾರ್ಥಕ ಕಾರ್ಯಗೊಂಡಿದ್ದಾರೆ. ಇದರಿಂದ ಸೋಬಾನೆ ಪದಗಳು ತಮ್ಮ ಗತವೈಭವವನ್ನು ಮರುಸ್ಥಾಪಿಸಿಕೊಂಡು ಹಸಿರಾಗಿ ನಳನಳಿಸುತ್ತವೆ; ಅಂತೇಯೇ ಮರಿದೇವರುರವರ ತಂದೆ-ತಾಯಿಯವರ ಹೆಸರುಗಳನ್ನು ಬಹುಕಾಲ ಚಿರಸ್ಥಾಯಿಯಾಗಿ ಉಳಿಸುತ್ತವೆ. ತಮ್ಮ ತಂದೆತಾಯಿಯವರ ಸ್ಮರಣೆಯನ್ನು ಮಾಡುವುದರ ಜೊತೆಯಲ್ಲಿ ಕಣ್ಮರೆಯಾಗುತ್ತಿರುವ ನಮ್ಮ ಜನಪದ ಕಲೆ ಸೋಬಾನೆ ಪದಕ್ಕೆ ಜೀವ ತುಂಬುವ ಕೆಲಸ ಮಾಡಿದ ಮರಿದೇವರು ಅಭಿನಂದನಾರ್ಹರು.
ಲೇಖನ : ಎಸ್. ರುದ್ರೇಶ್ವರ, ರಾಮನಗರ.
(2014ರ ಆಗಸ್ಟ್ ತಿಂಗಳ 18ರಂದು ಬರೆದಿದ್ದ ಲೇಖನ. ಆಗ ಸೋಬಾನೆ ಪದಗಳ ಗಾಯನ ಸ್ಪರ್ಧೆಗೆ ಹತ್ತು ವರ್ಷ ತುಂಬಿತ್ತು)
Recent news in literature »
ರಾಮಚಂದ್ರ ಬರೆದಿರುವ ಸಂಪ್ರೀತಿ ರಾಮಾಯಣ ಪಠ್ಯಪುಸ್ತಕ ಸಮಿತಿಗೆ ಆಯ್ಕೆ
ರಾಜ್ಯ ಪಠ್ಯಪುಸ್ತಕ ಸಮಿತಿಗೆ ಮಾಗಡಿ ತಾಲೂಕಿನ ತಿಪ್ಪಸಂದ್ರ ಹೋಬಳಿ ದೊಡ್ಡಸೋಮನಹಳ್ಳಿ ಲೇಖಕರಾದ ಡಾ. ಡಿ.ಸಿರಾಮಚಂದ್ರ ಬರೆದಿರುವ ಸಂಪ್ರೀತಿ ರಾಮಾಯಣ ಪುಸ್ತಕ ಆಯ್ಕೆಯಾಗಿದೆ.
ಡಾ ಡಿ ಸಿ ರಾಮಚಂದ್ರ ರವರ ಸಂಪ್ರೀತಿ ರಾಮಾಯಣ ಪುಸ್ತಕವು ಶ್ರೀರಾಮನ್ನು ನೆನಪಿಸುತ್ತದೆ. ಪ್ರದೀಪ್ ಕುಮಾರ್ ಹೆಬ್ರಿ
\'ಸಂಪ್ರೀತಿ ರಾಮಾಯಣ\' ಎಂಬ ಕೃತಿಯನ್ನು ಡಾ/ಡಿ.ಸಿ. ರಾಮಚಂದ್ರ ಅವರು ಬಹಳ ಶ್ರದ್ಧೆಯಿಂದ ರಚಿಸಿದ್ದು, 13 ಅಧ್ಯಾಯಗಳಲ್ಲಿ ಆಕರ್ಷಕ ಚಂದದ ಚಿತ್ರಗಳಿಂದ ಕೂಡಿ ಸುಂದರವಾಗಿ ಮುದ್ರಣಗೊಂಡು ಓದುಗರ ಮನ ಸೆಳೆ
ಗೌಡಗೆರೆ ಕ್ಷೇತ್ರದಲ್ಲಿ ಅದ್ದೂರಿ ಲಕ್ಷ ದೀಪೋತ್ಸವ. \'ಜಗನ್ಮಾತೆಯ ವಿಶ್ವರೂಪ ದರ್ಶನ\' ಕೃತಿ ಲೋಕಾರ್ಪಣೆ
ಚನ್ನಪಟ್ಟಣ: ತಾಲೂಕಿನ ಗೌಡಗೆರೆ ಗ್ರಾಮದ ಶ್ರೀ ಚಾಮುಂಡೇಶ್ವರಿ ಬಸವಪ್ಪ ಪುಣ್ಯಕ್ಷೇತ್ರದಲ್ಲಿ ಶನಿವಾರ ಅದ್ದೂರಿ ಲಕ್ಷ ದೀಪೋತ್ಸವ ಕಾರ್ಯಕ್ರಮ ಜರು
ಸೂಫಿ ಗಾಯಕ ಜನಾಬ್ ಮೊಹಮ್ಮದ್ ಗೆ ಹೆಚ್ ಎಲ್ ನಾಗೇಗೌಡ ರಾಷ್ಟ್ರೀಯ ಪ್ರಶಸ್ತಿ ಪ್ರದಾನ.
ಬೆಂಗಳೂರು.ನ.೨೯: ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಕರ್ನಾಟಕ ಜಾನಪದ ಪರಿಷತ್ತು ವತಿಯಿಂದ ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ಪರಿಷತ್ತಿನ ಸಂಸ್ಥಾಪಕ, ಜಾನಪದ ಪರಿಷತ್ತಿನ ರೂವಾರಿ ನಾಡೋಜ ಎಚ್.ಎ
ಪರಿಷತ್ತಿನ ಘನತೆಗೆ ತಕ್ಕುದಾದ ವ್ಯಕ್ತಿ ಪಾರ್ವತೀಶ್ ಬಿಳಿದಾಳೆ
ರಾಮನಗರ.ನ.೧೮: ಈ ಬಾರಿಯ ರಾಮನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಘನತೆ ಹೆಚ್ಚಾಗಬೇಕಾದರೆ ಕನ್ನಡದ ಕಟ್ಟಾಳು, ಲೇಖಕ ಪಾರ್ವತೀಶ್ ಬಿಳಿದಾಳೆ
ಕಸಾಪ ಜಿಲ್ಲಾಧ್ಯಕ್ಷ ಚುನಾವಣೆ: ಬಿ.ಟಿ.ನಾಗೇಶ್ ಬೆಂಬಲಿಸಲು ಸಾಹಿತ್ಯಾಸಕ್ತರ ಮನವಿ
ಚನ್ನಪಟ್ಟಣ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಹಸ್ಪರ್ಧಿಗಳ ಪೈಕಿ ಬಿ ಟಿ ನಾಗೇಶ್ ಮೊದಲ ಸ್ಥಾನದಲ್ಲಿ ನಿಲ್ಲುತ್ತಾರೆ. ಅವರಿಗೆ ಜಿಲ್ಲೆಯ ಕಸ
ಎಂ ಎಲ್ ಮಾದಯ್ಯನವರ ಜೀವನ ನಮಗೆಲ್ಲರಿಗೂ ಆದರ್ಶಣೀಯ. ಸಚಿವ ಡಾ ಸಿ ಎನ್ ಅಶ್ವಥ್ ನಾರಾಯಣ
ಚನ್ನಪಟ್ಟಣ.ನ.06/21: ನಗರದ ಶತಮಾನೋತ್ಸವ ಭವನದಲ್ಲಿ ನಿವೃತ್ತ ಮುಖ್ಯ ಇಂಜಿಯರ್ ಎಂ.ಎಲ್ ಮಾದಯ್ಯನವರ ‘ಜೀವನಸೌಧ-ಹಳ್ಳಿಹೈದನ ತಾಂತ್ರಿಕಗಾಥೆ’ ಎಂಬ
ಶನಿವಾರ ಎಂ ಎಲ್ ಮಾದಯ್ಯನವರ ಜೀವನ ಸೌಧ ಕೃತಿ ಲೋಕಾರ್ಪಣೆ
ಚನ್ನಪಟ್ಟಣ.ನ.೦೨: ಇದೇ ತಿಂಗಳು 6 ನೇ ತಾರೀಖಿನ ಶನಿವಾರ ದಂದು ಬೆಳಿಗ್ಗೆ 10.30 ಕ್ಕೆ ನಗರದ ಬಾಲಕರ ಸರ್ಕಾರಿ ಕಿರಿಯ ಕಾಲೇಜಿನಲ್ಲಿ ಹೊರಾಂಗಣದಲ್ಲಿರುವ ಶತಮಾನೋತ್ಸವ ಭವನದಲ್ಲಿ ‘ತಮ್ಮ ಜೀವನ ಸೌಧ’ ಹಳ್
ಬುದ್ದನ ಸಕಾರತ್ಮಕ ಚಿಂತನೆಗಳು ಮನೋಬಲವನ್ನು ಹೆಚ್ಚಿಸುವುದರ ಮೂಲಕ :ಆತ್ಮಹತ್ಯೆ ಆಲೋಚನೆಯಿಂದ ದೂರವಿಡುತ್ತವೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ವಿಭಾಗ, ತಾಲ್ಲೂಕು ಆರೋಗ್ಯ ಅಧಿಕಾರಿಗಳ ಕಚೇರಿ ಹಾಗೂ ರೋಟರಿ ಸಿಲ್ಕ್ ಸಿಟಿ ಮತ್ತು ರಾಮನಗ
ಅಪ್ಪನಭುಜ ಎಲ್ಲಾ ಸಿಂಹಾಸನಗಳನ್ನು ಮೀರಿಸಿದ್ದು. ಮಾಯಣ್ಣ
ಅಪ್ಪನ ಭುಜವು ಎಲ್ಲಾ ಮಕ್ಕಳಿಗೂ ಅತಿ ಎತ್ತರದ ಸಿಂಹಾಸನ. ಅದನ್ನೇರದ ಮಕ್ಕಳಿಲ್ಲ. ಯಾವುದೇ ಜಾತ್ರೆ, ಸರ್ಕಸ್, ದೇವರನ್ನು ನೋಡಬೇಕೆಂದರೆ ನಮಗೆ ಅಪ್ಪನ ಭುಜವೇ ಸಿಂಹಾಸನವಾಗಿತ್ತು ಎಂದು ಕನ್ನಡ ಸಾಹಿತ್ಯ ಪ
ಪ್ರತಿಕ್ರಿಯೆಗಳು