ಮುಂಗಾರಿನಲ್ಲಿ ಎರಡು ತಾಲೂಕುಗಳು ಹಾಗೂ ಹಿಂಗಾರು ಋತುವಿನಲ್ಲಿ ಜಿಲ್ಲೆಯ ಮೂರು ತಾಲೂಕುಗಳನ್ನು ಬರ ಪೀಡಿತವೆಂದು ಘೋಷಿಸಲಾಗಿದ್ದು, ಇಲ್ಲಿನ ವಸ್ತುಸ್ಥಿತಿಯನ್ನು ಪರಿಶೀಲಿಸಿ ಸರ್ಕಾರಕ್ಕೆ ವರದಿ ನೀಡಲು ಜಿಲ್ಲೆಗೆ ಸಚಿವ ಸಂಪುಟ ಉಪ ಸಮಿತಿ ಭೇಟಿ ನೀಡಿದೆ ಎಂದು ಕೃಷಿ ಸಚಿವ ಶಿವಶಂಕರ ರೆಡ್ಡಿ ಅವರು ತಿಳಿಸಿದರು.
ಅವರು ಜ.10ರ ಗುರುವಾರ ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಬರ ಪೀಡಿತ ಪ್ರದೇಶಗಳ ಅಧ್ಯಯನ ಮತ್ತು ಬರ ನಿರ್ವಹಣಾ ಕಾಮಗಾರಿಗಳ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.
ಬರದಿಂದಾಗಿ ಕಳೆದ ಮುಂಗಾರಿನಲ್ಲಿ 31,506 ಹೆಕ್ಟೇರ್ ಬೆಳೆ ನಾಶವಾಗಿದೆ, ಅದರ ಪರಿಹಾರಕ್ಕಾಗಿ 21 ಕೋಟಿ ರೂಪಾಯಿ ಒದಗಿಸಿಕೊಡುವಂತೆ ಬೇಡಿಕೆ ಬಂದಿದ್ದು, ಇಲ್ಲಿನ ವಸ್ತುಸ್ಥಿತಿಯನ್ನು ಅವಲೋಕಿಸಿ ಸರ್ಕಾರಕ್ಕೆ ವರದಿ ನೀಡಲಾಗುವುದು, ಹಿಂಗಾರು ಹಾಗೂ ಮುಂಗಾರು ಎರಡು ಸಹ ಜಿಲ್ಲೆಗೆ ನಷ್ಟವುಂಟು ಮಾಡಿವೆ. ಮುಂಗಾರು ಹಂಗಾಮಿಗೆ ಕನಕಪುರ, ಮಾಗಡಿ ತಾಲೂಕುಗಳ ಬರ ಪೀಡಿತ ಪ್ರದೇಶಗಳೆಂದು ಘೋಷಣೆಯಾಗಿದ್ದರೆ, ಹಿಂಗಾರಿನ ಹಂಗಾಮಿಗೆ ರಾಮನಗರ, ಕನಕಪುರ ಹಾಗೂ ಮಾಗಡಿ ತಾಲೂಕು ಬರ ಪೀಡಿತವೆಂದು ಘೋಷಿಸಲಾಗಿದೆ ಎಂದರು.
ಕಳೆದ ಸಾಲಿನ ಹಿಂಗಾರು ಸಾಲಿನಲ್ಲಿ ಫಸಲï ಭಿಮಾ ವಿಮೆ ಪರಿಹಾರ ಬಾಕಿ ಇದ್ದು, ಶೀಘ್ರ ಪಾವತಿಗೆ ಕ್ರಮ ಜರುಗಿಸಲಾಗುವುದು, ಪ್ರಸಕ್ತ ಸಾಲಿನಿಂದ ಬೆಳೆ ವಿಮೆ ನೋಂದಣಿಯಲ್ಲಿ ಪ್ರಮುಖ ಮಾರ್ಪಾಡು ಮಾಡಲಾಗಿದೆ. ಪ್ರತಿ ತಾಲೂಕಿನಲ್ಲಿ ವಿಮೆ ಪ್ರತಿನಿಧಿ ಇದ್ದು, ಉಸ್ತುವಾರಿ ನೋಡಿಕೊಳ್ಳುವಂತೆ ಸೂಚಿಸಲಾಗಿದೆ. ಈ ಹಿಂದೆ ವಿಮೆ ಪರಿಹಾರ ನೀಡುವಲ್ಲಿ ಬ್ಯಾಂಕುಗಳ ನಿರ್ಲಕ್ಷ್ಯ ಮನೋಭಾವ ಕಂಡುಬರುತ್ತಿತ್ತು, ಆದ ಕಾರಣ ಈ ಬಾರಿ ವಿಮಾ ಪ್ರತಿನಿಧಿಗಳು ಇರುವಂತೆ ನೋಡಿಕೊಳ್ಳಲಾಗಿದೆ. ಟೆಂಡರ್ ನೀಡುವ ಮೊದಲೇ ವಿಮೆ ಪ್ರತಿನಿಧಿಯ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲಾಗುತ್ತಿದೆ. ಈ ದಿಸೆಯಲ್ಲಿ ಮುಂಬರುವ ದಿನಗಳಲ್ಲಿ ರೈತರಿಗೆ ವಿಮೆ ಪರಿಹಾರದ ಸಮಸ್ಯೆ ಉದ್ಭವಿಸುವುದಿಲ್ಲ ಎಂದವರು ಹೇಳಿದರು.
ಕೃಷಿ ಇಲಾಖೆಯು ನಡೆಸುತ್ತಿರುವ ಸಮೀಕ್ಷೆಗಳು ಮುಂದಿನ ವಾರದೊಳಗೆ ಪೂರ್ಣಗೊಳ್ಳಲಿದ್ದು, ವಾಸ್ತವದ ಚಿತ್ರಣದ ಕೇಂದ್ರ ಸರ್ಕಾರದ ಮುಂದಿಡಲಾಗುವುದು, ಕುಡಿಯುವ ನೀರು, ಮೇವಿನ ಲಭ್ಯತೆ, ಬೆಳೆ ನಷ್ಟ ಪ್ರಮಾಣದ ವಿವರವನ್ನು ಪಡೆಯಲಾಗಿದೆ. ಕುಡಿಯುವ ನೀರು ಪೂರೈಕೆಗೆ ಸರ್ಕಾರದಿಂದ ಪ್ರತಿ ತಾಲೂಕಿಗೆ 50 ಲಕ್ಷ ರೂ.ಗಳ ಅನುದಾನ ನೀಡಲಾಗಿದೆ. ಈ ಅನುದಾನ ಬಳಸಿಕೊಂಡು ಕೂಡಲೇ ಕಾರ್ಯಪ್ರವೃತ್ತರಾಗಬಹುದಾಗಿದೆ, ಮೇವು ಕಿಟ್ ವಿತರಣೆಯಂತಹ ಆದ್ಯತೆಯ ಕಾರ್ಯಗಳನ್ನು ಶೀಘ್ರವಾಗಿ ಆರಂಭಿಸಲಾಗುವುದು ಎಂದು ಅವರು ಹೇಳಿದರು.
ಸಮಿತಿಯ ಸದಸ್ಯರಾಗಿರುವ ಜಲಸಂಪನ್ಮೂಲ, ಕನ್ನಡ ಮತ್ತು ಸಂಸ್ಕøತಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಿ.ಕೆ. ಶಿವಕುಮಾರ್ ಅವರು ಮಾತನಾಡಿ, 21 ಕೋಟಿ ರೂ.ಗಳ ಬೆಳೆ ನಷ್ಟ ಮುಂಗಾರು ಹಂಗಾಮಿನಲ್ಲಿ ಉಂಟಾಗಿದೆ, ಮುಂಬರುವ ದಿನಗಳಲ್ಲಿ ಕುಡಿಯುವ ನೀರು ಪೂರೈಕೆ, ಜಾನುವಾರುಗಳಿಗೆ ಅಗತ್ಯ ಲಸಿಕೆ ನೀಡುವ ಹಾಗೂ ಬರಗಾಲವನ್ನು ಸಮರ್ಥವಾಗಿ ಎದುರಿಸಲು ಕೈಗೊಳ್ಳಬೇಕಾದ ಅಗತ್ಯ ಸಿದ್ದತೆಗಳನ್ನು ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಅಧಿಕಾರಿಗಳು ಕಡ್ಡಾಯವಾಗಿ ಕೇಂದ್ರ ಸ್ಥಾನದಲ್ಲಿರಬೇಕು.
ಜಿಲ್ಲೆಯ ಎಲ್ಲಾ ಅಧಿಕಾರಿಗಳು ಹಾಗೂ ಸಿಬ್ಬಂದಿ ಕಡ್ಡಾಯವಾಗಿ ತಮ್ಮ ಕಾರ್ಯಕ್ಷೇತ್ರ ವ್ಯಾಪ್ತಿಯಲ್ಲೇ ವಾಸ್ತವ್ಯ ಹೂಡಬೇಕು. ಅದನ್ನು ಉಲ್ಲಂಘಿಸಿದರೆ ಸಂಬಂಧಿಸಿದವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದರು.
ಬರ ಸಂದರ್ಭದಲ್ಲಿ ಎದುರಾಗುವ ತುರ್ತು ಸಮಯದಲ್ಲಿ ಅಧಿಕಾರಿಗಳು ಲಭ್ಯವಿರಬೇಕು. ದೂರದ ಊರುಗಳಿಂದ ಓಡಾಡುತ್ತಿದ್ದರೆ ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸಲು ಸಾಧ್ಯವಾಗುವುದಿಲ್ಲ. ಅಧಿಕಾರಿಗಳು ತಮ್ಮ ಕಾರ್ಯಕ್ಷೇತ್ರ ವ್ಯಾಪ್ತಿಯಲ್ಲೇ ವಾಸ್ತವ್ಯ ಹೂಡಬೇಕು. ಬೇರೆ ಸ್ಥಳಗಳಿಂದ ಓಡಾಡುವುದಾದರೆ ಸರ್ಕಾರದಿಂದ ಎಚ್ಆರ್ಎ ಸೌಲಭ್ಯ ಏಕೆ ಪಡೆಯಬೇಕು? ಎಂದು ಅವರು ಪ್ರಶ್ನಿಸಿದರು.
ಈ ಬಗ್ಗೆ ಒಂದು ವಾಟ್ಸ್ಪ್ ಗ್ರೂಪ್ ಮಾಡಿ. ಇಲ್ಲಿ ಜಿಲ್ಲಾಧಿಕಾರಿಗಳು, ಉಪವಿಭಾಗಾಧಿಕಾರಿಗಳು, ಸಿಇಒ, ತಹಶೀಲ್ದಾರ್, ಇಒ, ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು, ಪಿಡಿಒ, ಕಾರ್ಯದರ್ಶಿ ಸೇರಿದಂತೆ ಎಲ್ಲರ ಚಲನ ವಲನಗಳು ತಮಗೆ ತಿಳಿಯಬೇಕು. ಪ್ರತಿನಿತ್ಯ ನಮಗೆ ಈ ಮಾಹಿತಿ ಅಪ್ಡೇಟ್ ಆಗಬೇಕು ಎಂದರು.
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸಂಸದರಾದ ಡಿ.ಕೆ.ಸುರೇಶ್ ಅವರು ಮಾತನಾಡಿ, ರಾಮನಗರ ಗುಡ್ಡಗಾಡು ಪ್ರದೇಶಗಳಿಂದ ಸುತ್ತವರಿದ ಜಿಲ್ಲೆಯಾಗಿದೆ. ಇಲ್ಲಿ ಅರಣ್ಯಪ್ರದೇಶವಿದ್ದು, ಭನ್ನೇರುಘಟ್ಟ, ಮಹದೇಶ್ವರ ವಲಯದ ಅರಣ್ಯ ಪ್ರದೇಶ, ಕೊಳ್ಳೇಗಾಲ, ಸಾವನದುರ್ಗ ಸೇರಿದಂತೆ ಸುತ್ತಮುತ್ತಲಿನ ಅರಣ್ಯ ಪ್ರದೇಶಕ್ಕೆ ಜಿಲ್ಲೆಯ ಗಡಿ ಹೊಂದಿಕೊಂಡಿದೆ. ಕಾಡಂಚಿನ ಪ್ರದೇಶಗಳಲ್ಲಿ ಆನೆ ಸೇರಿದಂತೆ ಇತರೆ ಪ್ರಾಣಿಗಳ ದಾಳಿಯಿಂದ ಸಾಕಷ್ಟು ಬೆಳೆ ಹಾನಿ ಆಗುತ್ತಿದೆ. ರೈತರು ತೊಂದರೆ ಅನುಭವಿಸುತ್ತಿದ್ದಾರೆ. ಬೆಳೆ ಬೆಳೆಯುವುದನ್ನೇ ಕೈ ಬಿಡುವ ಪರಿಸ್ಥಿತಿಯಲ್ಲಿದ್ದಾರೆ. ಇದನ್ನೂ ಸಹ ವಿಮೆ ವ್ಯಾಪ್ತಿಗೆ ತರಲು ಕ್ರಮಕೈಗೊಳ್ಳಿ ಎಂದು ಕೃಷಿ ಇಲಾಖೆ ಹಿರಿಯ ಅಧಿಕಾರಿಗಳಿಗೆ ತಿಳಿಸಿದರು.
ಈ ಬಗ್ಗೆ ಚರ್ಚೆ ಆಗಬೇಕು. ಕೆಲ ಕಾನೂನುಗಳನ್ನು ತಿದ್ದುಪಡಿ ಮಾಡಬೇಕು. ಕೃಷಿ ಇಲಾಖೆ ಆಯುಕ್ತರು ಸರ್ಕಾರಕ್ಕೆ ಮನವಿ ಸಲ್ಲಿಸುವ ವೇಳೆ ಈ ಮನವಿಯನ್ನು ಸೇರಿಸಬೇಕು ಎಂದು ಇದೇ ವೇಳೆ ಕೃಷಿ ಸಚಿವ ಎನ್.ಎಚ್.ಶಿವಶಂಕರ್ರೆಡ್ಡಿ ಅವರು ಸೂಚಿಸಿದರು.
ಪಶುಸಂಗೋಪನ ಇಲಾಖೆ ಬರ ಪರಿಹಾರಕ್ಕೆ ತೆಗೆದುಕೊಂಡ ಕೆಲಸ ಕಾರ್ಯಗಳ ಪ್ರಗತಿ ಪರಿಶೀಲನೆಯಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್ ಅಗತ್ಯ ಮೇವನ್ನು ನೀರಾವರಿ ಸೌಲಭ್ಯ ಇರುವ ಜಿಲ್ಲೆಯ ರೈತರೇ ಬೆಳೆದುಕೊಂಡುವಂತೆ ರೈತರನ್ನು ಒಪ್ಪಿಸಿ. ಕಳೆದ ಬಾರಿ ಈ ರೀತಿ ಮಾಡಲಾಗಿತ್ತು. ಹೋಬಳಿಗೆ 50-100 ಎಕರೆ ಪ್ರದೇಶದಲ್ಲಿ ರೈತರಿಗೆ ಮಿನಿಕಿಟ್ ನೀಡಿ, ಮೇವು ಖರೀದಿಸುವ ಒಪ್ಪಂದವÀನ್ನು ರೈತರೊಂದಿಗೆ ಮಾಡಿ. ಇದು ಇಂದಿನಿಂದಲೇ ಚಾಲನೆಗೆ ಬರಬೇಕು ಎಂದರು.
ಮಹತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ: ನರೇಗಾ ಕಾಮಗಾರಿ ಪರಿಶೀಲನೆ ವೇಳೆ ಮಾತನಾಡಿದ ಸಚಿವರಾದ ಡಿ.ಕೆ. ಶಿವಕುಮಾರ್ ಅವರು, ಕನಕಪುರ ಮತ್ತು ಮಾಗಡಿಯಲ್ಲಿ ನರೇಗಾ ಪ್ರಗತಿ ಹೆಚ್ಚಿದೆ. ರಾಮನಗರ ಮತ್ತು ಚನ್ನಪಟ್ಟಣ ತಾಲ್ಲೂಕಿನಲ್ಲಿ ನರೇಗಾ ಪ್ರಗತಿಗೆ ಹೆಚ್ಚಿನ ಒತ್ತು ನೀಡುವಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮುಲೈ ಮುಹಿಲನ್ ಅವರಿಗೆ ಸೂಚನೆ ನೀಡಿದರು.
ಹಿಂದೆ ನರೇಗಾ ಅನುಷ್ಠಾನದಲ್ಲಿ ಜಿಲ್ಲೆಯ ರಾಜ್ಯದ ಗಮನ ಸೆಳೆದಿತ್ತು. ಹೆಚ್ಚು ಅನುದಾನವನ್ನು ಸದ್ಬಳಕೆ ಮಾಡಿಕೊಳ್ಳಲಾಗಿತ್ತು. ಆದರೆ ಈಗ ಜಿಲ್ಲೆ 8ನೇ ಸ್ಥಾನದಲ್ಲಿದೆ. ರಾಮನಗರ ಮತ್ತು ಚನ್ನಪಟ್ಟಣ ತಾಲ್ಲೂಕಿನಲ್ಲೂ ಹೆಚ್ಚು ಗಮನವರಿಸಿ. ನರೇಗಾ ಕಾಮಗಾರಿ ಬಗ್ಗೆ ಅರಿವು ಮೂಡಿಸಲು ಜಿ.ಪಂ, ತಾ.ಪಂ ಹಾಗೂ ಗ್ರಾ.ಪಂ ಸದಸ್ಯರನ್ನು ಕರೆದು ನರೇಗಾ ಪ್ರಗತಿಗೆ ಪ್ರೇರೇಪಿಸಬೇಕು. ಜೈನ್ ಕಾಲೇಜಿನ ಹಾಲ್ನಲ್ಲಿ ವ್ಯವಸ್ಥೆ ಕಲ್ಪಿಸಿ ನರೇಗಾ ಅರಿವು ಕಾರ್ಯಗಾರ ಹಮ್ಮಿಕೊಳ್ಳಿ. ಶೀಘ್ರ ದಿನಾಂಕ ನಿಗದಿ ಮಾಡುವುದಾಗಿ ತಿಳಿಸಿದರು.
ಪ್ರಸಾದ ಸೇವನೆಯಲ್ಲಿ ಎಚ್ಚರ:
ಪ್ರಸ್ತುತ ಎಲ್ಲೆಡೆ ಜಾತ್ರೆ, ಉತ್ಸವದಂತಹ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗುತ್ತಿವೆ. ಈ ಬಗ್ಗೆ ಉಪವಿಭಾಗಾಧಿಕಾರಿಗಳು ಎಲ್ಲೆಲ್ಲಿ ಸಾರ್ವಜನಿಕವಾಗಿ ಪ್ರಸಾದ ವಿತರಿಸಲಾಗುತ್ತಿದೆಯೋ ಅಲ್ಲೆಲ್ಲಾ ಸೂಕ್ತ ತಿಳುವಳಿಕೆ ನೀಡಬೇಕು. ನೊಟೀಸ್ ನೀಡಿ ಆಹಾರ ಪದಾರ್ಥ ತಯಾರಿಕೆಯಲ್ಲಿ ಎಚ್ಚರಿಕೆಯಿಂದಿರಲು ಹಾಗೂ ಸ್ವಚ್ಛತೆಗೆ ಆದ್ಯತೆ ನೀಡಲು ಆಯೋಜಕರಿಗೆ ಸೂಚಿಸಬೇಕು ಎಂದರು.
ಜಿಲ್ಲೆಯಲ್ಲಿ ಎಲ್ಲಿಯೂ ಸಣ್ಣಪುಟ್ಟ ಅಸ್ವಸ್ಥ ಪ್ರಕರಣಗಳಿಗೂ ಅವಕಾಶ ನೀಡಬಾರದು ಎಂದರು.
ಸಾರಿಗೆ ಸಚಿವರು ಬರ ಪೀಡಿತ ಪ್ರದೇಶಗಳ ಅಧ್ಯಯನ ಮತ್ತು ಬರ ನಿರ್ವಹಣಾ ಕಾಮಗಾರಿಗಳ ಪರಿಶೀಲನೆಯ ಸಚಿವ ಸಂಪುಟ ಉಪ ಸಮಿತಿ ಸದಸ್ಯರಾದ ಡಿ.ಸಿ. ತಮ್ಮಣ್ಣ ಮಾತನಾಡಿದರು.
ಕಾರ್ಮಿಕ ಸಚಿವ ವೆಂಕಟರಮಣಪ್ಪ, ಸಣ್ಣ ಕೈಗಾರಿಕೆ ಸಚಿವ ಎಸ್.ಆರ್.ಶ್ರೀನಿವಾಸ್(ವಾಸು), ಶಾಸಕ ಎ.ಮಂಜು, ವಿಧಾನಪರಿಷತ್ ಸದಸ್ಯರಾದ ಸಿ.ಎಂ.ಲಿಂಗಪ್ಪ, ಎಸ್.ರವಿ, ಅ.ದೇವೇಗೌಡ, ಕೃಷಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮಹೇಶ್ವರ ರಾವ್, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಅಜಯ್ ಸೇಠ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ. ರಮೇಶ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮುಲ್ಲೈ ಮುಹೀಲನ್ ಹಾಗೂ ಇತರೆ ಅಧಿಕಾರಿಗಳು ವೇದಿಕೆಯಲ್ಲಿದ್ದರು.
ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ. ಕೆ. ರಾಜೇಂದ್ರ ಸ್ವಾಗತಿಸಿ, ಜಿಲ್ಲೆಯ ವಸ್ತುಸ್ಥಿತಿಯನ್ನು ತಂಡಕ್ಕೆ ಮನವರಿಕೆ ಮಾಡಿಕೊಟ್ಟರು.
ಸಚಿವ ಸಂಪುಟ ಉಪ ಸಮಿತಿಯ ಭೇಟಿ: ಉಪಸಮಿತಿಯಲ್ಲಿದ್ದ ಅಧ್ಯಕ್ಷರು ಹಾಗೂ ಸದಸ್ಯರು ಮೊದಲಿಗೆ ರಾಮನಗರ ತಾಲೂಕಿನ ಕುಂಬಾರದೊಡ್ಡಿ ಕಾಲೋನಿಗೆ ಭೇಟಿ ನೀಡಿ ತೊಗರಿ, ಹುರುಳಿ ಬೆಳೆ ಹಾನಿ ವೀಕ್ಷಣೆ ಹಾಗೂ ಕೃಷಿ ಹೊಂಡಗಳ ವೀಕ್ಷಣೆ ಮಾಡಿದರು. ನಂತರ ಸೋಮಕ್ಕನಮಠಕ್ಕೆ ಭೇಟಿ ನೀಡಿ ಹುರುಳಿ ಬೆಳೆ ಹಾನಿ ವೀಕ್ಷಣೆ ನಡೆಸಿದರು. ತದನಂತರ ಮಾಗಡಿ ತಾಲೂಕಿನ ಗುಡೇಮಾರನಹಳ್ಳಿಯಲ್ಲಿ ಹುರುಳಿ ಬೆಳೆ ಹಾನಿ ವೀಕ್ಷಿಸಿದರು.
ಸಂಪುಟ ಉಪಸಮಿತಿ ಅಧ್ಯಕ್ಷ ಕೃಷಿ ಸಚಿವ ಶಿವಶಂಕರ್ ರೆಡ್ಡಿ, ಸಮಿತಿ ಸದಸ್ಯರಾದ ಜಲಸಂಪನ್ಮೂಲ, ಕನ್ನಡ ಮತ್ತು ಸಂಸ್ಕøತಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ್, ಕಾರ್ಮಿಕ ಸಚಿವ ವೆಂಕಟರಮಣಪ್ಪ, ಸಣ್ಣ ಕೈಗಾರಿಕೆ ಸಚಿವ ಎಸ್.ಆರ್.ಶ್ರೀನಿವಾಸ್(ವಾಸು), ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ , ಸಂಸದ ಡಿ.ಕೆ.ಶಿವಕುಮಾರ್, ಶಾಸಕ ಎ.ಮಂಜು, ವಿಧಾನಪರಿಷತ್ ಸದಸ್ಯರಾದ ಸಿ.ಎಂ.ಲಿಂಗಪ್ಪ, ಎಸ್.ರವಿ, ಅ.ದೇವೇಗೌಡ ಅವರು ಬರ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ವಸ್ತು ಸ್ಥಿತಿಯನ್ನು ಪರಿಶೀಲಿಸಿದರು.
ಪ್ರತಿಕ್ರಿಯೆಗಳು