ನಲವತ್ತೈದು ವರ್ಷದ ಹಿಂದೆ ಖರೀದಿ ಮಾಡಿದ ಜಮೀನಿಗೆ ಹುರುಳಿಲ್ಲದ ದೂರು ಆರೋಪ
ಚನ್ನಪಟ್ಟಣ: ನಲವತ್ತೈದು ವರ್ಷಗಳ ಹಿಂದೆ ಸಮುದಾಯದ ಮುಖಂಡರೊಬ್ಬರು ಮೂರು ಎಕರೆ ಜಮೀನು ಖರೀದಿ ಮಾಡಿದ್ದು ಅವರಿಂದ ಬೀಡಿ ಕಾರ್ಮಿಕರ ಶ್ರೇಯೋಭಿವೃದ್ದಿಗಾಗಿ ಬಡ ಕಾರ್ಮಿಕರಿಗೆ ಮನೆ ನಿರ್ಮಿಸುವ ಸಲುವಾಗಿ ಅಂದಿನ ಶಾಸಕರಾಗಿದ್ದ ಸಿ ಪಿ ಯೋಗೇಶ್ವರ್ ರವರ ಅಧ್ಯಕ್ಷತೆಯಲ್ಲಿ ಎರಡೂವರೆ ಎಕರೆ ಜಮೀನು ಖರೀದಿಸಿದ್ದು ಮೂಲ ಜಮೀನುದಾರರ ಕುಟುಂಬದವರೆಂದು ಹೇಳಿಕೊಂಡ ಚಿಕ್ಕಣ್ಣ ಎಂಬುವವರು ಪದೇ ಪದೇ ದೂರು ದಾಖಲಿಸುವ ಮೂಲಕ ಬಡ ಕಾರ್ಮಿಕರಿಗೆ ಮನೆ ನಿರ್ಮಿಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಅಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸಿ ಮತ್ತೊಮ್ಮೆ ಸುಳ್ಳು ದಾವೆ ಹೂಡದಂತೆ ಎಚ್ಚರಿಕೆ ನೀಡಬೇಕೆಂದು ಚನ್ನಪಟ್ಟಣ ಟೌನ್ ಬೀಡಿ ಕಾರ್ಮಿಕರ ವಿವಿದ್ದೋದ್ದೇಶ ಸಹಕಾರ ಸಂಘ ನಿಯಮಿತ ದ ಉಪಾಧ್ಯಕ್ಷ ಮಹಮ್ಮದ್ ಅಲಿ ಮತ್ತು ನಿರ್ದೇಶಕ ಅಸ್ಮತ್ ಪಾಷ ರವರು ಸುದ್ದಿ ಗೋಷ್ಠಿ ಯಲ್ಲಿ ತಿಳಿಸಿದರು.
ನಗರದ ಹೊನಗನಹಳ್ಳಿ ಗ್ರಾಮದ ಸರ್ವೇ ನಂಬರ್ ೪೬ ರ ಮೂರು ಎಕರೆ ಜಮೀನನ್ನು ನಲವತ್ತೈದು ವರ್ಷಗಳ ಹಿಂದೆ ಐಯ್ಯಣ್ಣ ಬಿನ್ ಚಿಕ್ಕಚನ್ನಯ್ಯ ಎಂಬುವವರಿಂದ ನಸೀರ್ ಪಾಷಾ ರವರು ಖರೀದಿಸಿದ್ದು ಅವರ ಮರಣಾನಂತರ ಪತ್ನಿ ಫರೀದಾ ಅವರಿಗೆ ಪೌತಿ ಖಾತೆಯಾದ ನಂತರ ಮೇಲಿನ ಸಂಘದ ವತಿಯಿಂದ ಸರ್ವೇ ನಂಬರ್ ೨೧೧, ೨೧೨ ಮತ್ತು ೨೧೩ ರ ಎರಡೂವರೆ ಎಕರೆ ಜಮೀನನ್ನು ಬೀಡಿ ಕಾರ್ಮಿಕರಿಗೆ ಮನೆ ನಿರ್ಮಿಸಲು ಖರಿದೀಸಿದ್ದು ಐಯ್ಯಣ್ಣ ರವರ ವಂಶಸ್ಥರೆಂದು ಹೇಳಿಕೊಂಡ ಚಿಕ್ಕಣ್ಣ ಎಂಬುವವರು ಸುಳ್ಳು ದೂರು ದಾಖಲಿಸಿ ಕಿರುಕುಳ ನೀಡುತ್ತಿದ್ದಾರೆ.
ಮೊದಲು ತಹಶಿಲ್ದಾರರ ನ್ಯಾಯಾಲಯ ನಂತರ ಉಪವಿಭಾಗಾಧಿಕಾರಿ ಆನಂತರ ಜಿಲ್ಲಾಧಿಕಾರಿ ಗಳ ನ್ಯಾಯಾಲಯಕ್ಕೆ ದಾವೆ ಹೂಡಿದ್ದು ಎಲ್ಲಾ ಕಡೆಯೂ ನಮ್ಮ ಪರವಾಗಿ ನ್ಯಾಯ ದೊರಕಿದೆ, ಆದರೂ ಅವರು ಅಧಿಕಾರಿಗಳು ಲಂಚ ಪಡೆದು ಖಾತೆ ಮಾಡಿದ್ದಾರೆಂದು ಆರೋಪಿಸಿ ಲೋಕಾಯುಕ್ತ ಕಛೇರಿಗೆ ದೂರು ನೀಡಿರುವುದಾಗಿ ತಿಳಿದುಬಂದಿದ್ದು ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಅಧಿಕಾರಿಗಳು ಖಾತೆ ಮಾಡಿ ಕೊಟ್ಟಿದ್ದಾರೆ. ಇಲ್ಲಿ ಯಾರೂ ಸಹ ಅವರಿಗೆ ಅನ್ಯಾಯ ಎಸಗಿಲ್ಲ ಎಂಬುದಾಗಿ ದಾಖಲೆಗಳ ಸಮೇತ ಪ್ರತಿಪಾದಿಸಿದ ಅವರು ಇನ್ನೂ ಮುಂದೆಯೂ ಹೀಗೆ ಸುಳ್ಳು ದಾಖಲೆ ನೀಡಿ ಪದೇ ಪದೇ ದೂರು ಸಲ್ಲಿಸದಂತೆ ಸಂಬಂಧಿಸಿದ ಅಧಿಕಾರಿಗಳು ಸೂಕ್ತ ಕಾನೂನು ಕ್ರಮ ಕೈಗೊಂಡು ಬಡ ಕಾರ್ಮಿಕರ ಕಲ್ಯಾಣಕ್ಕೆ ಸ್ಪಂದಿಸಬೇಕೆಂದು ಮನವಿ ಮಾಡಿದರು.
ಪತ್ರಿಕಾ ಗೋಷ್ಠಿಯಲ್ಲಿ ಸೈಯ್ಯದ್ ರೆಹಮಾನ್, ಬದ್ರುನ್ನೀಷಾ, ಶಬೀರ್ ಮತ್ತು ಅಜೀಜ್ ಉಲ್ಲಾ ಭಾಗವಹಿಸಿದ್ದರು.
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು