Tel: 7676775624 | Mail: info@yellowandred.in

Language: EN KAN

    Follow us :


ಸಂಸ್ಕೃತಿ ಉಳಿಸುವಲ್ಲಿ ಬ್ರಾಹ್ಮಣರ ಪಾತ್ರ ಅಪಾರ: ಪುತ್ತಿಗೆಶ್ರೀ

Posted date: 02 Dec, 2019

Powered by:     Yellow and Red

ಸಂಸ್ಕೃತಿ ಉಳಿಸುವಲ್ಲಿ ಬ್ರಾಹ್ಮಣರ ಪಾತ್ರ ಅಪಾರ: ಪುತ್ತಿಗೆಶ್ರೀ

ಚನ್ನಪಟ್ಟಣ: ದೇಶದ ಸಂಸ್ಕೃತಿಯನ್ನು ಉಳಿಸುವಲ್ಲಿ ಬ್ರಾಹ್ಮಣರ ಪಾತ್ರ ಅಪಾರವಾಗಿದ್ದು, ಈ ನಿಟ್ಟಿನಲ್ಲಿ ಬ್ರಾಹ್ಮಣರು ಸಂಘಟಿತರಾಗಿ ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸಬೇಕು ಎಂದು ಉಡುಪಿ ಪುತ್ತಿಗೆ ಮಠದ ಪೀಠಾಧ್ಯಕ್ಷರಾದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಕರೆನೀಡಿದರು.

ಇಲ್ಲಿನ ಕೋಟೆ ಶ್ರೀರಾಘವೇಂದ್ರ ಮಠದಲ್ಲಿ ನಡೆದ ತಾಲೂಕು ಬ್ರಾಹ್ಮಣ ಮಹಾಸಭಾದ ಉದ್ಘಾಟನೆ ನೆರವೇರಿಸಿ ಆಶೀರ್ವಚನ ನೀಡಿದ ಅವರು, ಭಾರತೀಯ ಸಂಸ್ಕೃತಿಯ ಜೀವಾಳವೇ ನಮ್ಮ ಆಧ್ಯಾತ್ಮಿಕ ಪರಂಪರೆ, ಇದನ್ನು ಪೋಷಿಸುತ್ತಾ ಬಂದಿರುವ ಬ್ರಾಹ್ಮಣ ಸಮುದಾಯ, ಮುಂದೆಯೂ ಉಳಿಸಿ ಬೆಳೆಸಬೇಕು ಎಂದರು.


ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ನಮ್ಮ ಸಂಸ್ಕೃತಿ ಒಮ್ಮೆ ನಾಶವಾದರೆ ಮತ್ತೆ ಕಟ್ಟಲು ಸಾಧ್ಯವಾಗುವುದಿಲ್ಲ, ಈ ಕಾರಣದಿಂದ ಬ್ರಾಹ್ಮಣರು ಸಂಸ್ಕೃತಿಯನ್ನು ಬೆಳೆಸುವ ಜೊತೆಗೆ ತಮ್ಮ ಮುಂದಿನ ಪೀಳಿಗೆಗೂ ಕಲಿಸುವ ಕೆಲಸ ಮಾಡಬೇಕು, ನಿಮ್ಮ ಮಕ್ಕಳಿಗೆ ಲೌಖಿಕ ಶಿಕ್ಷಣದೊಂದಿಗೆ ಧಾರ್ಮಿಕ ಶಿಕ್ಷಣವನ್ನು ನೀಡಬೇಕು ಆಗ ಮಾತ್ರ ಬ್ರಾಹ್ಮಣ ಸಮುದಾಯ ಬಲಗೊಳ್ಳಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಬ್ರಾಹ್ಮಣರ ಸಾತ್ವಿಕ ಜೀವನ ಶೈಲಿ, ಸಸ್ಯಾಹಾರವನ್ನು ಇಂದು ಇಡೀ ಜಗತ್ತು ಅನುಕರಿಸುತ್ತಿದೆ. ನಮ್ಮ ಪರಂಪರೆ ಮತ್ತು ಆಚರಣೆಗಳನ್ನು ಇತರರು ಗೌರವಿಸುತ್ತಿರುವಾಗ ನಾವು ಅದನ್ನು ಹೆಚ್ಚಿಸುವ ಕೆಲಸ ಮಾಡಬೇಕು. ಇದಕ್ಕಾಗಿ ಬ್ರಾಹ್ಮಣ ಸಮುದಾಯ ಸಂಘಟಿತರಾಗ ಬೇಕು ಎಂದು ತಿಳಿಸಿದರು.


ಸಂಘಟನೆಯೇ ಶಕ್ತಿ: ಕಲಿಯುಗದಲ್ಲಿ ಸಂಘಟನೆಯೇ ಶಕ್ತಿ ಎಂದು ವೇದಗಳು ಹೇಳಿವೆ ಅದರಂತೆ ಬ್ರಾಹ್ಮಣ ಸಮುದಾಯ ಸಂಘಟಿತರಾಗುವ ಮೂಲಕ ಧರ್ಮದ ಆಚರಣೆ ಮತ್ತು ರಕ್ಷಣೆಯ ಹೊಣೆಯನ್ನು ಹೊರ ಬೇಕು ಎಂದು ಕೂಡಲಿ ಮಠದ ಶ್ರೀ ವಿದ್ಯಾಭಿನವ ವಿದ್ಯಾರಣ್ಯ ಭಾರತೀ ಸ್ವಾಮೀಜಿ ಕರೆನೀಡಿದರು.

ಲೌಖಿಕ ಸಮಾಜದಲ್ಲಿ ವಿದ್ಯಾರ್ಥಿಯಿಂದ ನಿವೃತ್ತನಾಗುವ ಉದ್ಯೋಗಿಯ ವರೆಗೆ ಎಲ್ಲಾ ಕ್ಷೇತ್ರದಲ್ಲಿ, ಎಲ್ಲಾ ವಿಭಾಗದಲ್ಲಿ ಕೆಲಸ ಮಾಡುವ ಬ್ರಾಹ್ಮಣರು ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಈ ಬಿಕ್ಕಟ್ಟುಗಳ ನಡುವೆಯೂ ಬ್ರಾಹ್ಮಣರು ತಮ್ಮ ಧರ್ಮ ಮತ್ತು ಆಚರಣೆಗಳಿಗೆ ಚ್ಯುತಿಬಾರದ ರೀತಿಯಲ್ಲಿ ನಡೆದು ಕೊಳ್ಳ ಬೇಕು ಎಂದು ತಿಳಿಸಿದರು.


ಬ್ರಾಹ್ಮಣ ಸಮುದಾಯದ ಸಂಸ್ಕಾರ ಮತ್ತು ಸಂಪ್ರದಾಯಗಳನ್ನು ಕೇವಲ ಶಾಸ್ತ್ರಕ್ಕಾಗಿ ಮಾಡದೆ ಶಾಸ್ತ್ರೋಕ್ತವಾಗಿ ಮಾಡಬೇಕು. ಸಕಾಲದಲ್ಲಿ ಉಪನಯನ ಮೊದಲಾದ ಸಂಸ್ಕಾರಗಳನ್ನು ಮಾಡಿಸುವ ಜೊತೆಗೆ ಮಕ್ಕಳನ್ನು ಮೊಬೈಲ್, ಇಂಟರ್‌ನೆಟ್ ಮತ್ತು ಟಿವಿಯಿಂದ ದೂರ ಇರಿಸಿ ಧಾರ್ಮಿಕ ವಿಚಾರಗಳತ್ತ ಸೆಳೆಯುವ ಕೆಲಸ ಮಾಡಬೇಕು ಎಂದರು.


ಪ್ರತಿಯೊಬ್ಬ ಬ್ರಾಹ್ಮಣನು ಲೌಕಿಕ ವಿಚಾರದ ಜೊತೆಗೆ ವೇದ, ಸಂಸ್ಕಾರ, ದೇವತಾ ಪ್ರಾರ್ಥನೆ, ಪೂಜೆ ಮೊದಲಾದ ವಿಷಯಗಳನ್ನು ಕಲಿತು, ಸಮಾಜದ ಒಳಿತಿಗೆ ಭಗವಂತನನ್ನು ಸ್ಮರಿಸುವ ಕೆಲಸ ಮಾಡಬೇಕು. ಬುದ್ದಿಯನ್ನು ಪ್ರಚೋದಿಸುವುದು ಬ್ರಾಹ್ಮಣರ ಕರ್ತವ್ಯ ಇದನ್ನು ನಾವೆಲ್ಲರೂ ಚಾಚು ತಪ್ಪದೆ ಮಾಡಬೇಕು ಎಂದು ತಿಳಿಸಿದರು.


ಬ್ರಾಹ್ಮಣ ಧರ್ಮದ ಸಂಕೇತ: ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಮೇಲುಕೋಟೆ ಯದುಗಿರಿ ಯತಿರಾಜ ಮಠದ ಶ್ರೀ ಯತಿರಾಜ ಜೀಯರ್ ಸ್ವಾಮೀಜಿ, ಬ್ರಾಹ್ಮಣ ಎಂಬುದು ಧರ್ಮದ ಸಂಕೇತ, ಧರ್ಮ ಮತ್ತು ಬ್ರಾಹ್ಮಣ ಒಂದಕ್ಕೊಂದು ಪೂರಕವಾಗಿದ್ದು, ಧರ್ಮ ಉಳಿದರೆ ಮಾತ್ರ ಬ್ರಾಹ್ಮಣ ಉಳಿಯಲು ಸಾಧ್ಯ. ಧರ್ಮವನ್ನು ಉಳಿಸುವ ಮೂಲಕ ಲೋಕದ ಉದ್ದಾರಕ್ಕಾಗಿ ಶ್ರಮಿಸುವ ಕೆಲಸವನ್ನು ಬ್ರಾಹ್ಮಣರು ಮಾಡಬೇಕು ಎಂದರು.

ಭಾರತವನ್ನು ಜಗತ್ತು ವಿಶ್ವಗುರುವಿನ ಸ್ಥಾನದಲ್ಲಿ ನೋಡುತ್ತಿದೆ. ನಮ್ಮ ವಿಚಾರ ಮತ್ತು ಆಚಾರಗಳನ್ನು ಜಗತ್ತು ಅನುಸರಿಸುತ್ತಿದೆ. ಇಂತಹ ಸಮಯದಲ್ಲಿ ಬ್ರಾಹ್ಮಣ ಸಮುದಾಯ ಉತ್ತಮ ವಿಚಾರಗಳನ್ನು ಸಮಾಜಕ್ಕೆ ನೀಡುವ ಮೂಲಕ ಇತರರಿಗೆ ಮಾದರಿಯಾಗಿ ದೇಶ ಮತ್ತು ಸಮಾಜದ ಕೀರ್ತಿಯನ್ನು ಹೆಚ್ಚಿಸ ಬೇಕು ಎಂದು ಕರೆನೀಡಿದರು.


ಬ್ರಾಹ್ಮಣರು ಒಗ್ಗೂಡಿ: ಕಾರ್ಯಕ್ರಮದಲ್ಲಿ ಮಾತನಾಡಿದ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಕೆ.ಎನ್.ವೆಂಕಟನಾರಾಯಣ್, ರಾಜ್ಯದಲ್ಲಿ ೩೫ ಲಕ್ಷದಷ್ಟಿರುವ ಬ್ರಾಹ್ಮಣ ಸಮುದಾಯ ಒಗ್ಗಟ್ಟಿಲ್ಲದ ಕಾರಣ ಸಾಕಷ್ಟು ಸೌಲಭ್ಯಗಳಿಂದ ವಂಚಿತವಾಗಿದೆ. ನಾವೆಲ್ಲರು ಒಗ್ಗೂಡಿದಾಗ ರಾಜಕೀಯ ಮತ್ತು ಸಾಮಾಜಿಕವಾಗಿ ಪ್ರಾತಿನಿಧ್ಯ ಪಡೆಯಲು ಸಾಧ್ಯವಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾಪುರಸ್ಕಾರ ನೀಡಲಾಯಿತು. ಬಡಬ್ರಾಹ್ಮಣ ಕುಟುಂಬಗಳಿಗೆ ನೆರವು ನೀಡುತ್ತಾ ಬಂದಿರುವ ಸಂಕ್ರಾಂತಿ ಟ್ರಸ್ಟ್ ಸಂಸ್ಥಾಪಕ ಅನಿಲ್‌ಕುಮಾರ್ ಜಮದಗ್ನಿ ಮತ್ತು ಹಿರಿಯ ಮುಖಂಡ ಕೃಷ್ಣ ಮೂರ್ತಿ ಅವರನ್ನು ಸನ್ಮಾನಿಸಲಾಯಿತು. ಹಲವಾರು ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.


ಕಾರ್ಯಕ್ರಮದಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಹಿರಿಯ ಉಪಾಧ್ಯಕ, ಆರ್.ಲಕ್ಷ್ಮೀಕಾಂತ್, ಉಪಾಧ್ಯಕ್ಷ ಎಂ.ವಿ.ಶಂಕರನಾರಾಯಣ, ಪ್ರಧಾನ ಕಾರ್ಯದರ್ಶಿಕೆ.ರಾಮ ಪ್ರಸಾದ್, ಪತ್ರಕರ್ತ ವೇಣು ಗೋಪಾಲ ಕೃಷ್ಣ ತಾಲ್ಲೂಕು ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ರಾಮಪ್ರಸಾದ್.ಎಂ.ಎನ್, ಕಾರ್ಯದರ್ಶಿ ರಾಘವೇಂದ್ರ ಮಯ್ಯ, ಖಜಾಂಚಿ ಪಿ.ಹೊಯ್ಸಳ, ಉಪಾಧ್ಯಕ್ಷ ರವಿಕುಮಾರ್, ಜಂಟಿಕಾರ್ಯದರ್ಶಿ ವೆಂಕಟೇಶಮೂರ್ತಿ.ಡಿ, ಸಂಘಟನಾ ಕಾರ್ಯದರ್ಶಿಗಳಾದ ಡಾ.ಮಧುಸೂಧನಾಚಾರ್ಯ ಜೋಷಿ ಮತ್ತು ನಾಗೇಂದ್ರ. ನಿರ್ದೇಶಕರಾದ ಎಸ್.ವೆಂಕಟೇಶಮೂರ್ತಿ, ಸು.ನಾ.ನಂದಕುಮಾರ್, ಎಂ.ಎಸ್ .ನರಸಿಂಹ, ಕೆ.ವಿ.ಮಧುಸೂದನ್, ಎನ್.ಮೋಹನ್, ಎಸ್.ಮಧುಸೂದನ್ ಮುಂತಾದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.


ತ್ರಿಮತಸ್ಥರು ಒಗ್ಗೂಡಲು ಮನವಿ:

ಬ್ರಾಹ್ಮಣ ಸಮುದಾಯದ ತ್ರಿಮತಸ್ಥರೂ ಒಗ್ಗೂಡಬೇಕು ಎಂಬ ಒಕ್ಕೊರಲ ನಿರ್ಣಯಕ್ಕೆ ತಾಲೂಕು ಬ್ರಾಹಣ ಮಹಾಸಭಾದ ಕಾರ್ಯಕ್ರಮ ವೇದಿಕೆಯಾಗಿ ಪರಿಣಮಿಸಿತು. ಕಾರ್ಯಕ್ರಮದಲ್ಲಿ ಮಾತನಾಡಿದ ಪುತ್ತಿಗೆ ಶ್ರೀಗಳು ಈ ವಿಷಯವನ್ನು ಪ್ರತಿಪಾದಸಿ ಮೂರು ಪಂಥಗಳ ಶ್ರೀಗಳು ವೇದಿಕೆಗೆ ಬರಬೇಕು ಎಂದು ಪ್ರತಿಪಾಧಿಸಿದರು.

ಇದಕ್ಕೆ ಸಮ್ಮತಿ ಸೂಚಿಸಿದ ಕೂಡಲಿ ಶ್ರೀಗಳು, ನಾವು ಸಿದ್ದವಿದ್ದು, ನಮ್ಮ ಕೂಡಲಿ ಕ್ಷೇತ್ರದಲ್ಲಿ ಇರುವ ಮಾಧ್ವ ಪೀಠದ ಜೊತೆ ಅನ್ಯೋನ್ಯವಾಗಿದ್ದೇವೆ. ಆಚರಣೆ ಏನೇ ಇರಲಿ ಬ್ರಾಹ್ಮಣ ಸಮುದಾಯದ ಹಿತಕ್ಕಾಗಿ ನಾವೆಲ್ಲ ಒಗ್ಗೂಡುವ ಕೆಲಸ ಮಾಡಬೇಕಿದೆ ಎಂದು ಪುತ್ತಿಗೆ ಶ್ರೀಗಳ ಹೇಳಿಕೆಗೆ ಸಮ್ಮತಿಸಿದರು.

ಇನ್ನು ಶ್ರೀ ಯತಿರಾಜ ಜೀಯರ್ ಸ್ವಾಮೀಜಿ ಸಹ ಮೂರುಪಂಥಗಳ ಆಚಾರ್ಯರು ಮನುಕುಲಕ್ಕೆ ಬೆಳಕು ನೀಡಿದ ದೈವಸಂಭೂತರು, ಅವರು ಎಂದಿಗೂ ಒಡಕು ಮೂಡಿಸುವ ಕೆಲಸ ಮಾಡಿಲ್ಲ. ನಮ್ಮ ಪಂಥಗಳು ಬೇರೆ ಯಾದರೂ ಪ್ರಸ್ಥಾನಗಳು ಒಂದೇ ಮೂರು ಪಂಥಗಳು ಒಗ್ಗೂಡ ಬೇಕು ಎನ್ನುವ ಮೂಲಕ ತ್ರಿಮತಸ್ಥರು ಒಂದೇ ವೇದಿಕೆಯಲ್ಲಿ ಸಂಘಟಿತರಾಗುವ ಘೋಷಣೆಗೆ ಮೂವರು ಯತಿಗಳು ಓಂಕಾರ ಹಾಡಿದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑