ಖಾಲಿ ನಿವೇಶನಗಳೆಲ್ಲವೂ ಕಸಮಯ, ಜವಾಬ್ದಾರಿ ಇಲ್ಲದ ನಾಗರೀಕರು, ವಿಲೇವಾರಿ ಮಾಡದ ನಗರಸಭೆ
ಚನ್ನಪಟ್ಟಣ: ನಗರಸಭೆ ವ್ಯಾಪ್ತಿಯ ಹಲವಾರು ಖಾಲಿ ನಿವೇಶನಗಳು ಕಸದ ತೊಟ್ಟಿಯಾಗಿ ಮಾರ್ಪಾಟಾಗಿದ್ದು ಆಯಾಯ ರಸ್ತೆಯಲ್ಲಿ ಓಡಾಡುವ ಪ್ರಯಾಣಿಕರು ಮತ್ತು ಅಕ್ಕಪಕ್ಕದ ನಿವಾಸಿಗಳು ದುರ್ವಾಸನೆ ಸಹಿಸಲು ಸಾಧ್ಯವಾಗದೆ ಇತ್ತ ಯಾರನ್ನೂ ದೂರಬೇಕು ಎಂದು ತಿಳಿಯದೆ ಮೌನವಾಗಿ ಶಾಪ ಹಾಕುತ್ತಾ ಕಾಲ ದೂಡುತ್ತಿದ್ದಾರೆ.
ರಾಷ್ಟ್ರೀಯ ಹೆದ್ದಾರಿಯ ಎರಡೂ ಬದಿ, ನಗರಸಭೆ ಹೊರವಲಯದ ರಸ್ತೆ ಬದಿಗಳು ಮತ್ತು ಕೆರೆಯ ಏರಿಗಳಲ್ಲದೆ ನಗರದಾದ್ಯಂತ ಖಾಲಿ ನಿವೇಶನಗಳಲ್ಲಿ ಯಥೇಚ್ಛವಾಗಿ ಕಸ ಹರಡಿದ್ದು ಹಸಿ ಕಸವು ಗಬ್ಬು ನಾರುತ್ತಿದ್ದರೆ ನಿಷೇಧಿತ (ಘೋಷಣೆ ಮಾತ್ರ) ಪ್ಲಾಸ್ಟಿಕ್ ಗಳು ಗಾಳಿಗೆ ತೂರಿ ಆಕಾಶದಲ್ಲಿ ಗಾಳಿಪಟದಂತೆ ಹಾರಾಡಿ ವಾಸದ ಮನೆಗಳ ಮುಂದೆ ರಾಶಿಯಾಗುತ್ತಿವೆ ಎಂದು ಸ್ಥಳೀಯ ನಿವಾಸಿಗಳ ರೋಧನವಾಗಿದೆ.
ಕಸ ತಂದು ಸುರಿಯುವವರು ಸಹ ಸ್ಥಳೀಯ ನಿವಾಸಿಗಳು ಹಾಗೂ ಸ್ಥಳೀಯ ವಾಣಿಜ್ಯೋದಮ ಮಳಿಗೆಯ ಮಾಲೀಕರೇ ಆಗಿದ್ದು ತಮ್ಮಲ್ಲಿರುವ ಕಸ ನಮ್ಮ ಮನೆ ಅಥವಾ ಅಂಗಡಿ ಮುಂದೆ ಬೇಡ, ಬೇರೆ ಯಾರ ಮನೆಯ ಮುಂದೆಯಾದರೂ ಇರಲಿ ಎಂಬ ಧೋರಣೆಯಿಂದ ಜ್ಞಾನವಿದ್ದು ಮಾಡುವ ಘೋರ ಅಪರಾಧ ಎಂಬುದು ಸಾವ್ರತ್ರಿಕ ಸತ್ಯವಾಗಿದೆ.
ನಗರಸಭೆಯ ಅಧಿಕಾರಿಗಳು ಖಾಲಿ ನಿವೇಶನದಾರರಿಗೆ ನೋಟೀಸ್ ನೀಡಿ ಗಿಡಗಂಟಿ ಬೆಳೆದು ನಿಂತಿರುವ ಹಾಗೂ ಕಸ ಹಾಕಲು ಅನುವು ಮಾಡಿಕೊಡಲು ಕಾರಣವಾಗಿರುವವರ ವಿರುದ್ದ ಕ್ರಮ ಕೈಗೊಳ್ಳಬೇಕು, ಹಾಗೂ ನಗರದಲ್ಲಿ ಎಲ್ಲೇ ಕಸ ಕಂಡರೂ ಅಂದಂದೇ ಕಸ ವಿಲೇವಾರಿ ಮಾಡಬೇಕು ಎಂದು ಸ್ಥಳೀಯ ನಿವಾಸಿಗಳಾದ ಶಶಿ ಗೌಡ, ಪುಷ್ಪಾ ಗುಲೇಚಾ, ಕಾಂತಾ ಕಿಟ್ಟಿ, ಸುರೇಶ್, ವೆಂಕಟಸ್ವಾಮಿ, ನಿರ್ಮಲ ರವರು ಆಗ್ರಹಿಸಿದ್ದಾರೆ.
ಪ್ರತಿಕ್ರಿಯೆಗಳು