ನಗರಸಭೆ ಮತ್ತು ಜನಪ್ರತಿನಿಧಿಗಳ ಜಾಣಗುರುಡು ಗೊಬ್ಬರ ತಾಣವಾದ ಮಟನ್ ಸ್ಟಾಲ್
ಚನ್ನಪಟ್ಟಣ: ರಾಜ್ಯ ಹಣಕಾಸು ಯೋಜನೆಯ ಅಡಿಯಲ್ಲಿ ನಗರಸಭೆಯು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಚಿಕ್ಕಮಳೂರು ಗ್ರಾಮದ ಅನ್ನಪೂರ್ಣೇಶ್ವರಿ ಬಡಾವಣೆಯಲ್ಲಿ ಮಟನ್ ಸ್ಟಾಲ್ ನಿರ್ಮಿಸಿ ಹದಿಮೂರು ವರ್ಷಗಳೇ ಕಳೆದರೂ ಸಹ ಇಂದಿಗೂ ಯಾವ ಮಾಂಸದಂಗಡಿಗಳು ಇಲ್ಲಿ ತೆರೆದಿಲ್ಲ.
ನಗರದೆಲ್ಲೆಡೆ ನಾಯಿಕೊಡೆಗಳಂತೆ ಎಲ್ಲೆಂದರಲ್ಲಿ ತಲೆ ಎತ್ತಿರುವ ಮಾಂಸದಂಗಡಿಗಳು, ಕೋಳಿ ಮಾಂಸದಂಗಡಿಗಳು ಹಾಗೂ ಪಶು ಮಾಂಸದಂಗಡಿಗಳು ಸಾರ್ವಜನಿಕರು ಮತ್ತು ಸುಸಂಸ್ಕೃತರು ಅಸಹ್ಯ ಪಟ್ಟುಕೊಳ್ಳುವಂತೆ ಮಾಂಸದಂಗಡಿಗಳು ತಲೆ ಎತ್ತಿವೆ.
ನಗರೆದೆಲ್ಲೆಡೆ ಇರುವ ಮಾಂಸ ಮತ್ತು ಕೋಳಿ ಅಂಗಡಿಗಳ ಮಾಲೀಕರು ಮೂಳೆ ಮತ್ತು ಉಳಿದ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡದೆ ನಗರದ ಸುತ್ತಲೂ ಇರುವ ರಸ್ತೆ ಬದಿಗಳು ಮತ್ತು ಕೆರೆ ಕಾಲುವೆ ದಂಡೆಯ ಮೇಲೆ ಸುರಿಯುತ್ತಿರುವುದರಿಂದ ಗಬ್ಬು ನಾರುತ್ತಿರುವುದಲ್ಲದೆ ನಾಯಿಗಳ ಹಾವಳಿ ಹೆಚ್ಚಾಗಿದ್ದು ಸ್ಥಳೀಯ ನಿವಾಸಿಗಳು ಮತ್ತು ಪ್ರಯಾಣಿಕರು ಓಡಾಡದ ಸ್ಥಿತಿ ನಿರ್ಮಾಣವಾಗಿದೆ.
ಇದುವರೆಗೂ ಕೆಲ ಕಿಡಿಗೇಡಿಗಳ ಮೋಜು ಮಸ್ತಿಗಳ ತಾಣವಾಗಿದ್ದ ಈ ಮಳಿಗೆಗಳನ್ನು ನಗರಸಭೆಯು ಸ್ಥಳೀಯ ಕಸವನ್ನು ಸಂಗ್ರಹಿಸಿ ಕಾಂಪೋಸ್ಟ್ ಗೊಬ್ಬರ ತಯಾರಿಸಲು ಇತ್ತೀಚೆಗೆ ಬಳಸಲಾಗುತ್ತಿದೆಯಾದರೂ ವೈಜ್ಞಾನಿಕವಾಗಿ ಹಾಗೂ ಸಮರ್ಪಕವಾಗಿ ನಡೆಯದೆ ಕಾಟಚಾರಕ್ಕೆ ನಡೆಯುತ್ತಿದ್ದು ಸುತ್ತಲೂ ನಗರಸಭೆಯ ಕೊಳಚೆ ನೀರು ಸಹ ಸಂಗ್ರಹವಾಗಿದ್ದು ಗಬ್ಬು ನಾರುತ್ತಿದೆ ಎಂದು ಸ್ಥಳೀಯ ನಿವಾಸಿಗಳ ದೂರಾಗಿದೆ.
ಲಕ್ಷಾಂತರ ರೂಪಾಯಿ ಸಾರ್ವಜನಿಕರ ತೆರಿಗೆ ಹಣವನ್ನು ಉಪಯೋಗಿಸಿ ಕಟ್ಟಿದ ಕಟ್ಟಡವನ್ನು ಸದುಪಯೋಗ ಪಡಿಸಿಕೊಳ್ಳಬೇಕಾದರೆ ಮಾಂಸದಂಗಡಿಗಳ ಮಾಲೀಕರನ್ನು ಒಪ್ಪಿಸಿ ನಗರದಲ್ಲಿರುವ ಅಂಗಡಿಗಳನ್ನು ಸ್ಥಳಾಂತರಿಸಿ ನಗರದ ಸ್ವಚ್ಚತೆಯನ್ನು ಉಳಿಸಲು ನಗರಸಭೆ ಮುಂದಾಗಬೇಕಿದೆ.
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು