Tel: 7676775624 | Mail: info@yellowandred.in

Language: EN KAN

    Follow us :


ತಂತ್ರಜ್ಞಾನವು ಕೇವಲ ವ್ಯಾಪಾರೀಕರಣವಾಗದೇ ಅನ್ನದಾತನ ಪರವಾಗಿರಬೇಕು. ಬಿ ಟಿ ಜಯಮುದ್ದಪ್ಪ

Posted date: 29 Feb, 2020

Powered by:     Yellow and Red

ತಂತ್ರಜ್ಞಾನವು ಕೇವಲ ವ್ಯಾಪಾರೀಕರಣವಾಗದೇ ಅನ್ನದಾತನ ಪರವಾಗಿರಬೇಕು. ಬಿ ಟಿ ಜಯಮುದ್ದಪ್ಪ

ಚನ್ನಪಟ್ಟಣ: ನೂತನ ತಂತ್ರಜ್ಞಾನ ಎನ್ನುವುದು ಉಳ್ಳವರ, ವಿದೇಶಿಗರ ಪಾಲಾಗದೇ ದೇಶಕ್ಕೆ ಅನ್ನ ನೀಡುವ ದೇಶದ ಬೆನ್ನೆಲುಬು ಎಂದೆನಿಸಿಕೊಂಡ ರೈತಾಪಿ ವರ್ಗಕ್ಕೆ ಅನುಕೂಲಕರವಾಗಿರಬೇಕೆಂದು ಒಕ್ಕಲಿಗರ ಸಾರ್ವಜನಿಕ ವಿದ್ಯಾರ್ಥಿ ನಿಲಯದ ಅಧ್ಯಕ್ಷ ಬಿ ಟಿ ಜಯಮುದ್ದಪ್ಪ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಅವರು ನಗರದ ಒಕ್ಕಲಿಗರ ಸಾರ್ವಜನಿಕ ಸಂಸ್ಥೆಯ ಐಟಿಐ ಕಾಲೇಜಿನ ಮಕ್ಕಳು ತಯಾರಿಸಿದ ಉಪಕರಣಗಳನ್ನು ವೀಕ್ಷಿಸಿ ಮಾತನಾಡಿದರು.


ಇಂದಿನ ವಿದ್ಯಾರ್ಥಿಗಳು ಕೇವಲ ಮೊಬೈಲ್ ಮತ್ತು ಟಿವಿ ಗೆ ಅಂಟಿಕೊಳ್ಳದೆ ತಾವು ಕಲಿತ ವಿದ್ಯೆಯನ್ನು ಸದುಪಯೋಗ ಪಡಿಸಿಕೊಂಡು ಮುನ್ನಡೆಯಬೇಕು, ಐಟಿಐ, ಡಿಪ್ಲೊಮಾ ಮತ್ತು ಇಂಜಿನಿಯರ್ ವಿದ್ಯಾರ್ಥಿಗಳು ಸಾಪ್ಟ್ ವೇರ್ ಗೆ ಸೀಮಿತವಾಗದೆ ರೈತ ಮತ್ತು ಸೈನಿಕರಿಗೆ ಬೇಕಾದ ಸರಳ ಉಪಕರಣಗಳನ್ನು ಸಂಶೋಧಿಸಿ ನೀಡಿದರೆ ಅದು ದೇಶ ಸೇವೆಯಾಗುತ್ತದೆ. ಈ ನಿಟ್ಟಿನಲ್ಲಿ ನಮ್ಮ ಕಾಲೇಜಿನ ವಿದ್ಯಾರ್ಥಿಗಳು ತೊಡಗಿಸಿಕೊಂಡಿರುವುದು ಹೆಮ್ಮೆಯ ವಿಷಯ ಎಂದರು.


ಜಿಲ್ಲಾ ರೈತ ಸಂಘದ ಅಧ್ಯಕ್ಷ ಎಂ ಮಲ್ಲಯ್ಯ ನವರು ಮಾತನಾಡಿ ಐಟಿಐ ಕಾಲೇಜಿನ ಮಕ್ಕಳು ಇಂದು ರೈತನಿಗೆ ಬೇಕಾದ ಕೆಲ ಉಪಕರಣಗಳನ್ನು ಸಂಶೋಧಿಸಿರುವುದು ಒಳ್ಳೆಯ ಬೆಳವಣಿಗೆ ಇನ್ನೂ ಉನ್ನತ ಮಟ್ಟದ ಉಪಕರಣವನ್ನು ಕಡಿಮೆ ದರ ಹಾಗೂ ಸರಳವಾಗಿ ಉಪಯೋಗಿಸುವಂತಹ ಉಪಕರಣಗಳನ್ನು ಸಂಶೋಧಿಸಲು ಕಾಲೇಜಿನ ಶಿಕ್ಷಕರು ತರಬೇತಿ ನೀಡಬೇಕು ಎಂದರು.


ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸಿಂ ಲಿಂ ನಾಗರಾಜು ಮಾತನಾಡಿ ಮಕ್ಕಳು ತಯಾರಿಸಿರುವ ಉಪಕರಣಗಳನ್ನು ನೋಡುತ್ತಿದ್ದರೆ ತುಂಬಾ ಸಂತೋಷವಾಗುತ್ತದೆ. ನಮ್ಮ ಕಾಲೇಜಿನ ಮಕ್ಕಳು ಇತರ ಕಾಲೇಜಿನ ಮಕ್ಕಳಿಗೆ ಮಾದರಿಯಾಗಿ ಬೆಳೆಯಬೇಕು. ಇವರಿಗೆ ಅನುಕೂಲವಾಗುವಂತ ಮತ್ತು ಪೂರಕವಾದ ವಾತಾವರಣವನ್ನು ಶಾಲೆಯ ಆಡಳಿತ ಮಂಡಳಿ ನೀಡಿದರೆ ರಾಜ್ಯ ಮಟ್ಟದಲ್ಲಿ ಹಲವಾರು ಸಂಶೋಧನೆಗಳನ್ನು ಮಾಡಿ ನಮ್ಮ ಕಾಲೇಜಿಗೆ ಕೀರ್ತಿ ತರಬಲ್ಲರು ಎಂದರು.


ಕಾಲೇಜಿನ ಮಕ್ಕಳು ರೈತರಿಗೆ ಅನುಕೂಲವಾಗುವಂತ ಮತ್ತು ಇನ್ನಿತರ ಬಹುಪಯೋಗಿ ಉಪಕರಣಗಳನ್ನು ತಯಾರಿಸಿ ಪ್ರದರ್ಶನಕ್ಕಿಟ್ಟಿದ್ದರು. ಮಾರ್ಕಿಂಗ್ ಶೀಟ್ ಕಟ್ಟರ್, ಪೊಟಾಟೋ ರಿಮೂವರ್, ಸಿಂಪಲ್ ಕಲ್ಟಿವೇಟರ್, ಪ್ಯಾಡಿ ಕಟ್ಟರ್, ಗ್ರಾಸ್ ಕ್ಲೀನರ್, ಆಟೋಮ್ಯಾಟಿಕ್ ರೈಲ್ವೇ ಗೇಟ್, ವಾಹನಗಳಿಗೆ ಅಡ್ಡಬಂದಾಗ ಅಪಘಾತಕ್ಕೆ ಮುಂಚೆಯೇ ನಿಲ್ಲುವ ಸಾಧನ ಸೇರಿದಂತೆ ಮೂವತ್ತೆಂಟಕ್ಕೂ ಹೆಚ್ಚು ಸಾಧನಗಳನ್ನು ತಯಾರಿಸಿ ಪ್ರದರ್ಶನಕ್ಕಿಟ್ಟಿದ್ದರು.


ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲ ಅಯೂಬ್  ಖಾನ್, ಕಾಲೇಜಿನ ಆಡಳಿತ ಮಂಡಳಿಯ ಎಸ್ ರಾಜಣ್ಣ, ಅನಂತಮೂರ್ತಿ, ವಿಜಯ್ ರಾಂಪುರ, ಕೆಲಗೆರೆ ಪಟೇಲ್ ರಾಜು, ರಾಜು ಕನ್ನಸಂದ್ರ, ರೈತ ಮುಖಂಡ ರಾಜು, ಶಂಭೂಗೌಡ, ಕಾಲೇಜಿನ ಪ್ರಾಧ್ಯಾಪಕರಾದ ಮರಿದೇವರು, ಮಹದೇವ, ಸಿ ಬಿ ಕುಮಾರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑