ಬೀದಿಗೆ ಬಂದ ಹೋಂ ಕ್ವಾರಂಟೈನ್ ಚಿತ್ರ ವೈರಲ್, ದಿಗಿಲುಬಿದ್ದ ಸಾರ್ವಜನಿಕರು, ದೂರು ದಾಖಲು
ಚನ್ನಪಟ್ಟಣ:ಮಾ/೨೯/೨೦/ಭಾನುವಾರ.
ನಗರದ ಕಲಾನಗರದಲ್ಲಿ ಹದಿನಾಲ್ಕು ದಿನಗಳ ಕಾಲ ಕೊರೊನಾ ಶಂಕಿತ ಹೋಂ ಕ್ವಾರಂಟೈನ್ ನಲ್ಲಿದ್ದ ಅಮಾನುಲ್ಲಾ ಖಾನ್ ರವರ ಪುತ್ರ ಸಹೀದ್ ಅಮಾನ್ (೩೨) ಎಂಬ ಯುವಕನೋರ್ವ ನಗರದ ಬೀದಿಗಿಳಿದಿದ್ದು, ಆತನ ಮುಂಗೈ ಮೇಲೆ ಮುದ್ರೆಯಿದ್ದ ಕಾರಣ ಸ್ಥಳದಲ್ಲಿದ್ದ ಸಾರ್ವಜನಿಕರು ಚಿತ್ರ ತೆಗೆದಿದ್ದು ಅದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಸಹೀದ್ ಅಮಾನ್ ಅಬುಧಾಬಿ ಯಿಂದ ಬಂದಿದ್ದರಿಂದ ಆತನನ್ನು ಪರೀಕ್ಷಿಸಿದ ವೈದ್ಯ ತಂಡವು ಆತನನ್ನು ಹದಿನಾಲ್ಕು ದಿನಗಳ ಕಾಲ ಮನೆಯಲ್ಲೇ ಇರುವಂತೆ (ಹೋಂ ಕ್ವಾರಂಟೈನ್) ಆದೇಶಿಸಲಾಗಿತ್ತು. ಕೇವಲ ಆರು ದಿನ ಮನೆಯಲ್ಲೇ ಇದ್ದ ಆತ ದಿಢೀರನೆ ಪೇಟೆಗೆ ಬಂದಿದ್ದನ್ನು ನೋಡಿದ ಜನರು ಆತನಿಗೆ ಹಿಡಿಶಾಪ ಹಾಕಿ ಪೋಲೀಸರು ಮತ್ತು ತಾಲ್ಲೂಕು ವೈದ್ಯಾಧಿಕಾರಿಗಳಿಗೆ ಮಾಹಿತಿ ನೀಡಿದರು.
ನಗರ ಪ್ರದಕ್ಷಿಣೆಯಲ್ಲಿದ್ದ ತಹಶಿಲ್ದಾರ್ ಸುದರ್ಶನ್ ರವರು ಆತನನ್ನು ಮನೆಗೆ ಕಳುಹಿಸಿ ಪೋಲೀಸರಿಗೆ ಮಾಹಿತಿ ನೀಡಿದ್ದು ನಗರದ ಪೂರ್ವ ಪೋಲಿಸ್ ಠಾಣೆಯಲ್ಲಿ ಪ್ರಥಮ ವರದಿ (ಎಫ್ ಐ ಆರ್) ದಾಖಲಿಸಿ ಆತ ಮತ್ತು ಆತನ ಮನೆಯ ಮೇಲೆ ನಿಗಾ ವಹಿಸಲಾಗಿದೆ.
ತಾಲ್ಲೂಕಿನಾದ್ಯಂತ ಇದುವರೆಗೂ ೫೨ ಮಂದಿ ಹೋಂ ಕ್ವಾರಂಟೈನ್ ನಲ್ಲಿದ್ದು ಗ್ರಾಮಾಂತರ ಪ್ರದೇಶದಲ್ಲಿ ೧೧ ಮಂದಿ ಹಾಗೂ ನಗರ ಪ್ರದೇಶದಲ್ಲಿ ೪೧ ಮಂದಿ ಇದ್ದರು. ಅವರಲ್ಲಿ ಗ್ರಾಮಾಂತರ ದಲ್ಲಿ ೦೬ ಮಂದಿ ಅವಧಿ ಮುಗಿಸಿದ್ದು ಇನ್ನೂ ೦೫ ಮಂದಿ ಉಳಿದಿದ್ದು, ನಗರದಲ್ಲಿ ೦೭ ಮಂದಿ ೧೪ ದಿನಗಳ ಕಾಲದ ಅವಧಿ ಮುಗಿಸಿದ್ದು ೩೬ ಮಂದಿ ಹೋಂ ಕ್ವಾರಂಟೈನ್ ನಲ್ಲಿದ್ದಾರೆ ಎಂದು ತಾಲ್ಲೂಕು ವೈದ್ಯಾಧಿಕಾರಿ ಡಾ ರಾಜು ಮಾಹಿತಿ ನೀಡಿದರು.
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು