ಕೊರೊನಾ ಎಫೆಕ್ಟ್, ಕಾನೂನು ಉಲ್ಲಂಘಿಸಿದ ಹದಿಮೂರು ಅಂಗಡಿಗಳಿಗೆ ಎಫ್ ಐ ಆರ್ ದಾಖಲು
ಚನ್ನಪಟ್ಟಣ:ಏ/೧೧/೨೦/ಶನಿವಾರ.
ಕೊರೊನಾ (ಕೋವಿಡ್-೧೯) ಹಿನ್ನೆಲೆಯಲ್ಲಿ ಅನುಸರಿಸಬೇಕಾದ ಕಾನೂನುಗಳನ್ನು ಅಂಗಡಿಗಳ ಮಾಲೀಕರು ಉಲ್ಲಂಘಿಸಿದ್ದರಿಂದ ಒಟ್ಟು ಹದಿಮೂರು ಅಂಗಡಿಗಳ ಮೇಲೆ ಪ್ರಥಮ ವರದಿ ದಾಖಲಿಸಿ ಕ್ರಮ ಕೈಗೊಳ್ಳಲಾಗಿದೆ ಎಂದು ಪೋಲೀಸ್ ಉಪ ಅಧೀಕ್ಷಕ ಓಂಪ್ರಕಾಶ್ ತಿಳಿಸಿದರು.
ಅಂಗಡಿಯ ಮಾಲೀಕರು ಸೇರಿದಂತೆ ಅಂಗಡಿಯಲ್ಲಿ ಕೆಲಸ ನಿರ್ವಹಿಸುವ ಎಲ್ಲರೂ ಮುಖಗವಸು (ಮಾಸ್ಕ್,), ಕೈಗವಸು (ಗ್ಲೌಸ್) ಹಾಕಿಕೊಂಡೇ ಸಾಮಾನು ಗಳನ್ನು ವಿತರಿಸಬೇಕು. ಗ್ರಾಹಕರಿಂದ ಅಂತರ ಕಾಯ್ದುಕೊಳ್ಳಲು ಒಂದು ಮೀಟರ್ ಒಬ್ಬರಂತೆ ನಿಲ್ಲಲು, ವೃತ್ತಾಕಾರದಲ್ಲಿ (ಸರ್ಕಲ್) ಬಣ್ಣ ಬಳಿದು ನಿಲ್ಲುವಂತೆ ಸೂಚಿಸಬೇಕು. ಪ್ರತಿ ಗ್ರಾಹಕರು ಸಹ ಮಾಸ್ಕ್ ಧರಿಸುವಂತೆ ಹಾಗೂ ಸ್ಯಾನಿಟೈಸರ್ ಉಪಯೋಗಿಸುವಂತೆ ತಿಳಿಸಬೇಕಾಗಿದ್ದು ಬಹುತೇಕ ಅಂಗಡಿಗಳ ಮಾಲೀಕರು ಇದನ್ನು ಪಾಲಿಸುತ್ತಿಲ್ಲ.
ವಿಶೇಷವಾಗಿ ಕೋಳಿ ಮತ್ತು ಮಾಂಸಂದಂಗಡಿಗಳಲ್ಲಿಯೂ ಸಹ ಶುಚಿತ್ವ ಕಾಪಾಡುತ್ತಿಲ್ಲ ಎಂಬ ಮಾಹಿತಿ ಇದ್ದು, ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲು ಮೀನಮೇಷ ಎಣಿಸುವುದಿಲ್ಲ.
ಬೇಕರಿ ಉತ್ಪನ್ನಗಳನ್ನು ಸಹ ಯಾವುದೇ ರೀತಿಯಲ್ಲಿ ವಿಂಗಡಿಸಿ (ಕಟ್ ಪೀಸ್) ಗ್ರಾಹಕರಿಗೆ ಅಲ್ಲೇ ತಿನ್ನಲು ನೀಡಬಾರದು. ಏನಿದ್ದರೂ ಪಾರ್ಸಲ್ ಮಾತ್ರ ನೀಡಬೇಕು. ಇವರು ಸಹ ಮೇಲಿನ ಎಲ್ಲಾ ಸೂಚನೆಗಳನ್ನು ಪಾಲಿಸಬೇಕು. ಸೂಚನೆ ಪಾಲಿಸಿಲ್ಲದ್ದನ್ನು ಕಂಡುಬಂದರೆ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ನಿನ್ನೆ ಒಂದೇ ದಿನ ಇಂತಹ ಹನ್ನೊಂದು ಅಂಗಡಿಗಳು ಹಾಗೂ ಎರಡು ವಾಹನಗಳ ಮೇಲೆ ಎಫ್ ಐ ಆರ್ ದಾಖಲಿಸಿದ್ದು, ಚನ್ನಪಟ್ಟಣ ಗ್ರಾಮಾಂತರ ದಲ್ಲಿ ೦೬, ಚನ್ನಪಟ್ಟಣ ನಗರದಲ್ಲಿ ೦೫ ಮತ್ತು ಸಾತನೂರು ವ್ಯಾಪ್ತಿಯಲ್ಲಿ ೦೨ ಪ್ರಕರಣಗಳನ್ನು ದಾಖಲಿಸಿರುವುದಾಗಿ ಅವರು ತಿಳಿಸಿದರು.
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು