ಕೊರೊನಾ ಜಾಗೃತಿ ಮತ್ತು ಎಚ್ಚರಿಕೆಯ ಗಂಟೆಯಾಗಿ ರೂಟ್ ಮಾಚ್೯ ಮಾಡಿದ ಪೋಲೀಸರು
ಚನ್ನಪಟ್ಟಣ:ಏ/೨೧/೨೦/ಮಂಗಳವಾರ. ಕೊರೊನಾ (ಕೋವಿಡ್-೧೯) ಬಗ್ಗೆ ಜಾಗೃತಿ ಮೂಡಿಸಲು ಹಾಗೂ ಸಾರ್ವಜನಿಕರು ಮನೆಯಿಂದ ಹೊರ ಬಾರದಿರುವಂತೆ ಎಚ್ಚರಿಕೆ ನೀಡುವ ಸದುದ್ದೇಶದಿಂದ ಪೋಲೀಸ್ ಉಪ ಅಧೀಕ್ಷಕ ಓಂಪ್ರಕಾಶ್ ನೇತೃತ್ವದಲ್ಲಿ ನಗರದ ಬಹುತೇಕ ವಾಡ್೯ಗಳಲ್ಲಿ ೧೫೦ ಕ್ಕೂ ಹೆಚ್ಚು ಸಿಬ್ಬಂದಿಗಳು ರೂಟ್ ಮಾಚ್೯ ನಡೆಸಿದರು.
ಎಲೆಕೇರಿಯಲ್ಲಿ ಸಮಾವೇಶಗೊಂಡ ಸಿಬ್ಬಂದಿಗಳು ರೈಲು ನಿಲ್ದಾಣ, ಸಯ್ಯದ್ ವಾಡಿ, ಡೂಂಲೈಟ್ ವೃತ್ತ, ಎಪಿಎಂಸಿ ಯಾಡ್೯, ಷೇರು ಹೋಟೆಲ್, ಸಾತನೂರು ವೃತ್ತ, ಫರಾ ಸ್ಕೂಲ್, ಡಿ ಟಿ ರಾಮು ವೃತ್ತ, ಗಾಂಧಿಭವನದ ಮೂಲಕ ಕೋಟೆ ಪ್ರದೇಶ, ಮಂಗಳವಾರಪೇಟೆ ಕಡೆಯಿಂದ ಚಾನೆಲ್ ರಸ್ತೆಯ ಮೂಲಕ ವಿವೇಕಾನಂದ ನಗರ, ಮಂಜುನಾಥ ನಗರ, ಚಚ್೯ ರಸ್ತೆ ಗೆ ಬಂದು ಸಾರಿಗೆ ಸಂಸ್ಥೆಯ ನಿಲ್ದಾಣದಲ್ಲಿ (ಬಸ್ ಸ್ಟ್ಯಾಂಡ್) ಕೊನೆಗೊಳಿಸಿದರು.
ಚಾನೆಲ್ ರಸ್ತೆಯ ಮಂಜುನಾಥ ನಗರ ಸೇರಿದಂತೆ ಕೆಲ ಭಾಗದಲ್ಲಿ ಮಕ್ಕಳು ಮತ್ತು ಮಹಿಳೆಯರು ಪೋಲೀಸರ ಮೇಲೆ ಹೂಮಳೆಗೈದು ಶುಭ ಹಾರೈಸಿದರು. ಇನ್ನೂ ಕೆಲವರು ತಂತಮ್ಮ ಮನೆಯ ಬಾಗಿಲು ಮತ್ತು ಟೆರೇಸ್ ಮೇಲೆ ನಿಂತು ಚಪ್ಪಾಳೆ ತಟ್ಟುವ ಮೂಲಕ ಪೋಲೀಸರ ಶ್ರಮವನ್ನು ಮುಕ್ತ ಕಂಠದಿಂದ ಶ್ಲಾಘಿಸಿದರು. ನಗರದ ಕೆಲ ಸೂಕ್ಷ್ಮ ಪ್ರದೇಶಗಳೂ ಸೇರಿದಂತೆ ಒಟ್ಟು ಒಂಭತ್ತು ಕಿಲೋ ಮೀಟರ್ ಅತಿ ವೇಗವಾಗಿ ಕಾಲ್ನಡಿಗೆಯಲ್ಲಿ ಸಂಚರಿಸುವ ಮೂಲಕ ಜನರು ಮನೆಯಲ್ಲೇ ಇದ್ದು ಕೊರೊನಾ ವಿರುದ್ಧ ಹೋರಾಡಬೇಕೆಂದು ಜಾಗೃತಿ ಮೂಡಿಸಲಾಯಿತು.
ಪೋಲೀಸ್ ಉಪ ಅಧೀಕ್ಷಕ ಓಂ ಪ್ರಕಾಶ್ ಮಾತನಾಡಿ ಚನ್ನಪಟ್ಟಣದಲ್ಲಿ ಕೆಲ ಸಾರ್ವಜನಿಕರು ಏನು ಹೇಳಿದರೂ ಕೇಳುತ್ತಿಲ್ಲ, ಸಹಜ ರೀತಿಯಲ್ಲಿ ತಿರುಗಾಡುತ್ತಿದ್ದು, ಕೊರೊನಾ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಮುನ್ನೆಚ್ಚರಿಕೆಯಾಗಿ ರೂಟ್ ಮಾರ್ಚ್ ಮಾಡುತ್ತಿದ್ದೇವೆ ಎಂದರು.
ಬಸ್ ನಿಲ್ದಾಣದಲ್ಲಿ ಸಮಾವೇಶಗೊಂಡ ನಂತರ ಓಂಪ್ರಕಾಶ್ ರವರು ಎಳನೀರನ್ನು, ಕಿಸ್ತೂರ್ ಚಂದ್ ಜೈನ್ ನೇತೃತ್ವದಲ್ಲಿ ಜೈನ್ ಸಂಘದ ವತಿಯಿಂದ ತಂಪು ಪಾನೀಯಗಳನ್ನು, ರೋಟರಿ ಸಂಸ್ಥೆಯಿಂದ ಮಾಸ್ಕ್ ಗಳನ್ನು ಪೋಲೀಸರಿಗೆ ನೀಡಲಾಯಿತು.
ನಗರ ಪೋಲೀಸ್ ವೃತ್ತ ನಿರೀಕ್ಷಕ ಗೋವಿಂದರಾಜು, ನಗರ ಪಿಎಸ್ಐ ರವೀಂದ್ರ, ಗ್ರಾಮಾಂತರ ಠಾಣೆಯ ಪಿಎಸ್ಐ ಶಿವಕುಮಾರ್ ಮತ್ತು ಪೂರ್ವ ಪೋಲೀಸ್ ಠಾಣೆಯ ಪಿಎಸ್ಐ ಪ್ರಕಾಶ್ ರವರು ರೂಟ್ ಮಾಚ್೯ ನೇತೃತ್ವ ವಹಿಸಿದ್ದರು.
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು