ಸೋಗಾಲ ಸರ್ಕಾರಿ ಶಾಲೆಗೆ ಬೆಂಕಿ, ಸುಟ್ಟು ಕರಕಲಾದ ದಾಖಲೆಗಳು ಮತ್ತು ಪೀಠೋಪಕರಣಗಳು
ಚನ್ನಪಟ್ಟಣ:ಏ/೨೬/೨೦/ಭಾನುವಾರ. ತಾಲ್ಲೂಕಿನ ಅಕ್ಕೂರು ಪೋಲೀಸ್ ಠಾಣಾ ವ್ಯಾಪ್ತಿಯ ಸೋಗಾಲ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಛೇರಿಯ ಕೊಠಡಿಯೊಂದಕ್ಕೆ ಬೆಂಕಿಗೆ ಬಿದ್ದಿದ್ದು, ಶಾಲೆಯ ದಾಖಲೆಗಳು ಸೇರಿದಂತೆ ಅನೇಕ ಪೀಠೋಪಕರಣಗಳು ಸುಟ್ಟು ಕರಕಲಾಗಿದ್ದು, ಸರಿಸುಮಾರು ಎರಡು ಲಕ್ಷ ರೂಪಾಯಿಗಳ ನಷ್ಟ ಸಂಭವಿಸಿದೆ.
ಕಛೇರಿಯ ಒಂದು ಕಿಟಕಿಯ ಗಾಜು ಸ್ವಲ್ಪ ಹೊಡೆದಿದ್ದು, ಸುತ್ತಲೂ ಕೊಡುಗೆ ಜಮೀನು ಇದ್ದು, ಕಿಡಿಗೇಡಿಗಳೋ ಅಥವಾ ಆಕಸ್ಮಿಕವಾಗಿಯೋ, ಕಛೇರಿಯೊಳಗೆ ನಿನ್ನೆ ರಾತ್ರಿಯೇ ಬೆಂಕಿ ಬಿದ್ದಿದ್ದು, ಇಂದು ಬೆಳಿಗ್ಗೆ ಗ್ರಾಮಸ್ಥರು ಹೊಗೆಯ ಜಾಡು ಹಿಡಿದು, ಅಗ್ನಿಶಾಮಕ ಠಾಣೆಗೆ ದೂರು ನೀಡಿದ್ದಾರೆ.
ಅಗ್ನಿಶಾಮಕ ದಳದ ಅಧಿಕಾರಿ ವಿಷಕಂಠಯ್ಯ ನೇತೃತ್ವದಲ್ಲಿ ಬೆಂಕಿಯನ್ನು ನಂದಿಸಿದ್ದು, ಸರಿ ಸುಮಾರು ಎರಡು ಲಕ್ಷ ರೂಪಾಯಿ ಬೆಲೆಬಾಳುವ ಕಛೇರಿಯ ಉಪಕರಣಗಳು ಮತ್ತು ದಾಖಲೆಗಳು ಸುಟ್ಟು ಭಷ್ಮವಾಗಿರುವುದಾಗಿ ಅಧಿಕಾರಿಯು ಅಂದಾಜಿಸಿರುವುದಾಗಿ ತಿಳಿಸಿದರು.
ಶಾಲೆಯ ಮುಖ್ಯೋಪಾಧ್ಯಾಯಿನಿ ಪದ್ಮಾ ರವರು ಅಕ್ಕೂರು ಪೋಲೀಸ್ ಠಾಣೆಗೆ ಲಿಖಿತ ದೂರು ನೀಡಿದ್ದು, ಯಾರೋ ಕಿಡಿಗೇಡಿಗಳು ಬೆಂಕಿ ಹಚ್ಚಿರುವಂತೆ ಮೇಲ್ನೋಟಕ್ಕೆ ಕಂಡುಬರುತ್ತಿದೆ. ಇದಕ್ಕೆ ಪುಷ್ಟಿ ನೀಡುವಂತೆ ಸ್ಥಳದಲ್ಲಿ ಸೀಮೆಎಣ್ಣೆ ಡಬ್ಬಿಯ ಮುಚ್ಚಳಗಳು ಬಿದ್ದಿದ್ದು, ಪೋಲೀಸರು ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸಬೇಕೆಂದು ದೂರಿನಲ್ಲಿ ತಿಳಿಸಿದ್ದಾರೆ.
ಶಾಲೆಗೆ ಬೆಂಕಿ ಬಿದ್ದಿರುವ ಸುದ್ದಿ ಕಾಳ್ಗಿಚ್ಚಿನಂತೆ ಹಬ್ಬಿದ್ದು, ಸೋಗಾಲ ಗ್ರಾಮದ ಮುಖಂಡರು, ಗ್ರಾಮಸ್ಥರು, ಪ್ರೌಢಶಾಲಾ ಮುಖ್ಯ ಶಿಕ್ಷಕ ಕನಕಪ್ಪ, ಸಿ ಆರ್ ಪಿ ವೆಂಕಟೇಶ್, ಎಸ್ ಡಿ ಎಂ ಸಿ ಅಧ್ಯಕ್ಷ ಮಂಜು ಮತ್ತು ಸಹ ಶಿಕ್ಷಕ ರಾಮಕೃಷ್ಣ ಮತ್ತಿತರರು ಹಾಜರಿದ್ದರು.
ಶಿಕ್ಷಣ ಕೊಡುವ ಶಾಲೆಯು ಎಲ್ಲಕ್ಕಿಂತಲೂ ಮಿಗಿಲಾಗಿದ್ದು, ಬೆಂಕಿ ತಗುಲಿರುವುದು ದುರದೃಷ್ಟಕರ. ಇದು ಆಕಸ್ಮಿಕವೋ ಅಥವಾ ಕಿಡಿಗೇಡಿಗಳ ಪಾತ್ರವೋ ಎಂಬುದು ಪೋಲೀಸರ ತನಿಖೆಯಿಂದ ಹೊರ ಬರಬೇಕಾಗಿದೆ.
ಶಾಲೆಯ ಮುಖ್ಯೋಪಾಧ್ಯಾಯಿನಿ ಹಾಗೂ ಎಸ್ ಡಿ ಎಂ ಎಂ ಸಿ ಅಧ್ಯಕ್ಷರನ್ನು ಠಾಣೆಗೆ ದೂರು ಸಲ್ಲಿಸುವಂತೆ ತಿಳಿಸಲಾಗಿದೆ.
*ನಾಗರಾಜು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಚನ್ನಪಟ್ಟಣ.
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು