ಕೋವಿಡ್-19 ಸಂಚಾರಿ ತಪಾಸಣಾ ಕೇಂದ್ರಕ್ಕೆ ಚಾಲನೆ ನೀಡಿದ ಜಿಲ್ಲಾಧಿಕಾರಿ
ರಾಮನಗರ:ಮೇ/೨೬/೨೦/ಮಂಗಳವಾರ.
ಕೊರೊನಾ (ಕೋವಿಡ್-೧೯) ಸೋಂಕನ್ನು ಜಿಲ್ಲೆಯಲ್ಲಿ ಪತ್ತೆ ಹಚ್ಚಲು ಹಾಗೂ ತಪಾಸಣೆಯನ್ನು ಹೆಚ್ಚಿಸಲು ಕೆ.ಎಸ್.ಆರ್.ಟಿ.ಸಿ ಸಂಚಾರಿ ಬಸ್ನ್ನು ಕ್ಲಿನಿಕ್ ರೂಪದಲ್ಲಿ ಪರಿವರ್ತಿಸಿ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಸಂಚರಿಸಿ ಕೋವಿಡ್-೧೯ ಲಕ್ಷಣವುಳ್ಳವರನ್ನು ಪರೀಕ್ಷಿಸುವ ಸಂಚಾರಿ ವಾಹನಕ್ಕೆ ಇಂದು ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದಲ್ಲಿ ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ ಅವರು ಚಾಲನೆ ನೀಡಿದರು.
ಸಂಚಾರಿ ವಾಹನದಲ್ಲಿ ವೈದ್ಯರು ಕುಳಿತುಕೊಂಡು ತಪಾಸಣೆ ಮಾಡಲು ಡಾಕ್ಟರ್ ಯುನಿಟ್, ರೋಗಿಯ ತಪಾಸಣೆಗಾಗಿ ಹಾಸಿಗೆ ವ್ಯವಸ್ಥೆ, ಕೈತೊಳೆಯಲು ವಾಷ್ ಬೇಸನ್, ಕೋವಿಡ್-೧೯ ಪರೀಕ್ಷೆಗಾಗಿ ಸ್ವಾಬ್ ಸಂಗ್ರಹಣೆ ಮಾಡುವ ವ್ಯವಸ್ಥೆ ಇರುತ್ತದೆ. ವೈದ್ಯರು, ನರ್ಸ್, ಲ್ಯಾಬ್ ಟೆಕ್ನೀಷಿಯನ್ ಹಾಗೂ ವಾಹನ ಚಾಲಕರು ಇದರಲ್ಲಿ ಕಾರ್ಯನಿರ್ವಹಿಸಲಿದ್ದಾರೆ.
ವಾಹನವು ಹೆಚ್ಚಿನ ಜನಸಂದಣಿ ಇರುವ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, ರೇಷ್ಮೆ ಮಾರುಕಟ್ಟೆ, ಬಸ್ ನಿಲ್ದಾಣ, ಇನ್ನಿತರೆ ಪ್ರದೇಶಗಳಲ್ಲಿ ಸಂಚರಿಸಿ ಅಲ್ಲಿನ ಜನರ ಆರೋಗ್ಯವನ್ನು ತಪಾಸಣೆಗೆ ಒಳಪಡಿಸಲಿದೆ. ಕೋವಿಡ್-೧೯ ರೋಗದ ಲಕ್ಷಣವುಳ್ಳವರು ಕಂಡುಬಂದಲ್ಲಿ ಸಂಚಾರಿ ವಾಹನದಲ್ಲೇ ಸ್ವಾಬ್ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿಕೊಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಪಿ. ವಿಜಯ್, ಜಿಲ್ಲಾ ಆರೋಗ್ಯಾಧಿಕಾರಿ ಡಾ. ನಿರಂಜನ್, ಆರ್.ಸಿ.ಎಚ್. ಅಧಿಕಾರಿ ಡಾ. ಪದ್ಮ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು