ಎಂತಹ ಮಾರಕ ಖಾಯಿಲೆ ಬಂದರೂ ಧೈರ್ಯವಾಗಿ ಕೆಲಸ ಮಾಡುವವರೇ ಪೌರಕಾರ್ಮಿಕರು. ಪೌರಾಯುಕ್ತ
ಚನ್ನಪಟ್ಟಣ:ಜೂ/೦೩/೨೦/ಬುಧವಾರ. ದೇಶದಲ್ಲಿ ಯಾವುದೇ ರೀತಿಯ ಮಾರಕ ಖಾಯಿಲೆಗಳು ಬಂದರೂ ನಗರವನ್ನು ಶುಚಿಯಾಗಿಟ್ಟು ಖಾಯಿಲೆಯನ್ನು ತಡೆಗಟ್ಟುವುದರ ಜೊತೆಗೆ ಖಾಯಿಲೆ ಬರದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಂಡು, ನಾನು ಕೆಲಸ ಮಾಡಿದರೆ ನನಗೆ ಖಾಯಿಲೆ ತಗುಲಬಹುದು ಎಂದು ಯೋಚಿಸದೆ ಕೆಲಸ ನಿರ್ವಹಿಸುವವರೇ ಪೌರ ಕಾರ್ಮಿಕರು ಎಂದು ಪೌರಾಯುಕ್ತ ಶಿವನಂಕಾರಿಗೌಡ ಅಭಿಪ್ರಾಯ ಪಟ್ಟರು.
ಅವರು ಇಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ) ಚನ್ನಪಟ್ಟಣ ಇವರು ಹಮ್ಮಿಕೊಂಡಿದ್ದ ಪೌರಕಾರ್ಮಿಕರಿಗೆ ಕಿಟ್ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಆರ್ಟ್ ಆಫ್ ಲಿವಿಂಗ್ ನ ಸಂಚಾಲಕ ರವಿಕುಮಾರಗೌಡ ರವರು ಕಾಲಿಗೆ ಚಕ್ರ ಕಟ್ಟಿಕೊಂಡಂತೆ ತಿರುಗುತ್ತಿದ್ದವರು ಸಹ ಮೂರು ತಿಂಗಳುಗಳ ಕಾಲ ಮನೆಯಲ್ಲೇ ಕುಳಿತುಕೊಳ್ಳಬೇಕಾದ ಸಂದರ್ಭವನ್ನು ಕೊರೊನಾ ಸೃಷ್ಟಿಸಿತು. ಇಂತಹ ಸಂದರ್ಭದಲ್ಲಿ ಎದೆಗುಂದದೆ ಧೈರ್ಯವಾಗಿ ನಗರದ ಸ್ವಚ್ಚತೆಗೆ ಮುಂದಾದವರು ಪೌರಕಾರ್ಮಿಕರು. ಇಂತಹವರಿಗೆ ಸವಲತ್ತುಗಳು ಕಡಿಮೆ ಇರುವುದು ದುರ್ದೈವ. ಧರ್ಮಸ್ಥಳ ಸಂಘಟನೆಯವರು ಇವರನ್ನು ಗುರುತಿಸಿ ಸಹಾಯ ಹಸ್ತ ಚಾಚುತ್ತಿರುವುದು ಶ್ಲಾಘನೀಯ ಎಂದರು.
ಸಂಘದ ಮೈಸೂರು ಪ್ರಾದೇಶಿಕ ವಿಭಾಗದ ನಿರ್ದೇಶಕ ಗಂಗಾಧರ ರೈ ರವರು ಮಾತನಾಡಿ ಕೊರೊನಾ ನಿಂದ ಇಡೀ ವಿಶ್ವವೇ ತತ್ತರಿಸಿ ಹೋಗಿದೆ. ವೈದ್ಯರು ಮತ್ತು ಪೋಲೀಸರ ಕೆಲಸ ದುಪ್ಪಟ್ಟಾಗಿದೆ. ಪೌರಕಾರ್ಮಿಕರು ತಮ್ಮ ಆರೋಗ್ಯವನ್ನು ಬದಿಗೊತ್ತಿ ನಮಗೋಷ್ಕರ ದುಡಿಯುತ್ತಿರುವುದು ನಮ್ಮೆಲ್ಲರ ಸೌಭಾಗ್ಯ ಎಂದರು.
ಶ್ರೀ ಮಂಜುನಾಥ ಸ್ವಾಮಿಯ ಅನುಗ್ರಹ ಹಾಗೂ ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ರಾಜ್ಯದಾದ್ಯಂತ ಜನಪಯೋಗಿ ಕೆಲಸಗಳನ್ನು ಸಂಸ್ಥೆಯು ಮಾಡುತ್ತಿದೆ. ಕೋವಿಡ್-೧೯ ತುರ್ತು ಸಾಲ. ಕುಡಿಯುವ ನೀರಿನ ಘಟಕಗಳು, ಲಾಕ್ಡೌನ್ ಸಮಯದಲ್ಲಿ ಸಾಲದ ಕಂತನ್ನು ಕಟ್ಟಲಾಗದವರಿಗೆ ಮೂರು ತಿಂಗಳ ಕಾಲ ವಿರಾಮ, ವಲಸೆ ಕಾರ್ಮಿಕರಿಗೆ ಊಟೋಪಚಾರ, ಹತ್ತು ಸಾವಿರ ಮಂದಿಗೆ ಮಾಶಾಸನ ಸೇರಿದಂತೆ ಹಲವಾರು ಜನಪಯೋಗಿ ಕೆಲಸಗಳನ್ನು ಮಾಡುತ್ತಿದ್ದು ಪೌರಕಾರ್ಮಿಕರಿಗೆ ದಿನಸಿ ಕಿಟ್ ನೀಡುತ್ತಿರುವುದು ಅತೀವ ಸಂತೋಷ ತಂದಿದೆ ಎಂದರು.
ಇದೇ ವೇಳೆ ನಗರಸಭೆಯ ೧೫೩ ಮಂದಿಗೂ ದಿನಸಿ ಕಿಟ್ ಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಉಪ ತಹಶಿಲ್ದಾರ್ ಯೋಗೀಶ್, ಹರೀಶ್ ಕುಮಾರ್, ನಗರಸಭೆಯ ಆರೋಗ್ಯಾಧಿಕಾರಿ ಶಿವಕುಮಾರ್, ಸಂಘದ ಜಿಲ್ಲಾ ನಿರ್ದೇಶಕ ಬಾಬುನಾಯ್ಕ್ ಮತ್ತು ಗಣಪತಿ ಭಟ್ ಉಪಸ್ಥಿತರಿದ್ದರು.
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು