ಕಳೆಯಿಲ್ಲದ ತಾಲ್ಲೂಕು ಕಾಂಗ್ರೆಸ್ ಕಛೇರಿ, ಅಲ್ಲಲ್ಲಿ ಡಿಕೆಶಿ ಪದಗ್ರಹಣ ಸಂಭ್ರಮ ಕಣ್ತುಂಬಿಕೊಂಡ ಅಭಿಮಾನಿಗಳು
ಚನ್ನಪಟ್ಟಣ:ಜು/೦೨/೨೦/ಗುರುವಾರ. ಇಂದು ಕಾಂಗ್ರೆಸ್ ಪಕ್ಷದ ರಾಜ್ಯಾಧ್ಯಕ್ಷರಾಗಿ ಪದಗ್ರಹಣ ಮಾಡುತ್ತಿರುವ ಸಂದರ್ಭದಲ್ಲಿ ತಾಲ್ಲೂಕಿನ ಕಾಂಗ್ರೆಸ್ ಪಕ್ಷದ ಕಛೇರಿಯು ಬಣಗುಡುತ್ತಿತ್ತು. ತಳಿರು ತೋರಣ, ಹೂವಿನ ಅಲಂಕಾರ ವಿರಲಿ, ಕನಿಷ್ಠ ಪಕ್ಷ ಕಛೇರಿಯ ಬಾಗಿಲು ತೆರೆದಿರಲಿಲ್ಲ. ನಮ್ಮದೇ ಜಿಲ್ಲೆಯ ಒಬ್ಬ ರಾಜಕೀಯ ಭೀಷ್ಮ ರಾಷ್ಟ್ರೀಯ ಪಕ್ಷದ ರಾಜ್ಯದ ಚುಕ್ಕಾಣಿ ಹಿಡಿಯುತ್ತಿರುವ ನಾಯಕ, ಭವಿಷ್ಯದ ಮುಖ್ಯಮಂತ್ರಿ ಎಂದೇ ಬಿಂಬಿತರಾದ ಡಿ ಕೆ ಶಿವಕುಮಾರ್ ರವರು ಪಕ್ಷದ ರಾಜ್ಯಾಧ್ಯಕ್ಷರಾಗುವ ಸಂದರ್ಭದಲ್ಲಿ ತಾಲ್ಲೂಕು ಕಛೇರಿ ಕಳೆ ಕಳೆದುಕೊಂಡಿದ್ದು ಮಾತ್ರ ತಾಲ್ಲೂಕು ಸಂಘಟನೆಯ ಬಗ್ಗೆ ಅಭಿಮಾನಿಗಳಿಗೆ ಬೇಸರ ಮೂಡಿಸಿದ್ದಂತು ಸತ್ಯ.
ಇನ್ನೂ ತಾಲ್ಲೂಕಿನ ಅನೇಕ ಗ್ರಾಮಾಂತರ ಪ್ರದೇಶಗಳಲ್ಲಿ ಸ್ಥಳೀಯ ಕಾಂಗ್ರೆಸ್ ನಾಯಕರ ಮುಂದಾಳತ್ವದಲ್ಲಿ ಪೆಂಡಾಲ್ ಹಾಕಿಸಿ, ಟಿವಿಗಳನ್ನು ಅಳವಡಿಸಿ ಆನ್ಲೈನ್ ಮೂಲಕ ಅಭಿಮಾನಿಗಳು ಕಾರ್ಯಕ್ರಮವನ್ನು ವೀಕ್ಷಿಸಲು ಅನುವು ಮಾಡಿಕೊಟ್ಟಿದ್ದರು. ಕೆಲವು ಕಡೆಯಂತೂ ಟಿವಿ ಯಲ್ಲಿ ಕಾರ್ಯಕ್ರಮವು ಹೇಗೆ ಪ್ರಸಾರವಾಗುತ್ತಿತ್ತೋ ಅದೇ ರೀತಿಯಲ್ಲಿ ವಂದೇ ಮಾತರಂ ಹಾಡಿಗೆ ಎದ್ದು ನಿಂತು ಗೌರವ ಸೂಚಿಸುವುದು. ಅಲ್ಲಿ ಉದ್ಘಾಟಿಸಿದ ಸಂದರ್ಭದಲ್ಲಿಯೇ ಇಲ್ಲಿಯೂ ದೀಪ ಬೆಳಗಿಸಿ ಉದ್ಘಾಟಿಸುವುದನ್ನು ಚಾಚೂ ತಪ್ಪದೆ ಮಾಡುವ ಮೂಲಕ ತಮ್ಮ ನಾಯಕ ಅಧಿಕಾರ ಸ್ವೀಕರಿಸುವುದನ್ನು ಕಣ್ತುಂಬಿಕೊಂಡರು.
ನಗರದ ವೀರೇಗೌಡನದೊಡ್ಡಿ (ಅಂಬೇಡ್ಕರ್ ನಗರ), ಕೋಟೆ ಯ ಆಂಜನೇಯ ದೇವಾಲಯದ ಮುಂಭಾಗ, ಎಲೆಕೇರಿ, ಬಡಾಮಕಾನ್, ಮದಿನಾಚೌಕ, ಮಂಗಳವಾರಪೇಟೆ ಸೇರಿ ಆರು ಕಡೆ ಹಾಗೂ ಗ್ರಾಮಾಂತರದಲ್ಲಿ ಪ್ರತಿ ಪಂಚಾಯತಿಗೊಂದರಂತೆ ೩೨ ಕಡೆ ವೀಕ್ಷಿಸಲು ಪಕ್ಷದ ವತಿಯಿಂದ ಅನುವು ಮಾಡಿಕೊಡಲಾಗಿತ್ತು.
ಜಿಲ್ಲೆಯ ಹೆಮ್ಮೆಯ ಮಗ, ಭವಿಷ್ಯದ ಮುಖ್ಯಮಂತ್ರಿ ಹಾಗೂ ದೊಡ್ಡ ಸಮುದಾಯದ ನಾಯಕನಾಗಿ ಹೊರಹೊಮ್ಮಿರುವ ಡಿ ಕೆ ಶಿವಕುಮಾರ್ ರವರ ಪದಗ್ರಹಣ ಕಾರ್ಯಕ್ರಮಕ್ಕೆ ಪಕ್ಷಾತೀತವಾಗಿ ಭಾಗಿಯಾಗಿ, ಜನರು ಕಾರ್ಯಕ್ರಮ ವನ್ನು ವೀಕ್ಷಿಸುವ ಮೂಲಕ ತಮ್ಮ ಒಳ ಅಭಿಮಾನವನ್ನು ಮೆರೆದಿದ್ದು ನಾಯಕನಿಗೆ ಸಂದ ಜಯ ಎಂದೇ ಭಾವಿಸಬಹುದು.
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು