Tel: 7676775624 | Mail: info@yellowandred.in

Language: EN KAN

    Follow us :


ಸೋಂಕು ಪರೀಕ್ಷಾ ವರದಿ ತಡ: ಚನ್ನಪಟ್ಟಣದಲ್ಲಿ ಲೆಕ್ಕಕ್ಕೆ 9 ಸೋಂಕು, ಕೋವಿಡ್ ಗೆ ದಾಖಲಾಗಿದ್ದು ಮಾತ್ರ 3.

Posted date: 26 Jul, 2020

Powered by:     Yellow and Red

ಸೋಂಕು ಪರೀಕ್ಷಾ ವರದಿ ತಡ: ಚನ್ನಪಟ್ಟಣದಲ್ಲಿ ಲೆಕ್ಕಕ್ಕೆ 9 ಸೋಂಕು, ಕೋವಿಡ್ ಗೆ ದಾಖಲಾಗಿದ್ದು ಮಾತ್ರ 3.

ಚನ್ನಪಟ್ಟಣ:ಜು/೨೬/೨೦/ಭಾನುವಾರ. ಚನ್ನಪಟ್ಟಣ ನಗರ ಮತ್ತು ಗ್ರಾಮೀಣ ಪ್ರದೇಶ ಸೇರಿ 9 ಮಂದಿಗೆ ಇಂದು ಕೊರೊನಾ ಸೋಂಕು ದೃಢಪಟ್ಟಿದೆ. ಇವರೆಲ್ಲರೂ ಸಾರ್ವಜನಿಕ ಆಸ್ಪತ್ರೆಯಲ್ಲಿ ಕಳೆದ ವಾರವೇ ಪರೀಕ್ಷೆಗೆ ಒಳಪಟ್ಟಿದ್ದರು. ವರದಿ ತಡವಾಗಿ ಬಂದಿರುವುದರಿಂದ ಇವರನ್ನು ಇಂದು ಮತ್ತೊಮ್ಮೆ ಆ್ಯಂಟಿಝೆನ್ ಪರೀಕ್ಷೆಗೆ ಒಳಪಡಿಸಿದ್ದು, ಇವರಲ್ಲಿ 6 ಮಂದಿಗೆ ನೆಗೆಟಿವ್ ಬಂದಿದೆ. ಅಂದರೆ ಇವರಿಗೆ ಸ್ವಾಬ್ ತೆಗೆದಾಗ ಪಾಸಿಟಿವ್ ಇದ್ದು ಇವರಲ್ಲಿ ರೋಗನಿರೋಧಕ ಶಕ್ತಿ ಹಾಗೂ ಮುನ್ನೆಚ್ಚರಿಕೆಯ ಔಷಧ ಪಡೆದಿರುವುದರಿಂದ ನಂತರದ ಪರೀಕ್ಷೆಯಲ್ಲಿ ನೆಗೆಟಿವ್ ದೃಢಪಟ್ಟಿದೆ. 6 ಮಂದಿಯನ್ನು ಅವರ ಮನೆಯಲ್ಲೇ ಕ್ವಾರಂಟೈನ್ ಮಾಡಿದ್ದು ಉಳಿದ 3 ಮಂದಿಯನ್ನು ರಾಮನಗರದ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.


ಇದಕ್ಕೆಲ್ಲಾ ಕಾರಣವೆಂದರೆ ತಡವಾಗಿ ಬರುತ್ತಿರುವ ಪರೀಕ್ಷಾ ವರದಿ, ಪ್ರಥಮ ಸಂಪರ್ಕಿತ ಶಂಕಿತರಿರಬಹುದು ಅಥವಾ ಜ್ವರ, ಕೆಮ್ಮು, ನೆಗಡಿ ಇರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಬಂದು  ಪರೀಕ್ಷೆ ಮಾಡಿಸಿಕೊಂಡವರಿರಬಹುದು. ಎಲ್ಲರಿಗೂ ವರದಿ ಬರುತ್ತಿರುವುದು ಮಾತ್ರ ಕನಿಷ್ಠ 7 ದಿನದಿಂದ 15 ದಿನಗಳವರೆಗೂ ವರದಿ ಬರುತ್ತಿರುವುದೇ ಕಾರಣವಾಗಿದೆ. ವರದಿ ಬಂದ ನಂತರ ಸೋಂಕಿತರನ್ನೆಲ್ಲಾ ಕರೆತಂದು ಆ್ಯಂಟಿಝೆನ್ ಪರೀಕ್ಷೆಗೆ ಒಳಪಡಿಸಿದಾಗ ರೋಗ ನಿರೋಧಕ ಶಕ್ತಿ ಹೆಚ್ಚಿರುವ ಸೋಂಕಿತರಿಗೆ ನೆಗೆಟಿವ್ ಬರುತ್ತಿದ್ದು, ಅವರನ್ನು ಕನಿಷ್ಠ 7 ದಿನದಿಂದ 14 ದಿನಗಳವರೆಗೆ ಹೋಂ ಕ್ವಾರಂಟೈನ್ ನಲ್ಲಿ ಇರಲು ಸೂಚಿಸಲಾಗುತ್ತಿದೆ.


*ವರದಿ ತಡವಾಗಿ ಬರುತ್ತಿರುವುದರಿಂದ ಆತಂಕ:*

ಸ್ವಾಬ್ ತೆಗೆದ 15 ದಿನಗಳ ವರೆಗೂ ವರದಿ ಬರುತ್ತಿರುವುದರಿಂದ ಸೋಂಕಿತರು, ಶಂಕಿತರು ಹಾಗೂ ಸಾರ್ವಜನಿಕರಲ್ಲಿ ಆತಂಕ ಉಂಟಾಗುತ್ತಿದೆ. ಪರೀಕ್ಷೆಗೆ ಒಳಪಟ್ಟ ಶಂಕಿತ, ವರದಿ ಬರುವ ತನಕ ಹೋಂ ಕ್ವಾರಂಟೈನ್ ನಲ್ಲಿ ಇರಬೇಕು. ಆದರೆ ಇದುವರೆಗೂ ಯಾರೂ ಸಹ ಹೋಂ ಕ್ವಾರಂಟೈನ್ ನಲ್ಲಿ ಇರುತ್ತಿಲ್ಲ.ಆತ ಹಲವಾರು ಕಡೆ ಓಡಾಡಿಕೊಂಡು ಜನ ಸಂಪರ್ಕ ಮಾಡಿರುತ್ತಾನೆ. ಆತನಿಂದ ಅನೇಕರಿಗೆ ಸೋಂಕು ಹರಡಿರುತ್ತದೆ. ಇದಕ್ಕೆ ಹೊಣೆ ಯಾರು ? ತಡವಾಗಿ ಬರುತ್ತಿರುವ ವರದಿಯೋ ? ಅಥವಾ ಸ್ವಾಬ್ ಕೊಟ್ಟ ನಂತರ ಮನೆಯಲ್ಲಿರದೇ ಬೀದಿ ಸುತ್ತಿದ್ದ ಶಂಕಿತನದೋ‌ ? ಇಲ್ಲಾ ಇದನ್ನು ಸರಿಯಾಗಿ ನಿಭಾಯಿಸದ ಆಡಳಿತವೋ ? ಎಂಬುದನ್ನು ಸರ್ಕಾರವೇ ಸಾರ್ವಜನಿಕರಿಗೆ ತಿಳಿಸಿಕೊಡಬೇಕಾಗಿದೆ.


*ಬರೇ ಸುಳ್ಳು ಭರವಸೆ*

ಇದೇ ತಿಂಗಳ ಮೊದಲ ವಾರ ರಾಮನಗರದಲ್ಲಿ ಲ್ಯಾಬ್ ಉದ್ಘಾಟನೆ ಮಾಡಿದ ಉಪಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಅಶ್ವಥ್ ನಾರಾಯಣ ರವರು 24 ಗಂಟೆಯಲ್ಲೇ ವರದಿ ಲಭಿಸುತ್ತದೆ ಎಂದು ಹೇಳಿದರಾದರು, ಲ್ಯಾಬ್ ಕೆಲಸ ಪ್ರಾರಂಭ ಮಾಡಲೇ ಇಲ್ಲ.

ಮೊನ್ನೆ ಮುಖ್ಯಮಂತ್ರಿ ಯಡಿಯೂರಪ್ಪ ನವರು ಸಹ 24 ಗಂಟೆಯೊಳಗೆ ವರದಿ ಕೈ ಸೇರಲಿದೆ ಎಂದು ಹೇಳಿದರೂ ಸಹ ಅದು ಕಾರ್ಯರೂಪಕ್ಕೆ ಇಳಿಯಲಿಲ್ಲ. ಇದರಿಂದ ತೊಂದರೆ ಮತ್ತು ಭಯ ಆಗುತ್ತಿರುವುದು ಮಾತ್ರ ಸಾರ್ವಜನಿಕರಿಗೆ.


*ಟ್ರೂನಾಟ್, ಆ್ಯಂಟಿಝೆನ್ ಮತ್ತು ಸ್ವಾಬ್ ನ ಗೊಂದಲ*

ಜಿಲ್ಲಾ ಆಸ್ಪತ್ರೆಯಲ್ಲಿ ಟ್ರೂನಾಟ್, ಮತ್ತು ತಾಲ್ಲೂಕು ಆಸ್ಪತ್ರೆಗಳಲ್ಲಿ ಇತ್ತೀಚೆಗೆ ಆ್ಯಂಟಿಝೆನ್ ಮೂಲಕ ಪರೀಕ್ಷೆ ಮಾಡಲಾಗುತ್ತಿದೆಯಾದರೂ, ಆಡಳಿತ ವೈದ್ಯಾಧಿಕಾರಿಗಳು ಹಲವಾರು ಕಾರಣಗಳನ್ನೊಡ್ಡಿ ಅಧಿಕೃತವಾಗಿ ಒಪ್ಪುತ್ತಿಲ್ಲ ಎನ್ನುವುದು ಈಗಾಗಲೇ ಸಾಬೀತಾಗಿದೆ. ಟ್ರೂನಾಟ್ ಮತ್ತು ಆ್ಯಂಟಿಝೆನ್ ಪರೀಕ್ಷೆಗಳಲ್ಲಿ ತಕ್ಷಣವೇ ಸೋಂಕು ಇರುವುದು ದೃಢವಾದರೂ ಸಹ ಅದನ್ನು ಲೆಕ್ಕಕ್ಕೆ ತೆಗೆದುಕೊಳ್ಳದೆ, ಸ್ವಾಬ್ ತೆಗೆದ ನಂತರವೇ ದೃಢಪಡಿಸಲಾಗುವುದು ಎಂದು ಕೆಲ ಅಧಿಕಾರಿಗಳು ಹೇಳುತ್ತಾರೆ. ಆದರೆ ಸ್ವಾಬ್ ಪರೀಕ್ಷಾ ವರದಿ ತುಂಬಾ ತಡವಾಗಿ ಬರುತ್ತಿರುವುದರಿಂದ ಸೋಂಕಿತರ ಮತ್ತು ಆತನ ಸಂಪರ್ಕಿತರ ಗತಿ ಏನು ಎಂಬುದು ಯಕ್ಷ ಪ್ರಶ್ನೆಯಾಗಿ ಉಳಿದಿದ್ದು ಸಂಬಂಧಿಸಿದ ಅಧಿಕಾರಿಗಳು ಸ್ಪಷ್ಟ ಉತ್ತರ ನೀಡಬೇಕಾಗಿದೆ.


ಗೋ ರಾ ಶ್ರೀನಿವಾಸ...

ಮೊ:9845856139.


ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑