Tel: 7676775624 | Mail: info@yellowandred.in

Language: EN KAN

    Follow us :


ಮುಂಗಾರು ಮಳೆಗೆ ಚುರುಕುಗೊಂಡ ಬಿತ್ತನೆ ಕಾರ್ಯ. ಮುಂದುವರೆದ ರಸಗೊಬ್ಬರ ಕೊರತೆ

Posted date: 13 Aug, 2020

Powered by:     Yellow and Red

ಮುಂಗಾರು ಮಳೆಗೆ ಚುರುಕುಗೊಂಡ ಬಿತ್ತನೆ ಕಾರ್ಯ. ಮುಂದುವರೆದ ರಸಗೊಬ್ಬರ ಕೊರತೆ

ಚನ್ನಪಟ್ಟಣ:ಆ/13/20/ಗುರುವಾರ. ತಾಲ್ಲೂಕಿನಾದ್ಯಂತ ಮುಂಗಾರು ಮಳೆಯ ನಡುವೆಯೇ ಬಿತ್ತನೆ ಕಾರ್ಯ ಚುರುಕುಗೊಂಡಿದೆ. ಈಗಾಗಲೇ ರಾಗಿ ಬಿತ್ತನೆ ಮಾಡಿದ ಅನೇಕ ರೈತರು‌ ಅವುಗಳನ್ನು ಬಿಡಿಬಿಡಿಯಾಗಿಸಿ ನಾಟಿ ಮಾಡಿದರೆ ಇನ್ನೂ ಕೆಲ ರೈತರು ಬಿತ್ತಿದ್ದ ರಾಗಿಗೆ ಕುಂಟೆ ಹೊಡೆದು ಬಿಡಿಯಾಗಿಸತೊಡಗಿರುವುದು ಕಂಡು ಬರುತ್ತಿದೆ.


ಈ ಬಾರಿ ಹಿಂಗಾರು ಸ್ವಲ್ಪ ಮುಂದಾಗಿಯೇ ಆರಂಭವಾದ್ದರಿಂದ ಕೆಲ ರೈತರು ತಮ್ಮ ಜಮೀನನ್ನು ಉತ್ತು ಹಸನು ಮಾಡಿಕೊಂಡಿದ್ದರು. ಇನ್ನೂ ಕೆಲ ರೈತರು ಹಿಂಗಾರು ಮಳೆಗೆ ನೆಲಗಡಲೆಯನ್ನು ಬಿತ್ತಿ ಬೆಳೆದಿದ್ದಾರೆ. ಬಹುತೇಕ ರೈತರು ರಾಗಿಯನ್ನು ಬಿತ್ತಿದ್ದು ನಡುನಡುವೆ ಸಾಲುಗಳಾಗಿ ಅವರೆ, ತೊಗರಿ, ಹಲಸಂದೆ ಬೀಜಗಳನ್ನು ಬಿತ್ತುತ್ತಿದ್ದಾರೆ.


ಈ ನಡುವೆ ತಾಲ್ಲೂಕಿನಾದ್ಯಂತ ಇರುವ ವ್ಯವಸಾಯೋತ್ಪನ್ನ ಸೊಸೈಟಿಗಳಲ್ಲಿ ರಸಗೊಬ್ಬರಗಳ ಕೊರತೆ ಕಂಡು ಬರುತ್ತಿದೆ. ಹಿಂಗಾರು ಮಳೆಯಲ್ಲೇ ಬಿತ್ತನೆ ಮಾಡಿರುವ ಬೆಳೆಗೆ ಶೀಘ್ರವಾಗಿ ಯೂರಿಯಾ ಅಗತ್ಯವಿದ್ದು, ಮುಂಗಾರು ಮಳೆಯಲ್ಲಿ ಬಿತ್ತನೆ ಮಾಡುತ್ತಿರುವ ರೈತರು ಸಹ ರಸಗೊಬ್ಬರದ ಕೊರತೆ ಕಂಡು ಈಗಲೇ ದಾಸ್ತಾನು ಮಾಡಿಕೊಳ್ಳುವ ಮುಂದಾಲೋಚನೆಯಿರುವುದರಿಂದ ತಾಲ್ಲೂಕಿನ ಎಲ್ಲಾ ಕೇಂದ್ರಗಳಲ್ಲೂ ರಸಗೊಬ್ಬರ ಕೊರತೆ ಇದೆ.


ಇಡೀ ಜಿಲ್ಲೆಯಲ್ಲಿ ಚನ್ನಪಟ್ಟಣ ತಾಲ್ಲೂಕಿನಲ್ಲಿ ಹೆಚ್ಚಿನ ನೀರಾವರಿ ಇರುವುದರಿಂದ ಸಹಜವಾಗಿ ವ್ಯವಸಾಯ ಮುಂದಿದೆ. ನೀರಾವರಿಯ ಜೊತೆಗೆ ಕೊರೊನಾ ಸಂಕಷ್ಟದಿಂದ ನಗರ ಬಿಟ್ಟು ಹಳ್ಳಿಗಳಿಗೆ ಬಂದಿರುವ ಯುವಕರು ಸಹ ಉತ್ಸಾಹದಿಂದ ವ್ಯವಸಾಯದಲ್ಲಿ ತೊಡಗಿದ್ದಾರೆ. ಜಿಲ್ಲೆಯ ಬೇರೆ ಬೇರೆ ತಾಲ್ಲೂಕುಗಳಲ್ಲಿ ಮಳೆ ಹಾಗೂ ಬೋರ್ ವೆಲ್ ಗಳ ನೀರನ್ನು ನಂಬಿ ವ್ಯವಸಾಯ ಮಾಡಿದರೆ ಚನ್ನಪಟ್ಟಣದಲ್ಲಿ ಶೇಕಡಾ 70 ರಷ್ಟು ಶಾಶ್ವತ ನೀರಾವರಿ ಇರುವುದರಿಂದ ರಸಗೊಬ್ಬರ ಬೇಡಿಕೆ ಇದ್ದು, ಅಧಿಕಾರಿಗಳು ಕಾರಣ ನೀಡದೆ ರೈತರಿಗೆ ರಸಗೊಬ್ಬರ ನೀಡಲು ಕ್ರಮ ಕೈಗೊಳ್ಳಬೇಕಾಗಿದೆ.


ತಾಲ್ಲೂಕಿನಲ್ಲಿ ನೀರಾವರಿಗನುಗುಣವಾಗಿ ವರ್ಷದ 365 ದಿನಗಳು ಸಹ ವ್ಯವಸಾಯ ನಡೆಯುತ್ತಿದೆ. ಮುಂಗಾರು ಮಳೆಯಲ್ಲಿ ಮಳೆಯಾಶ್ರಿತ ರಾಗಿ ಬೆಳೆ  ಹೊರತುಪಡಿಸಿ, ಹಿಪ್ಪುನೇರಳೆ, ಬಾಳೆ ಮುಂತಾದ ಬೆಳೆಗಳಿಗೆ ರೈತರು ರಸಗೊಬ್ಬರವನ್ನೇ ನೆಚ್ಚಿಕೊಂಡಿದ್ದಾರೆ. ಹೈನುಗಾರಿಕೆಯನ್ನು ಹೆಚ್ಚು ಅವಲಂಬಿಸಿರುವ ರೈತರು, ಪಶುಗಳಿಗೆ ಬಳಸುವ ಮೇವಿಗಾಗಿ ಬೆಳೆಯುವ ಹುಲ್ಲಿಗೆ ಹೆಚ್ಚು ಯೂರಿಯಾವನ್ನು ಬಳಸುತ್ತಿರುವುದು ಸಹ ಮುಂಗಾರು ಮಳೆಯಲ್ಲಿ ರಸಗೊಬ್ಬರದ ಕೊರತೆಗೆ ಕಾರಣ ಎನ್ನಲಾಗುತ್ತಿದೆ.


ನಮ್ಮ ರೈತರು ಬೆಳೆ ಬೇಗ ಬರಲಿ ಹಾಗೂ ಹೆಚ್ಚು ಹಸಿರಾಗಿರಲಿ ಎಂದು ಯೂರಿಯಾ ರಸಗೊಬ್ಬರಕ್ಕೆ ಬೇಡಿಕೆ ಇಡುತ್ತಾರೆ. ಡಿಎಪಿ 17:17: ರಂತಹ ರಸಗೊಬ್ಬರಗಳನ್ನು ಬಳಸಲು ಹಿಂದೇಟು ಹಾಕುತ್ತಾರೆ. ಆದರೆ ಯೂರಿಯಾ ಜೊತೆಗೆ ಬೇರೆ ರೀತಿಯ ರಸಗೊಬ್ಬರಗಳನ್ನು ಬಳಸಿದರೆ ಭೂಮಿ ಸವಕಲಾಗದೆ, ಫಲವತ್ತತೆಯನ್ನು ಕಾಪಾಡುತ್ತದೆ. ನಮ್ಮಲ್ಲಿ ಯೂರಿಯಾ ಸದ್ಯ ಕಡಿಮೆ ಇದ್ದು, ಮಂಡ್ಯ ದ ಪ್ಯಾಕ್ಸ್ ನಿಂದ ತರಿಸಿಕೊಳ್ಳಲಾಗುವುದು. ಇನ್ನೆರಡು ದಿನಗಳಲ್ಲಿ ತಾಲೂಕಿಗೆ ಬೇಕಾದ ರಸಗೊಬ್ಬರ ನಮ್ಮಲ್ಲಿ ದಾಸ್ತಾನು ಇರುತ್ತದೆ.

*ಅಪರ್ಣಾ, ಕೃಷಿ ಅಧಿಕಾರಿ. ಚನ್ನಪಟ್ಟಣ.*


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑