Tel: 7676775624 | Mail: info@yellowandred.in

Language: EN KAN

    Follow us :


ತಾಲ್ಲೂಕಿನಲ್ಲಿ ಶಿಕ್ಷಕರು ಸಮಸ್ಯೆಗಳಿಂದ ಪರಿತಪಿಸುತ್ತಿದ್ದಾರೆ ಎ ಪಿ ರಂಗನಾಥ್

Posted date: 12 Sep, 2020

Powered by:     Yellow and Red

ತಾಲ್ಲೂಕಿನಲ್ಲಿ ಶಿಕ್ಷಕರು ಸಮಸ್ಯೆಗಳಿಂದ ಪರಿತಪಿಸುತ್ತಿದ್ದಾರೆ ಎ ಪಿ ರಂಗನಾಥ್

ಚನ್ನಪಟ್ಟಣ:11/20/ಶುಕ್ರವಾರ. ತಾಲ್ಲೂಕಿನಲ್ಲಿ ಶಿಕ್ಷಕರ ಸಮಸ್ಯೆಗಳು ಇಂದಿಗೂ ಜೀವಂತವಾಗಿವೆ. ಇಲಾಖೆಯ ಹಲವಾರು ಕಷ್ಟಗಳನ್ನು ಹಾಗೂ ಅತ್ಯಧಿಕ ಕೆಲಸಗಳನ್ನು ಹೆಗಲ ಮೇಲೆ ಹೊತ್ತು ನಿರ್ವಹಿಸುತ್ತಿದ್ದಾರೆ. ಅವರ ಗೋಳನ್ನು ಕೇಳದೆ 18 ವರ್ಷಗಳಿಂದ ಶಿಕ್ಷಕರ ಪ್ರತಿನಿಧಿಯಾಗಿ ಉಡಾಪೆ ಮಾಡಿದ ಪುಟ್ಟಣ್ಣನವರೇ ನೇರ ಕಾರಣ ಹಾಗೂ ಹೊಣೆಗಾರರು ಎಂದು ಜೆ.ಡಿ.ಎಸ್.ಕಾನೂನು ವಿಭಾಗದ ರಾಜ್ಯ ಅಧ್ಯಕ್ಷರು ಹಾಗೂ ವಿಧಾನ ಪರಿಷತ್  ಬೆಂಗಳೂರು ಶಿಕ್ಷಕರ ಕ್ಷೇತ್ರದ ಜೆ.ಡಿ.ಎಸ್. ಅಭ್ಯರ್ಥಿ ಎ.ಪಿ.ರಂಗನಾಥ್ ಅವರು ನೇರ ಆರೋಪ ಮಾಡಿದರು.

ನಗರದ ಹೊರ ವಲಯದ ಹೋಟೆಲ್‍ನಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಶಿಕ್ಷಕರ ಕ್ಷೇತ್ರದ ಪ್ರತಿನಿಧಿ, ಮಾಜಿ ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣನವರ ವಿರುದ್ಧ ನೇರ ವಾಗ್ದಾಳಿ ನಡೆಸಿದ ಅವರು ಸುಮಾರು 18 ವರ್ಷಗಳ ಕಾಲ ಪಕ್ಷದಿಂದ ಗೆದ್ದು ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ಸ್ವಾರ್ಥ ಸಾಧನೆಯಿಂದ ಮೆರೆಯುತ್ತಿದ್ದ ಅವರು ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸಲಿಲ್ಲ. ಅಧಿಕಾರಿಗಳನ್ನು ಬೆದರಿಸಿ, ಬೋಗಸ್ ಮತದಾರರನ್ನು ಸೃಷ್ಠಿ ಮಾಡಿಕೊಂಡು ವಾಮಮಾರ್ಗದಿಂದ ಗೆಲುವು ಸಾಧಿಸುತ್ತಿದ್ದರು. ಆಡಳಿತ ಯಂತ್ರವನ್ನು ದುರ್ಬಳಕೆ ಮಾಡಿಕೊಂಡು ಗೆಲುವು ಸಾಧಿಸಿ ಪಕ್ಷಾಂತರ ಮಾಡಿದ್ದೇ ಸಾಧನೆ.


ಈಗ ಗೆಲ್ಲುವೆ ಎಂಬ ಭ್ರಮೆಯಲ್ಲಿ ಆಡಳಿತದಲ್ಲಿರುವ ಬಿ.ಜೆ.ಪಿ. ಪಕ್ಷಕ್ಕೆ ಸೇರಿದ್ದು ಈ ಬಾರಿ ಪ್ರಜ್ಞಾವಂತ ಶಿಕ್ಷಕ ಮತದಾರ ಪ್ರಭುಗಳು ಅವರಿಗೆ ತಕ್ಕಪಾಠ ಕಲಿಸಿ ನನಗೆ ಆಶೀರ್ವಾದ ಮಾಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.


ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಮತ್ತು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ವಕೀಲನಾದರೂ, ಶಿಕ್ಷಕರ ಬಗ್ಗೆ ಮೊದಲಿನಿಂದಲೂ ವಿಶೇಷವಾದ ಕಾಳಜಿಯನ್ನು ಹೊಂದಿ ಅವರ ಮಾರ್ಗದರ್ಶನದಲ್ಲಿ ಹೋರಾಟವನ್ನು ಮಾಡಿಕೊಂಡು ಬರುತ್ತಿದ್ದೇನೆ. ಕ್ಷೇತ್ರಕ್ಕೆ ಒಳಪಡುವ 36 ವಿಧಾನ ಸಭಾ ಕ್ಷೇತ್ರಗಳಲ್ಲಿ  ಪ್ರವಾಸ ಮಾಡಿ ಶಿಕ್ಷಕರು, ಶಿಕ್ಷಕ ಸಂಘಟನೆಗಳ ಪದಾಧಿಕಾರಿಗಳು, ಸದಸ್ಯರನ್ನು ಭೇಟಿ ಮಾಡಿ ಮಾತನಾಡಿದ್ದೇನೆ. ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು  ಶಿಕ್ಷಕ ಬಂಧಗಳು ನನಗೆ ಗೆಲುವು ತಂದು ಕೊಡುವ ಮೂಲಕ ಈಗಾಗಲೇ ಮಾಜಿ ಆಗಿರುವ ಪುಟ್ಟಣ್ಣನವರು ಈ ಬಾರಿ ಚನ್ನಪಟ್ಟಣದಿಂದಲೇ ಹೀನಾಯ ಸೋಲು ಅನುಭವಿಸುವ ಮೂಲಕ ಕುಮಾರಸ್ವಾಮಿ ನೇತೃತ್ವದ ರಾಜ್ಯ ಸರ್ಕಾರವನ್ನು ಬೀಳಿಸಿದ ಶಾಪ ಚನ್ನಪಟ್ಟಣದಿಂದಲೇ ಪ್ರಾರಂಭವಾಗಿ ಖಾಯಂ ಮಾಜಿ  ಎಂದು ಅವರು ಲೇವಡಿ ಮಾಡಿದರು.


ಕೋವಿಡ್ 19ರ ಪರಿಣಾಮ ಶಿಕ್ಷಕ ಸಮುದಾಯ ಅದರಲ್ಲೂ ಅನುದಾನ ರಹಿತ ಶಿಕ್ಷಕರು ತೀರಾ ಸಂಕಷ್ಟಕ್ಕೆ ಒಳಗಾಗಿದ್ದರು. ಶಿಕ್ಷಕರ ಪ್ರತಿನಿಧಿ ಸ್ಪಂದಿಸುವ ಕೆಲಸ ಮಾಡದೇ ಆರಾಮಾಗೇ ಉಳಿದರು ಎಂದು ಕಿಡಿಕಾರಿದ ಅವರು,  ಇದನ್ನು ಕಂಡು ನಮ್ಮ ಟೀಚರ್ಸ್ ಮೇನೇಜ್‍ಮೆಂಟ್ ಫೋರಂ ನಡಿ ರಾಮನಗರ ಜಿಲ್ಲೆಯಲ್ಲಿ ಹೆಚ್ಚಿನ ಮಟ್ಟಿಗೆ ಸ್ಪಂದಿಸಿದ್ದೇನೆ. ಶಿಕ್ಷಕರಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು. ವಿಮೆ ಮಾಡಿಸಬೇಕು. ಆರ್.ಟಿ.ಇ. ಹಣವನ್ನು ಬಿಡುಗಡೆ ಮಾಡಿ ಶಿಕ್ಷಕರಿಗೆ ಸಂಬಳ ನೀಡಿ  ನೆರವಾಗಬೇಕು ಎಂದು ಹೋರಾಟ ಮಾಡಿ ಸರ್ಕಾರದ ಮೇಲೆ ಒತ್ತಡ ತಂದ ಪರಿಣಾಮ ಹಾಗೂ ಮಾಜಿ ಪ್ರಧಾನಿಗಳಾದ ಹೆಚ್.ಡಿ.ದೇವೇಗೌಡರು ನಮ್ಮ ಹೋರಾಟ-ಧರಣಿಯಲ್ಲಿ ಪಾಲ್ಗೊಂಡು, ಬೆಂಬಲ ವ್ಯಕ್ತಪಡಿಸಿ,ಸರ್ಕಾರಕ್ಕೆ ಶಿಕ್ಷಕರ ಸಮಸ್ಯೆಗಳ ಪರಿಹಾರ ಕೋರಿ ಪತ್ರ ಬರೆದ ಪರಿಣಾಮ ಸರ್ಕಾರ ಶಿಕ್ಷಕರ ಸಮಸ್ಯೆಗಳ ಪರಿಹಾರಕ್ಕೆ ಸಕರಾತ್ಮಕವಾಗಿ ಸ್ಪಂದಿಸಿದೆ ಎಂದು ಹೇಳಿದರು.


ಪುಟ್ಟಣ್ಣನವರ ಪ್ರಭಾವ, ಒತ್ತಡಕ್ಕೆ ಒಳಗಾಗಿ ಈ ಹಿಂದೆ ಗೆಲುವಿಗಾಗಿ ಬೋಗಸ್ ಮತಪಟ್ಟಿ ಸಿದ್ದಮಾಡಿಕೊಟ್ಟಿದ್ದ 9 ಮಂದಿ ಅಧಿಕಾರಿಗಳು ಈಗಾಗಲೇ ಅಮಾನತ್ತಿನಲ್ಲಿದ್ದಾರೆ. ಈಗಾಗಲೇ ಅಧಿಕಾರಿಗಳು ಮತಪಟ್ಟಿಯನ್ನು ಪರಿಶೀಲಿಸಿ 2,500ಕ್ಕೂ ಹೆಚ್ಚು ಬೋಗಸ್ ಮತದಾರರನ್ನು ಕೈಬಿಟ್ಟಿದ್ದಾರೆ. ಮತದಾರರ ಪಟ್ಟಿಯಲ್ಲಿ ಬೋಗಸ್ ಮತದಾರರು ಇದ್ದರೆ ಸೆ.21ರ ಒಳಗೆ ಸರಿಪಡಿಸಬೇಕು. ಇಲ್ಲದಿದ್ದರೆ ಆ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸುವುದಾಗಿ ಆಯುಕ್ತರು ಆದೇಶ ಮಾಡಿದ್ದಾರೆ. ಹಾಗಾಗಿ ಈ ಬಾರಿ ಅವರ ಆಟಾ ಟೋಪ ನಡೆಯದು ಎಂದು ತಿಳಿಸಿದ ಅವರು, ಅಧಿಕಾರಿಗಳು ಮತ್ತು ಶಿಕ್ಷಕರು ಯಾವುದೇ ಪ್ರಭಾವಕ್ಕೆ ಒಳಗಾಗದೇ ಪಾರದರ್ಶಕವಾಗಿ ತಮ್ಮ ಕರ್ತವ್ಯವನ್ನು ನಿರ್ವಹಿಸಬೇಕು ಎಂದರು.


ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷರು ಹಾಗೂ ಜೆ.ಡಿ.ಎಸ್. ಹಿರಿಯ ಮುಖಂಡರು ಆದ ಸಿಂ.ಲಿಂ.ನಾಗರಾಜು ಅವರು ಮಾತನಾಡಿ ಮಾಜಿ ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣನವರ ವಿರುದ್ಧ ಟೀಕಾಪ್ರಹಾರ ನಡೆಸಿ, ದೇವೇಗೌಡರು ಮತ್ತು ಕುಮಾರಣ್ಣನವರ ನಾಮಬಲದಿಂದ 18 ವರ್ಷ ಶಿಕ್ಷಕರ ಪ್ರತಿನಿಧಿಯಾಗಿ, ವಿಧಾನ ಪರಿಷತ್ ಸದಸ್ಯ. ಉಪ ಸಭಾಪತಿಯಾಗಿ ಅಧಿಕಾರವನ್ನು ಅನುಭವಿಸಿ, ತಾನು ಮತ್ತು ತನ್ನ ಕುಟುಂಬವನ್ನು ಅಭಿವೃದ್ಧಿಪಡಿಸಿಕೊಂಡು, ಸಾವಿರಾರು ಕೋಟಿ ರೂ. ವಿದ್ಯಾಸಂಸ್ಥೆ ಕಟ್ಟಿಕೊಂಡು, ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸದೇ, ಸಮಸ್ಯೆಗಳು ಜೀವಂತವಾಗಿ ಉಳಿಯುವಂತೆ ಮಾಡಿ, ಜೆಡಿಎಸ್ ಪಕ್ಷದ ತತ್ವ ಸಿದ್ದಾಂತಕ್ಕೆ ಚೂರಿ ಹಾಕಿ ಗೆಲ್ಲುತ್ತೇನೆ ಎಂಬ ಭ್ರಮೆಯಲ್ಲಿ ಬಿಜೆಪಿ ಸೇರಿ ಪಕ್ಷಕ್ಕೆ ಮರಯಲಾಗದಂತೆ  ಆಘಾತವನ್ನುಂಟು ಮಾಡಿರುವ ಪುಟ್ಟಣ್ಣನವರನ್ನು ಪರಾಭವಗೊಳಿಸಿ ನಮ್ಮ ಪಕ್ಷದ ಅಭ್ಯರ್ಥಿ ಸರಳ ಸಜ್ಜನ ಎ.ಪಿ.ರಂಗನಾಥ್ ಅವರನ್ನು ಗೆಲ್ಲಿಸುವುದೇ ನಮ್ಮೆಲ್ಲರ ಏಕೈಕ ಗುರಿ ಎಂದು ತಿಳಿಸಿ, ಪ್ರಜ್ಞಾವಂತ ಶಿಕ್ಷಕರು ಅವರ ಪೊಳ್ಳು ಭರವಸೆ, ಮಾತುಗಳಿಗೆ ಕಿವಿಗೊಡದೇ ಸರಳ ಸಜ್ಜನ ಎ.ಪಿ.ರಂಗನಾಥ್ ಅವರನ್ನು ಬೆಂಬಲಿಸಿ ಗೆಲುವು ತಂದು ಕೊಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.


ನಗರ ಜೆ.ಡಿ.ಎಸ್. ಅಧ್ಯಕ್ಷ ರಾಂಪುರ ರಾಜಣ್ಣನವರು ಮಾತನಾಡಿ 18 ವರ್ಷಗಳಿಂದ ಶಿಕ್ಷಕರ ಪ್ರತಿನಿಧಿಯಾಗಿ ಅಧಿಕಾರವನ್ನು ಅನುಭವಿಸಿದ ಪುಟ್ಟಣ್ಣನವರು ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ಗೆಲುವು ಸಾಧಿಸುವುದರಲ್ಲಿ ನಿಪುಣರು. ಅಧಿಕಾರಿಗಳು ಅವರ ಒತ್ತಡಕ್ಕೆ ಮಣಿದು ಬೋಗಸ್ ಮತದಾರರ ಪಟ್ಟಿ ಮಾಡಿ ಗೆಲುವಿಗೆ ಸಹಕರಿಸಿದರೆ ಅವರ ವಿರುದ್ಧ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.


ಪತ್ರಿಕಾಗೋಷ್ಠಿಯಲ್ಲಿ ಬೆಂಗಳೂರು ನಗರ ಜಿಲ್ಲಾ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಪ್ರದೀಪ್‍ಕುಮಾರ್, ವಕೀಲ ದಿಲೀಪ್‍ಕುಮಾರ್, ಶಾಸಕರ ಆಪ್ತ ಸಹಾಯಕ ಕೆಂಚೇಗೌಡ, ಹೆಚ್.ಸಿ.ಜಯಮುತ್ತು ಅವರ ಆಪ್ತ ಸಹಾಯಕ ಮಧುಗೌಡ ಮುಂತಾದವರು ಹಾಜರಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑