ರಾಮಾಪ್ರಮೇಯ ಹೆಸರಿನ ಉದ್ಯಾನವನ ಅಧೋಗತಿಯತ್ತ. ನಗರಸಭೆ ಸಂಪೂರ್ಣ ಅನುತ್ತೀರ್ಣ
ಚನ್ನಪಟ್ಟಣ:ಅ/31/20/ಶನಿವಾರ.
ಚನ್ನಪಟ್ಟಣ ನಗರದ ಮಳೂರು ಬಳಿಯ ಹೆದ್ದಾರಿಯ ಪಕ್ಕದಲ್ಲಿರುವ ಶ್ರೀ ಅಪ್ರಮೇಯ ಉದ್ಯಾನವನದ ದುಸ್ಥಿತಿ ಇದು. ನಗರದಾದ್ಯಂತ ಬೆರಳೆಣಿಕೆ ಉದ್ಯಾನವನಗಳಿದ್ದು, ಎಲ್ಲಾ ಉದ್ಯಾನಗಳ ಸ್ಥಿತಿಯೂ ಶೋಚನೀಯವಾಗಿದೆ.
ಈ ಉದ್ಯಾನವನವನ್ನು ನಗರಸಭೆಯೇ ಅಭಿವೃದ್ಧಿ ಪಡಿಸಿದ್ದು, ಅವರೇ ನೋಡಿಕೊಳ್ಳುವ ಜವಾಬ್ದಾರಿ ಹೊತ್ತಿದ್ದಾರೆ. ಹಲವಾರು ಕಾರಣ ಮತ್ತು ಸಬೂಬು ಹೇಳುವ ಇವರು ಇನ್ನು ಮುಂದೆ ಹೀಗಾಗದಂತೆ ಉದ್ಯಾನವನ್ನು ಸ್ವಚ್ಛಗೊಳಿಸಿ, ನಾಗರೀಕರಿಗೆ ಅನುವು ಮಾಡಿಕೊಡುತ್ತೇವೆ ಎನ್ನುತ್ತಾರೆ.
ಉದ್ಯಾನವನದ ಮುಂದೆ ಒಂದು ಕಲ್ಯಾಣಿಯಿದ್ದು, ಆ ಕಲ್ಯಾಣಿಗೆ ನೇರವಾಗಿ ನಗರದ ಚರಂಡಿ ನೀರು ಸೇರುತ್ತಿರುವುದರಿಂದ ಅದು ಸಹ ಗಬ್ಬು ನಾರುತ್ತಿದೆ. ಕಲ್ಯಾಣಿಯ ಮುಂದೆ ಕಸದ ರಾಶಿಯೇ ಬಿದ್ದಿದ್ದು ಅದರ ಕೆಟ್ಟ ರಸವೂ ಕಲ್ಯಾಣಿಗೆ ಸೇರುತ್ತಿದೆ. ನಗರಸಭೆ ಮತ್ತು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಚರಂಡಿ ನಿರ್ಮಿಸಿ ಕಲ್ಯಾಣಿಗೆ ಕೊಳಚೆ ನೀರು ಹರಿಯದಂತೆ ತಡೆಗಟ್ಟುವ ಮೂಲಕ ಜಲಮೂಲ ಹಾಗೂ ಪುರಾತನ ಕೊಳವನ್ನು ರಕ್ಷಿಸಬೇಕಾಗಿದೆ.
ಈ ಉದ್ಯಾನವನದಲ್ಲಿ ನೀರಿಗಾಗಿ ಬೋರ್ ವೆಲ್ ಇದೆ, ಅದರ ಪೈಪುಗಳು ತುಕ್ಕು ಹಿಡಿಯುತ್ತಿವೆ. ಯಂತ್ರಗಳಿರುವ ಡಬ್ಬ ತೆರೆದಿದ್ದು ಅಪಾಯ ಕಾದಿದೆ. ತಡೆಗೋಡೆಯ ಸರಳುಗಳು ತುಕ್ಕು ಹಿಡಿಯುತ್ತಿವೆ. ಸ್ಪನ್ ಸಿಲ್ಕ್ ಮಿಲ್ ಗೆ ಹೊಂದಿಕೊಂಡಿರುವ ತಡೆಗೋಡೆಯು ಶಿಥಿಲಗೊಂಡಿದೆ. ಹುಲ್ಲು ಹಾಸುಗಳು ಒಣಗಿ ನಿಂತಿವೆ. ಅಲಂಕಾರಿಕ ಸಸ್ಯಗಳು ಮರಗಳಂತೆ ಬೆಳೆದು ಏನಿವೆ ಎಂದು ಗೊತ್ತಾಗದಂತಿವೆ. ಕೆಲವು ಮರಗಳು ಒಣಗಿ ಬೋಳಾಗಿವೆ. ಕಲ್ಯಾಣಿಯ ನೀರು ಹಸಿರುಮಯವಾಗಿವೆ.
ಶೀಘ್ರವಾಗಿ ನಗರಸಭೆಯವರು ಉದ್ಯಾನವನವನ್ನು ಅಭಿವೃದ್ಧಿಗೊಳಿಸಿ ಸಾರ್ವಜನಿಕರಿಗೆ ಮುಕ್ತವಾಗಿಸಿಬೇಕಿದೆ. ವಯಸ್ಸಾದವರಿಗೆ, ವಾಯುವಿಹಾರಿಗಳಿಗೆ, ಹರಟೆ ಯುವಕರಿಗೆ, ನೊಂದ ಹೃದಯಗಳಿಗೆ ಸಾಂತ್ವನ ಸಿಗಬೇಕಾದ ಈ ಉದ್ಯಾನವನವು ಹಾಳುಕೊಂಪೆಯಾಗಿ, ದಟ್ಟ ಕಾನನದಂತೆ ಕಾಣುತ್ತಿದ್ದು, ಅನೈತಿಕ ಚಟುವಟಿಕೆಗಳ ತಾಣವಾಗುತ್ತಿರುವುದು ನಗರಸಭೆಯವರ ಅಧಿಕಾರಿಗಳು ಕೆಲಸಮಾಡಲು ಬಂದಿದ್ದಾರೋ ಅಥವಾ ಎಸಿ ರೂಮಿನಲ್ಲಿ, ಈಸಿ ಚೇರಿನಲ್ಲಿ ಕುಳಿತು ಹರಟೆ ಹೊಡೆಯಲೋಸುಗ ಬಂದಿದ್ದಾರೋ ಎನ್ನುವುದನ್ನು ಸಾರ್ವಜನಿಕರಿಗೆ ತಿಳಿಸಬೇಕಾಗಿದೆ
ಪ್ರತಿಕ್ರಿಯೆಗಳು