Tel: 7676775624 | Mail: info@yellowandred.in

Language: EN KAN

    Follow us :


ಜಾತಿಗೆ ಜಾತಿಯೇ ವೈರಿ, ನೀರಿಗೆ ಪಾಚಿಯೇ ವೈರಿ ಎಂಬಂತೆ ಜೆಡಿಎಸ್ ಗೆ ಜೆಡಿಎಸ್ ನಾಯಕರೇ ಪರಮವೈರಿ! ಗೆದ್ದು ಬೀಗಿದ ಲಿಂಗೇಶ್ ಮುಗ್ಗರಿಸಿದ ಜಯಮುತ್ತು

Posted date: 09 Nov, 2020

Powered by:     Yellow and Red

ಜಾತಿಗೆ ಜಾತಿಯೇ ವೈರಿ, ನೀರಿಗೆ ಪಾಚಿಯೇ ವೈರಿ ಎಂಬಂತೆ ಜೆಡಿಎಸ್ ಗೆ ಜೆಡಿಎಸ್ ನಾಯಕರೇ ಪರಮವೈರಿ! ಗೆದ್ದು ಬೀಗಿದ ಲಿಂಗೇಶ್ ಮುಗ್ಗರಿಸಿದ ಜಯಮುತ್ತು

ಚನ್ನಪಟ್ಟಣ:ನ/08/20/ಭಾನುವಾರ. ಜಾತಿಗೆ ಜಾತಿಯೇ ವೈರಿ, ನೀರಿಗೆ ಪಾಚಿಯೇ ವೈರಿ ಎಂಬಂತೆ ತಾಲ್ಲೂಕಿನ ಜೆಡಿಎಸ್ ಪಕ್ಷಕ್ಕೆ ಜೆಡಿಎಸ್ ಪಕ್ಷವೇ ಪರಮ ವೈರಿಯಾಗಿ ಪರಿಣಮಿಸಿದ್ದರಿಂದ, ಒಂದು ಸಾಮಾನ್ಯ ಸ್ಥಳೀಯ ಚುನಾವಣೆಯು, ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಯನ್ನೂ ಮೀರಸುವಂತೆ ಇಂದು ನಡೆದಿದ್ದು ತಾಲ್ಲೂಕಿನ ರಾಜಕೀಯ ಇತಿಹಾಸದಲ್ಲಿ ನೆನಪಿಟ್ಟುಕೊಳ್ಳುವಂತೆ ಮಾಡಿದೆ.


ಜೆಡಿಎಸ್ ಸ್ವಪಕ್ಷೀಯರ ಕಾದಾಟದಿಂದ ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ಸಿಂಗರಾಜಪುರ ಪಿಎಸಿಎಸ್‍ನಲ್ಲಿ ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಎಸ್. ಲಿಂಗೇಶ್‍ಕುಮಾರ್ ಬಣ ಗೆಲುವಿನ ನಗೆಬೀರಿದ್ದಾರೆ.

ಸಂಘದ 11 ಸ್ಥಾನಗಳಿಗೆ ಭಾನುವಾರ ನಡೆದ ಚುನಾವಣೆಯಲ್ಲಿ ಜೆಡಿಎಸ್ ತಾಲೂಕು ಅಧ್ಯಕ್ಷ ಎಚ್.ಸಿ.ಜಯಮುತ್ತು ಬೆಂಬಲಿಗರಾದ ಜೆಡಿಎಸ್ ಪಕ್ಷ ಬೆಂಬಲಿತ 11 ಅಭ್ಯರ್ಥಿಗಳು ಹಾಗೂ ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಎಸ್. ಲಿಂಗೇಶ್‍ಕುಮಾರ್ ಬಣದ ಜೆಡಿಎಸ್, ಕಾಂಗ್ರೆಸ್, ಬಿಜೆಪಿ ಪಕ್ಷಗಳ ಬೆಂಬಲಿತ 11 ಮಂದಿ ಹಾಗೂ ನಾಲ್ವರು ಪಕ್ಷೇತರರು ಕಣದಲ್ಲಿದ್ದರು. ಲಿಂಗೇಶ್ ಕುಮಾರ್ ಬಣವು ಜೆಡಿಎಸ್ ನ ಕೆಲವರು ಹಾಗೂ ಕಾಂಗ್ರೆಸ್, ಬಿಜೆಪಿ ಪಕ್ಷದವರನ್ನು ಒಲಿಸಿಕೊಳ್ಳುವುದರ ಜೊತೆಗೆ ಸ್ಥಳೀಯರಾಗಿದ್ದರಿಂದ ಗೆಲುವು ಸಾಧ್ಯವಾಯಿತು ಎಂದು ವಿಶ್ಲೇಷಿಸಬಹುದು.


ಎರಡೂ ಬಣದವರು ಸಹ ಮೂರು ದಿನಗಳು ಸಿಂಗರಾಜಪುರ ಗ್ರಾಮದಲ್ಲಿ ಬೀಡುಬಿಟ್ಟು, ಮತದಾರರು ಮತ್ತು ಸ್ಥಳೀಯ ನಾಯಕರಿಗೆ ಹತ್ತು ಹಲವು ಆಮಿಷಗಳನ್ನೊಡ್ಡಿ ತಂತಮ್ಮ ಬಲಾಬಲಗಳನ್ನು ಹತ್ತುಹಲವು ರೀತಿಯಲ್ಲಿ ನಿವೇದಿಸಿಕೊಂಡಿದ್ದರು. ಕೊನೆಯಲ್ಲಿ ಸ್ಥಳೀಯರಾದ ಲಿಂಗೇಶ್‍ಕುಮಾರ್ ಬಣದ 8 ಮಂದಿ ಆಯ್ಕೆಯಾಗುವ ಮೂಲಕ ಸಂಘವನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳುವಲ್ಲಿ ಯಶಸ್ವಿಗೊಂಡರು.

ಜಯಮುತ್ತು ಬೆಂಬಲಿತ ತಂಡ ಮೂರು ಸ್ಥಾನಕ್ಕೆ ತೃಪ್ತಿಪಡುವಂತಾಯಿತು.


ಎಸ್ ಲಿಂಗೇಶ್‍ಕುಮಾರ್ ತಂಡದಿಂದ ಎಸ್.ಲಿಂಗೇಶ್‍ಕುಮಾರ್, ಶಂಕರೇಗೌಡ, ಪಿ.ಎಸ್. ಪುಟ್ಟಸ್ವಾಮಿಗೌಡ, ಕೃಷ್ಣೇಗೌಡ, ಬಿ.ಎಂ ಲತಾ, ಶ್ರೀನಿವಾಸ್, ಯು.ಎಸ್.ರವಿ, ಮುನಿಅಂಕಯ್ಯ ಗೆಲುವು ಸಾಧಿಸಿದರೆ, ಜಯಮುತ್ತು ತಂಡದಿಂದ ಪಿ.ಬಿ. ಭಾನುಪ್ರಸಾದ್, ರಾಧ, ಡಿ. ರಾಜೇಶ್ ಚುನಾಯಿತರಾಗಿದ್ದಾರೆ.


ಸಂಘವನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳಲು ಜೆಡಿಎಸ್ ಸ್ವಪಕ್ಷದ ನಾಯಕರಾದ ಜಯಮುತ್ತು ಮತ್ತು ಲಿಂಗೇಶ್‍ಕುಮಾರ್ ತೀವ್ರ ಸೆಣೆಸಾಟ ನಡೆಸಿದರು. ಅಂತಿಮವಾಗಿ ಲಿಂಗೇಶ್‍ಕುಮಾರ್ ತಮ್ಮ ತಂಡಕ್ಕೆ ಬಹುಮತ ತೆಗೆದುಕೊಳ್ಳುವಲ್ಲಿ ಯಶಸ್ವಿಗೊಂಡರು. ಲಿಂಗೇಶ್‍ಕುಮಾರ್‍ಗೆ ಕಾಂಗ್ರೆಸ್ ಮತ್ತು ಬಿಜೆಪಿಯ ಸ್ಥಳೀಯ ನಾಯಕರು ಸಾಥ್ ನೀಡಿದರು.

ಸಾರ್ವತ್ರಿಕ ಚುನಾವಣೆಯನ್ನು ಮೀರಿಸುವ ಮಟ್ಟಿಗೆ ಪಿಎಸಿಎಸ್ ಚುನಾವಣೆ ನಡೆದಿದ್ದು ಕಂಡು ಬಂದಿತು. ಉಭಯ ತಂಡಗಳು ಗೆಲುವಿಗಾಗಿ ನಾನಾ ಕಸರತ್ತು ನಡೆಸಿದರು. ಬಿಗುವಿನ ವಾತಾವರಣದಲ್ಲಿ ಮತದಾನ ನಡೆದದ್ದು ಚುನಾವಣೆಯ ಕಾವಿಗೆ ಸಾಕ್ಷಿಯಂತಿತ್ತು. ಮತದಾನ ಪ್ರಕ್ರಿಯೆ ಮುಗಿದ ನಂತರ ನಡೆದ ಮತ ಎಣಿಕೆಯಲ್ಲಿ ಗೆಲುವು ಕಂಡ ಲಿಂಗೇಶ್‍ಕುಮಾರ್ ತಂಡ ಸಂಭ್ರಮಾಚರಣೆ ನಡೆಸಿದರು.


*ಸ್ಥಳದಲ್ಲೇ ಎಎಸ್‍ಪಿ ಮತ್ತು ನೂರಕ್ಕೂ ಹೆಚ್ಚು ಪೋಲೀಸರು ಮೊಕ್ಕಾಂ:*

ಸಹಕಾರ ಕ್ಷೇತ್ರದ ಪಿಎಸಿಎಸ್ ಚುನಾವಣೆಯೊಂದು ಈ ಮಟ್ಟಿನ ಜಿದ್ದಾಜಿದ್ದಿನಲ್ಲಿ ನಡೆದದ್ದು ತಾಲೂಕಿನಲ್ಲಿ ಇದೇ ಮೊದಲಾಗಿದ್ದು, ಎರಡು ತಂಡಗಳ ತೀವ್ರ ಪ್ರತಿಷ್ಠೆ, ಹಣ ಮತ್ತು ತೋಳ್ಬಲ ಕೆಲಸ ಮಾಡಬಹುದು ಎಂಬ ಹಿನ್ನೆಲೆಯಲ್ಲಿ, ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಬಂದೋಬಸ್ತ್ ಏರ್ಪಾಡಿಸಲಾಗಿತ್ತು. ಮತದಾನ ಆರಂಭದಿಂದ ಹಿಡಿದು ಅಂತಿಮದವರೆಗೆ ಎಎಸ್‍ಪಿ ಕೆ. ರಾಮರಾಜನ್ ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದರು. ಸಿಪಿಐಗಳಾದ ಸಿ.ವಸಂತ್, ಗೋವಿಂದರಾಜು, ಪಿಎಸ್‍ಐಗಳಾದ ರವೀಂದ್ರ, ಕುಮಾರಸ್ವಾಮಿ, ಸರಸ್ವತಿ ಸೇರಿದಂತೆ 100 ಕ್ಕೂ ಹೆಚ್ಚಿನ ಪೊಲೀಸ್ ಸಿಬ್ಬಂದಿ ಬಂದೋಬಸ್ತ್ ನೀಡಿದರು.


ಅಭಿನಂದನೆ: ಚುನಾವಣೆಯಲ್ಲಿ ಬಹುಮತ ಗಳಿಸಲು ಯಶಸ್ವಿಯಾದ ಲಿಂಗೇಶ್‍ಕುಮಾರ್ ಮತ್ತು ತಂಡವನ್ನು ಕುಕ್ಕುಟ ಮಹಾಮಂಡಳಿ ಅಧ್ಯಕ್ಷ ಡಿ.ಕೆ.ಕಾಂತರಾಜು, ಜೆಡಿಎಸ್ ಮುಖಂಡ ಸಿಂಗರಾಜಪುರ ರಾಜಣ್ಣ, ಕಾಂಗ್ರೆಸ್ ಮುಖಂಡರಾದ ಮಂಗಾಡಹಳ್ಳಿ ರಾಜಣ್ಣ, ಬೋರೆವೆಲ್ ರಂಗನಾಥ್, ಪಿ.ಡಿ.ರಾಜು, ಭೂಹಳ್ಳಿ ನಿಂಗೇಗೌಡ, ಹನುಮಂತು, ಹಾಗೂ ಸ್ಥಳೀಯ ಬಿಜೆಪಿ ಮುಖಂಡರು ಅಭಿನಂದಿಸಿದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑