ಕಿಸಾನ್ ಯೋಜನೆಗಳನ್ನು ರೈತರು ಸದುಪಯೋಗ ಪಡಿಸಿಕೊಳ್ಳಬೇಕು. ತಹಶಿಲ್ದಾರ್ ನಾಗೇಶ್ ಕರೆ.
ಚನ್ನಪಟ್ಟಣ:ಡಿ/28/20/ಸೋಮವಾರ. ಕಿಸಾನ್ ವತಿಯಿಂದ ಬಹಳಷ್ಟು ಯೋಜನೆಗಳಿದ್ದು ರೈತರು ಅವುಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ತಾಲ್ಲೂಕಿನ ದಂಡಾಧಿಕಾರಿ ನಾಗೇಶ್ ರವರು ರೈತರಿಗೆ ಕರೆ ನೀಡಿದರು. ಅವರು ಇಂದು ಕೃಷಿ ಇಲಾಖೆ ಹಾಗೂ ಕೃಷಿಕ ಸಮಾಜ ತಾಲ್ಲೂಕು ಪಂಚಾಯತಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ರೈತ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದರು.
ಇಂದು ಸಾಫ್ಟವೇರ್ ಇಂಜಿನಿಯರ್ ಗಳು ಸಹ ತಮ್ಮ ಲಕ್ಷಾಂತರ ರೂಪಾಯಿಗಳ ಸಂಬಳ ಬಿಟ್ಟು ಕೃಷಿ ಮಾಡುತ್ತಿದ್ದಾರೆ. ಅವರು ತಂತ್ರಜ್ಞಾನವನ್ನು ಬಳಸಿಕೊಂಡು ಸಂಬಳದಷ್ಟೇ ಲಾಭವನ್ನು ಕೃಷಿಯಿಂದ ಪಡೆಯುತ್ತಿದ್ದಾರೆ. ನೀವು ಸಹ ಕೃಷಿಗೆ ಸಂಬಂಧಿಸಿದ ಎಲ್ಲಾ ಇಲಾಖೆಗಳ ಸಹಾಯ ಪಡೆದು ಲಾಭದ ಕೃಷಿಯಲ್ಲಿ ತೊಡಗಬೇಕು ಎಂದರು.
ರಾಷ್ಟ್ರ ಮತ್ತು ರಾಜ್ಯ ಸರ್ಕಾರಗಳು ಕೃಷಿಕರಿಗೆ ಅನೇಕ ಯೋಜನೆಗಳನ್ನು ತಂದಿದೆ. ರೈತರಿಗೆ ಮತ್ತು ಬೆಳೆ ಎರಡಕ್ಕೂ ವಿಮೆಯ ಯೋಜನೆಯನ್ನು ಜಾರಿಗೆ ತಂದಿದ್ದಾರೆ. ಬಹುತೇಕ ರೈತರು ಕಿಸಾನ್ ಗೆ ಸಂಬಂಧಿಸಿದ ಯೋಜನೆಗಳನ್ನು ಪಡೆದುಕೊಳ್ಳಲಾಗಿಲ್ಲ. ಕಾರಣ ರೈತರು ಇನ್ನೂ ಪೌತಿಖಾತೆ ಮಾಡಿಸಿಕೊಳ್ಳದಿರುವುದು ಯೋಜನೆ ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಚುನಾವಣೆ ಕೆಲಸಗಳು ಮುಗಿದ ತಕ್ಷಣ ರೈತರು ಪೌತಿಖಾತೆ ಮಾಡಿಸಿಕೊಂಡು ಕೃಷಿ ಇಲಾಖೆಯ ಸವಲತ್ತುಗಳನ್ನು ಪಡೆದುಕೊಳ್ಳಬೇಕೆಂದು ಕರೆ ನೀಡಿದರು.
*ರೈತಗೀತೆ ಮತ್ತು ನಾಡಗೀತೆ ಅವಮಾನ*
ರೈತ ದಿನಾಚರಣೆಯಲ್ಲಿ ಹಾಗೂ ಕೃಷಿಗೆ ಸಂಬಂಧಿಸಿದಂತೆ ಯಾವುದೇ ಕಾರ್ಯಕ್ರಮವಿರಲಿ ಅಲ್ಲಿ ಕಾರ್ಯಕ್ರಮಕ್ಕೆ ನಾಡಗೀತೆ ಮತ್ತು ರೈತಗೀತೆ ಕಡ್ಡಾಯ. ಆದರೆ ರೈತ ದಿನಾಚರಣೆ ಏರ್ಪಡಿಸಿದ್ದ ಕೃಷಿ ಇಲಾಖೆಯು ಕೀರಲು ಧ್ವನಿಯ ಕ್ಯಾಸೆಟ್ ನಲ್ಲಿ ಗೀತೆಗಳನ್ನು ಪ್ರಸ್ತುತ ಪಡಿಸಿತ್ತಾದರೂ ಹಲವಾರು ಬಾರಿ ಕೇಳಿಸದೇ, ಬಿಡಿಬಿಡಿಯಾಗಿ ಬಂತು. ಇನ್ನೂ ರೈತ ಗೀತೆಯಂತೂ ಮೊದಲು ಸ್ವಲ್ಪ ಬಂದು ಆಮೇಲೆ ನಿಂತೇ ಹೋಯಿತು. ನಾಡಗೀತೆಯ ನಂತರ ಮತ್ತೊಮ್ಮೆ ಹಾಕಿದರೂ ಸಹ ಸರಿಯಾಗಿ ಧ್ವನಿ ಬಾರದ್ದರಿಂದ ವೇದಿಕೆಯ ಮೇಲಿದ್ದ ಅಧಿಕಾರಿಗಳು ಮತ್ತು ನೆರೆದಿದ್ದ ರೈತರು ಮುಜುಗರಕ್ಕೊಳಪಟ್ಟರು.
ತಾಲೂಕಿನಲ್ಲಿ ಅನೇಕ ಹಾಡುಗಾರರಿದ್ದೂ ಸಹ ಯಾರನ್ನೂ ಕರೆಯದೇ ಕ್ಯಾಸೆಟ್ ಗೆ ಮೊರೆ ಹೋಗಿದ್ದು. ಕಳೆದ ವರ್ಷವೂ ಸಹ ಇದೇ ರೀತಿಯಾಗಿದ್ದರೂ, ಅಧಿಕಾರಿಗಳು ಸರಿಪಡಿಸಿಕೊಳ್ಳದಿರುವುದು ರೈತರಿಗೆ ಮತ್ತು ನಾಡಿಗೆ ಅವಮಾನ ಮಾಡಿದಂತಾಗಿದೆ.
ಕೃಷಿಕ ಸಮಾಜದ ಅಧ್ಯಕ್ಷ ಬಸವೇಗೌಡ, ರಾಜ್ಯ ರೈತ ಸಂಘದ ವಿಭಾಗೀಯ ಉಪಾಧ್ಯಕ್ಷ ಎಂ ರಾಮು ಮತ್ತು ಕೃಷಿ ಇಲಾಖೆಯ ಅಧಿಕಾರಿ ಅಪರ್ಣಾ ರವರು ಮಾತನಾಡಿದರು. ಬೆಳೆ ಸಮೀಕ್ಷೆ ಬಗ್ಗೆ ಮಾಹಿತಿ ಒದಗಿಸಲಾಯಿತು. ಜಿಕೆವಿಕೆ ಯ ಅಧಿಕಾರಿ ಶ್ರೀನಿವಾಸರೆಡ್ಡಿ ಯವರು ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ತಾಲ್ಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ ಚಂದ್ರು, ಪಶು ಇಲಾಖೆಯ ಪುಟ್ಟಸ್ವಾಮಿ, ತೋಟಗಾರಿಕೆ ಇಲಾಖೆಯ ಅಧಿಕಾರಿ ವಿವೇಕ್ ಉಪಸ್ಥಿತರಿದ್ದರು.
ರೈತ ಮುಖಂಡರಾದ ಕೃಷ್ಣೇಗೌಡ, ತಾಲ್ಲೂಕು ಅಧ್ಯಕ್ಷ ರಾಮೇಗೌಡ ಸೇರಿದಂತೆ ನೂರಾರು ಮಂದಿ ರೈತರು ಭಾಗವಹಿಸಿದ್ದರು.
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು