ಒಕ್ಕಲಿಗರ ಸಾರ್ವಜನಿಕ ಸಂಸ್ಥೆಯ ಚುನಾವಣಾಧಿಕಾರಿ ಬದಲಿಸಿ, ನ್ಯಾಯಯುತ ಚುನಾವಣೆ ನಡೆಸುವಂತೆ ಆಗ್ರಹ
ಚನ್ನಪಟ್ಟಣ:ಡಿ/29/20/ಮಂಗಳವಾರ. ತಾಲ್ಲೂಕಿನ ಪ್ರತಿಷ್ಠಿತ ವಿದ್ಯಾ ಸಂಸ್ಥೆಗಳಾದ ಒಕ್ಕಲಿಗರ ಸಾರ್ವಜನಿಕ ವಿದ್ಯಾರ್ಥಿ ನಿಲಯದ ಆಡಳಿತ ಮಂಡಳಿಯ ಚುನಾವಣೆಯು 2021 ರ ಜನವರಿ 3 ನೇ ತಾರೀಖಿಗೆ ನಿಗದಿಯಾಗಿದ್ದು, ಅದರ ಪೂರ್ವಭಾವಿಯಾಗಿ ನಡೆಯಬೇಕಾಗಿದ್ದ ಸಿದ್ದತೆಗಳಲ್ಲಿ, ಚುನಾವಣಾಧಿಕಾರಿಗಳು ಲೋಪವೆಸಗಿದ್ದಾರೆ ಎಂದು ಆರೋಪಿಸಿ ಇಂದು ಹಲವು ಅಭ್ಯರ್ಥಿಗಳು ಆರೋಪ ಮಾಡಿದರು.
ಚುನಾವಣಾಧಿಕಾರಿಯನ್ನು ನೇಮಕ ಮಾಡಲು ಕೋ ಆಪರೇಟಿವ್ ಸೊಸೈಟಿ ಯಿಂದ ಅನುಮತಿ ಪಡೆಯಬೇಕು. ಚುನಾವಣಾಧಿಕಾರಿಯಾದವರು ಸಂಸ್ಥೆಯ ಮತದಾರರಾಗಿರಬಾರದು ? ಈ ಎರಡನ್ನೂ ಮೀರಿ ಸಂಸ್ಥೆಯ ಕೆಲವರು ಮತ್ತೀಕೆರೆ ಚಲುವರಾಜು ರವರನ್ನು ಚುನಾವಣಾಧಿಕಾರಿಯನ್ನಾಗಿ ನೇಮಕ ಮಾಡಿಕೊಂಡಿರುವುದೇಕೆ ಎಂದು ಅವರುಗಳು ಪ್ರಶ್ನಿಸಿದ್ದಾರೆ.
ಹತ್ತಾರು ಕೃತಿಗಳನ್ನು ರಚಿಸಿದ್ದೇನೆ ಎಂದು ಹೇಳುವ ಹಾಗೂ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಹಾಲಿ ಅಧ್ಯಕ್ಷರಾಗಿರುವ ಮತ್ತೀಕೆರೆ ಚಲುವರಾಜು ರವರಿಗೆ ಕನ್ನಡ ವರ್ಣಮಾಲೆಯೇ ತಿಳಿದಿಲ್ಲ. ಚುನಾವಣಾ ಅಭ್ಯರ್ಥಿಗಳಾಗಿರುವವರಿಗೆ ಯಾವ ಅಕ್ಷರ ಮೊದಲು ಬರಬೇಕು ! ನಂತರ ಯಾವ ಅಕ್ಷರ ಬರಬೇಕು ಎಂಬುದನ್ನು ಇಲ್ಲಿ ಉಲ್ಲಂಘಿಸಿದ್ದಾರೆ. ಚಿಹ್ನೆ ನೀಡುವಲ್ಲಿಯೂ ಸಹ ಲೋಪ ಎಸಗಿದ್ದಾರೆ. ಬಹಳ ಮುಖ್ಯವಾಗಿ ನಾಮಪತ್ರವನ್ನು ಸಹಿ ಮಾಡಿ ಹಿಂಪಡೆದವರನ್ನು ಸಹ ಸಂಜೆ ಆರು ಗಂಟೆಯ ವೇಳೆಗೆ ಸಿಂಧು ಎಂದು ಸೇರಿಸಿಕೊಂಡಿರುವುದು ಚುನಾವಣಾ ಕರ್ತವ್ಯದಲ್ಲಿ ಸ್ಪಷ್ಟವಾಗಿ ಕಾನೂನನ್ನು ಉಲ್ಲಂಘಿಸಿರುವುದು ಗೋಚರಿಸುತ್ತಿದೆ ಎಂದು ಅಭ್ಯರ್ಥಿ ಹೊಡಿಕೆಹೊಸಹಳ್ಳಿ ಚಂದ್ರು ಆರೋಪ ಮಾಡಿದರು.
ಎಲ್ಲಾ ಅಭ್ಯರ್ಥಿಗಳು ಹೊಸದಾಗಿ ನಾಮಪತ್ರ ಸಲ್ಲಿಸಿ, ವರ್ಣಮಾಲೆಯ ಪ್ರಕಾರ ಅಭ್ಯರ್ಥಿಗಳಿಗೆ ಕ್ರಮ ಸಂಖ್ಯೆ ಮತ್ತು ಚಿನ್ಹೆ ನೀಡಬೇಕೆಂದು ಅಭ್ಯರ್ಥಿಗಳಾದ ಸಿ ಚನ್ನಪ್ಪ ಮತ್ತು ಡಿ ಪುಟ್ಟಸ್ವಾಮಿ ಯವರು ಆಗ್ರಹಿಸಿದರು. ಈ ಸಂದರ್ಭದಲ್ಲಿ ಹಲವು ಅಭ್ಯರ್ಥಿಗಳು ಉಪಸ್ಥಿತರಿದ್ದರು.
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು