ಗ್ರಾಪಂ ಚುನಾವಣೆಯಲ್ಲಿ ಯೋಗೇಶ್ವರ್ ಗೆ ತಿರುಗೇಟು ನೀಡಿದ ತಾಲ್ಲೂಕು ಮತದಾರರು. ರಾಜ್ಯ ರಾಜಕಾರಣಕ್ಕೆ ಕಾಲಿಟ್ಟ ನಂತರ ತಾಲೂಕಿನಲ್ಲಿ ವರ್ಚಸ್ಸು ಕಳೆದುಕೊಳ್ಳ
ಚನ್ನಪಟ್ಟಣ:ಜ/04/21/ಸೋಮವಾರ.
ಸಿ ಪಿ ಯೋಗೇಶ್ವರ್ ಹೆಸರು ಮತ್ತು ಸಾಧನೆ ನೀರಾವರಿ ಕ್ಷೇತ್ರದಲ್ಲಿ ಒಂದು ಮೈಲಿಗಲ್ಲು. ಸದ್ಯ ಒಂದು ತಾಲೂಕಿನಲ್ಲಿ ಮಾಡಿದ ಈ ಸಾಧನೆ ಇಡೀ ರಾಜ್ಯದ ಅನೇಕ ತಾಲ್ಲೂಕುಗಳು ಮತ್ತು ಪಕ್ಷಾತೀತವಾಗಿ, ಅಂದಿನ ಎಲ್ಲಾ ರಾಜಕಾರಣಿಗಳು ತಿರುಗಿ ನೋಡುವಂತೆ ಮಾಡಿತೆಂದರೆ, ಅದು ಒಂದು ಮಹತ್ಸಾಧನೆ ಎಂದರೆ ತಪ್ಪಾಗಲಾರದು. ನೀರಾವರಿ ಬಿಟ್ಟರೆ ಮಂತ್ರಿಯಾಗಿದ್ದಾಗ ರಾಜ್ಯಕ್ಕಾಗಲಿ, ಎರಡು ದಶಕಗಳ ಕಾಲ ಆಳಿದ ತಾಲೂಕಿನಲ್ಲಾಗಲಿ ಅಂತಹ ಹೇಳಿಕೊಳ್ಳುವಂತಹ ಸಾಧನೆ ಏನೂ ಇಲ್ಲ.
ಇತ್ತೀಚಿಗೆ ಅಂದರೆ ಗ್ರಾಮ ಪಂಚಾಯತಿ ಚುನಾವಣೆಯ ದಿನ, ತಮ್ಮ ಸ್ವಗ್ರಾಮ ಚಕ್ಕೆರೆಯಲ್ಲಿ ಮತ ಚಲಾಯಿಸಿದ ಅವರು, ತಾಲೂಕಿನಲ್ಲಿರುವ ಮೂವತ್ತೆರಡು ಗ್ರಾಮ ಪಂಚಾಯತಿಗಳ ಪೈಕಿ ಇಪ್ಪತ್ತೈದಕ್ಕೂ ಹೆಚ್ಚು ಪಂಚಾಯತಿಗಳು ನಮ್ಮ ಅಂದರೆ ಬಿಜೆಪಿ ಪಾಲಾಗಲಿವೆ. ಇದರಿಂದ ತಾಲೂಕಿನಲ್ಲಿ ಕುಮಾರಸ್ವಾಮಿ ಯವರ ವರ್ಚಸ್ಸು ಏನು ಎಂಬುದು ಗೊತ್ತಾಗಲಿದೆ ಎಂದು ಮಾಧ್ಯಮದವರಿಗೆ ಹೇಳಿಕೆ ನೀಡಿದ್ದರು.
ಮೂರು ದಿನದ ನಂತರ ಬಂದ ಫಲಿತಾಂಶದಲ್ಲಿ ಅವರ ಹೇಳಿಕೆ ಸಂಪೂರ್ಣ ಉಲ್ಟಾ ಆಗಿದ್ದು ಮಾತ್ರ ಬಹಿರಂಗ ಸತ್ಯ.
ತಾಲ್ಲೂಕಿನ ಮಟ್ಟದಲ್ಲಿ ಅವರ್ ಬಿಟ್ರೆ ಇನ್ಯಾರ್ ಎಂಬಂತಿದ್ದ ಅವರಿಗೆ ಕಳೆದ ವಿಧಾನಸಭಾ ಚುನಾವಣೆಯಿಂದ ಹಿನ್ನಡೆಯನ್ನು ಅನುಭವಿಸುತ್ತಲೇ ಬರುತ್ತಿದ್ದಾರೆ. ಕಾಂಗ್ರೆಸ್ ಮತ್ತು ಜೆಡಿಎಸ್ ಸಮ್ಮಿಶ್ರ ಸರ್ಕಾರದ ಒಳಜಗಳದ ಲಾಭ ಪಡೆದು, ರಾಜ್ಯ ನಾಯಕರ ಪಟ್ಟಿಗೆ ಸೇರಲು ಅವಣಿಸುತ್ತಿದ್ದ ಅವರಿಗೆ ವರದಾನ ಆಯಿತಾದರೂ ಅದನ್ನು ಉಳಿಸಿಕೊಳ್ಳಲು ಹಾಗೂ ಬಳಸಿಕೊಳ್ಳಲು ಸಾಧ್ಯವಾಗಲಿಲ್ಲ. ಅಷ್ಟೇ ಏಕೆ ಎಲ್ಲಾ ಅನಿಷ್ಟಕ್ಕೂ ಶನೀಶ್ವರನೇ ಕಾರಣ ಎಂಬಂತೆ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರಿಗೆ ಕಂಡುಬಂದರು.
ಅವರಿಗೆ ಮಂತ್ರಿ ಪದವಿಗಿಂತ ಒಂದು ಕೈಮೇಲಾಗಿ ಹಳೆ ಮೈಸೂರು ಭಾಗದ ನಾಯಕನಾಗಬೇಕೆಂಬ ಹೆಬ್ಬಯಕೆ ಬಹಳಷ್ಟಿದೆ. ಹಾಗಾಗಿಯೇ ಅವರು ಸಮ್ಮಿಶ್ರ ಸರ್ಕಾರದ ಪತನಕ್ಕೆ ಕೈಹಾಕಿದ್ದು, ಬಿಜೆಪಿ ಸರ್ಕಾರ ರಚನೆಯಾಗಲೂ ಕಾರಣರಾದರೂ ಸಹ ಸರ್ಕಾರ ಬೀಳಿಸಿದ ಕೆಟ್ಟ ಹೆಸರು ಬಂತೇ, ವಿನಹ ಸರ್ಕಾರ ರಚಿಸಿದ ನಂತರ ಅಲ್ಲಿಯೂ ಸಹ ವಿಲನ್ ಆಗಿಯೇ ಉಳಿದದ್ದು ಮಾತ್ರ ಅವರೆಲ್ಲಾ ಆಸೆಗೂ ತಣ್ಣೀರೆರಚಿದಂತಾಗಿದೆ.
ಯಾವಾಗ ಅವರು ರಾಜ್ಯ ಮಟ್ಟದ ನಾಯಕ, ಹಳೇಮೈಸೂರು ಭಾಗದ ನಾಯಕ ಹಾಗೂ ಸಮ್ಮಿಶ್ರ ಸರ್ಕಾರ ಬೀಳಿಸಿ, ಬಿಜೆಪಿ ನೇತೃತ್ವದ ಸರ್ಕಾರದಲ್ಲಿ ಗೃಹಮಂತ್ರಿ ಒಳಗೊಂಡಂತೆ ಉಪಮುಖ್ಯಮಂತ್ರಿ ಪಟ್ಟದ ಆಸೆ ಇಟ್ಟುಕೊಂಡರೋ, ಅಲ್ಲಿಂದಲೇ ತಾಲ್ಲೂಕಿನ ಮತದಾರರ ಮೇಲಿನ ಹಿಡಿತವನ್ನು ಕಳೆದುಕೊಂಡು ಬರುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಅವರ ಕ್ಷೇತ್ರವೇನಿದ್ದರೂ ಅವರಂತೆಯೇ ನಾಮನಿರ್ದೇಶಿತರಾಗಾಗಿಯೇ ಸೀಮಿತವಾಗುತ್ತಿದೆಯೇನೋ ಅನ್ನಿಸುತ್ತಿದೆ.
ಅರ್ಧ ಶತಕಕ್ಕೂ ಹೆಚ್ಚು ಕಾಲ ರಾಜಕೀಯ ಮಾಡಿಕೊಂಡು ಬಂದ, ಇಂದಿಗೂ ರಾಜಕೀಯವನ್ನೇ ಉಸಿರಾಡುತ್ತಿರುವ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರು ನೀಲಸಂದ್ರ ದ ಬೋರೆದೇವರ ದೇವಾಲಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ, ದೇವೇಗೌಡರು ತಾಲ್ಲೂಕಿಗೆ ಬಂದಾಗ ಜನ ಸೇರಿಸಲಾಗಿಲ್ಲ. ನನಗೆ ಹೇಳಿದರೆ ಜನ ಕಳುಹಿಸುತ್ತಿದ್ದೆ ಎಂದು ಹೇಳಿಕೆ ನೀಡಿದ್ದೂ ಸಹ ತಾಲ್ಲೂಕಿನ ಜನತೆ ಯೋಗೇಶ್ವರ್ ವಿರುದ್ದ ನಿಲ್ಲುವಂತಾದರೇ, ಅವರ ಕೆಲ ಹಿಂಬಾಲಕರು ಸಹ ಅವರ ತೇಜೋವಧೆಯಲ್ಲಿ ತೊಡಗಿಕೊಂಡಿರುವುದು ಅವರ ಹಿನ್ನಡೆಗೆ ಮುಳುವಾಗಿದೆ.
ಸ್ಥಳೀಯ ಜೆಡಿಎಸ್ ನ ಒಳ ಜಗಳದ ಲಾಭ ಪಡೆದುಕೊಂಡ ಕುಮಾರಸ್ವಾಮಿಯವರು ತಾಲೂಕಿನಲ್ಲಿ ನೆಲೆಯೂರಲು ಸಾಧ್ಯವಾಗಿದೆ. ಅಂತೆಯೇ ಸಿಪಿವೈ ಗೆ ಹಿಂಬೆಂಬಲ ನೀಡುತ್ತಿದ್ದ ಕೆಲ ಜೆಡಿಎಸ್ ನ ನಾಯಕರು ಅಧಿಕಾರವಿಲ್ಲದೆ ಪರಿತಪಿಸುತ್ತಿದ್ದಾರೆ. ಇಂತಹ ಸಮಯದಲ್ಲಿ ಯೋಗೇಶ್ವರ್ ರವರು ಬೇರೆ ಕ್ಷೇತ್ರದಲ್ಲಿ ಹೋಗಿ ತಾಲ್ಲೂಕಿನ ನೀರಾವರಿ ಹೆಸರೇಳಿಕೊಂಡು ಗೆಲ್ತೀನಿ ಅನ್ನೋ ಆಸೆ ಏನಾದರು ಇದ್ದರೆ ಅದು ನೀರ ಮೇಲಿನ ಗುಳ್ಳೆಯಂತೇ ಎಂದರೆ ತಪ್ಪಾಗಲಾರದು. ರಾಜ್ಯ, ಹಳೇಮೈಸೂರು ಮತ್ತು ಬೇರೆ ಕ್ಷೇತ್ರದ ಆಸೆಯನ್ನು ಸ್ವಲ್ಪ ಸಮಯ ಬದಿಗಿಟ್ಟು, ಬುಡ (ತಾಲ್ಲೂಕು) ಭದ್ರ ಮಾಡಿಕೊಂಡರಷ್ಟೇ ಅವರ ಆಸೆಗಳು ಈಡೇರಬಹುದು. ಇಲ್ಲವಾದರೆ ಗ್ರಾಮ ಪಂಚಾಯತಿಯಲ್ಲಿ ಆದ ಗತಿಯೇ ಜಿಂಕೆಯ ವೇಗದಲ್ಲಿ ಬರುತ್ತಿರುವ ತಾಲ್ಲೂಕು ಪಂಚಾಯತಿ, ಜಿಲ್ಲಾ ಪಂಚಾಯತಿ, ನಗರಸಭೆಯಲ್ಲೂ ಸಹ ಯೋಗೇಶ್ವರ್ ಮತ್ತು ಬಿಜೆಪಿ ಗೆ ಲತ್ತೆ ಬೀಳುವುದು ಗ್ಯಾರಂಟಿ.
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು