Tel: 7676775624 | Mail: info@yellowandred.in

Language: EN KAN

    Follow us :


ಖಾತೆ ರಹಿತ ನೂತನ ಸಚಿವ ಸಿ ಪಿ ಯೋಗೇಶ್ವರ್ ರವರಿಗೆ ಅದ್ದೂರಿ ಸ್ವಾಗತ ಕೋರಿದ ಪಕ್ಷದ ಕಾರ್ಯಕರ್ತರು ಮತ್ತು ಅಭಿಮಾನಿಗಳು

Posted date: 18 Jan, 2021

Powered by:     Yellow and Red

ಖಾತೆ ರಹಿತ ನೂತನ ಸಚಿವ ಸಿ ಪಿ ಯೋಗೇಶ್ವರ್ ರವರಿಗೆ ಅದ್ದೂರಿ ಸ್ವಾಗತ ಕೋರಿದ ಪಕ್ಷದ ಕಾರ್ಯಕರ್ತರು ಮತ್ತು ಅಭಿಮಾನಿಗಳು

ಚನ್ನಪಟ್ಟಣ/ಜ/18/21/ಸೋಮವಾರ. ರಾಜ್ಯದ ಮಂತ್ರಿಯಾಗಿ ಇವತ್ತಿಗೂ ಸಹ ಖಾತೆ ಗಳಿಸದ, ಆಧುನಿಕ ಭಗಿರಥ ಎಂದೇ ಹೆಸರು ಮಾಡಿರುವ ಚನ್ನಪಟ್ಟಣ ಕ್ಷೇತ್ರದ ಮಾಜಿ ಶಾಸಕ, ರಾಜ್ಯ ಕಲಾವಿದರ ಕೋಟಾದಿಂದ ವಿಧಾನ ಪರಿಷತ್ ಸದಸ್ಯರಾಗಿರುವ ಸಿ.ಪಿ ಯೋಗೇಶ್ವರ್ ಅವರು ಇಲ್ಲಿನ ಅಯ್ಯನ ಗುಡಿ ಎಂದೇ ಹೆಸರುವಾಸಿಯಾಗಿರುವ ಕೆಂಗಲ್ ಆಂಜನೇಯ ಸ್ವಾಮಿಗೆ, ಕುಟುಂಬ ಸಮೇತ ಆಗಮಿಸಿ ಪೂಜೆ ಸಲ್ಲಿಸಿದರು.


ಪೂರ್ವ ನಿಗಧಿಯಂತೆ ಅವರು ೧೦ ಗಂಟೆಗೆ ಕೆಂಗಲ್ ದೇವಸ್ಥಾನಕ್ಕೆ ಬರುವುದು, ಅಲ್ಲಿ ಸೇರಿರುವ ಸಾವಿರಾರು ಅಭಿಮಾನಿಗಳ ಮುಂದೆ ಪೂಜೆ ಸಲ್ಲಿಸುವುದು, ನಂತರ ಪ್ರಸಾದ ವಿತರಣೆ, ಆಮೇಲೆ ಬೈಕ್ ರ‍್ಯಾಲಿಯಲ್ಲಿ  ಅವರನ್ನು ಮಂಗಳವಾರಪೇಟೆಯ ಬಸವೇಶ್ವರ ದೇವಸ್ಥಾನದ ವರೆಗೆ ಕರೆತಂದು, ಆನಂತರ ಅಲ್ಲಿ ಊಟೋಪಚಾರದ ವ್ಯವಸ್ಥೆ ಮಾಡಲಾಗುವುದು ಎಂಬ ವಿಚಾರವು ಇತ್ತು.


ಆದರೆ, ಅವರು ಕೆಂಗಲ್ ದೇವಸ್ಥಾನಕ್ಕೆ ಸುಮರು 3 ಗಂಟೆ ತಡವಗಿ ಆಗಮಿಸಿದರು.

ವೇಗವಾಗಿ ಕೆಂಗಲ್ ಆಂಜನೇಯನ ದರ್ಶನವನ್ನು ಪಡೆದು, ಮೆರವಣಿಗೆ ಹೊರಡುವ ಹೊತ್ತಿಗೆ ಅವರ ಅಭಿಮಾನಿಗಳು ಕೆಲವರು ಬೃಹತ್ ಆದ ಕೇಕ್ ಅನ್ನು ಹೊತ್ತು ತಂದು,  ಕೇಕ್ ಕತ್ತರಿಸಿ ಎಲ್ಲರಿಗೂ ಹಂಚಿದರು. ಮಂತ್ರಿಗಿರಿಯ ಪಟ್ಟಕಟ್ಟಿಕೊಂಡು, ಯಾವ ಖಾತೆ ಕೊಡಲಾಗಿದೆ ಎಂಬ ಮಾಹಿತಿ ಇಲ್ಲದ ನಡುವೆಯೂ ಅವರು ಜನರ ಮಧ್ಯೆ ಬಂದು, ಜನರು ಇಷ್ಟೊಂದು ಅಭಿಮಾನದಿಂದ ನನ್ನನ್ನು ಸ್ವಾಗತ ಮಾಡಿದ್ದು, ನನಗೆ ಮತ್ತಷ್ಟು ಜವಾಬ್ದಾರಿಯನ್ನು ಹೆಚ್ಚಿಸಿದೆ, ಅವರನ್ನು ನಾನು ಅಭಿನಂದಿಸಲೇಬೇಕು ಎಂದು ಹೇಳಿದರು.


ಯಾವ ಖಾತೆ ಕೊಟ್ಟರೂ ನಿಭಾಯಿಸುತ್ತೇನೆ

ನನ್ನ ಪಾಲಿಗೆ ಈ ಹೊತ್ತಿಗೂ ಸಹ ಯಾವ ಖಾತೆಯೂ ಲಭ್ಯವಾಗಿಲ್ಲ, ಯಾವ ಖಾತೆ ಕೊಡಬೇಕು ಎಂಬುದು ಮುಖ್ಯಮಂತ್ರಿಗಳ ವಿವೇಚನೆಗೆ ಬಿಟ್ಟ ವಿಚಾರ, ನನಗೆ ಯಾವ ಖಾತೆಯನ್ನು ಕೊಟ್ಟರೂ ಸಹ ನಿಭಾಯಿಸಿತ್ತೇನೆ, ನನ್ನ ಕ್ಷೇತ್ರದ ಜನರ ಹಿತಕಾಪಾಡುವಲ್ಲಿ ನಾನು ಯಾವಾಗಲೂ ಮುಂದು ಎಂದು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದರು.


ಬೈಕ್ ರ‍್ಯಾಲಿಯು ಕೆಂಗಲ್ ದೇವಸ್ಥಾನದ ಆವರಣದಿಂದ ಇಲ್ಲಿನ ಕುವೆಂಪು ಕಾಲೇಜಿನ ಮುಂಭಾಗದವರೆಗೂ ಇತ್ತು.

ಕಾಲೇಜಿನ ವಿದ್ಯಾ ರ್ಥಿಗಳೂ ಸಹ ತಮ್ಮ ನಾಯಕನನ್ನು ಕಣ್ಣು ತುಂಬಿ ಕೊಳ್ಳುವ ಹಿನ್ನೆಲೆಯಲ್ಲಿ ಕಾಲೇಜಿನ ಮುಂಭಾಗದಲ್ಲಿ ಕಾದಿದ್ದರು.

ವಂದಾರಗುಪ್ಪೆ ಸೇರಿದಂತೆ ದಾರಿಯ ಉದ್ಧಕ್ಕೂ ಪಕ್ಷದ ಅಭಿಮಾನಿಗಳು ಪಕ್ಷದ ಬಾವುಟವನ್ನು ಹಿಡಿದು ಸ್ವಾಗತಿಸುವ ಕೆಲಸವನ್ನು ಮಾಡುತ್ತಿದ್ದರು.

ಕೆಲವು ಕಡೆ ಜೈಕಾರ ಹಾಕುವ ಕೆಲಸವನ್ನು ಮಾಡುತ್ತಿದ್ದರು. ಈ ರೀತಿಯ ಜನಸಂದಣಿಯನ್ನು ಕಂಡ ಯೋಗೇಶ್ವ ರ್‌ಗೆ ನಾನು ಯಾಕೆ ಸೋತೆ ಎಂದು ಅರ್ಥವಾಗಬೇಕಾಗಿದೆ.


ಕೆಂಗಲ್ ದೇವಾಲಯದಿಂದ ಹೊರಟ ಮೆರವಣಿಗೆಯು, ಕುವೆಂಪು ಕಾಲೇಜು, ವಂದಾರಗುಪ್ಪೆ ಗ್ರಾಮ, ಹನುಂಮತನಗರ, ಷೇರು ಹೋಟೆಲ್, ಸಾತನೂರು ಸರ್ಕಲ್, ಬಸ್ ನಿಲ್ದಾಣ, ಗಾಂಧಿಭವನ, ಕುವೆಂಪು ನಗರ, ಮಂಗಳವಾರಪೇಟೆ ಯ ತನಕ ಕೊಂಬು ಕಹಳೆ, ಜೈಕಾರ, ಪುಷ್ಪನಮನದೊಟ್ಟಿಗೆ ನಡೆಯಿತು.


ಹನುಮಂತ ನಗರದಲ್ಲಿ ರಸ್ತೆ ಬದಿಯಲ್ಲಿ ಬಸ್ಸುಗಳನ್ನು ನಿಲ್ಲಿಸಿಕೊಂಡು ಅಭಿಮಾನಿಗಳು ಬಸ್ಸಿನ ಮೇಲಿನಿಂದ ಹೂವಿನ ಮಳೆ ಸುರಿಸಿದರು. ಷೇರು ಹೋಟೆಲ್ ಮತ್ತು ಸಾತನೂರು ಸರ್ಕಲ್ ಬಳಿ ಬೃಹತ್ ಹೂವಿನ ಹಾರಗಳನ್ನು ಹಾಕುವ ಮೂಲಕ ತಮ್ಮ ನಾಯಕನನ್ನು ಸ್ವಾಗತಿಸಿದರೇ ಬಸ್ ನಿಲ್ದಾಣದಲ್ಲಿ 500 ಕಿಲೋ ಇರುವ ಬೃಹತ್ ಸೇಬಿನ ಹಣ್ಣುಗಳ ಹಾರವನ್ನು ಕ್ರೇನ್ ಮೂಲಕ ಹಾಕಿ ಅಭಿನಂದಿಸಿದರು. ಅವರು ತೆರಳಿದ ನಂತರ ಸೇಬು ಹಣ್ಣಿಗಾಗಿ ಕಾರ್ಯಕರ್ತರು ಮುಗಿಬಿದ್ದರು.


ಗಾಂಧಿ ಭವನದ ಬಳಿ ಬಂದ ಸಚಿವರು ಡಾ ಅಂಬೇಡ್ಕರ್ ರವರ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿದರು. ಇದೇ ಸಮಯದಲ್ಲಿ ದಲಿತ ಮುಖಂಡರು ಯೋಗೇಶ್ವರ್ ಮತ್ತು ಅವರ ಪುತ್ರ ಶ್ರವಣ್ ರವರನ್ನು ಅಭಿನಂದಿಸಿದರು. ಅದೇ ವೃತ್ತದಲ್ಲಿದ್ದ ರಾಷ್ಟ್ರಕವಿ ಕುವೆಂಪು, ಅಂತರಾಷ್ಟ್ರ ಖ್ಯಾತಿಯ ಅರ್ಥ ಶಾಸ್ತ್ರಜ್ಞ ಪ್ರೊ ವೆಂಕಟಗಿರಿಗೌಡ ಮತ್ತು ರಾಜ್ಯದ ಮೊದಲ ವಿದ್ಯಾಮಂತ್ರಿ ವೆಂಕಟಪ್ಪ ನವರ ಪುತ್ಥಳಿ ಗಳಿಗೂ ಸಹ ಸಚಿವರು ಹೂವಿನ ಹಾರ ಹಾಕಿ ನಮಿಸಿದರು. ಮಂಗಳವಾರಪೇಟೆ ಯ ಶ್ರೀ ಬಸವೇಶ್ವರ ದೇವಾಲಯದಲ್ಲಿ ಮೆರವಣಿಗೆ ಮುಕ್ತಾಯಗೊಂಡಿತು.


ಮೆರವಣಿಗೆಯಲ್ಲಿ ಬಿಜೆಪಿ ಪಕ್ಷದ ಜಿಲ್ಲಾಧ್ಯಕ್ಷ ಹುಲುವಾಡಿ ದೇವರಾಜು, ಉಪಾಧ್ಯಕ್ಷ ರವೀಶ್ ಎಲೆಕೇರೆ, ತಾಲ್ಲೂಕು ಪಂಚಾಯತಿ ಅಧ್ಯಕ್ಷ ಹರೂರು ರಾಜಣ್ಣ, ಬಿಜೆಪಿ ತಾಲ್ಲೂಕು ಅಧ್ಯಕ್ಷ ಕೆ ಟಿ ಜಯರಾಮು, ಮಾಜಿ ಅಧ್ಯಕ್ಷ ಆನಂದಸ್ವಾಮಿ, ಪತ್ನಿ, ಪುತ್ರಿ, ಪುತ್ರರು ಜೊತೆಯಲ್ಲಿದ್ದರು. ಸಹಸ್ರಾರು ಸಂಖ್ಯೆಯಲ್ಲಿ ಬಿಜೆಪಿ ಪಕ್ಷದ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑