Tel: 7676775624 | Mail: info@yellowandred.in

Language: EN KAN

    Follow us :


ನಿಘಂಟು ತಜ್ಞ, ಶತಾಯುಷಿ ಪ್ರೊ ಜಿ ವೆಂಕಟಸುಬ್ಬಯ್ಯ ನಿಧನ

Posted date: 19 Apr, 2021

Powered by:     Yellow and Red

ನಿಘಂಟು ತಜ್ಞ, ಶತಾಯುಷಿ ಪ್ರೊ ಜಿ ವೆಂಕಟಸುಬ್ಬಯ್ಯ ನಿಧನ

1913ರ ಆಗಸ್ಟ್ 23ರಂದು ಜನಿಸಿದ ಪೂಜ್ಯ ಪ್ರೊ. ಜಿ. ವೆಂಕಟಸುಬ್ಬಯ್ಯನವರು ತಮ್ಮ  108ನೇ ವರ್ಷದಲ್ಲಿ  ವಯೋಸಹಜ ಅನಾರೋಗ್ಯದಿಂದ ನಿನ್ನೆ ರಾತ್ರಿ ನಮ್ಮನ್ನಗಲಿದ್ದಾರೆ, ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಬಸವನಗುಡಿ ಬ್ರಾಹ್ಮಣ ಮಹಾಸಭಾ ಮತ್ತು ಸರ್ವ ಕನ್ಮಡಿಗರ ಪರವಾಗಿ ಶ್ರದ್ಧಾಂಜಲಿ ಅರ್ಪಿಸುತ್ತೇವೆ.


ನಿಘಂಟು ತಜ್ಞರೆಂದೇ ಕನ್ನಡ ನಾಡಿನಲ್ಲಿ ಪ್ರಖ್ಯಾತರಾದ  ವೆಂಕಟಸುಬ್ಬಯ್ಯನವರು ಹುಟ್ಟಿದ್ದು ಮಂಡ್ಯ ಜಿಲ್ಲೆಯ ಕೈಗೋನಹಳ್ಳಿಯಲ್ಲಿ. ತಂದೆ ಗಂಜಾಂ ತಿಮ್ಮಣ್ಣಯ್ಯನವರು ಮೈಸೂರು ಅರಮನೆಯ ವಿದ್ವಾಂಸರಾಗಿದ್ದರು. ತಾಯಿ ಸುಬ್ಬಮ್ಮನವರು.  ಪ್ರೊ. ಜಿ. ವಿ. ಅವರ ಪ್ರಾರಂಭಿಕ ಶಿಕ್ಷಣ ಹುಟ್ಟಿದೂರಿನಲ್ಲಿಯೇ ನೆರವೇರಿತು.  ಅವರು ಹೈಸ್ಕೂಲಿಗೆ ಸೇರಿದ್ದು ಮಧುಗಿರಿಯಲ್ಲಿ. ಇಂಟರ್ ಮೀಡಿಯೆಟ್ ಮತ್ತು ಆನರ್ಸ್ ಓದಿದ್ದು ಮೈಸೂರು ಮಹಾರಾಜ ಕಾಲೇಜಿನಲ್ಲಿ.  1937ರಲ್ಲಿ ಎಂ.ಎ ಮತ್ತು 1939ರಲ್ಲಿ ಬಿ.ಟಿ. ಪದವಿ ಗಳಿಸಿದರು.


ತಮ್ಮ ನೂರುವರ್ಷವಾದ  ಸಂದಭದಲ್ಲಿ ತಮ್ಮ ಸುದೀರ್ಘ  ಬದುಕನ್ನು ಕುರಿತು ಜಿ.ವಿ ಹೀಗೆ  ಹೇಳಿದ್ದರು: “ಸಂಸ್ಕೃತದಲ್ಲಿ ಒಂದು ಮಾತಿದೆ.  ‘ಜೀವನ್ ಭದ್ರಾಣಿ ಪಶ್ಯತಿ’ ಅಂತ.  ಆ ಮಾತು ನನಗೆ ಚೆನ್ನಾಗಿ ಅನ್ವಯಿಸುತ್ತೆ.  ನಾನು ಹೊಸಗನ್ನಡ ಅರುಣೋದಯದ ಕಾಲವನ್ನು ಕಂಡವನು.  ಹೊಸಗನ್ನಡ ಬೆಳೆಯಬೇಕು ಎಂಬ ಬಿ. ಎಂ. ಶ್ರೀಕಂಠಯ್ಯನವರ ಪ್ರಯತ್ನದ ಪರಿಣಾಮವಾಗಿ ಆಂದೋಲನ ಸುಮಾರು 75 ವರ್ಷಗಳ ಕಾಲ ಬಹಳಷ್ಟು ಕೆಲಸ ಮಾಡಿತು.  ಬಹುಶಃ ಇನ್ಯಾವ ಭಾರತೀಯ ಭಾಷೆಯಲ್ಲಿಯೂ ಆಗದೆ ಇದ್ದಂತಹ ಸಾಹಿತ್ಯದ ಪ್ರಯೋಗ, ಪ್ರಯೋಜನ ಎಲ್ಲ ಆಗ ಆದವು.  ಅದನ್ನು ನಾನು ಕಣ್ಣಾರೆ ಕಂಡವನು.  ಅಲ್ಲದೆ ಬಿ. ಎಂ. ಶ್ರೀಕಂಠಯ್ಯನವರ ನೇರ ಶಿಷ್ಯನಾದ್ದರಿಂದ ಅವರ ಉತ್ಸಾಹ ಮತ್ತು ಪರಿಶ್ರಮವನ್ನು ಕಂಡವನು.  ಈ ನೂರು ವರ್ಷ ಬದುಕಿರೋದಿದೆಯಲ್ಲ, ನನಗೆ ಒಂದು ವಿಧದಲ್ಲಿ ಸಂತೋಷವನ್ನು ತರುತ್ತೆ.  ನೂರು ವರ್ಷ ಅನ್ನೋದು ಇಷ್ಟು ಬೇಗ ಆಗ್ ಹೋಗತ್ಯೆ?  ಇಷ್ಟೇನಾ ನೂರು ವರ್ಷ ಅನ್ನೋದು ಅಂತ ಆಶ್ಚರ್ಯ ಆಗುತ್ತೆ.  ನಾನು ಎಷ್ಟು ಕೆಲಸ ಮಾಡಬಹುದಾಗಿತ್ತೋ ಅಷ್ಟು ಕೆಲಸ ಮಾಡಿಲ್ಲ ಅಂತ ಒಂದ್ಕಡೆ ವ್ಯಸನಾನೂ ಇದೆ.  ನನಗೆ ಕೆಲವು ವಿಚಾರಗಳಲ್ಲಿ ಹೆಚ್ಚು ಸಾಮರ್ಥ್ಯ ಇತ್ತು.  ಅದನ್ನ ಉಪಯೋಗಿಸಿಕೊಳ್ಳುವ ಅವಕಾಶ ಒದಗಲಿಲ್ಲ.  ನಾನು ವಿಶ್ವವಿದ್ಯಾಲಯದಲ್ಲಿ ಇದ್ದಿದ್ರೆ, ಬೇಕಾದಂಥ ಗ್ರಂಥಗಳೆಲ್ಲ ಸಿಕ್ಕುವ ಹಾಗಿದ್ದಿದ್ರೆ, ನನ್ನ ಮನಸ್ಸಿನಲ್ಲಿ ಏನೇನು ಇಚ್ಛೆ ಇಟ್ಕೊಂಡಿದ್ನೋ ಅದನ್ನೆಲ್ಲ ಮಾಡಬಹುದಾಗಿತ್ತು.  ಕನ್ನಡ ಎಂ. ಎ ಪರೀಕ್ಷೆಗೆ ಆಗ ನಾನು ಮತ್ತು ಶಂಕರನಾರಾಯಣರಾವ್ ಇಬ್ಬರೇ ವಿದ್ಯಾರ್ಥಿಗಳು.  ಬಿ.ಎಂ.ಶ್ರೀ ಅವರು ಮೌಖಿಕ ಪರೀಕ್ಷೆಗೆ ಬಂದಿದ್ದರು.  ಪರೀಕ್ಷೆಯ ನಂತರ, ‘ಪರೀಕ್ಷೆಯಲ್ಲಿ ನೀವು ಸಫಲರಾಗಿದ್ದೀರಿ.  ಆದರೆ ನಿಮ್ಮ ಜವಾಬ್ಧಾರಿ ಇಲ್ಲಿಗೇ ಮುಗಿಯುವುದಿಲ್ಲ.  ಏಕೆಂದರೆ ನಾವು ಮುದುಕರಾಗಿಬಿಟ್ವಿ.  ಈ ಕನ್ನಡವನ್ನ ನಿಮ್ಮ ಕೈಲಿ ಇಡ್ತಾ ಇದೀವಿ’ ಅಂತ ಹೇಳಿದ್ರು.  ನಾನು ಕನ್ನಡ ಕೆಲಸ ಮಾಡಲು ಈ ಮಾತು ಪ್ರೇರಣೆಯಾಯಿತು.”


ಪ್ರೊ. ಜಿ. ವೆಂಕಟಸುಬ್ಬಯ್ಯನವರು ಮೊದಲು ಉದ್ಯೋಗಕ್ಕಾಗಿ ಸೇರಿದ್ದು ಮಂಡ್ಯದ ಪುರಪ್ರೌಢಶಾಲೆಯಲ್ಲಿ ಅಧ್ಯಾಪಕರಾಗಿ. ನಂತರ ಮಹಾರಾಜ ಕಾಲೇಜಿನಲ್ಲಿ ಅಧ್ಯಾಪಕರಾಗಿ.  ಬೆಂಗಳೂರಿನ ಹೈಸ್ಕೂಲಿನಲ್ಲಿ ಕೆಲಕಾಲ ಅಧ್ಯಾಪಕರಾಗಿ, ಬೆಂಗಳೂರಿನ ವಿಜಯಾ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ, ಉಪಪ್ರಾಧ್ಯಾಪಕರಾಗಿ, ಪ್ರಾಧ್ಯಾಪಕರಾಗಿ, 1972ರಲ್ಲಿ ಸಂಜೆ ಕಾಲೇಜಿನ ಪ್ರಿನ್ಸಿಪಾಲರಾಗಿ 1973ರಲ್ಲಿ ನಿವೃತ್ತಿ ಪಡೆದರು.


ಜಿ. ವೆಂ. ಅವರು ಕನ್ನಡ ಸಾಹಿತ್ಯವನ್ನು ಬೆಳೆಸುವ ಕೈಂಕರ್ಯದಲ್ಲಿ ಎಂದೂ ಮುಂದು.  ಮಹಾರಾಜಾ ಕಾಲೇಜಿನ ಪ್ರಚಾರೋಪನ್ಯಾಸ ಪುಸ್ತಕ ಮಾಲೆಯಲ್ಲಿ ಅವರು ಹಲವಾರು ಕೃತಿ ರಚನೆ ಮಾಡಿದ್ದರು. ವಿದ್ಯಾರ್ಥಿ ದೆಸೆಯಲ್ಲಿದ್ದಾಗಲೇ ‘ಬಾಲ ಕರ್ನಾಟಕ’ ಸಂಘ ಸ್ಥಾಪನೆ ಮಾಡಿದರು. ಎಚ್.ಎಂ. ಶಂಕರ ನಾರಾಯಣರಾಯರು ಹೊರತಂದ ‘ರೋಹಿಣಿ’ ಕೈಬರಹದ ಪತ್ರಿಕೆಗೆ ಸಹಾಯ ನೀಡಿದರು. ಬೆಂಗಳೂರಿಗೆ ಬಂದ ನಂತರ ಸಾರ್ವಜನಿಕ ಚಟುವಟಿಕೆಗಳಲ್ಲಿ ಭಾಗಿಯಾದರು.  1954-56ರ ವರೆಗೆ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಯಾಗಿ, 1965-69ರ ವರೆಗೆ ಅಧ್ಯಕ್ಷರಾಗಿ, ಪರಿಷತ್ತಿನ ನಿಘಂಟು ಸಮಿತಿಯ ಸದಸ್ಯರಾಗಿ, 1965-67ರವರೆಗೆ ಕನ್ನಡ ವಿಶ್ವಕೋಶ ಸಮಿತಿಯ ಸದಸ್ಯರಾಗಿ, ವಿಶ್ವವಿದ್ಯಾಲಯದ ಅಕೆಡಮಿಕ್ ಕೌನ್ಸಿಲ್, ಸೆನೆಟ್, ಪಠ್ಯಪುಸ್ತಕ ಸಮಿತಿ, ಪರೀಕ್ಷಾ ಸಮಿತಿಯ ಸದಸ್ಯರಾಗಿ ಹೀಗೆ ಅವರು ವಿವಿಧ ರೀತಿಗಳಲ್ಲಿ  ಸಲ್ಲಿಸಿದ ಸೇವೆ ಅಪಾರವಾದದ್ದು.

          


ಈ ಹಿರಿಯರಿಗೆ ನಮನ ಸಲ್ಲಿಸುತ್ತಾ ಅವರ ಬದುಕು ಸಂತಸ ಪೂರ್ಣವಾಗಿತ್ತು, ನಮ್ಮ ಕಾಲದ  ಶ್ರೇಷ್ಠ ಕನ್ನಡಿಗರಲ್ಲೊಬ್ಬರಾದ ಈ ಶತಾಯುಷಿ ಹಿರಿಯರಿಗೆ ನಮನಪೂರ್ವಕವಾದ ಶ್ರದ್ಧಾಂಜಲಿ ಯನ್ನು ಬ್ರಾಹ್ಮಣ ಮಹಾಸಭಾ ಹಾಗೂ ಆರೂವರೆ ಕೋಟಿ ಕನ್ನಡಿಗರ ವತಿಯಿಂದ ಸಲ್ಲಿಸಲಾಗಿದೆ.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑