ಕೇಂದ್ರ ರಾಜ್ಯ ಸರ್ಕಾರಗಳ ರೈತ ವಿರೋಧಿ ನೀತಿ ಖಂಡಿಸಿ ರೈತ ಸಂಘದಿಂದ ಪ್ರತಿಭಟನೆ
ರಾಮನಗರ : ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ರೈತ ವಿರೋಧಿ ನೀತಿಯನ್ನು ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಕರ್ತರು ನಗರದ ಜಿಲ್ಲಾಧಿಕಾರಿಗಳ ಕಛೇರಿ ಮುಂದೆ ಗುರುವಾರ ಪ್ರತಿಭಟನೆ ನಡೆಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ನಂತರ
*ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಮನವಿ*
ಕೊರೊನಾದ ಮೊದಲನೆಯ ಅಲೆಯು ಉಂಟು ಮಾಡಿದ್ದ ಸಂಕಷ್ಟಗಳಿಂದ ರೈತ ಸಮುದಾಯ ಇನ್ನೂ ಹೊರ ಬಂದಿಲ್ಲ. 2 ನೇ ಅಲೆಯು ಮತ್ತಷ್ಟು ಸಂಕಷ್ಟಗಳನ್ನು ತಂದೊಡ್ಡಿದೆ. ರೈತರು ಬೆಳೆದ ಬೆಳೆಗಳಿಗೆ ಸೂಕ್ತ ಮಾರುಕಟ್ಟೆ ಇಲ್ಲದೆ ಬೆಳೆದ ಉತ್ಪನ್ನಗಳನ್ನು ಬೀದಿಗೆ ಸುರಿಯುತ್ತಿದ್ದು, ಎರಡು ತಿಂಗಳ ಅವಧಿಯಲ್ಲಿ ಸುಮಾರು ಒಂದು ಲಕ್ಷ ಕೋಟಿಗಿಂತಲೂ ಹೆಚ್ಚು ನಷ್ಟ ಅನುಭವಿಸಿದ್ದಾರೆ. ರಸಗೊಬ್ಬರದ ಬೆಲೆ ದುಬಾರಿಯಾಗಿದೆ, ಕೃಷಿ ಪರಿಕರಗಳ ಮೇಲೂ ಜಿಎಸ್ಟಿ ವಿಧಿಸಲಾಗಿದೆ.
ಕೃಷಿ ಉತ್ಪನ್ನಗಳಿಗೆ ಉತ್ಪಾದನಾ ವೆಚ್ಚಕ್ಕಿಂತಲೂ ಕಡಿಮೆ ಎಂಎಸ್ಪಿ ನಿಗದಿಪಡಿಸಲಾಗಿದ್ದು, ಶಾಸನಾತ್ಮಕ ರೂಪ ಇಲ್ಲದೇ ಇರುವುದರಿಂದ ನಿಗದಿತ ಎಂಎಸ್ಪಿಗಿಂತಲೂ ಕಡಿಮೆ ದರಕ್ಕೆ ಕೃಷಿ ಉತ್ಪನ್ನಗಳನ್ನು ಖರೀದಿಸಲಾಗುತ್ತಿದೆ.
ಖರೀದಿ ಕೇಂದ್ರ ಮೂಲಕ ಖರೀದಿಸಲಾದ ಭತ್ತ, ರಾಗಿ, ಜೋಳ ಇನ್ನಿತರ ಬೆಳೆಗಳಿಗೆ ಸರ್ಕಾರ ಇನ್ನು ಹಣ ಪಾವತಿಸಿಲ್ಲ. ಕಬ್ಬು ಕಾರ್ಖಾನೆಗಳೂ ಕೂಡ ರೈತರ ಬಾಕಿ ಉಳಿಸಿಕೊಂಡಿವೆ. ಪ್ರಧಾನ ಮಂತ್ರಿ ಫಸಲು ಬಿಮಾ ಯೋಜನೆ ಪರಿಹಾರದ
ಹಣ ಲಕ್ಷಾಂತರ ರೈತರಿಗೆ ಬರಬೇಕಿದೆ. ಬರ ಮತ್ತು ಅತೀವೃಷ್ಟಿಯಿಂದಾದ ನಷ್ಟಕ್ಕೆ ಪರಿಹಾರ ರೈತರ ಖಾತೆಗೆ ಇನ್ನೂ ಜಮಾ ಆಗಿಲ್ಲ. ರೈತರು ಹಾಗೂ ಕೃಷಿ ಕಾರ್ಮಿಕರು ಸಂಕಷ್ಟದ ಜೀವನ ನಡೆಸುವಂತಾಗಿದೆ ಎಂದು ಆರೋಪಿಸಿದರು.
ಇಂತಹ ಸಂಕಷ್ಟದ ಸಂದರ್ಭದಲ್ಲೇ ಕೇಂದ್ರ ಸರ್ಕಾರ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ, ಅಡುಗೆ ಎಣ್ಣೆ ಸೇರಿದಂತೆ ಅಗತ್ಯ ವಸ್ತುಗಳ ಬೆಲೆಯನ್ನು ಏರಿಸುವ ಮೂಲಕ ಸರ್ಕಾರವೇ ಜನರನ್ನು ಲೂಟಿ ಮಾಡುತ್ತಿದೆ. ತಾನೇನು ಕಮ್ಮಿ ಇಲ್ಲ ಎಂಬಂತೆ ರಾಜ್ಯ ಸರ್ಕಾರ ಕೂಡ ವಿದ್ಯುತ್ ದರವನ್ನು ಹೆಚ್ಚಿಸುವ ಮೂಲಕ ಜನರ ಜೇಬಿಗೆ ಕತ್ತರಿ ಹಾಕಿದೆ ಎಂದು ದೂರಿದರು.
ಕೊರೊನಾದ ಒಂದು ಮತ್ತು ಎರಡನೇ ಅಲೆ ತಡೆಯಲು ಜಾರಿಗೊಳಿಸಿದ್ದ ಲಾಕ್ಡೌನ್ನಿಂದಾಗಿ 20 ಕೋಟಿಗೂ ಅಧಿಕ ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ. 30 ಕೋಟಿಗೂ ಹೆಚ್ಚು ಜನರು ಕಡು ಬಡತನಕ್ಕೆ ದೂಡಲ್ಪಟ್ಟಿದ್ದಾರೆ. ಇದೇ ಸಂದರ್ಭದಲ್ಲಿ ಅಂಬಾನಿ ಮತ್ತು ಅದಾನಿಗಳು ಸುಮಾರು ಮೂರು ಲಕ್ಷ ಕೋಟಿಗೂ ಹೆಚ್ಚು ತಮ್ಮ ಸಂಪತ್ತನ್ನು ವೃದ್ಧಿಸಿಕೊಂಡಿದ್ದಾರೆ ಎಂದು ಕಿಡಿಕಾರಿದರು.
ಜನ ಸಾಮಾನ್ಯರ ಹಿತದೃಷ್ಟಿಯಿಂದ ಸರ್ಕಾರ ಭಿಕ್ಷಾ ರೂಪದ ಪ್ಯಾಕೇಜ್ ಘೋಷಿಸಿ ಹೊಣೆಗಾರಿಕೆಯಿಂದ ನುಣುಚಿಕೊಂಡಿದೆ. ರೈತರನ್ನು ಉದ್ಧಾರ ಮಾಡುವುದಾಗಿ ಆಶ್ವಾಸನೆ ನೀಡಿ ಅಧಿಕಾರಕ್ಕೆ ಬಂದ ಬಳಿಕ ರೈತರನ್ನೇ
ಶೋಷಿಸುವುದು ಇದುವರೆಗೂ ನಮ್ಮನ್ನಾಳಿದ ಎಲ್ಲಾ ರಾಜಕಾರಣಿಗಳ ಸಹಜ ಸ್ವಭಾವವಾಗಿದೆ. ಸರ್ಕಾರಗಳು ಕೂಡಲೇ ತಮ್ಮ ಧೋರಣೆಯನ್ನು ಬದಲಿಸಿಕೊಂಡು ಅನ್ನದಾತ ರೈತರ ನೆರವಿಗೆ ಮುಂದಾಗಬೇಕು. ತಪ್ಪಿದಲ್ಲಿ ಉಗ್ರ ಹೋರಾಟ
ಹಮ್ಮಿಕೊಳ್ಳಲಾಗುವುದು ಎಂದು ರೈತರು ಎಚ್ಚರಿಸಿದ್ದಾರೆ.
ಪ್ರತಿಭಟನೆಯಲ್ಲಿ ರಾಜ್ಯ ಕಾರ್ಯಾಧ್ಯಕ್ಷ ಎಂ.ರಾಮು, ಪದಾಧಿಕಾರಿಗಳಾದ ಕೆ.ಮಲ್ಲಯ್ಯ, ಮುನಿರಾಜು, ಡಾ.ಎಸ್.ಬಿ.ಚೌಕಿಮಠ, ಲೋಕೇಶ್, ಎಂ.ಪುಟ್ಟಸ್ವಾಮಿ, ರಾಮೇಗೌಡ, ನಾಗರಾಜು ಮುಂತಾದವರಿದ್ದರು.
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು