ನಾಯಕತ್ವ ಬದಲಾವಣೆಯ ರಾಜಕೀಯ ಬಿಟ್ಟು ಜನರ ಕೂಗಿಗೆ ಸರ್ಕಾರ ಸ್ಪಂದಿಸಲಿ. ಹೆಚ್ ಡಿ ಕುಮಾರಸ್ವಾಮಿ
ಚನ್ನಪಟ್ಟಣ: ಕೊರೊನಾ ಎರಡನೆ ಅಲೆಯು ಚಾಲ್ತಿಯಲ್ಲಿರುವಾಗಲೇ ಮೂರನೆ ಅಲೆ ಬರುತ್ತಿದೆ. ಇಂತಹ ಸಂದರ್ಭದಲ್ಲಿ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರವು ಮುಖ್ಯಮಂತ್ರಿ ಮತ್ತು ಮಂತ್ರಿಗಳ ಬದಲಾವಣೆಯ ರಾಜಕೀಯ ಲೆಕ್ಕಾಚಾರದಲ್ಲಿ ತೊಡಗಿರುವುದು ಹಾಸ್ಯಾಸ್ಪದ. ವಿರೋಧ ಪಕ್ಷಗಳ ಸಲಹೆ ಸೂಚನೆಗಳನ್ನು ಪಡೆದು ಜನರ ಜೊತೆ ನಿಕಟ ಸಂಪರ್ಕವನ್ನು ಹೊಂದಬೇಕಾಗಿರುವುದು ಸರ್ಕಾರದ ಹೊಣೆ ಎಂದು ಕ್ಷೇತ್ರದ ಶಾಸಕ, ಮಾಜಿ ಮುಖ್ಯಮಂತ್ರಿ ಹೆಚ್ಡಿ ಕುಮಾರಸ್ವಾಮಿಯವರು ಸರ್ಕಾರದ ಕಿವಿ ಹಿಂಡಿದರು.
ಅವರು ಇಂದು ನಗರದ ಅಂಬೇಡ್ಕರ್ ಭವನದಲ್ಲಿ ತಾಲ್ಲೂಕು ಆಡಳಿತ ಹಮ್ಮಿಕೊಂಡಿದ್ದ ಲಸಿಕಾ ಅಭಿಯಾನವನ್ನು ವೀಕ್ಷಿಸಿ, ಮಾಧ್ಯಮದವರೊಂದಿಗೆ ಮಾತನಾಡಿದರು.
ಒಂದು ಕಡೆ ಕೊರೊನಾ ತನ್ನ ಅಟ್ಟಹಾಸ ಮೆರೆಯುತ್ತಿದೆ, ಮತ್ತೊಂದೆಡೆ ನೆರೆ ಉಕ್ಕುತ್ತಿದೆ, ಇಂತಹ ಸಂದರ್ಭದಲ್ಲಿ ನಾಯಕತ್ವ ಬದಲಾವಣೆಯ ರಾಜಕೀಯ ಮಾಡುವುದು ಸರಿಯಾದ ಕ್ರಮವಲ್ಲ. ಬದಲಾವಣೆ ಮಾಡುವುದಾದರೆ ಶೀಘ್ರ ಮಾಡಲಿ, ಇಲ್ಲವಾದರೆ ಮುಂದುವರಿಸಲಿ, ಅದು ಬಿಟ್ಟು ಪ್ರತಿನಿತ್ಯ ಇದನ್ನೇ ಒಂದು ಉದ್ಯೋಗ ಮಾಡಿಕೊಳ್ಳು ವುದು ಪ್ರಜೆಗಳಿಗೆ ಹಾಸ್ಯಾಸ್ಪದ ಎನ್ನಿಸುತ್ತದೆ ಎಂದರು.
ವಿರೋಧ ಪಕ್ಷಗಳ ಉತ್ತಮ ಸಲಹೆ ಸೂಚನೆಗಳನ್ನು ಪಡೆದು, ಇಂತಹ ಸಂದರ್ಭಗಳಲ್ಲಿ ಉಪಯೋಗಿಸಿಕೊಂಡು ಜನರ ಜೀವನವನ್ನು ಉತ್ತಮಗೊಳಿಸಬೇಕು. ಆಡಳಿತ ಮತ್ತು ವಿರೋಧ ಪಕ್ಷಗಳು ಕೊರೊನಾ ಮತ್ತು ನೆರೆಯ ಸಂದರ್ಭದಲ್ಲಿ ಒಗ್ಗೂಡಿ ಕೆಲಸ ಮಾಡಿದರೆ ಜನರ ಜೀವನ ಸುಧಾರಿಸುತ್ತದೆ. ಇದನ್ನು ಬಿಟ್ಟು ವಿರೋಧ ಪಕ್ಷಗಳನ್ನು ತೆಗಳುವುದು, ಸಲಹೆ ಸೂಚನೆಗಳನ್ನು ತಿರಸ್ಕರಿಸುವುದು ಮತ್ತು ಕೇವಲ ನಾಯಕತ್ವ ಬದಲಾವಣೆಯನ್ನೇ ದಾಳವಾಗಿಸಿಕೊಂಡು ಆಡಳಿತ ನಡೆಸುವುದು ಸರಿಯಲ್ಲ ಎಂದರು.
ಸಂದರ್ಭದಲ್ಲಿ ತಹಶಿಲ್ದಾರ್ ನಾಗೇಶ್, ಇಓ ಚಂದ್ರು, ನಗರಸಭೆ ಪೌರಾಯುಕ್ತ ಶಿವನಂಕಾರಿಗೌಡ, ತಾಲೂಕು ವೈದ್ಯಾಧಿಕಾರಿ ರಾಜು, ಜೆಡಿಎಸ್ ತಾಲೋಕು ಅಧ್ಯಕ್ಷ ಜಯಮುತ್ತು, ಲಿಂಗೇಶ್ ಕುಮಾರ್, ಹಾಪ್ ಕಾಮ್ಸ್ ದೇವರಾಜು, ಗೋವಿಂದಳ್ಳಿ ನಾಗರಾಜು, ಬೋರ್ ವೆಲ್ ರಾಮಚಂದ್ರ ಸೇರಿದಂತೆ ಹಲವಾರು ಮುಖಂಡರು ಉಪಸ್ಥಿತರಿದ್ದರು.
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು