ರಾಜ್ಯ ಸರಕಾರ ಕೊಲೆಗೆಡುಕ ಸರಕಾರ ಎಂದು ತರಾಟೆ ತೆಗೆದುಕೊಂಡ ಕುಮಾರಸ್ವಾಮಿ
ಬಿಡದಿ: ನೆಲಮಂಗಲದಲ್ಲಿ ಸಾರಿಗೆ ನೌಕರನ ಪತ್ನಿ ಹಾಗೂ ಆಕೆಯ ಮಕ್ಕಳ ಆತ್ಮಹತ್ಯೆ ಘಟನೆ ಹೃದಯ ವಿದ್ರಾವಕ ಎಂದು ನೊಂದು ನುಡಿದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು, ಈ ಸಾವುಗಳಿಗೆ ಸರಕಾರವೇ ನೇರ ಕಾರಣ ಎಂದು ಹೇಳಿದರು.
ಬಿಡದಿಯ ತೋಟದಲ್ಲಿ ಇಂದು ಬೆಳಗ್ಗೆ ಆರಂಭವಾದ ಎರಡನೇ ಹಂತದ 'ಜನತಾ ಪರ್ವ 1.O' ಹಾಗೂ 'ಮಿಷನ್ 123' ಕಾರ್ಯಾಗಾರಕ್ಕೆ ಮುನ್ನಾ ಮಾಧ್ಯಮಗಳ ಜತೆ ಅವರು ಮಾತನಾಡಿದರು.
ಕರ್ತವ್ಯದಲ್ಲಿ ಇದ್ದಾಗಲೇ ಕೊರೋನ ಮಹಾಮಾರಿಗೆ ತುತ್ತಾಗಿ ಸಾವನ್ನಪ್ಪಿದ ಸಾರಿಗೆ ನೌಕರನ ಕುಟುಂಬಕ್ಕೆ ಸರಕಾರ ಅರು ತಿಂಗಳ ಒಳಗಾಗಿ ಅನುಕಂಪದ ಉದ್ಯೋಗ ನೀಡಿ ಪರಿಹಾರದ ಹಣವನ್ನು ನೀಡಬೇಕು. ಅಲ್ಲದೆ ಕೋವಿಡ್ ವಾರಿಯರ್'ಗಳಿಗೆ ನೀಡುವ ಪರಿಹಾರವನ್ನು ಕೂಡ ನೀಡಿಲ್ಲ. ಆದರೆ ಆ ಹೆಣ್ಣು ಮಗಳಿಗೆ ಕೆಲಸವೂ ಕೊಟ್ಟಿಲ್ಲ ಎಂದು ಕುಮಾರಸ್ವಾಮಿ ಅವರು ತರಾಟೆಗೆ ತೆಗೆದುಕೊಂಡರು.
ಆ ಹೆಣ್ಣು ಮಗಳು ಎಷ್ಟು ನೊಂದಿರಬಹುದು. ಈ ಸರ್ಕಾರಕ್ಕೆ ಯಾವ ಗಮನವೂ ಇರಲಿಲ್ಲ. ಆ ಮುಗ್ದ ಮಕ್ಕಳೂ ಸೇರಿ ಆ ಇಡೀ ಕುಟುಂಬವನ್ನು ಬಲಿ ತೆಗೆದುಕೊಂಡ ಈ ಸರಕಾರ ಕೊಲೆಗಡುಕ ಸರ್ಕಾರ ಅಂದರೆ ತಪ್ಪಾಗಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಇದಕ್ಕೂ ಈ ಬಗ್ಗೆ ಸರಣಿ ಟ್ವೀಟ್ ಮಾಡಿದ್ದ ಕುಮಾರಸ್ವಾಮಿ ಅವರು, ಸರಕಾರವನ್ನು ತರಾಟೆಗೆ ತೆಗೆದುಕೊಂಡಿದ್ದರು.
*ಹೆಚ್'ಡಿಕೆ ಅವರ ಟ್ವೀಟ್ ಹೀಗಿದೆ:*
ನೆಲಮಂಗಲದಲ್ಲಿ ಸಾರಿಗೆ ನೌಕರನ ಪತ್ನಿ ಮತ್ತು ಮಕ್ಕಳ ಆತ್ಮಹತ್ಯೆ ಪ್ರಕರಣ ಹೃದಯ ವಿದ್ರಾವಕ. ಈ ಘಟನೆಯನ್ನು ಸರಕಾರ ತಡೆಯಬಹುದಿತ್ತು. ಮೊದಲೇ ಆ ಕುಟುಂಬಕ್ಕೆ ಪರಿಹಾರ, ಅನುಕಂಪದ ಉದ್ಯೋಗ ನೀಡಿದ್ದರೆ ಮೂರು ಅಮೂಲ್ಯ ಜೀವಗಳು ಉಳಿಯುತ್ತಿದ್ದವು. ಇದು 'ಕೊಲೆಗೆಡುಕ ಸರಕಾರ'.
ಎಲ್ಲಾ ದುಂದು ವೆಚ್ಚ, ಲೂಟಿ ನಿಲ್ಲಿಸಿ ಸರಕಾರ ಇಂಥವರ ನೆರವಿಗೆ ಧಾವಿಸಬೇಕಿತ್ತು. ಇಂತಹ ಪ್ರಕರಣಗಳ ಇತ್ಯರ್ಥಕ್ಕೆ ಮೊದಲ ಆದ್ಯತೆ ನೀಡಬೇಕಿತ್ತು. ರಾಜ್ಯ ಸರಕಾರ ಪೂರ್ಣ ವಿಫಲವಾಗಿದೆ ಹಾಗೂ ಅಧಿಕಾರಿಗಳ ಹೊಣೆಗೇಡಿತನ ಎದ್ದು ಕಾಣುತ್ತದೆ.
ಕೂಡಲೇ ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳನ್ನು ಅಮಾನತು ಮಾಡಬೇಕು. ಸ್ವತಃ ಮುಖ್ಯಮಂತ್ರಿಗಳೇ ಈ ಬಗ್ಗೆ ಗಮನ ಹರಿಸಿ ಕೊರೋನ ಸೋಂಕಿಗೆ ಬಲಿಯಾದ ಸಾರಿಗೆ ನೌಕರರ ಕುಟುಂಬಗಳಿಗೆ ನೇರವಾಗಿ, ಮುಂದಿನ ಅನಾಹುತಗಳನ್ನು ತಪ್ಪಿಸಬೇಕು ಎಂದು ನಾನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಒತ್ತಾಯ ಮಾಡುತ್ತೇನೆ.
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು