ಕಿರಿಯ ಸಹಾಯಕ ಅಭಿಯಂತರ ಅಮಾನತ್ತು ಮಾಡಿ ವಾರದ ನಂತರ ವಾಪಸ್ಸು
ಚನ್ನಪಟ್ಟಣ: ಭಾರತ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ ಜಲ ಜೀವನ್ ಮಿಷನ್ ಯೋಜನೆಯ ಕಾರ್ಯಾತ್ಮಕ ನಳ ನೀರು ಸಂಪರ್ಕ ಕಲ್ಪಿಸುವ ಕಾಮಗಾರಿಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ವಿಫಲರಾದ ಆರೋಪ ಮೇರೆಗೆ ಚನ್ನಪಟ್ಟಣದ ಕಿರಿಯ ಅಭಿಯಂತರರಾದ ಶ್ರೇಯಸ್ ಎಂ ಪಿ ಅಮಾನತ್ತುಗೊಂಡಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಶ್ರೇಯಸ್ ಎಂ.ಪಿ. ಕಿರಿಯ ಅಭಿಯಂತರ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗ ಚನ್ನಪಟ್ಟಣ ಇವರೇ ಅಮಾನತ್ತುಗೊಂಡಿದ್ದು, ದೇಶದ ಮಹತ್ವಾಕಾಂಕ್ಷೆಯ ಯೋಜನೆಯನ್ನು ಸಮರ್ಪಕವಾಗಿ ಗ್ರಾಮೀಣ ಮಟ್ಟದಲ್ಲಿ ಕಾರ್ಯ ರೂಪಕ್ಕೆ ತರುವಲ್ಲಿ ವಿಫಲವಾದ ಹಿನ್ನಲೆಯಲ್ಲಿ ನಾಗರೀಕ ಸೇವಾ ನಿಯಮ ಉಲ್ಲಂಘನೆ ಮಾಡಿ ಕರ್ತವ್ಯ ಲೋಪಗಳಿಸಿದ ಆರೋಪದ ಮೇರೆಗೆ ರಾಮನಗರ ಜಿಲ್ಲಾ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾದ ಇಕ್ರಂ ರವರು ಅಮಾನತ್ತು ಆದೇಶ ಹೊರಡಿಸಿದ್ದಾರೆ.
ಚನ್ನಪಟ್ಟಣ ತಾಲೂಕಿನ ವಾಲೇತೋಪು, ಹೊಟ್ಟಿಗನಹೊಸಹಳ್ಳಿ, ಗಂಗೇದೊಡ್ಡಿ, ವಡ್ಡರದೊಡ್ಡಿ, ಗ್ರಾಮಗಳಲ್ಲಿ ಭಾರತ ಸರ್ಕಾರದ ಜಲ ಜೀವನ ಯೋಜನೆಯಡಿ ಕಾಮಗಾರಿ ಕೈಗೊಳ್ಳಲಾಗಿದೆ. ಕಾಮಗಾರಿ ವೀಕ್ಷಣೆಗೆಂದು ಕಳೆದ ನವೆಂಬರ್ 24 ರಂದು ರಾಮನಗರ ಸಿಇಓ ತಂಡ ಸ್ಥಳ ಪರಿಶೀಲನೆ ನಡೆಸಿದಾಗ ಈ ಗ್ರಾಮಗಳಲ್ಲಿ 7 ಮನೆಗಳಿಗೆ ವಿತರಣಾ ಕೊಳವೆಯಿಂದ ನಳ ಸಂಪರ್ಕ ಕಲ್ಪಿಸುವ ಬದಲಾಗಿ ಏರು ಕೊಳವೆ ಮೂಲಕ ನಳ ಸಂಪರ್ಕ ಮೂಲಕ ಸಂಪರ್ಕ ಕಲ್ಪಿಸಿರುವುದು. ಸಂಪರ್ಕದ ವೇಳೆ ಪ್ಲಾಟ್ ಫಾರಂ ಸರಿಯಾಗಿ ಮಾಡದಿರುವುದು. ಸಮರ್ಪಕವಾಗಿ ಡಕ್ ನಿರ್ಮಾಣ ಮಾಡದಿರುವುದು ಸೇರಿದಂತೆ ಕಾಮಾಗಾರಿಯಲ್ಲಿ ಲೋಪಗಳು ಕಂಡು ಬಂದ ಹಿನ್ನಲೆಯಲ್ಲಿ ನವೆಂಬರ್ 25 ರಂದೆ ಶ್ರೇಯಸ್ ರನ್ನ ಅಮಾನತ್ತು ಪಡಿಸಿ ಆದೇಶ ಮಾಡಲಾಗಿದೆ.
ಅಮಾನತ್ತುಗೊಂಡಿದ್ದ ಶ್ರೇಯಸ್ ನನ್ನು ಕಳೆದ ಫೆಬ್ರವರಿ 10, 2021 ರಂದೆ ಚನ್ನಪಟ್ಟಣದಿಂದ ರಾಮನಗರ ಯೋಜನಾ ಅಧಿಕಾರಿಯಾಗಿ ವರ್ಗಾವಣೆಗೊಂಡಿದ್ದರು ಕೂಡ ಚನ್ನಪಟ್ಟಣದಲ್ಲೆ ಕಾರ್ಯ ನಿರ್ವಹಣೆ ಮಾಡುತ್ತಿದ್ದರು.
ಅಮಾನತ್ತು ವಾಪಸ್ಸು;
ಅಮಾನತ್ತುಗೊಂಡಿದ್ದ ಕಿರಿಯ ಅಭಿಯಂತರ ಶ್ರೇಯಸ್ ಕೂಡಲೆ ಕೆಲಸಕ್ಕೆ ಹಾಜರಾಗುವಂತೆ ಮತ್ತೊಮ್ಮೆ ಸಿಇಓ ಡಿ.4 ರಂದು ಮರು ಆದೇಶ ಹೊರಡಿಸಿದ್ದಾರೆ. ಜಲ ಜೀವನ ಯೋಜನೆಯಡಿ ಕೈಗೊಂಡಿರುವ ಕಾಮಗಾರಿ ಸಮರ್ಪಕವಾಗಿ ನಡೆಸಿಲ್ಲ ಎಂಬ ಆರೋಪದ ಮೇರೆಗೆ ಅಮಾನತ್ತು ಮಾಡಲಾಗಿತ್ತು. ಕಾಮಗಾರಿ ಬಗ್ಗೆ ಇಲಾಖೆ ವತಿಯಿಂದ ತನಿಖೆ ನಡೆಸಿ ನಂತರ ಕ್ರಮಕ್ಕೆ ಆದೇಶಿಸಿದ್ದಾರೆ. ತನಿಖೆ ನಡೆಸಿದ ಮೇಲೆ ಕ್ರಮಕೈಗೊಳ್ಳಲಾಗುವುದು ಅಲ್ಲಿಯ ವರೆಗೆ ಸದ್ಯಕ್ಕೆ ಅಮಾನತ್ತು ಆದೇಶವನ್ನ ಹಿಂದಕ್ಕೆ ಪಡೆದುಕೊಂಡಿದ್ದಾರೆಂದು ತಿಳಿದು ಬಂದಿದೆ.
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು