Tel: 7676775624 | Mail: info@yellowandred.in

Language: EN KAN

    Follow us :


ತಾಲ್ಲೂಕಿನ ರೈತರ ಸಮಸ್ಯೆಗಳನ್ನು ಆಲಿಸಿ ಪರಿಹರಿಸಲು ಶಾಸಕರ ನೇತೃತ್ವದಲ್ಲಿ ಸಭೆ ಕರೆಯುವಂತೆ ಆಗ್ರಹಿಸಿದ ಸಿ ಪುಟ್ಟಸ್ವಾಮಿ

Posted date: 09 Mar, 2022

Powered by:     Yellow and Red

ತಾಲ್ಲೂಕಿನ ರೈತರ ಸಮಸ್ಯೆಗಳನ್ನು ಆಲಿಸಿ ಪರಿಹರಿಸಲು ಶಾಸಕರ ನೇತೃತ್ವದಲ್ಲಿ ಸಭೆ ಕರೆಯುವಂತೆ ಆಗ್ರಹಿಸಿದ ಸಿ ಪುಟ್ಟಸ್ವಾಮಿ

ಚನ್ನಪಟ್ಟಣ: ಜಿಲ್ಲಾ ಮತ್ತು ತಾಲೂಕು ಆಡಳಿತ, ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಹಾಗೂ ಜನಪ್ರತಿನಿಧಿಗಳ ಬೇಜವಾಬ್ದಾರಿತನದಿಂದಾಗಿ, ರೈತರಿಗೆ ಸಾಕಷ್ಟು ತೊಂದರೆಯಾಗುತ್ತಿದ್ದು, ಈ ಕುರಿತು ಚರ್ಚೆ ನಡೆಸಿ ರೈತರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಕ್ಷೇತ್ರದ ಶಾಸಕರು ಮತ್ತು ವಿಧಾನಪರಿಷತ್ ಸದಸ್ಯರ ಸಮ್ಮುಖದಲ್ಲಿ ಎಲ್ಲಾ ಅಧಿಕಾರಿಗಳ ಸಭೆ ನಡೆಸಬೇಕು ಎಂದು ಹಿರಿಯ ರೈತ ಹೋರಾಟಗಾರ ಸಿ.ಪುಟ್ಟಸ್ವಾಮಿ ಒತ್ತಾಯಿಸಿದರು.

ನಗರದ ಅಂಬೇಡ್ಕರ್ ಭವನದಲ್ಲಿ ಕರ್ನಾಟಕ ರೈತಸಂಘ ಮತ್ತು ಸಮಾನಮನಸ್ಕರ ಸಹಭಾಗಿತ್ವದಲ್ಲಿ ನಡೆದ ತಾಲೂಕು ಮಟ್ಟದ ರೈತಸಮಾವೇಶದಲ್ಲಿ ಮಾತನಾಡಿದ ಅವರು, ತಾಲೂಕಿನ ರೈತರು ಹತ್ತಾರೂ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಆದರೆ, ಇವುಗಳನ್ನು ಪರಿಹರಿಸಿ ರೈತರಿಗೆ ಸರಿಯಾದ ಮಾರ್ಗದರ್ಶನ ನೀಡಬೇಕಾದ ಅಧಿಕಾರಿಗಳು ತಮ್ಮ ಕರ್ತವ್ಯವನ್ನು ಸಂಪೂರ್ಣವಾಗಿ ನಿರ್ಲಕ್ಷಿಸುತ್ತಿರುವುದರಿಂದ ರೈತರಿಗೆ ತುಂಬಾ ತೊಂದರೆಯಾಗುತ್ತಿದೆ ಎಂದರು.

 ಆದ್ದರಿಂದ ರೈತರ ಸಮಸ್ಯೆಗಳನ್ನು ಬಗೆಹರಿಸಲು ಶಾಸಕರು ಅಧ್ಯಕ್ಷತೆಯಲ್ಲಿ ಶೀಘ್ರವಾಗಿ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆಯನ್ನು ಆಯೋಜಿಸಬೇಕು ಎಂದು ಆಗ್ರಹಿಸಿದರು.


ಕಂದಾಯ ಇಲಾಖೆ, ಬೆಸ್ಕಾಂ, ಅರಣ್ಯ ಇಲಾಖೆ, ನೀರಾವರಿ, ಗ್ರಾಮೀಣಾಭಿವೃದ್ಧಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳ ಉದಾಸೀನ ಮನೋಭಾವ ಮತ್ತು ನಿರ್ಲಕ್ಷ್ಯದಿಂದಾಗಿ ತಾಲೂಕಿನ ರೈತರ ಯಾವುದೇ ಕೆಲಸ ಕಾರ್ಯಗಳು ನಡೆಯುತ್ತಿಲ್ಲ. ತಮ್ಮ ಕೆಲಸಕಾರ್ಯಗಳಿಗಾಗಿ ಪ್ರತಿನಿತ್ಯ ಕಚೇರಿಗಳಿಗೆ ಅಲೆಯುವುದೇ ರೈತರ ಕಾಯಕವಾಗಿದೆ. ಅಧಿಕಾರಿಗಳಿಗೆ ಬಿಸಿಮುಟ್ಟಿಸುವ ಜತೆಗೆ ಇಲಾಖೆಗಳನ್ನು ಚುರುಕುಗೊಳಿಸಲು ಸಭೆ ಕರೆಯುವುದು ಅನಿವಾರ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.


ಈ ಸಭೆಯಲ್ಲಿ ಕ್ಷೇತ್ರದ ಶಾಸಕರ ಜೊತೆಗೆ ವಿಧಾನಪರಿಷತ್ ಸದಸ್ಯರು, ಸ್ಥಳೀಯ ಚುನಾಯಿತ ಪ್ರತಿನಿಧಿಗಳ  ಜತೆಗೆ ಎಲ್ಲ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡು ರೈತರ ಸಮಸ್ಯೆಗೆ ಸ್ಥಳಲ್ಲೇ ಪರಿಹಾರ ಕಲ್ಪಿಸುವ ಕೆಲಸ ಮಾಡಬೇಕು. ಕಾಲಕಾಲಕ್ಕೆ ಸಭೆ ನಡೆಸುವ ಮೂಲಕ ಇಲಾಖೆಗಳನ್ನು ಚುರುಕುಗೊಳಿಸಿ, ರೈತರಿಗೆ ಅನುಕೂಲ ಕಲ್ಪಿಸಬೇಕು ಎಂದು ಸಲಹೆ ನೀಡಿದರು.


ಪ್ರತಿ ಹಳ್ಳಿಯಲ್ಲಿ ಕಾರ್ಯಕ್ರಮ ನಡೆಸಿ: ರೈತರ ಅನುಕೂಲಕ್ಕಾಗಿ ಸಾಕಷ್ಟು ಯೋಜನೆಗಳಿದ್ದರೂ ಅದು ರೈತರಿಗೆ ದೊರೆಯುತ್ತಿಲ್ಲ. ರೈತರಿಗೆ ಸಂವಿಧಾನದತ್ತವಾಗಿ ದೊರಕಿರುವ ಹಕ್ಕುಗಳ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡಬೇಕಿದೆ. ಪ್ರತಿ ಹಳ್ಳಿಯಲ್ಲಿ ಕಾರ್ಯಕ್ರಮ ನಡೆಸಿ ರೈತರ ಹಕ್ಕುಗಳನ್ನು ತಿಳಿಸಿ ಹೇಳುವ ಕೆಲಸ ಮಾಡಿ ರೈತರನ್ನು ಜಾಗೃತ ಗೊಳಿಸ ಬೇಕಿದೆ. ರೈತರನ್ನು ಕೇವಲ ಸಬ್ಸಿಡಿ ಪಡೆಯುವ ಫಲಾನುಭವಿಗಳೆಂದು ಜಿಲ್ಲಾಡಳಿತ ಮತ್ತು ಸರ್ಕಾರದ ಇಲಾಖೆಗಳು ಪರಿಗಣಿಸದೆ ರೈತರಿಗೆ ಗೌರವ ನೀಡುವುದನ್ನು ಕಲಿಯಬೇಕಿದೆ ಎಂದು ಸಲಹೆ ನೀಡಿದರು.


ರಾಜಕಾರಣಿಗಳು ಮತ್ತು ಅಧಿಕಾರಿಗಳಿಗೆ ರೈತ ಜಾಗೃತನಾದರೆ ಎಲ್ಲಿ ನಮಗೆ ಸಂಚಾಕಾರವಾಗುವುದೋ ಎಂಬ ಆತಂಕವಿದೆ. ಸಬ್ಸಿಡಿ, ಸೌಲಭ್ಯ ಎಂಬ ತುಪ್ಪವನ್ನು ರೈತರ ಮೂಗಿಗೆ ಸವರುತ್ತಾ ಅನ್ಯಾಯ ಮಾಡಲಾಗುತ್ತಿದೆ. ಇದು ಬದಲಾಗಬೇಕು. ಸರಕಾರ ನೀಡುವ ಸಬ್ಸಿಡಿಗಳು ಸವಲತ್ತುಗಳಲ್ಲ, ಅದು ರೈತರ ಹಕ್ಕು ಎಂಬುದನ್ನು ಎಲ್ಲರೂ ಅರಿಯಬೇಕು ಎಂದರು.


ರೈತ ಸಂಘಟನೆಗೆ ಆದ್ಯತೆ: ಸಮಾನಮನಸ್ಕರ ಸಹಭಾಗಿತ್ವದಲ್ಲಿ ಜಿಲ್ಲೆಯಲ್ಲಿ ಸದೃಢ ರೈತಸಂಘವನ್ನು ಸಂಘಟಿಸಲು ಮುಂದಾಗಿದ್ದು, ಇದಕ್ಕೆ ಎಲ್ಲರೂ ಮುಕ್ತವಾಗಿ ಸಹಕಾರದ ಅಗತ್ಯವಿದೆ. ಸಂಘಟನೆಗಳನ್ನು ಹಳ್ಳಿಯಿಂದ ನಗರಕ್ಕೆ ತರುವ ಕೆಲಸ ಮಾಡದೆ, ನಗರದಿಂದ ಹಳ್ಳಿಯತ್ತ ಸಂಘಟನೆಯನ್ನು ತೆಗೆದುಕೊಂಡು ಹೋಗಲು ನಿರ್ಧರಿಸಿದ್ದು, ರೈತರನ್ನು ಜಾಗೃತ ಗೊಳಿಸುವ ಕೆಲಸವನ್ನು ಮಾಡುವ ಮೂಲಕ ರೈತರನ್ನು ಸಂಘಟಿಸಲಾಗುವುದು ಎಂದು 

.

ಎಲ್ಲರಿಗೂ ಸಮಾನ ಮಾನ್ಯತೆ:

ನಾವು ಪ್ರೊ.ನಂಜುಂಡಸ್ವಾಮಿ ಅವರು ಹಾಕಿಕೊಟ್ಟ ಮಾರ್ಗದಲ್ಲಿ ಸಂಘಟನೆಯನ್ನು ಮುನ್ನಡೆಸುವ ಗುರಿಯನ್ನು ಹೊಂದಿದ್ದೇವೆ. ನೂತನವಾಗಿ ಸಂಘಟಿಸುತ್ತಿರುವ ನಮ್ಮ ಸಂಘಟನೆಯಲ್ಲಿ ಯಾವುದೇ ಪದಾಧಿಕಾರಿ ಹುದ್ದೆಯನ್ನು ನೀಡದೆ, ವಿಚಾರದ ಆಧಾರದ ಮೇಲೆ ಸಂಘಟನೆ ಮಾಡಲಾಗುವುದು. ಜಿಲ್ಲಾ ಮಟ್ಟದಲ್ಲಿ 30 ಮಂದಿಯ ಸಲಹಾ ಸಮಿತಿ, ತಾಲೂಕು ಮಟ್ಟದಲ್ಲಿ 30 ಮಂದಿಯ ಸಲಹಾ ಸಮಿತಿ ಹಾಗೂ ಪ್ರತಿ ಗ್ರಾಮದಲ್ಲಿ 3 ರಿಂದ 5 ಮಂದಿಯ ಸಲಾಹಸಮಿತಿಯನ್ನು ರಚಿಸಲಾಗುವುದು ಎಂದು ಮಾಹಿತಿ ನೀಡಿದರು.


ಸುದ್ದಿಗೋಷ್ಟಿಯಲ್ಲಿ  ರೈತಸಂಘದ ಪದಾಧಿಕಾರಿಗಳಾದ ಧರಣೀಶ್ ರಾಂಪುರ, ಕನಕಪುರ ನಂಜಪ್ಪ, ಹೊಂಬಾಳೆಗೌಡ, ದೇವೇಗೌಡ, ಕನಕಪುರ ನಂಜಪ್ಪ, ಸತೀಶ್, ಮಂಜುನಾಥ್, ಮಾಗಡಿ ಗಿರೀಶ್, ಪ್ರಕಾಶ್, ಪಾಪಣ್ಣ, ಜಗದೀಶ್  ಮುಂತಾದವರು ಉಪಸ್ಥಿತರಿದ್ದರು.


ಸಭೆಯ ನಂತರ ತಾಲ್ಲೂಕು ಕಛೇರಿಗೆ ತೆರಳಿ ತಹಶಿಲ್ದಾರ್ ನಾಗೇಶ್ ರವರಿಗೆ ಮನವಿ ಸಲ್ಲಿಸಿದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑