ಏಪ್ರಿಲ್ 25ರಿಂದ ರೈತರೇ ಸ್ವಯಂ ನಕ್ಷೆ ತಯಾರಿಸುವ ವ್ಯವಸ್ಥೆ ಜಾರಿ: ಆರ್ ಅಶೋಕ್
April 22, 2022: ಬೆಂಗಳೂರು: ಭೂ ಒಡೆತನ ಹೊಂದಿರುವವ ರೈತರು ತಮ್ಮ ಸ್ವಂತ ಜಮೀನಿನ 11 ಇ ಸ್ಕೆಚ್, ಪೋಡಿ, ಭೂಪರಿವರ್ತನಾ ಪೂರ್ವ ಸ್ಕೆಚ್ಗಳನ್ನು (ನಕ್ಷೆ) ತಾವೇ ತಯಾರಿಸಿಕೊಳ್ಳಬಹುದಾದ ಸ್ವಯಂ ಸೇವೆಯ ಹೊಸ ವ್ಯವಸ್ಥೆಯೊಂದನ್ನು ಕಂದಾಯ ಇಲಾಖೆ ಸಿದ್ಧಪಡಿಸಿದ್ದು, ಇದೇ 25ರಿಂದ ಜಾರಿ ಬರಲಿದೆ ಎಂದು ಕಂದಾಯ ಸಚಿವ ಆರ್ ಅಶೋಕ್ ತಿಳಿಸಿದ್ದಾರೆ.
ಇದಕ್ಕಾಗಿ ಕಂದಾಯ ಇಲಾಖೆ *‘ಸ್ವಾವಲಂಬಿ’* ಹೆಸರಿನ ಆ್ಯಪ್ ಅಭಿವೃದ್ಧಿಪಡಿಸಿದೆ. ಈ ಆ್ಯಪ್ ನಿರ್ವಹಣೆ ಗೊತ್ತಿದ್ದರೆ ಸ್ವತಃ ತಾವೇ ರೆವಿನ್ಯೂ ಸ್ಕೆಚ್ ತಯಾರಿಸಬಹುದು, ಇಲ್ಲವೇ ಬಲ್ಲವರಿಂದ ಸ್ಕೆಚ್ ಸಿದ್ಧಪಡಿಸಿಕೊಳ್ಳಲೂಬಹುದು ಎಂದು ಕಂದಾಯ ಸಚಿವ ಆರ್.ಅಶೋಕ ಮಾಹಿತಿ ನೀಡಿದ್ದಾರೆ.
ಒಂದು ಕುಟುಂಬದ ಸದಸ್ಯರು ಮನೆಯಲ್ಲೇ ಕುಳಿತು ತಮ್ಮ ಜಮೀನು ಭಾಗ ಮಾಡಿಕೊಳ್ಳಬಹುದು. ಉದಾಹರಣೆಗೆ ಐದು ಎಕರೆ ಜಮೀನು ಇದ್ದರೆ ಯಾರಿಗೆ ಎಷ್ಟು ಭಾಗ ಎಂಬುದನ್ನು ಮನೆಯವರೇ ನಿರ್ಧರಿಸಿ ಆ್ಯಪ್ ಮೂಲಕ ಅದಕ್ಕೆ ತಕ್ಕಂತೆ ಸ್ಥಳದಲ್ಲೇ ಸ್ಕೆಚ್ ಮಾಡಬಹುದು. ಇದಕ್ಕಾಗಿ ಸರ್ವೇಯರ್ಗಳನ್ನು ಕರೆಸಬೇಕಾಗಿಲ್ಲ. ಸ್ಕೆಚ್ ಸಿದ್ಧಪಡಿಸಿದ ಬಳಿಕ ಭೂದಾಖಲೆಗಳ ಕಚೇರಿಗೆ ಅಪ್ಲೋಡ್ ಮಾಡಿದರೆ ಸಾಕು. ಆ ನಂತರ ನೋಂದಣಿ ಇಲಾಖೆಯಲ್ಲಿ ಆ ಸ್ಕೆಚ್ನ ಗಡಿಗಳಿಗೆ (ಬೌಂಡರಿ) ಅನುಗುಣವಾಗಿ ನೋಂದಣಿ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಆಸ್ತಿ ಹಿಸ್ಸೆ (ಭಾಗ) ಮಾಡಲು ಸರ್ವೆ ನಡೆಸಿ, ಸ್ಕೆಚ್ ಮಾಡಿ, ನೋಂದಣಿ ಮಾಡಿ ಪಹಣಿ ಪಡೆಯಲು ಕನಿಷ್ಠ 6 ತಿಂಗಳಿಂದ ಒಂದು ವರ್ಷ ಬೇಕಾಗುತ್ತದೆ. ಹೊಸ ವ್ಯವಸ್ಥೆಯಿಂದ ಸಮಯ ಮತ್ತು ಹಣ ಉಳಿಯುತ್ತದೆ, ಕಚೇರಿಗಳಿಗೆ ವೃಥಾ ವರ್ಷಗಟ್ಟಲೆ ಅಲೆಯುವ ಅಗತ್ಯವಿಲ್ಲ.
ಜಮೀನಿಗೆ ಸಂಬಂಧಿಸಿದ ಗಡಿ ಸ್ಕೆಚ್ ಅನ್ನು ಕಂದಾಯ ಇಲಾಖೆಯ ಭೂದಾಖಲೆಗಳ ವಿಭಾಗವೇ ಕೊಡುತ್ತದೆ. ಅಳತೆಯ ಭಾಗವನ್ನು ಜಮೀನಿಗೆ ಸಂಬಂಧಪಟ್ಟರೇ ಮಾಡಿಕೊಳ್ಳಬೇಕು. ಬೌಂಡರಿ ಸರಿಯಾಗಿದ್ದರೆ ಸಾಕು, ಒಳಗೆ ಹೇಗೆ ಹಂಚಿಕೆ ಮಾಡಿಕೊಂಡಿದ್ದಾರೆ ಎಂಬುದನ್ನು ನೋಡಲು ಹೋಗುವುದಿಲ್ಲ ಎಂದು ಅಶೋಕ ತಿಳಿಸಿದರು.
*‘ಸ್ವಯಂ ಸೇವೆ’ ಯಾವುದಕ್ಕೆಲ್ಲ ಅನ್ವಯ*
11 ಇ ಸ್ಕೆಚ್– ನಾಗರಿಕರು ತಮ್ಮ ಜಮೀನಿನ ಒಂದು ಭಾಗವನ್ನು ಮಾರಾಟ ಮಾಡಲು ನೋಂದಣಿಗೆ ಸ್ಕೆಚ್ ಸಿದ್ಧಪಡಿಸುವುದು.
ತತ್ಕಾಲ್ ಪೋಡಿ– ಜಮೀನಿನಲ್ಲಿ ಪೋಡಿ(ಭಾಗ) ಮಾಡಿಕೊಡುವ ಬಗ್ಗೆ ಸ್ಕೆಚ್ ತಯಾರಿಸುವುದು.
ಭೂಪರಿವರ್ತನಾ ಪೂರ್ವ ಸ್ಕೆಚ್– ಕೃಷಿ ಜಮೀನಿನ ಒಂದು ಭಾಗವನ್ನು ಕೃಷಿಯೇತರ ಉದ್ದೇಶಕ್ಕಾಗಿ ಭೂ ಪರಿವರ್ತನೆ ಮಾಡಿಸಿಕೊಳ್ಳಲು ಸ್ಕೆಚ್.
ವಿಭಾಗ– ಹಾಲಿ ಹೊಂದಿರುವ ಕೃಷಿ ಜಮೀನಿನಲ್ಲಿ ತಮ್ಮ ಶಾಸನಾತ್ಮಕ ಹಕ್ಕಿನಂತೆ ವೈಯಕ್ತಿಕ ಭಾಗಾಂಶ ತೋರಿಸಲು ಸ್ಕೆಚ್.
ಏಕ ಮಾಲೀಕತ್ವದ ಪಹಣಿ (ಆರ್ಟಿಸಿ): ಏಕ ಮಾಲೀಕತ್ವದ ಪಹಣಿ ಹೊಂದಿರುವ ನಾಗರಿಕರು ಇತರರ ಜಮೀನಿನ ಹಕ್ಕುಗಳಲ್ಲಿ ಮತ್ತು ನಕ್ಷೆಗಳಲ್ಲಿ ಹಸ್ತಕ್ಷೇಪ ಮಾಡುವಂತಿಲ್ಲ. ಆದರೆ, ತನ್ನ ಸ್ವಂತ ಜಮೀನಿನಲ್ಲಿ 11 ಇ, ಪೋಡಿ, ವಿಭಜನೆ, ಭೂಪರಿವರ್ತನೆಗಾಗಿ ತನ್ನದೇ ಸ್ವಂತ ಸ್ಕೆಚ್ ಮಾಡಿಕೊಳ್ಳಲು ಸಂಪೂರ್ಣ ಸ್ವತಂತ್ರ. ಇದಕ್ಕಾಗಿ ಸ್ಕೆಚ್ ಕೋರಿ ಮೋಜಣಿ ವ್ಯವಸ್ಥೆಯಡಿ ಇ–ಸಹಿ ಅಥವಾ ಆಧಾರ್ ಕೆವೈಸಿ ಮೂಲಕ ತನ್ನ ಗುರುತನ್ನು ದೃಢೀಕರಿಸುವ ಮೂಲಕ ಅರ್ಜಿ ಸಲ್ಲಿಸಬೇಕು. ಮೊಬೈಲ್ ಸಂಖ್ಯೆ ಕಡ್ಡಾಯ.
*ಬಹುಮಾಲೀಕತ್ವದ ಪಹಣಿ:* ಬಹುಮಾಲೀಕತ್ವವಿರುವ ಪಹಣಿಯ ಹಕ್ಕುದಾರರ ಪೈಕಿ ಒಬ್ಬ ಹಕ್ಕುದಾರ ಸ್ಕೆಚ್ ಕೋರಿ ಮೋಜಣಿ ವ್ಯವಸ್ಥೆಯಡಿ ಇ–ಸಹಿ ಅಥವಾ ಆಧಾರ್ ಕೆವೈಸಿ ಮೂಲಕ ತನ್ನ ಗುರುತನ್ನು ದೃಢೀಕರಿಸುವ ಮೂಲಕ ಅರ್ಜಿ ಸಲ್ಲಿಸಬೇಕು. ಮೊಬೈಲ್ ಸಂಖ್ಯೆ ಕಡ್ಡಾಯ.
*ಆಸ್ತಿ ಖರೀದಿ: ಶೇ 10 ರಿಯಾಯ್ತಿ ಮುಂದುವರಿಕೆ*
ರಾಜ್ಯದಾದ್ಯಂತ ಎಲ್ಲ ಸ್ವತ್ತುಗಳ ಮಾರಾಟ ಮತ್ತು ಖರೀದಿ ಮಾಡುವವರಿಗೆ ಮಾರ್ಗಸೂಚಿ ದರದಲ್ಲಿ ಶೇ 10 ರಿಯಾಯಿತಿಯನ್ನು ಇದೇ ಜುಲೈ 24 ರವರೆಗೆ ಮುಂದುವರಿಸಿ ಕಂದಾಯ ಇಲಾಖೆ ಆದೇಶ ಹೊರಡಿಸಿದೆ.
ಸರ್ಕಾರ ಈ ಹಿಂದೆ 2022 ರ ಜನವರಿ 1 ರಿಂದ ಮಾರ್ಚ್ 31 ರವರೆಗೆ ರಿಯಾಯ್ತಿಯನ್ನು ಘೋಷಿಸಿತ್ತು. ರಿಯಾಯ್ತಿ ಮುಂದುವರಿಸಬೇಕು ಎಂಬ ಒತ್ತಾಯ ಸಾರ್ವಜನಿಕರಿಂದ ಬಂದ ಕಾರಣ ಮುಂದುವರಿಸಲು ತೀರ್ಮಾನಿಸಲಾಗಿದೆ ಎಂದು ಸಚಿವ ಅಶೋಕ ತಿಳಿಸಿದ್ದಾರೆ.
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು