ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ವಿರುದ್ಧ ತಾಲ್ಲೂಕು ರೈತಸಂಘ ಪ್ರತಿಭಟನೆ
ಚನ್ನಪಟ್ಟಣ: ಮೇ 28 22 ಮುಗ್ಧ ರೈತರ ಹೆಸರಿನಲ್ಲಿ ತನ್ನ ಬೇಳೆ ಬೇಯಿಸಿಕೊಂಡು, ಭ್ರಷ್ಟಾಚಾರ ಪ್ರಕರಣಗಳಲ್ಲಿ ಭಾಗಿಯಾಗಿರುವ ರೈತ ಸಂಘದ ನಾಯಕ ಕೋಡಿಹಳ್ಳಿ ಚಂದ್ರಶೇಖರ್ ಕೂಡಲೇ ತಮ್ಮ ಹೆಗಲ ಮೇಲಿರುವ ಹಸಿರು ಶಾಲನ್ನು ಕಳಚಿಡಬೇಕು. ಹಾಗೂ ಅವರು ಡೀಲ್ ನಡೆಸಿದ್ದಾರೆ ಎನ್ನಲಾದ ಭ್ರಷ್ಟಾಚಾರ ಪ್ರಕರಣದ ತನಿಖೆಯನ್ನು ಸ್ವತಂತ್ರ್ಯ (ಸ್ವಾಯತ್ತ) ಸಂಸ್ಥೆಗೆ ಸರ್ಕಾರ ವಹಿಸಿಕೊಡಬೇಕು ಎಂದು ಆಗ್ರಹಿಸಿ ರಾಜ್ಯ ರೈತಸಂಘದ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.
ನಗರದ ಗಾಂಧಿಸ್ಮಾರಕ ಭವನದಿಂದ ಪ್ರವಾಸಿಮಂದಿರದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸುವ ಮೂಲಕ ಅವರು ಆಗ್ರಹಿಸಿದರು.
ಮೆರವಣಿಗೆ ನಂತರ ನಗರದ ಗುರುವಪ್ಪ ವೃತ್ತದಲ್ಲಿ ರೈತಸಂಘದ ಪದಾಧಿಕಾರಿಗಳು ಮಾತನಾಡಿ, ನಾಡಿನ ರೈತಹೋರಾಟಕ್ಕೆ ಸೈದ್ದಾಂತಿಕ ಬದ್ದತೆ ಹಾಗೂ ತನ್ನದೇ ಆದ ಇತಿಹಾಸವಿದೆ. ಪ್ರೊ.ನಂಜುಂಡಸ್ವಾಮಿ, ಎಂ.ಡಿ.ಸುಂದರೇಶ್, ಎಚ್.ಎಸ್.ರುದ್ರಪ್ಪ, ಕಡಿದಾಳು ಶಾಮಣ್ಣ, ಡಾ ಚಿಕ್ಕಸ್ವಾಮಿ, ಸುರೇಶ್ ಪಾಟೀಲ್, ಸೇರಿದಂತೆ ಹಲವಾರು ಮಹನೀಯರು ರೈತ ಹೋರಾಟವನ್ನು ಕಟ್ಟಿದ್ದಾರೆ. ಇಂತಹ ರೈತ ಹೋರಾಟದ ಹೆಸರಿನಲ್ಲಿ ಕೋಟಿ ಸಹಸ್ರ ಕೋಟಿ ಭ್ರಷ್ಟಾಚಾರ ಮಾಡುವ ಮೂಲಕ ಮಹನೀಯರ ಚಿಂತನೆ ಗಳಿಗೆ ಮಸಿ ಬರೆದಿದ್ದಾರೆ. ಇಂತಹ ವ್ಯಕ್ತಿಯನ್ನು ವಿಚಾರಣೆ ಮುಗಿಯುವ ವರೆಗೆ ಬಂಧನದಲ್ಲಿರಿಸಬೇಕು ಎಂದು ಆಗ್ರಹಿಸಿದರು.
ಈ ವೀಡಿಯೋ ವಿಚಾರದಲ್ಲಿ ತನಿಖೆ ನಡೆದು ಸತ್ಯಾಸತ್ಯತೆ ಹೊರ ಬರುವವರೆಗೂ ಕೋಡಿಹಳ್ಳಿ ಚಂದ್ರಶೇಖರ್ ತಮ್ಮ ಸ್ಥಾನವನ್ನು ತ್ಯಜಿಸಬೇಕು. ತಮ್ಮ ಹೆಗಲ ಮೇಲಿರುವ ಹಸಿರು ಟವೆಲ್ ತೆಗೆಯಬೇಕು. ಯಾವುದೇ ರೀತಿಯ ಹೋರಾಟಗಳಲ್ಲಿ ಭಾಗವಹಿಸಬಾರದು ಎಂದು ಎಂದು ತಾಕೀತು ಮಾಡಲಾಯಿತು.
ರೈತ ಸಮುದಾಯ ಸಂಕಷ್ಟದಲ್ಲಿರುವ ಈ ಸಂದರ್ಭದಲ್ಲಿ ರೈತ ನಾಯಕರೊಬ್ಬರು ಇಂತಹ ಕೃತ್ಯದಲ್ಲಿ ಭಾಗಿಯಾಗುವುದು ರೈತಕುಲಕ್ಕೆ ಮಾಡಿದ ಅಪಮಾನ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ರೈತನಾಯಕರೊಬ್ಬರು ಈ ರೀತಿ ನಡೆದುಕೊಂಡರೆ ರೈತಸಮುದಾಯಕ್ಕೆ ನ್ಯಾಯ ದೊರೆಯಲಾರದು. ಚಂದ್ರಶೇಖರ್ ಮೊದಲು ರೈತ ಸಮುದಾಯದ ಹಾಗೂ ಇಡಿ ನಾಡಿನ ಜನರ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ರೈತಸಂಘದ ವಿಭಾಗೀಯ ಉಪಾಧ್ಯಕ್ಷ ಕೆ.ಮಲ್ಲಯ್ಯ, ತಾಲೂಕು ಘಟಕದ ಅಧ್ಯಕ್ಷ ರಾಮೇಗೌಡ, ಜಿಲ್ಲಾ ಕಾರ್ಯಾಧ್ಯಕ್ಷ ಕೃಷ್ಣಯ್ಯ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಕೆ.ಎನ್.ರಾಜು, ತಾಲೂಕು ಕಾರ್ಯದರ್ಶಿ ರಾಮು ಪಾಲ್ಗೊಂಡಿದ್ದರು.
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು