ಆಶ್ರಯ ಯೋಜನೆಯಲ್ಲಿ ಬಡವರಿಗೆ ಹಂಚಿಕೆಯಾಗಬೇಕಿದ್ದ ನಿವೇಶನಗಳು ಬಲಾಢ್ಯರ ಪಾಲು. ಕುಮಾರಸ್ವಾಮಿ ಆಪ್ತ ಕೆಂಚೇಗೌಡನ ಕರಾಮತ್ತು ವಂಚಿತ ಫಲಾನುಭವಿಗಳ ಆರೋಪ.

ನಗರಕ್ಕೆ ಹೊಂದಿಕೊಂಡಿರುವ ವಂದಾರಗುಪ್ಪೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಲಾಳಾಘಟ್ಟ ಗ್ರಾಮದ ಸರ್ವೆ ನಂಬರ್ 137/1 ರಲ್ಲಿ 5ಎಕರೆ 21ಗುಂಟೆ ಸೋಮೇಶ್ವರ ದೇವಸ್ಥಾನದ ಕೊಡುಗೆ ಜಮೀನು ಇದ್ದು, ಸಿದ್ದಯ್ಯ ಎಂಬುವವರಿಗೆ ಮಂಜೂರಾಗಿತ್ತು. ಸರ್ಕಾರವು ಅವರಿಂದ ಕೊಂಡು ಅದರಲ್ಲಿ ನಾಲ್ಕು ಎಕರೆ ಜಮೀನಿನಲ್ಲಿ 119 ನಿವೇಶನಗಳನ್ನು ಮಾಡಿದ್ದು 85 ಸ್ಥಳೀಯ ಮಂದಿಗೆ ನಿವೇಶನಗಳನ್ನು ಹಂಚಿಕೆ ಮಾಡಿ ಉಳಿದ 34 ನಿವೇಶನಗಳನ್ನು ಖಾಲಿ ಬಿಡಲಾಗಿತ್ತು. ಇದನ್ನೇ ಲಾಭ ಮಾಡಿಕೊಂಡ ಇವರು ಸ್ಥಳೀಯರಲ್ಲದವರಿಗೆ, ಹೊರಗಿನ ಜಿಲ್ಲೆಯವರಿಗೆ ನೀಡಲಾಗಿದ್ದು, ಇದಕ್ಕೆ ಮಾಜಿ ಮುಖ್ಯಮಂತ್ರಿ ಕ್ಷೇತ್ರದ ಶಾಸಕ ಹೆಚ್ ಡಿ ಕುಮಾರಸ್ವಾಮಿ ಅವರ ಆಪ್ತ ಸಹಾಯಕ ಕೆಂಚೇಗೌಡ ಮತ್ತು ಅಧಿಕಾರಿಗಳು ಕಾರಣರಾಗಿದ್ದಾರೆ ಎಂದು ಲಾಳಾಘಟ್ಟ ಗ್ರಾಮದ ಕೆ ಮಲವರಾಜು ಮತ್ತಿತರರು ಆರೋಪ ಮಾಡಿದ್ದಾರೆ.
ನಿವೇಶನ ರಹಿತ ಹಿಂದುಳಿದ ವರ್ಗಗಳ ಕುಟುಂಬಕ್ಕೆ ನಿವೇಶನಗಳನ್ನು ನೀಡಲು ಆಶ್ರಯ ಯೋಜನೆ ಅಡಿಯಲ್ಲಿ 2001ರಲ್ಲಿ ತಾಲೂಕು ಪಂಚಾಯಿತಿ ವತಿಯಿಂದ ಹಕ್ಕುಪತ್ರ ನೀಡಲಾಗಿದೆ. ಉಳಿದ ನಿವೇಶನಗಳನ್ನು ಗ್ರಾಮದವರಿಗೆ ಸರ್ಕಾರಿ ನೌಕರರ ಪತ್ನಿಯರಿಗೆ, ಮುಖಂಡರ ಪತ್ನಿಯರಿಗೂ ಹಕ್ಕುಪತ್ರಗಳನ್ನು ನೀಡಲಾಗಿದೆ. ಇವರೆಲ್ಲರ ಜೊತೆ ಕೆಲ ಅಧಿಕಾರಿಗಳು ಶಾಮೀಲಾಗಿದ್ದು, ಯಾವುದೇ ಕಮಿಟಿಯಲ್ಲೂ ಮಂಜೂರು ಆಗದೇ ಇದ್ದರೂ ಸಹ ಅವರಿಷ್ಟದಂತೆ 2002ರ ನಂತರ ಹಂತಹಂತವಾಗಿ ಕಾನೂನುಬಾಹಿರವಾಗಿ ಹಕ್ಕುಪತ್ರ ಪಡೆದುಕೊಂಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ
ಶಿಕ್ಷಣ ಇಲಾಖೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ವಿ ಪಿ ಜನಾರ್ಧನ್ ಪತ್ನಿ ವಿಜಯಮ್ಮ ಅಲಿಯಾಸ್ ಶಿವಲಿಂಗಮ್ಮ, ಪ್ರವಾಸಿ ಮಂದಿರದಲ್ಲಿ ಕೆಲಸ ನಿರ್ವಹಿಸುವ ಜೇವಿಯರ್ ಪತ್ನಿ ಮೇರಿ ಲೀಲಾಮಣಿ, ಶಿವಣ್ಣನ ಪತ್ನಿ ಸಾವಿತ್ರಮ್ಮ, ತಾಲೂಕು ಪಂಚಾಯಿತಿ ನೌಕರರೊಬ್ಬರ ಪತ್ನಿ ಶಾಂತಕುಮಾರಿ ಹನುಮಂತರಾಯಪ್ಪ ನ ಪತ್ನಿ ಗಂಗಮ್ಮ, ಸೋಮಯ್ಯ ನ ಪತ್ನಿ ಯಶೋದಮ್ಮ, ಪಿಡಿಒ ಸಿ ಎ ಪದ್ಮ, ಆಹಾರ ಇಲಾಖೆಯ ನೌಕರ ಗಂಗಾಧರ ನ ತಾಯಿ ಸಿದ್ದಮ್ಮ ಕಟ್ಟೆದೊಡ್ಡೋನು, ಕುಮಾರಸ್ವಾಮಿ ಆಪ್ತ ಪಟ್ಲು ಗ್ರಾಮದ ಕೆಂಚೇಗೌಡರ ಪತ್ನಿ ಸವಿತಾ, ಮಂಗಾಡಹಳ್ಳಿ ಗ್ರಾಮದ ವೆಂಕಟೇಶ್, ವಿರುಪಾಕ್ಷಿಪುರ ಗ್ರಾಮದ ಪದ್ಮಮ್ಮ ಗುಂಡೇಗೌಡ, ನೀಲಕಂಠನಹಳ್ಳಿ ಗ್ರಾಮದ ಕುಮಾರ ಶಿವಯ್ಯ, ನಗರದ ಸಾತನೂರು ರಸ್ತೆಯ ಸ್ವಾಮಿ ರಾಮೇಗೌಡ ರಾಮನಗರ ತಾಲೂಕಿನ ಲಕ್ಕೋಜನಹಳ್ಳಿ (ದೊಡ್ಡನಹಳ್ಳಿ) ಭಾಗ್ಯಮ್ಮ, ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಬೆಳ್ಳೂರು ಗ್ರಾಮದ ಭಾಗ್ಯಮ್ಮ ಚಿಕ್ಕೀರಯ್ಯ ಸೇರಿದಂತೆ ಒಟ್ಟು 34 ಮಂದಿಗೆ ಅಕ್ರಮವಾಗಿ ನಿವೇಶನಗಳನ್ನು ಹಂಚಿಕೆ ಮಾಡಿಕೊಟ್ಟಿದ್ದಾರೆ.
ಆಶ್ರಯ ಯೋಜನೆಯಲ್ಲಿ ಸ್ಥಳೀಯರಿಗೆಂದೇ ನಿವೇಶನಗಳನ್ನು ಮೀಸಲಾಗಿರಿಸಿದ್ದರೂ ಸಹ ಅಕ್ರಮವಾಗಿ, ತಾಲ್ಲೂಕಿನ ವಿವಿಧ ಗ್ರಾಮಗಳು, ವಿವಿಧ ತಾಲ್ಲೂಕು ಅಲ್ಲದೆ ಹೊರಗಿನ ಜಿಲ್ಲೆಗಳ ಮಂದಿಗೆ, ಸರ್ಕಾರಿ ನೌಕರರ ಪತ್ನಿಯರಿಗೆ, ಕೆಲ ಮುಖಂಡರುಗಳಿಗೆ ನಿಯಮಗಳನ್ನು ಗಾಳಿಗೆ ತೂರಿ ನಿವೇಶನಗಳನ್ನು ಹಂಚಿಕೆ ಮಾಡಿದ್ದು, ಪಡೆದುಕೊಂಡಿರುವವರಿಂದ ಹಿಂಪಡೆದು, ಅರ್ಹ ಫಲಾನುಭವಿಗಳಿಗೆ ನೀಡಬೇಕು. ಮಂಜೂರು ಮಾಡಿರುವವರು, ಪಡೆದುಕೊಂಡಿರುವವರು ಮತ್ತು ಭಾಗಿಯಾಗಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಈಗಾಗಲೇ ಗುಡಿಸಲು ನಿರ್ಮಿಸಿಕೊಂಡಿರುವ ಬಡವರಿಗೆ ಸೂಕ್ತ ಭದ್ರತೆ ನೀಡಿ ಹಕ್ಕು ಪತ್ರ ನೀಡಬೇಕೆಂದು ಮನವಿ ಮಾಡಿಕೊಂಡಿದ್ದಾರೆ.
*ಈ ಪ್ರಕರಣ ಹೈಕೋರ್ಟ್ ನಲ್ಲಿದ್ದು, ಕೆಲವು ದಾಖಲಾತಿಗಳನ್ನು ಕೇಳಿದ್ದಾರೆ. ಅವುಗಳನ್ನು ನಾವು ಶೀಘ್ರವಾಗಿ ನ್ಯಾಯಾಲಯಕ್ಕೆ ಒಪ್ಪಿಸುತ್ತೇವೆ. ತೀರ್ಪಿನ ನಂತರ ಕ್ರಮ ಕೈಗೊಳ್ಳುತ್ತೇವೆ.*
*ಚಂದ್ರ ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಚನ್ನಪಟ್ಟಣ.*
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು