ಆರೋಗ್ಯ, ಆಯಸ್ಸು ಹೆಚ್ಚಿಸುವ ವೈದ್ಯರು ಆರೋಗ್ಯ ಕಾಪಾಡಿಕೊಳ್ಳಬೇಕು. ಚಾಮುಂಡೇಶ್ವರಿ ಆಸ್ಪತ್ರೆ ಉದ್ಘಾಟನೆಯಲ್ಲಿ ನಿರ್ಮಲಾನಂದನಾಥ ಸ್ವಾಮೀಜಿ
ಚನ್ನಪಟ್ಟಣ:bಆಸ್ಪತ್ರೆಗೆ ಬರುವ ರೋಗಿಗಳ ಅರೋಗ್ಯ ತಪಾಸಿಸಿ, ರೋಗ ವಾಸಿ ಮಾಡಿ, ಅವರ ಆರೋಗ್ಯ ದ ಜೊತೆಗೆ ಆಯಸ್ಸನ್ನು ಹೆಚ್ಚಿಸುವಲ್ಲಿ ನಿಷ್ಣಾತರಾದ ವೈದ್ಯರು ತಮ್ಮ ಆರೋಗ್ಯದ ಕಡೆಯೂ ಗಮನ ನೀಡಿ, ತಮ್ಮ ಆರೋಗ್ಯ ಮತ್ತು ಆಯಸ್ಸನ್ನು ಹೆಚ್ಚಿಸಿಕೊಳ್ಳಬೇಕು ಎಂದು ಆದಿಚುಂಚನಗಿರಿ ಕ್ಷೇತ್ರದ ಪೀಠಾಧಿಪತಿಗಳಾದ ನಿರ್ಮಲಾನಂದನಾಥ ಸ್ವಾಮೀಜಿ ಯವರು ವೈದ್ಯರು ಮತ್ತು ವೈದ್ಯಕೀಯ ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಅವರು ಬೆಂಮೈ ಹೆದ್ದಾರಿಯ ಮುದುಗೆರೆ ಗ್ರಾಮದ ಸಮೀಪ ನೂತನವಾಗಿ ಆರಂಭವಾದ ಚಾಮುಂಡೇಶ್ವರಿ ಆಸ್ಪತ್ರೆ, ಸಂಶೋಧನಾ ಕೇಂದ್ರ ಹಾಗೂ ಮೆಡಿಕಲ್ ಕಾಲೇಜು ಉದ್ಘಾಟಿಸಿ ಮಾತನಾಡಿದರು.
ನಿಮ್ಮ ಅಪ್ಪ-ಅಮ್ಮ ದೇಹ ನೀಡುತ್ತಾರೆ, ದೇಹದಲ್ಲಿ ಬರುವ ರೋಗಗಳಿಗೆ ವೈದ್ಯರು ಚಿಕಿತ್ಸೆ ನೀಡುವ ಮೂಲಕ ಸರಿ ಮಾಡುತ್ತಾರೆ. ಅದೇ ರೀತಿ ವೈದ್ಯಕೀಯ ವಿದ್ಯಾರ್ಥಿಗಳು ನೇರವಾಗಿ ತಮ್ಮ ಪ್ರತಿಭೆಯಿಂದಲೇ ವೈದ್ಯಕೀಯ ಸೀಟು ಗಿಟ್ಟಿಸಿಕೊಂಡಿರುವವರ ಸಂಖ್ಯೆ ತೀರಾ ವಿರಳ, ಮಿಕ್ಕವರು ಸೀಟು ಪಡೆದುಕೊಳ್ಳಲು ಪೋಷಕರೇ ಕಾರಣ. ನಿಮಗಾಗಿ ಅವರು ಪಟ್ಟಿರುವ ಕಷ್ಟವನ್ನು ನೆನಪಿಸಿಕೊಳ್ಳಬೇಕು, ವೈದ್ಯಕೀಯ ವಿದ್ಯಾರ್ಥಿಯಾಗಲು ಪ್ರಾಥಮಿಕ ಹಂತದಿಂದಲೂ ವಿದ್ಯಾಭ್ಯಾಸ ನೀಡಿದ ಗುರುಗಳ ಶ್ರಮವೂ ಇದೆ. ಸಿಇಟಿ, ನೀಟ್ ನಲ್ಲಿ ನೀವು ಪಟ್ಟ ಶ್ರಮವನ್ನು ಪ್ರತಿ ಹಂತದಲ್ಲೂ ನೆನಪಿಸಿಕೊಂಡು ತಮ್ಮ ವೈದ್ಯಕೀಯ ಪಾಠವನ್ನು ಕಲಿಯಬೇಕು. ಯಾವುದೇ ರೀತಿಯ ರೋಗಿ ಬಂದರೂ ಉತ್ತಮ ಸೇವೆ ಒದಗಿಸುವಂತಹ ವೈದ್ಯರಾಗಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಸ್ವಾತಂತ್ರ್ಯ ಪೂರ್ವದಲ್ಲಿ ಭಾರತೀಯರ ಸರಾಸರಿ ಆಯಸ್ಸು ಕೇವಲ ೩೦-೩೫ ವರ್ಷಗಳು ಮಾತ್ರ ಇದ್ದವು. ವೈದ್ಯಕೀಯ ಮುಂದುವರಿದ ನಂತರ ಈಗ ಸರಾಸರಿ ಆಯಸ್ಸು ೬೯-೭೦ ವರ್ಷ ಆಗಿದೆ. ಇದರಲ್ಲಿ ಪುರುಷರ ಆಯಸ್ಸು ೬೫ ಆದರೆ ಮಹಿಳೆಯರ ಆಯಸ್ಸು ೬೯-೭೦ ಆಗಿದೆ. ದುರಾದೃಷ್ಟ ಎಂದರೆ ನಮ್ಮೆಲ್ಲರ ಆಯಸ್ಸು ಹೆಚ್ಚಿಸಲು ನೆರವಾಗುವವರ ವೈದ್ಯರ ಆಯಸ್ಸು ಕೇವಲ ೬೦ ವರ್ಷಗಳು. ಹಾಗಾಗಿ ವೈದ್ಯರು ಸಹ ತಮ್ಮ ಆರೋಗ್ಯದ ಕಡೆ ಗಮನ ನೀಡಬೇಕು. ಆಗ ಮಾತ್ರ ಎಲ್ಲರ ಸರಾಸರಿ ಆಯಸ್ಸು ಮತ್ತಷ್ಟು ಹೆಚ್ಚಲು ಕಾರಣವಾಗಬಹುದು ಎಂದು ಬೋಧಿಸಿದರು.
ವೈದ್ಯಕೀಯ ಪದವಿ ಪಡೆಯಬೇಕಾದರೆ ಪೋಷಕರು ಪಟ್ಟಿರುವ ಕಷ್ಟವನ್ನು ವಿದ್ಯಾರ್ಥಿಗಳು ಅರಿಯಬೇಕು. ಸರ್ಕಾರಗಳು ಎಷ್ಟು ಕಾಲೇಜುಗಳನ್ನು ಮಾಡಿದ್ದೇವೆ ಎಂಬುದಕ್ಕಿಂತ ಎಷ್ಟು ಉತ್ತಮ ಗುಣಮಟ್ಟದ ಕಾಲೇಜುಗಳನ್ನು ನೀಡಿದ್ದೇವೆ ಎಂಬುದನ್ನು ಮನದಟ್ಟು ಮಾಡಿಕೊಳ್ಳಬೇಕು. ವೈದ್ಯಕೀಯ ವಿದ್ಯಾರ್ಥಿಗಳು ಈಗ ಕೇವಲ ಎಂಬಿಬಿಎಸ್ ಮಾಡಿದರೆ ಸಾಲದು ವಿಶೇಷ ಪದವಿ ಪಡೆಯಬೇಕಾಗಿದೆ. ಈ ಪದವಿಗಳನ್ನು ಪಡೆಯಲು ಸಾಮಾನ್ಯ ಕುಟುಂಬದ ವಿದ್ಯಾರ್ಥಿಗಳಿಂದ ಸಾಧ್ಯವಿಲ್ಲಾ. ಕಾಲೇಜಿನಲ್ಲಿ ಶೇಕಡಾ ೯೮ ಅಂಕ ಪಡೆದರೂ ನೀಟ್, ಸಿಇಟಿ ಯಲ್ಲಿ ಕಡಿಮೆ ಅಂಕ ತೆಗೆದರೆ, ವೈದ್ಯಕೀಯ ಕನಸು ಭಗ್ನವಾಗುತ್ತಿದೆ ಎಂದರು.
ಮಾಜಿ ಮುಖ್ಯಮಂತ್ರಿ ಚನ್ನಪಟ್ಟಣ ಕ್ಷೇತ್ರದ ಶಾಸಕ ಹೆಚ್ ಡಿ ಕುಮಾರಸ್ವಾಮಿ ಮಾತನಾಡಿ ಬೆಂಗಳೂರಿನಲ್ಲಿರುವ ರಾಜರಾಜೇಶ್ವರಿ ಕಾಲೇಜು ಉತ್ತಮ ವೈದ್ಯಕೀಯ ನೆರವು ನೀಡುತ್ತಿದ್ದು, ರಾಮನಗರ, ಮಂಡ್ಯ, ತುಮಕೂರು ಜಿಲ್ಲೆಗಳಿಗೆ, ಅದರಲ್ಲೂ ಗ್ರಾಮೀಣ ಭಾಗದ ರೋಗಿಗಳಿಗೆ ವರದಾನವಾಗಿದೆ. ನಾನು ರಾಜೀವ್ ಗಾಂಧಿ ವಿದ್ಯಾಲಯ ತೆರೆಯಲು ೨೦೦೭ ರಲ್ಲಿ ಚಾಲನೆ ನೀಡಿದರು ಸಹ ಇನ್ನೂ ಸಹ ಪ್ರಾರಂಭ ಮಾಡಲು ಸಾಧ್ಯವಾಗಿಲ್ಲ. ರಾಜರಾಜೇಶ್ವರಿ ಹಾಗೂ ಚಾಮುಂಡೇಶ್ವರಿ ಆಸ್ಪತ್ರೆಯ ಮುಖ್ಯಸ್ಥರು ಬಡರೋಗಿಗಳಿಗೆಂದೇ ವಿಶೇಷ ವಾರ್ಡುಗಳನ್ನು ತೆರೆದು ಸೇವೆ ಒದಗಿಸಬೇಕೆಂದು ಸಲಹೆ ನೀಡಿದರು.
ಸಂಸದ ಡಿ ಕೆ ಸುರೇಶ್ ಮಾತನಾಡಿ ನಮಗೆಲ್ಲರಿಗೂ ಕೊರೊನಾ ದೊಡ್ಡ ಪಾಠವನ್ನು ಕಲಿಸಿದೆ. ಆಸ್ಪತ್ರೆಗಳಿದ್ದರೂ, ಉತ್ತಮ ವೈದ್ಯರಿದ್ದರೂ ಸಹ ಲಕ್ಷಾಂತರ ಮಂದಿ ಅಸುನೀಗಿದರು. ಅಂತಹ ಸಂದರ್ಭ ಮತ್ತೆ ಸೃಷ್ಟಿಯಾಗದಿರಲು, ಸೃಷ್ಟಿಯಾದರೂ ಶಾಶ್ವತವಾಗಿ ನಿರ್ಮೂಲನೆ ಮಾಡುವಂತಹ ವೈದ್ಯರು ಈ ಕಾಲೇಜಿನಿಂದ ಹೊರಹೊಮ್ಮಬೇಕು. ವೈದ್ಯೋ ನಾರಾಯಣ ಹರಿ ಎಂಬುದು ಕೇವಲ ವೈದ್ಯರಿಗಷ್ಟೇ ಸೀಮಿತವಾಗದೆ, ವೈದ್ಯಕೀಯ ಗುರುಗಳಿಗೂ ಅನ್ವಯಿಸುತ್ತದೆ. ವೈದ್ಯ ಶಿಕ್ಷಕರು ಉತ್ತಮ ವೈದ್ಯರನ್ನು ತಯಾರು ಮಾಡಬೇಕು. ಇತ್ತೀಚೆಗೆ ವೈದ್ಯರು ಹೆಚ್ಚಿನ ಜವಾಬ್ದಾರಿ ತೆಗೆದುಕೊಳ್ಳಲು ಹಿಂಜರಿಯುತ್ತಿದ್ದಾರೆ. ಅದರಲ್ಲಿ ನಮ್ಮ ತಪ್ಪೂ ಸಹ ಇದ್ದು, ಆರೋಗ್ಯದಲ್ಲಿ ಏರುಪೇರಾದ ಸಂದರ್ಭದಲ್ಲಿ ರೋಗಿ ಅಸುನೀಗಿದರೆ ಆಸ್ಪತ್ರೆ ಹಾಗೂ ವೈದ್ಯರ ಮೇಲೆ ದಾಳಿ ಮಾಡುವುದರಿಂದ ಅವರು ಜವಾಬ್ದಾರಿ ತೆಗೆದುಕೊಳ್ಳಲು ಹಿಂಜರಿಯುತ್ತಿದ್ದಾರೆ. ಇಬ್ಬರು ತಿದ್ದಿಕೊಳ್ಳುವಂತಹ ಪರಿಸ್ಥಿತಿ ನಿರ್ಮಾಣವಾಗಬೇಕು ಎಂದು ಅಭಿಪ್ರಾಯ ಪಟ್ಟರು.
ಮೂಲತಃ ತಮಿಳುನಾಡಿನವರಾದ ಷಣ್ಮುಗಂ ರವರು ಕರ್ನಾಟಕ ದಲ್ಲಿ ಮೆಡಿಕಲ್ ಕಾಲೇಜುಗಳನ್ನು ತೆರೆದು ಸಹಸ್ರಾರು ವೈದ್ಯಕೀಯ ವಿದ್ಯಾರ್ಥಿಗಳು ಹೊರಹೊಮ್ಮಲು ಅವಕಾಶ ಮಾಡಿಕೊಟ್ಟಿದ್ದಾರೆ. ಮಾತನಾಡುವ ಸಂದರ್ಭದಲ್ಲಿಯೂ ಸಹ ಕನ್ನಡ ಅಭಿಮಾನವನ್ನು ಮೆರೆದಿದ್ದಾರೆ ಎಂದು ಸಂಸದ ತೇಜಸ್ವಿ ಸೂರ್ಯ ತಿಳಿಸಿದರು.
ಕುಣಿಗಲ್ ತಾಲ್ಲೂಕಿನ ಶಾಸಕರಾದ ಡಾ ಹೆಚ್ ಡಿ ರಂಗನಾಥ್ ರವರು ಮಾತನಾಡಿ ಮೆಡಿಕಲ್ ಕಾಲೇಜು ಸ್ಥಾಪನೆ ಎಂಬುದು ಸುಲಭದ ಮಾತಲ್ಲಾ, ಇಂತಹ ಸಂಸ್ಥೆಯನ್ನು ಕರ್ನಾಟಕದಲ್ಲಿ ಕಟ್ಟಿ, ಇದೀಗ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಹಾಗೂ ರೋಗಿಗಳಿಗೆ ನೆರವಾಗುತ್ತಿರುವುದು ಸಂತಸ ತಂದಿದೆ ಎಂದರು.
ಕಾರ್ಯಕ್ರಮದಲ್ಲಿ ಗಣ್ಯರನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಸಂಸ್ಥಾಪಕ ಅಧ್ಯಕ್ಷ ಡಾ ಎ ಸಿ ಷಣ್ಮುಗಂ ರವರು
೧೯೯೨ ರಲ್ಲಿ ಬೆಂಗಳೂರಿನಲ್ಲಿ ರಾಜರಾಜೇಶ್ವರಿ ವೈದ್ಯಕೀಯ ಕಾಲೇಜು ಹಾಗೂ ದಂತ ವೈದ್ಯಕೀಯ ಕಾಲೇಜು ಸೇರಿದಂತೆ ಕೆಲ ಕಾಲೇಜುಗಳನ್ನು ಆರಂಭಿಸಿ ಯಶಸ್ವಿಯಾಗಿ ನಡೆಯುತ್ತಿವೆ. ಗ್ರಾಮೀಣ ಭಾಗದಲ್ಲೂ ನಮ್ಮ ಸೇವೆ ನೀಡಬೇಕೆಂಬ ಹಿನ್ನೆಲೆಯಲ್ಲಿ ಚನ್ನಪಟ್ಟಣ ತಾಲ್ಲೂಕಿನಲ್ಲಿ ನಾಡದೇವತೆ ಚಾಮುಂಡೇಶ್ವರಿ ದೇವಿಯ ಹೆಸರಿನಲ್ಲಿ ಆಸ್ಪತ್ರೆ, ಸಂಶೋಧನೆ ಹಾಗೂ ವೈದ್ಯಕೀಯ ಕಾಲೇಜನ್ನು ಆರಂಭಿಸಿದ್ದೇವೆ. ಈಗಾಗಲೇ ನಮ್ಮ ಕಾಲೇಜುಗಳಿಗೆ ಅಂತರಾಷ್ಟ್ರೀಯ ಮಟ್ಟದ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದು, ಚಾಮುಂಡೇಶ್ವರಿ ಆಸ್ಪತ್ರೆ ಮತ್ತು ಕಾಲೇಜು ಗ್ರಾಮೀಣ ಭಾಗದಲ್ಲಿ ಹೆಚ್ಚು ಸೇವೆ ಒದಗಿಸುವ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳಬೇಕೆಂಬ ಹೆಬ್ಬಯಕೆ ಇದೆ. ಅದೇ ರೀತಿ ಪ್ರಾಮಾಣಿಕ ಸೇವೆಯನ್ನು ನಾವು ಒದಗಿಸಲು ಸಿದ್ದವಾಗಿದ್ದೇವೆ ಎಂದರು.
ಕಾರ್ಯಕ್ರಮದಲ್ಲಿ ಮಾಜಿ ಸಚಿವ ಎಂ ಸಿ ಅಶ್ವಥ್, ಮಾಜಿ ಶಾಸಕ ಎ ಮಂಜು, ಲಲಿತಾಲಕ್ಷ್ಮಿ, ಮದನ್, ಸಂಸ್ಥೆಯ ಟ್ರಸ್ಟಿಗಳು, ವೈದ್ಯಕೀಯ ಮುಖ್ಯಸ್ಥರು, ಬೋಧಕರು ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು