೫೨ ಲಕ್ಷಕ್ಕೂ ಹೆಚ್ಚು ಮೌಲ್ಯದ ಪಡಿತರ ಅಕ್ಕಿ ಗೋದಾಮಿನಲ್ಲೇ ಮಾಯ, ಅಧಿಕಾರಿಗಳಿಂದ ಪರಿಶೀಲನೆ, ವ್ಯವಸ್ಥಾಪಕನ ಬಂಧನ
ಚನ್ನಪಟ್ಟಣ: ತಾಲ್ಲೂಕಿನಾದ್ಯಂತ ಪಡಿತರ ನ್ಯಾಯಬೆಲೆ ಅಂಗಡಿಗಳಿಗೆ ವಿತರಿಸಲು ಪಡಿತರ ಅಕ್ಕಿಯ ಪೈಕಿ ಸುಮಾರು ೫೨ ಲಕ್ಷಕ್ಕೂ ಮೌಲ್ಯದ ೧,೫೪೩.೬೫ ಕ್ವಿಂಟಾಲ್ ಅಕ್ಕಿ ಮತ್ತು ೭೦.೬೮ ರಾಗಿ ನಗರದ ಟಿಎಪಿಸಿಎಂಸ್ ಗೋದಾಮಿನಿಂದಲೇ ಕಳುವಾಗಿರುವ ಘಟನೆ ಜರುಗಿದೆ.
ಪ್ರತಿ ತಿಂಗಳು ತಾಲೂಕಿನಾದ್ಯಂತ ಇರುವ ೬೫ ನ್ಯಾಯಬೆಲೆ ಅಂಗಡಿಗಳಿಗೆ ಲಕ್ಷಾಂತರ ಪಡಿತರ ಕುಟುಂಬಗಳಿಗೆ ಅಕ್ಕಿ ಪೂರೈಕೆ ಮಾಡಲು ಸುಮಾರು ೨,೯೦೦ ಕ್ವಿಂಟಾಲ್ ಅಕ್ಕಿಯನ್ನು ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ತಾಲೂಕಿಗೆ ಪೂರೈಸುತ್ತದೆ. ತಾಲೂಕಿಗೆ ಪೂರೈಕೆಯಾದ ಅಕ್ಕಿಯನ್ನು ನಗರದ ಸಾತನೂರು-ಹಲಗೂರು ಮುಖ್ಯ ರಸ್ತೆಯಲ್ಲಿರುವ ಟಿಎಪಿಸಿಎಂಎಸ್ ಗೋದಾಮಿನಲ್ಲಿ ಸಂಗ್ರಹಿಸಿ, ಅಲ್ಲಿಂದ ತಾಲೂಕಿನಲ್ಲಿರುವ ಸುಮಾರು ೬೫ ವಿವಿಧ ನ್ಯಾಯಬೆಲೆ ಅಂಗಡಿಗಳಿಗೆ ಪೂರೈಕೆ ಮಾಡಲಾಗುತ್ತದೆ.
ಗೋದಾಮಿನಲ್ಲಿ ಸಂಗ್ರಹವಾಗುವ ಅಕ್ಕಿಯ ಪೈಕಿ ಸುಮಾರು ೫೨ ಲಕ್ಷಕ್ಕೂ ಹೆಚ್ಚು ಮೌಲ್ಯದ ಸುಮಾರು ೧,೫೪೩.೬೫ ಕ್ವಿಂಟಾಲ್ ಅಕ್ಕಿ ಹಾಯ೭೦.೬೮ ಕ್ವಿಂಟಾಲ್ ರಾಗಿ ಗೋದಾಮಿನಿಂದ ಕಳುವಾಗಿರುವುದು ಶಿರಸ್ತೇದಾರರಾದ ಶಾಂತಕುಮಾರಿಯವರು ಗುರುವಾರ ನಡೆಸಿದ ಪರಿಶೀಲನೆ ವೇಳೆ ಗಮನಕ್ಕೆ ಬಂದಿದೆ. ಅವರು ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ.
ಅಕ್ಕಿ ನಾಪತ್ತೆಯಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಗೋದಾಮಿನ ಮೇಲ್ವಿಚಾರಣೆ ನೋಡಿಕೊಳ್ಳುತ್ತಿದ್ದ ವ್ಯವಸ್ಥಾಪಕ ಬಿ ಆರ್ ಚಂದ್ರಶೇಖರ್ ಎಂಬುವನನ್ನು ಪುರ ಪೊಲೀಸರು ವಶಕ್ಕೆ ಪಡೆದಿದ್ದು, ವಿಚಾರಣೆಗೆ ಒಳಪಡಿಸಿದ್ದಾರೆ.
ಗೋದಾಮಿನಲ್ಲಿ ೧,೫೪೩.೬೫ ಕ್ವಿಂಟಾಲ್ ಅಕ್ಕಿ ಮತ್ತು ರಾಗಿ ನಾಪತ್ತೆಯಾಗಿರುವ ವಿಚಾರವನ್ನು ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಜಿಲ್ಲಾ ಉಪ ನಿರ್ದೇಶಕಿ ರಮ್ಯ ಸ್ಪಷ್ಟಪಡಿಸಿದ್ದಾರೆ. ಗೋದಾಮಿನಲ್ಲಿ ಗುರುವಾರ ಸಂಜೆ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಸೆಂಬರ್ ತಿಂಗಳಿನಲ್ಲಿ ಹಂಚಿಕೆಯಾಗಬೇಕಿದ್ದ ಅಕ್ಕಿಯ ಪರಿಶೀಲನೆ ವೇಳೆ ಗೋದಾಮುನಿಂದ ೧,೫೪೩.೬೫ ಕ್ವಿಂಟಾಲ್ನಷ್ಟು ಅಕ್ಕಿ ದಾಸ್ತಾನು ನಾಪತ್ತೆಯಾಗಿರುವುದು ಕಂಡು ಬಂದಿದೆ.
ಗೋದಾಮಿನಿಂದ ಅಪಾರ ಪ್ರಮಾಣದ ಅಕ್ಕಿ ಕೊರತೆ ಕಂಡುಬಂದ ಹಿನ್ನೆಲೆಯಲ್ಲಿ ಪೊಲೀಸ್ ಠಾಣೆಯಲ್ಲಿ ಟಿಎಪಿಸಿಎಂಎಸ್ ಕಾರ್ಯದರ್ಶಿ ಮತ್ತು ಸಿಬ್ಬಂದಿಗಳ ವಿರುದ್ಧ ದೂರು ನೀಡಲಾಗಿದೆ. ಇಷ್ಟು ದೊಡ್ಡ ಪ್ರಮಾಣದಲ್ಲಿ ಅಕ್ಕಿ ಕಾಣೆಯಾಗಿರುವ ಹಿಂದೆ ಇಲಾಖಾ ಮಟ್ಟದಲ್ಲೂ ತನಿಖೆ ನಡೆಸಲಾಗುವುದು. ಚನ್ನಪಟ್ಟಣ ತಾಲೂಕು ಆಹಾರ ಇಲಾಖೆ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಈ ಗೋದಾಮನ್ನು ಸಂಪೂರ್ಣವಾಗಿ ಟಿಎಪಿಸಿಎಂಎಸ್ ಸಂಸ್ಥೆಯೇ ನಿರ್ವಹಣೆ ಮಾಡುತಿತ್ತು. ಅಕ್ಕಿ ನಾಪತ್ತೆಯಾಗಿರುವುದರ ಹಿಂದೆ ಸಂಪೂರ್ಣವಾಗಿ ಟಿಎಪಿಸಿಎಂಎಸ್ ಜವಾಬ್ದಾರಿ ಕಂಡು ಬಂದಿದ್ದು ತಕ್ಷಣ ಈ ಗೋದಾಮಿನಲ್ಲಿ ದಾಸ್ತಾನು ಮಾಡುವುದನ್ನು ರದ್ದುಪಡಿಸಿ ಸರ್ಕಾರದ ಉಗ್ರಾಣ ನಿಮಗದಿಂದಲೇ ಎಲ್ಲಾ ನ್ಯಾಯಬೆಲೆ ಅಂಗಡಿಗಳಿಗೆ ಆಹಾರ ಧಾನ್ಯ ವಿತರಣೆ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಪರಿಶೀಲನೆ ವೇಳೆ ತಹಶಿಲ್ದಾರ್ ಮಹೇಂದ್ರ, ಆಹಾರ ಸರಬರಾಜು ಶಿರಸ್ತೇದಾರರಾದ ಶಾಂತಕುಮಾರಿ ಆಹಾರ ನಿರೀಕ್ಷಕ ಚೇತನ್ ಕುಮಾರ್, ಗ್ರಾಮಾಂತರ ಪೋಲಿಸ್ ಉಪ ನಿರೀಕ್ಷಕ ಲಿಯಾಖತ್ ಉಲ್ಲಾ, ಪುರ ಪೋಲಿಸ್ ಠಾಣೆಯ ಹರೀಶ್, ಪೂರ್ವ ಆಕಾಶ್ ಮತ್ತಿತರರ ಅಧಿಕಾರಿಗಳು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಗೋದಾಮಿಗೆ ಇಲಾಖೆಯ ಅಧಿಕಾರಿಗಳು ಬೀಗ ಜಡಿದು ಸೀಜ್ ಮಾಡಿದರು.
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು